ಪದ್ಯ ೬೭: ದಾನವರು ದುರ್ಯೋಧನನಿಗೆ ಏನೆಂದು ಆಣೆ ಮಾಡಿದರು?

ನರರು ನೀವ್ ದಾನವರು ನಾವೆಂ
ದಿರದಿರೊಡಹುಟ್ಟಿದರು ನಿಮಗಿ
ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ
ಸುರಪುರದ ಸೂಳೆಯರ ಪಡಿಗವ
ನಿರಿಸುವರು ಗಂಧರ್ವರವದಿರ
ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ (ಅರಣ್ಯ ಪರ್ವ, ೨೨ ಸಂಧಿ, ೬೭ ಪದ್ಯ)

ತಾತ್ಪರ್ಯ:
ನಾವು ರಾಕ್ಷಸರು, ನೀನು ಮನುಷ್ಯನೆಂದು ಭಾವಿಸಲೇ ಬೇಡ. ನಾವಿನ್ನು ನಿನ್ನ ಒಡಹುಟ್ಟಿದವರು. ನಮ್ಮಲ್ಲಿರುವ ಮಹಾಪ್ರಬಲ ದಾನವರು ಇನ್ನು ಮುಮ್ದೆ ನಿನ್ನ ಆಪತ್ಭಾಂಧವರು. ಇನ್ನು ಗಂಧರ್ವರ ಸುದ್ದಿ ಬೇಕೆ, ಅವರು ಅಮರಾವತಿಯ ಅಪ್ಸರೆಯರಿಗೆ ಆಹಾರವನ್ನು ತಂದಿಡುವ ಸೇವಕರು. ನಾವು ಅವರ ಕರುಳನ್ನು ಬಗಿದು ತಿನ್ನುತ್ತೇವೆ ಎಂದು ಗರ್ಜಿಸಿದರು.

ಅರ್ಥ:
ನರ: ಮನುಷ್ಯ; ದಾನವ: ರಾಕ್ಷಸ; ಒಡಹುಟ್ಟು: ಅಣ್ಣ ತಮ್ಮ; ಅರಸ: ರಾಜ; ವೇಳಾಯಿತ:ಸಮಯಕ್ಕೆ ಒದಗುವವನು, ಆಪದ್ಬಾಂಧವ; ವೆಗ್ಗಳ: ಶ್ರೇಷ್ಠ; ಭಟ: ವೀರ, ಸೈನಿಕ; ಸುರಪುರ: ಅಮರಾವತಿ; ಸೂಳೆ: ಗಣಿಕೆ, ಅಪ್ಸರೆ; ಪಡಿಗ: ಪಾತ್ರ, ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ತಿಂಬೆವು: ತಿನ್ನುವೆವು; ಗರ್ಜಿಸು: ಜೋರಾಗಿ ಕೂಗು; ಖಳ: ದುಷ್ಟ; ನಿಕರ: ಗುಂಪು;

ಪದವಿಂಗಡಣೆ:
ನರರು +ನೀವ್ +ದಾನವರು +ನಾವೆಂದ್
ಇರದಿರ್+ಒಡಹುಟ್ಟಿದರು +ನಿಮಗಿನ್
ಅರಸ +ವೇಳಾಯಿತರು +ವೆಗ್ಗಳ +ದೈತ್ಯ +ಭಟರೆಲ್ಲ
ಸುರಪುರದ +ಸೂಳೆಯರ +ಪಡಿಗವನ್
ಇರಿಸುವರು+ ಗಂಧರ್ವರ್+ಅವದಿರ
ಕರುಳ +ತಿಂಬೆವು +ನಾವೆನುತ +ಗರ್ಜಿಸಿತು +ಖಳ+ನಿಕರ

ಅಚ್ಚರಿ:
(೧) ಗಂಧರ್ವರನ್ನು ತೆಗಳುವ ಪರಿ – ಸುರಪುರದ ಸೂಳೆಯರ ಪಡಿಗವ ನಿರಿಸುವರು ಗಂಧರ್ವ

ಪದ್ಯ ೬೬: ದುರ್ಯೋಧನನು ದಾನವರಿಗೆ ಏನು ಹೇಳಿದ?

