ಪದ್ಯ ೪೯: ಕುರುಕ್ಷೇತ್ರವನ್ನು ಯಾವುದಕ್ಕೆ ಅರ್ಜುನನು ಹೋಲಿಸಿದನು?

ಎಲವೊ ಕೌರವ ಹಿಂದೆ ವಂಚಿಸಿ
ಕಳವಿನಲಿ ಜೂಜಾಡಿ ರಾಜ್ಯವ
ಗೆಲಿದ ಗರ್ವವನುಗುಳು ಸಮರ ದ್ಯೋತಕೇಳಿಯಲಿ
ಹಲಗೆಯೈ ಕುರುಭೂಮಿ ಕೌರವ
ಕುಲದ ತಲೆ ಸಾರಿಗಳು ನೆರೆಯಲಿ
ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ (ದ್ರೋಣ ಪರ್ವ, ೧೦ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರಿಸುತ್ತಾ, ಎಲವೋ ಕೌರವ, ಹಿಂದೆ ಮೋಸದ ಕಳ್ಳಜೂಜನ್ನಾಡಿ ಗೆದ್ದ ಗರ್ವವನ್ನು ಉಗುಳು, ಈಗ ಕುರುಕ್ಷೇತ್ರವೇ ಪಗಡೆಯ ಹಾಸು, ಕೌರವ ಕುಲದವರ ತಲೆಗಳೇ ಕಾಯಿಗಳು, ಅವೆಲ್ಲ ಬಂದು ನಿಲ್ಲಲಿ, ಕಡಿದು ಹಾಕುತ್ತೇನೆ, ಇದೋ ದಾಳವನ್ನುರುಳಿಸಿದ್ದೇನೆ ಎಂದು ಹೇಳುತ್ತಾ ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಹಿಂದೆ: ಪುರಾತನ, ಕಳೆದ; ವಂಚನೆ: ಮೋಸ; ಕಳ: ರಣರಂಗ; ರಾಜ್ಯ: ರಾಷ್ಟ್ರ; ಗೆಲಿ: ಜಯಿಸು; ಗರ್ವ: ಅಹಂಕಾರ; ಉಗುಳು: ಹೊರಹಾಕು; ಸಮರ: ಯುದ್ಧ; ದ್ಯೋತ:ಹೊಳಪು; ಕೇಳಿ: ಕ್ರೀಡೆ; ಹಲಗೆ: ಪಲಗೆ, ಅಗಲವಾದ ಹಾಗೂ ತೆಳುವಾದ ಸೀಳು; ತಲೆ: ಶಿರ; ಕುಲ: ವಂಶ; ಸಾರಿ: ಕಾಯಿ; ನೆರೆ; ಗುಂಪು; ಹಾಸಂಗಿ: ಜೂಜಿನ ದಾಳ, ಲೆತ್ತ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಎಲವೊ +ಕೌರವ +ಹಿಂದೆ +ವಂಚಿಸಿ
ಕಳವಿನಲಿ +ಜೂಜಾಡಿ +ರಾಜ್ಯವ
ಗೆಲಿದ +ಗರ್ವವನ್+ಉಗುಳು +ಸಮರ+ ದ್ಯೋತ+ಕೇಳಿಯಲಿ
ಹಲಗೆಯೈ +ಕುರುಭೂಮಿ +ಕೌರವ
ಕುಲದ +ತಲೆ +ಸಾರಿಗಳು +ನೆರೆಯಲಿ
ಗೆಲಲು +ಬಂದೆನು +ಕೊಳ್ಳು +ಹಾಸಂಗಿಗಳನ್+ಎನುತ್+ಎಚ್ಚ

ಅಚ್ಚರಿ:
(೧) ಕುರುಕ್ಷೇತ್ರವನ್ನು ಪಗಡೆಗೆ ಹೋಲಿಸಿದ ಪರಿ – ಹಲಗೆಯೈ ಕುರುಭೂಮಿ ಕೌರವ ಕುಲದ ತಲೆ ಸಾರಿಗಳು

ಪದ್ಯ ೧೨: ವಿರಾಟನು ಕಂಕನಿಗೆ ಯಾವ ಅಪ್ಪಣೆಯನ್ನು ನೀಡಿದನು?

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯ ಶ್ರವಣ ಸುಖಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು (ವಿರಾಟ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವರು ರಾಜ್ಯವನ್ನು ಪಣವಾಗಿ ಒಡ್ಡಿ ಸೋತು ಕೆಟ್ಟರು, ಆದರೆ ನಾನು ಪಣವನ್ನು ಇಡುತ್ತಿಲ್ಲ, ಏನೋ ಮಗನ ಏಳಿಗೆಯನ್ನು ಕಂಡು ಅತೀವ ಸಂತಸವಾಗಿದೆ, ಈ ಉತ್ಸವ ಕಾಲದಲ್ಲಿ ಪಗಡೆಯಾಡೋಣವೆಂಬ ಬಯಕೆಯಾಗಿದೆ, ಪಗಡೆಯ ಹಾಸನ್ನು ಹಾಕು, ಕಾಯಿಗಳನ್ನು ಹೂಡು ಎಂದು ವಿರಾಟನು ಹೇಳಲು, ಕಂಕನು ರಾಜನ ಆಜ್ಞೆಯನ್ನು ಪಾಲಿಸಲು ಕಾಯಿಗಳನ್ನು ಹೂಡಿ ದಾಳಗಳನ್ನು ಹಾಕಿದನು.

