ಎವಗೆ ವಿಕ್ರಮವೆಂಬಡೀ ರೌ
ರವವ ಕಂಡೆನು ಕರ್ಣನಂತಿರ
ಲೆವಗೆ ಧೀವಸಿಯಾಗಿ ಕಾದುವರೆಂಬರವರಿಲ್ಲ
ಬವರ ಗೆಲುವರೆ ಹರಿಗೆ ಕೊಡು ಗಾಂ
ಡಿವವ ಸಾರಥಿಯಾಗು ನೀನೆಂ
ದವಗಡಿಸಿದನು ವೀರ ನಾರಾಯಣನ ಮೈದುನನ (ಕರ್ಣ ಪರ್ವ, ೧೬ ಸಂಧಿ, ೩೪ ಪದ್ಯ)
ತಾತ್ಪರ್ಯ:
ಧರ್ಮಜನು ತನ್ನ ನೋವನ್ನು ಮತ್ತು ಕೋಪವನ್ನು ತೋಡಿಕೊಳ್ಳುತ್ತಾ, ನಾವು ಪರಾಕ್ರಮಿಗಳೆಂದು ಹೇಳಿಕೊಳ್ಳೋಣವೇ? ಇಂತಹ ಭಯಂಕರ ನೋವನ್ನುಂಡೆವು. ನಮ್ಮ ಪರವಾಗಿ ಕರ್ಣನಂತೆ ಬುದ್ಧಿ ಪೂರ್ವಕವಾಗಿ ಕಾದಿಗೆಲ್ಲಬಲ್ಲವರು ಯಾರು? ಅಂಥವರು ಯಾರೂ ಇಲ್ಲ. ಅರ್ಜುನ ಯುದ್ಧದಲ್ಲಿ ಗೆಲ್ಲಬೇಕೆಂದಿದ್ದರೆ, ನಿನ್ನ ಗಾಂಡೀವವನ್ನು ಕೃಷ್ಣನಿಗೆ ಕೊಟ್ಟು, ನೀನು ಸಾರಥಿಯಾಗು ಎಂದು ಅರ್ಜುನನನ್ನು ಧರ್ಮಜನು ಹೀಯಾಳಿಸಿದನು.
ಅರ್ಥ:
ಎವಗೆ: ನಮಗೆ; ವಿಕ್ರಮ: ಪರಾಕ್ರಮ, ಶೌರ್ಯ; ರೌರವ: ಭಯಂಕರ; ಕಂಡು: ನೋಡಿ; ಧೀವಸಿ: ಸಾಹಸಿ, ವೀರ; ಕಾದು: ಹೋರಾಡು; ಬವರ: ಕಾಳಗ, ಯುದ್ಧ;ಗೆಲು: ಜಯ; ಹರಿ: ಕೃಷ್ಣ; ಕೊಡು: ನೀಡು; ಸಾರಥಿ: ಸೂತ, ರಥವನ್ನು ಓಡಿಸುವವ; ಅವಗಡಿಸು: ಅಪಮಾನಿಸು, ಸೋಲಿಸು; ಮೈದುನ: ತಂಗಿಯ ಗಂಡ;
ಪದವಿಂಗಡಣೆ:
ಎವಗೆ +ವಿಕ್ರಮವ್+ಎಂಬಡೀ+ ರೌ
ರವವ+ ಕಂಡೆನು +ಕರ್ಣನಂತಿರಲ್
ಎವಗೆ +ಧೀವಸಿಯಾಗಿ +ಕಾದುವರ್+ಎಂಬರವರಿಲ್ಲ
ಬವರ +ಗೆಲುವರೆ +ಹರಿಗೆ +ಕೊಡು +ಗಾಂ
ಡಿವವ+ ಸಾರಥಿಯಾಗು +ನೀನೆಂದ್
ಅವಗಡಿಸಿದನು +ವೀರ +ನಾರಾಯಣನ +ಮೈದುನನ
ಅಚ್ಚರಿ:
(೧) ಅರ್ಜುನನನ್ನು ಕೃಷ್ಣನ ಮೈದುನ ಎಂದು ಕರೆದಿರುವುದು
(೨) ಅರ್ಜುನನನ್ನು ಹೀಯಾಳಿಸುವ ಬಗೆ – ಹರಿಗೆ ಕೊಡು ಗಾಂಡಿವವ ಸಾರಥಿಯಾಗು ನೀನೆಂ
ದವಗಡಿಸಿದನು