ಮಾನವನು ನಾನಿನ್ನು ನೀವೋ
ದಾನವರು ಗಂಧರ್ವರಿಂದಭಿ
ಮಾನವೆನಗಕ್ಕಾಡಿ ಹೋಯಿತು ಹೇಳಲೇನದನು
ಮಾನಿನಿಯ ಮೂದಲೆಯ ನಾ ಪವ
ಮಾನ ಸುತನ ಸಗರ್ವ ವಚನವ
ನೇನ ಹೇಳುವೆನೆನುತ ಸುಯ್ದನು ಕೌರವರ ರಾಯ (ಅರಣ್ಯ ಪರ್ವ, ೨೨ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ನಾನಾದರೋ ಮನುಷ್ಯ, ನೀವೋ ದಾನವರು. ಗಂಧರ್ವರಿಂದ ನನ್ನ ಅಭಿಮಾನವು ನಾಶವಾಗಿ ಹೋಗಿದೆ, ಅದನ್ನು ನಾನು ಏನೆಂದು ಹೇಳಲಿ, ದ್ರೌಪದಿಯು ಆಡಿದ ಹಂಗಿಸುವಂತಹ ಮಾತುಗಳು, ಭೀಮನ ಗರ್ವದ ಮಾತುಗಳು, ಇವನ್ನು ನಾನೇನೆಂದು ನಿಮಗೆ ಹೇಳಲಿ ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ಮಾನವ: ಮನುಷ್ಯ; ದಾನವ: ರಾಕ್ಷಸ; ಗಂಧರ್ವ: ಖಚ; ಅಭಿಮಾನ: ಆತ್ಮಗೌರವ; ಅಕ್ಕಾಡು: ನಷ್ಟವಾಗು; ಮಾನಿನಿ: ಹೆಣ್ಣು; ಮೂದಲಿಸು: ಹಂಗಿಸು; ಪವಮಾನ: ವಾಯು; ಸುತ: ಮಗ; ವಚನ: ಮಾತು; ಸುಯ್ದು: ನಿಟ್ಟುಸಿರಿಡು; ರಾಯ: ರಾಜ;

ಪದವಿಂಗಡಣೆ:
ಮಾನವನು +ನಾನಿನ್ನು +ನೀವೋ
ದಾನವರು+ ಗಂಧರ್ವರಿಂದ್+ಅಭಿ
ಮಾನವ್+ಎನಗ್+ಅಕ್ಕಾಡಿ+ ಹೋಯಿತು +ಹೇಳಲೇನದನು
ಮಾನಿನಿಯ +ಮೂದಲೆಯನ್+ ಆ +ಪವ
ಮಾನ+ ಸುತನ +ಸಗರ್ವ +ವಚನವನ್
ಏನ+ ಹೇಳುವೆನೆನುತ+ ಸುಯ್ದನು +ಕೌರವರ+ ರಾಯ

ಅಚ್ಚರಿ:
(೧) ಮಾನವ, ದಾನವ; ಅಭಿಮಾನ, ಪವಮಾನ – ಪ್ರಾಸ ಪದ

ಪದ್ಯ ೬೫: ದೈತ್ಯರು ದುರ್ಯೋಧನನಿಗೆ ಯಾವ ಅಭಯವನ್ನು ನೀಡಿದರು?

ಸಾಯದಿರು ನಿನಗಿಂದು ಮೊದಲು ಸ
ಹಾಯರಾವಾವಹಕೆ ರಿಪುಕೌಂ
ತೇಯರಿಗೆ ಕೊಡಬೇಡವಿನ್ನು ತಿಲಾಂಶ ಭೂತಳವ
ಲಾಯ ಸಹಿತೀ ಗಜರಥಾಶ್ವ ನಿ
ಕಾಯ ನಿನ್ನದು ದೈತ್ಯ ಸಚಿವ ಪ
ಸಾಯತರು ನಿನ್ನವರು ಸಾವೆವು ನಿಮ್ಮ ಸಮರದಲಿ (ಅರಣ್ಯ ಪರ್ವ, ೨೨ ಸಂಧಿ, ೬೫ ಪದ್ಯ)

ತಾತ್ಪರ್ಯ:
ದೈತ್ಯರು ದುರ್ಯೋಧನ ಪರ ನಿಂತರು, ನೀನು ಸಾಯಬೇಡ, ಇವತ್ತಿನಿಂದಲೇ ನಾವು ಯುದ್ಧದಲ್ಲಿ ನಿನ್ನ ಪರವಾಗಿ ಹೋರಾಡುತ್ತೇವೆ, ಕುಂತಿಯ ಮಕ್ಕಳಿಗೆ ಒಂದು ಎಳ್ಳು ಕಾಳಿನಷ್ಟೂ ಭೂಮಿಯನ್ನು ಕೊಡಬೇಡ, ನಮ್ಮ ಆನೆ, ಕುದುರೆಗಳ ಲಾಯವೇ ನಿನ್ನದು, ನಮ್ಮ ಸಚಿವರು ಆಪ್ತರು ನಿನ್ನವರು. ನಿನ್ನೊಡನೆ ಯುದ್ಧದಲ್ಲಿ ಭಾಗವಹಿಸಿ ಸಾಯುತ್ತೇವೆ ಎಂದು ಹೇಳಿದರು.