ಅರ್ಥ:
ರಾಜ್ಯ: ರಾಷ್ಟ್ರ; ಒಡ್ಡು: ನೀಡು; ಸೋಲು: ಪರಾಭವ; ಪಣ: ಜೂಜಿಗೆ ಒಡ್ಡಿದ ವಸ್ತು; ಬೇರೆ: ಅನ್ಯ; ಹರ್ಷ: ಸಂತಸ; ಕುಮಾರ: ಮಕ್ಕಳು; ಅಭ್ಯುದಯ: ಏಳಿಗೆ; ವಿಜಯ: ಗೆಲುವು; ಶ್ರವಣ: ಕಿವಿ, ಕೇಳುವಿಕೆ; ಸುಖ: ನೆಮ್ಮದಿ, ಸಂತಸ; ಮನ: ಮನಸ್ಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನಿವಹ: ಗುಂಪು; ಹೂಡು: ಅಣಿಗೊಳಿಸು; ಅವನಿಪತಿ: ರಾಜ; ನಸುನಗು: ಮಂದಸ್ಮಿತ; ಹಾಸಂಗಿ: ಪಗಡೆಯ ಹಾಸು; ಹಾಯ್ಕು: ಇಡು, ಇರಿಸು;

ಪದವಿಂಗಡಣೆ:
ಅವರು +ರಾಜ್ಯವನೊಡ್ಡಿ +ಸೋತವೊಲ್
ಎವಗೆ +ಪಣ +ಬೇರಿಲ್ಲ +ಹರ್ಷೋ
ತ್ಸವ+ ಕುಮಾರ+ಅಭ್ಯುದಯ +ವಿಜಯ +ಶ್ರವಣ +ಸುಖಮಿಗಲು
ಎವಗೆ +ಮನವಾಯ್ತ್+ಒಡ್ಡು +ಸಾರಿಯ
ನಿವಹವನು +ಹೂಡೆನಲು +ಹೂಡಿದನ್
ಅವನಿಪತಿ +ನಸುನಗುತ +ಹಾಸಂಗಿಯನು +ಹಾಯ್ಕಿದನು

ಅಚ್ಚರಿ:
(೧) ಹೂಡೆನಲು ಹೂಡಿದನು, ಹಾಸಂಗಿಯ ಹಾಯ್ಕಿದನು – ಒಂದೇ ಅಕ್ಷರದ ಜೋಡಿ ಪದಗಳು

ಪದ್ಯ ೫೪: ದುರ್ಗತಿಯು ಹೇಗೆ ಗೋಚರಿಸಿತು?

ಕ್ಷಿತಿಪ ಕೇಳ್ ದುರ್ವ್ಯಸನ ವಿಷಮ
ವ್ಯತಿಕರದ ಭಾಷೆಯನು ನೃಪ ಮಿಗೆ
ಪತಿಕರಿಸಿದನು ಹೊಸೆದು ಹಾಸಂಗಿಗಳ ಹಾಯ್ಕಿದನು
ಸತಿಯ ದಕ್ಷಿಣ ನಯನವೀ ಭೂ
ಪತಿಯ ವಾಮ ಭುಜಾಕ್ಷಿಗಳು ದು
ರ್ಗತಿಯ ಸೂಚಿಸಿ ತೋರುತಿರ್ದವು ಧರ್ಮನಂದನನ (ಸಭಾ ಪರ್ವ, ೧೭ ಸಂಧಿ, ೫೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಜೂಜೆಂಬ ಕೆಟ್ಟಚಟದ ಆಪತ್ತನ್ನು ತರುವ ರೀತಿಯನ್ನು ಧರ್ಮಜನು ಸ್ವೀಕರಿಸಿ ಹಾಸಂಗಿಗಳನ್ನು ಕಟೆದು ಹಾಕಿದನು. ದ್ರೌಪದಿಯ ಬಲಗಣ್ಣು, ಯುಧಿಷ್ಠಿರನ ಎಡಗಣ್ಣು, ಎಡಭುಜಗಳು ಅದರಿದವು, ಇವು ಮುಂದೆ ಬರುವ ಕೆಟ್ಟಸ್ಥಿತಿಯನ್ನು ಗೋಚರಿಸುತ್ತಿದ್ದವು.

