ನರರು ನೀವ್ ದಾನವರು ನಾವೆಂ
ದಿರದಿರೊಡಹುಟ್ಟಿದರು ನಿಮಗಿ
ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ
ಸುರಪುರದ ಸೂಳೆಯರ ಪಡಿಗವ
ನಿರಿಸುವರು ಗಂಧರ್ವರವದಿರ
ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ (ಅರಣ್ಯ ಪರ್ವ, ೨೨ ಸಂಧಿ, ೬೭ ಪದ್ಯ)
ತಾತ್ಪರ್ಯ:
ನಾವು ರಾಕ್ಷಸರು, ನೀನು ಮನುಷ್ಯನೆಂದು ಭಾವಿಸಲೇ ಬೇಡ. ನಾವಿನ್ನು ನಿನ್ನ ಒಡಹುಟ್ಟಿದವರು. ನಮ್ಮಲ್ಲಿರುವ ಮಹಾಪ್ರಬಲ ದಾನವರು ಇನ್ನು ಮುಮ್ದೆ ನಿನ್ನ ಆಪತ್ಭಾಂಧವರು. ಇನ್ನು ಗಂಧರ್ವರ ಸುದ್ದಿ ಬೇಕೆ, ಅವರು ಅಮರಾವತಿಯ ಅಪ್ಸರೆಯರಿಗೆ ಆಹಾರವನ್ನು ತಂದಿಡುವ ಸೇವಕರು. ನಾವು ಅವರ ಕರುಳನ್ನು ಬಗಿದು ತಿನ್ನುತ್ತೇವೆ ಎಂದು ಗರ್ಜಿಸಿದರು.
ಅರ್ಥ:
ನರ: ಮನುಷ್ಯ; ದಾನವ: ರಾಕ್ಷಸ; ಒಡಹುಟ್ಟು: ಅಣ್ಣ ತಮ್ಮ; ಅರಸ: ರಾಜ; ವೇಳಾಯಿತ:ಸಮಯಕ್ಕೆ ಒದಗುವವನು, ಆಪದ್ಬಾಂಧವ; ವೆಗ್ಗಳ: ಶ್ರೇಷ್ಠ; ಭಟ: ವೀರ, ಸೈನಿಕ; ಸುರಪುರ: ಅಮರಾವತಿ; ಸೂಳೆ: ಗಣಿಕೆ, ಅಪ್ಸರೆ; ಪಡಿಗ: ಪಾತ್ರ, ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ತಿಂಬೆವು: ತಿನ್ನುವೆವು; ಗರ್ಜಿಸು: ಜೋರಾಗಿ ಕೂಗು; ಖಳ: ದುಷ್ಟ; ನಿಕರ: ಗುಂಪು;
ಪದವಿಂಗಡಣೆ:
ನರರು +ನೀವ್ +ದಾನವರು +ನಾವೆಂದ್
ಇರದಿರ್+ಒಡಹುಟ್ಟಿದರು +ನಿಮಗಿನ್
ಅರಸ +ವೇಳಾಯಿತರು +ವೆಗ್ಗಳ +ದೈತ್ಯ +ಭಟರೆಲ್ಲ
ಸುರಪುರದ +ಸೂಳೆಯರ +ಪಡಿಗವನ್
ಇರಿಸುವರು+ ಗಂಧರ್ವರ್+ಅವದಿರ
ಕರುಳ +ತಿಂಬೆವು +ನಾವೆನುತ +ಗರ್ಜಿಸಿತು +ಖಳ+ನಿಕರ
ಅಚ್ಚರಿ:
(೧) ಗಂಧರ್ವರನ್ನು ತೆಗಳುವ ಪರಿ – ಸುರಪುರದ ಸೂಳೆಯರ ಪಡಿಗವ ನಿರಿಸುವರು ಗಂಧರ್ವ