ಅರ್ಥ:
ಸಾವು: ಮರಣ; ಸಹಾಯ: ನೆರವು; ಆವಹ: ಯುದ್ಧ; ರಿಪು: ವೈರಿ; ಕೌಂತೇಯ: ಪಾಂಡವರು; ಕೊಡು: ನೀಡು; ತಿಲ: ಎಳ್ಳು; ಅಂಶ: ಭಾಗ; ಭೂತಳ: ಭೂಮಿ; ಲಾಯ: ಕುದುರೆಗಳಿಡುವ ಸ್ಥಳ; ಸಹಿತ: ಜೊತೆ; ಗಜ: ಆನೆ; ರಥ: ಬಂಡಿ; ಅಶ್ವ: ಕುದುರೆ; ನಿಕಾಯ: ಗುಂಪು; ದೈತ್ಯ: ರಾಕ್ಷಸ; ಸಚಿವ: ಮಂತ್ರಿ; ಪಸಾಯ: ಉಡುಗೊರೆ, ಬಹುಮಾನ; ಪಸಾಯಿತ: ಸಾಮಂತ ರಾಜ; ಸಮರ: ಯುದ್ಧ;

ಪದವಿಂಗಡಣೆ:
ಸಾಯದಿರು +ನಿನಗಿಂದು +ಮೊದಲು +ಸ
ಹಾಯರ್+ಆವ್+ಆವಹಕೆ +ರಿಪು+ಕೌಂ
ತೇಯರಿಗೆ +ಕೊಡಬೇಡವ್+ಇನ್ನು +ತಿಲಾಂಶ +ಭೂತಳವ
ಲಾಯ +ಸಹಿತೀ+ ಗಜ+ರಥ+ಅಶ್ವ+ ನಿ
ಕಾಯ +ನಿನ್ನದು +ದೈತ್ಯ +ಸಚಿವ+ ಪ
ಸಾಯತರು +ನಿನ್ನವರು +ಸಾವೆವು +ನಿಮ್ಮ +ಸಮರದಲಿ

ಅಚ್ಚರಿ:
(೧) ಸಾಯ, ಸಹಾಯ, ಲಾಯ, ನಿಕಾಯ, ಪಸಾಯ – ಪ್ರಾಸ ಪದಗಳು

ಪದ್ಯ ೬೪: ದೈತ್ಯರು ದುರ್ಯೋಧನನ ನಿರ್ಧಾರವನ್ನು ತಪ್ಪೆಂದರೇಕೆ?

ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಲೆಸಿದೆಲಾ
ಸುರರು ಪಾಂಡುಕುಮಾರರಾಗವ
ತರಸಿದರು ಗೆಲವವದಿರಿಗೆ ತಾ
ವಿರಲು ಸುಡಲೀ ದೈತ್ಯ ಜನ್ಮವನೆಂದರಾ ಖಳರು (ಅರಣ್ಯ ಪರ್ವ, ೨೨ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ, ನೀನು ಅನ್ನ ನೀರು ಬಿಟ್ಟು ಮರಣಹೊಂದುವ ದೀಕ್ಷೆ ಹಿಡಿದೆ, ಇದು ಕ್ಷತ್ರಿಯಕುಲಕ್ಕೆ ಅನುಚಿತವಾದ ನಿರ್ಧಾರ, ನೀನು ತಪ್ಪುಮಾಡಿದೆ, ದೇವತೆಗಳು ಪಾಂಡವರಾಗಿ ಅವತರಿಸಿದ್ದಾರೆ, ನಿನ್ನ ನಿರ್ಧಾರದಿಂದ ಅವರಿಗೆ ಗೆಲುವಾಗುತ್ತದೆ, ನಾವಿದ್ದೂ ಅವರು ಗೆದ್ದರೆ ಈ ರಾಕ್ಷಸ ಜನ್ಮವನ್ನು ಸುಡಬೇಕೆಂದು ಹೇಳಿದರು.

ಅರ್ಥ:
ಅರಸ: ರಾಜ; ಪ್ರಾಯೋಪವೇಶ: ಅನ್ನ ನೀರು ಇಲ್ಲದೆ ಪ್ರಾಣ ಬಿಡುವುದು; ಮರಣ: ಸಾವು; ದೀಕ್ಷೆ: ವ್ರತ, ನಿಯಮ; ಗಡ: ಅಲ್ಲವೇ; ಕುಲ: ವಂಶ; ಅನುಚಿತ: ಸರಿಯಲ್ಲದ; ನೆನೆ: ಜ್ಞಾಪಿಸಿಕೋ; ಕಾಕ: ನೀಚ, ಕ್ಷುಲ್ಲಕ; ಬಳಸು: ಆವರಿಸುವಿಕೆ; ಸುರ: ದೇವತೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಗೆಲವು: ಜಯ; ಅವದಿರು: ಅವರು; ಸುಡು: ದಹಿಸು; ದೈತ್ಯ: ರಾಕ್ಷಸ; ಜನ್ಮ: ಹುಟ್ಟು; ಖಳ: ದುಷ್ಟ;

ಪದವಿಂಗಡಣೆ:
ಅರಸ +ನೀ +ಪ್ರಾಯೋಪವೇಶದಿ
ಮರಣ+ ದೀಕ್ಷಿತನಾದೆ+ ಗಡ +ನಿ
ಮ್ಮರಸು+ ಕುಲಕ್+ಅನುಚಿತವ +ನೆನೆದೈ +ಕಾಕ +ಬಳೆಸಿದೆಲಾ
ಸುರರು +ಪಾಂಡುಕುಮಾರರಾಗ್+ಅವ
ತರಸಿದರು+ ಗೆಲವ್+ಅವದಿರಿಗೆ +ತಾ
ವಿರಲು +ಸುಡಲೀ +ದೈತ್ಯ +ಜನ್ಮವನೆಂದರಾ+ ಖಳರು

ಅಚ್ಚರಿ:
(೧) ಸುರರು ಅವತರಿಸಿದ ಬಗೆ – ಸುರರು ಪಾಂಡುಕುಮಾರರಾಗವತರಸಿದರು

ಪದ್ಯ ೬೩: ಯಾರು ದುರ್ಯೋಧನನನ್ನು ಕರೆದುಕೊಂಡು ಹೋದರು?

ರಾಯನೀಪರಿನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ (ಅರಣ್ಯ ಪರ್ವ, ೨೨ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ದುರ್ಯೊಧನನು ಜನರನ್ನು ಹಿಂದಕ್ಕೆ ಕಳಿಸಿದನು. ನಂತರ ಭಗವಂತನ ಭಕ್ತಿಯನ್ನು ಬಯಸಿ ಸಮಾಧಿಯಲ್ಲಿದ್ದನು. ರಾತ್ರಿಯಾಯಿತು, ಆಗ ರಾಕ್ಷಸರು ಲೆಕ್ಕ ಹಾಕಿ ಇದೇ ಸಮಯವೆಂದು ಕೌರವನನ್ನು ರಸಾತಳಕ್ಕೆ ತೆಗೆದುಕೊಂಡು ಹೋಗಿ ಅವನಿಗೆ ಸಾಂಗವಗಿ ಸಾಮೋಪಾಯದಿಂದ ಹೀಗೆ ಹೇಳಿದರು.

ಅರ್ಥ:
ರಾಯ: ರಾಜ; ಪರಿ: ರೀತಿ; ನುಡಿ: ಮಾತು; ಜನ: ಗುಂಪು; ಸಮುದಾಯ: ಸಮೂಹ, ಗುಂಪು; ಕಳುಹಿ: ತೆರಳು; ಸುಮನ: ಒಳ್ಳೆಯ ಮನಸ್ಸು; ಉಭಯ: ಎರಡು; ಸಾಪೇಕ್ಷ: ಪೂರಕವಾದುದು; ಸಮಾಧಿ: ಏಕಾಗ್ರತೆ, ತನ್ಮಯತೆ; ರಾತ್ರಿ: ನಿಶಿ, ಇರುಳು; ದಾಯ:ಸಮಯ; ದೈತ್ಯ: ರಾಕ್ಷಸ; ನಿಕಾಯ: ಗುಂಪು; ಬಂದು: ಆಗಮಿಸು; ರಸಾತಳ: ಭೂಮಿಯ ಮೇಲ್ಭಾಗ;ಕೊಂಡೊಯ್ದು: ಕರೆದುಕೊಂಡು ಹೋಗು; ತಿಳುಹಿ: ಹೇಳು ಸಾಮ: ಸಮಾಧಾನ;

ಪದವಿಂಗಡಣೆ:
ರಾಯನ್+ಈ+ಪರಿನುಡಿದು+ ಜನ +ಸಮು
ದಾಯವನು+ ಕಳುಹಿದನು+ ಸುಮನೋ
ಭೂಯ +ಸಾಪೇಕ್ಷೆಯ +ಸಮಾಧಿಯೊಳಿರಲು+ ರಾತ್ರಿಯಲಿ
ದಾಯವಿದು+ ತಮಗೆಂದು+ ದೈತ್ಯ+ನಿ
ಕಾಯ +ಬಂದು +ರಸಾತಳಕೆ+ ಕುರು
ರಾಯನನು +ಕೊಂಡೊಯ್ದು +ತಿಳುಹಿದರವರು+ ಸಾಮದಲಿ

ಅಚ್ಚರಿ:
(೧) ರಾಯ, ದಾಯ, ಸಮುದಾಯ,ನಿಕಾಯ, ಭೂಯ – ಪ್ರಾಸ ಪದಗಳು