ಅರ್ಥ:
ಕ್ಷಿತಿಪ: ರಾಜ; ಕೇಳು: ಆಲಿಸು; ದುರ್ವ್ಯಸನ: ಕೆಟ್ಟ ಚಟ; ವಿಷಮ: ಕಷ್ಟ ಪರಿಸ್ಥಿತಿ, ಆಪತ್ತು; ವ್ಯತಿಕರ: ಆಪತ್ತು, ಕೇಡು; ಭಾಷೆ: ನುಡಿ; ನೃಪ: ರಾಜ; ಮಿಗೆ: ಮತ್ತು, ಅಧಿಕ; ಪತಿಕರಿಸು: ಸ್ವೀಕರಿಸು; ಹೊಸೆದು: ಹುರಿಮಾಡು, ಸೇರಿಸು; ಹಾಸಂಗಿ: ಜೂಜಿನ ದಾಳ, ಲೆತ್ತ; ಹಾಯ್ಕು: ಇಡು, ಇರಿಸು; ಸತಿ: ಹೆಂಡತಿ; ದಕ್ಷಿಣ: ಬಲಭಾಗ; ನಯನ: ಕಣ್ಣು; ಭೂಪತಿ: ರಜ; ವಾಮ: ಎಡಭಾಗ; ಭುಜ: ತೋಳು; ಅಕ್ಷಿ: ಕಣ್ಣು; ದುರ್ಗತಿ: ಕೆಟ್ಟ ಸ್ಥಿತಿ; ಸೂಚಿಸು: ತೋರು; ತೋರು: ಕಾಣು; ನಂದನ: ಮಗ;

ಪದವಿಂಗಡಣೆ:
ಕ್ಷಿತಿಪ+ ಕೇಳ್ +ದುರ್ವ್ಯಸನ +ವಿಷಮ
ವ್ಯತಿಕರದ +ಭಾಷೆಯನು +ನೃಪ +ಮಿಗೆ
ಪತಿಕರಿಸಿದನು +ಹೊಸೆದು +ಹಾಸಂಗಿಗಳ+ ಹಾಯ್ಕಿದನು
ಸತಿಯ +ದಕ್ಷಿಣ +ನಯನವ್+ಈ+ ಭೂ
ಪತಿಯ +ವಾಮ +ಭುಜ+ಅಕ್ಷಿಗಳು +ದು
ರ್ಗತಿಯ +ಸೂಚಿಸಿ +ತೋರುತಿರ್ದವು +ಧರ್ಮನಂದನನ

ಅಚ್ಚರಿ:
(೧) ಕ್ಷಿತಿಪ, ನೃಪ, ಭೂಪತಿ; ನಯನ, ಅಕ್ಷಿ; – ಸಮನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹೊಸೆದು ಹಾಸಂಗಿಗಳ ಹಾಯ್ಕಿದನು
(೩) ಜೋಡಿ ಪದ – ಸತಿ ಪತಿ

ಪದ್ಯ ೧೩೮: ಕೃಷ್ಣನು ಮನದಲ್ಲಿ ಏನನ್ನು ನೆಲೆಗೊಳಿಸಿದನು?

ಇತ್ತ ದ್ವಾರಾವತಿಯೊಳಗೆ ದೇ
ವೋತ್ತಮನು ಭಕುತರಿಗೆ ತನ್ನನು
ತೆತ್ತು ಬದುಕುವೆನೆಂಬ ಪರಮವ್ರತದ ನಿಷ್ಠೆಯನು
ಚಿತ್ತದಲಿ ನೆಲೆಗೊಳಿಸಿ ರುಕ್ಮಿಣಿ
ಯತ್ತ ಸಂತೋಷದಿ ಸಮೇಳದ
ನೆತ್ತ ಸಾರಿಯ ಹರಹಿ ಹಾಸಂಗಿಯನು ದಾಳಿಸುತ (ಸಭಾ ಪರ್ವ, ೧೫ ಸಂಧಿ, ೧೩೮ ಪದ್ಯ)

ತಾತ್ಪರ್ಯ:
ಇತ್ತ ದ್ವಾರಕೆಯಲ್ಲಿ ಶ್ರೀಕೃಷ್ಣನು ಭಕ್ತರಿಗೆ ನನ್ನನ್ನೇ ತೆತ್ತುಬಿಡುತ್ತೇನೆ ಎಂಬ ಮಹಾವ್ರತದ ನಿಷ್ಠೆಯನ್ನು ಮನಸ್ಸಿನಲ್ಲೇ ಇಟ್ಟುಬಿಟ್ಟಿರುತ್ತಿದ್ದನು. ಅವನು ರುಕ್ಮಿಣಿದೇವಿಯ ಮನೆಯಲ್ಲಿ ಹಾಸನ್ನು ಹಾಸಿ ಕಾಯಿಗಳನ್ನು ಹೂಡಿ, ದಾಳಗಳನ್ನು ನೆಡೆಸುತ್ತಿದ್ದನು.

ಅರ್ಥ:
ದೇವೋತ್ತಮ: ಭಗವಂತನಲ್ಲಿ ಶ್ರೇಷ್ಠನಾದ; ಭಕುತ: ಪೂಜಿಸುವವನು, ಆರಾಧಕ; ತೆತ್ತು: ಕೊಡು, ನೀಡು; ಬದುಕು: ಜೀವಿಸು; ವ್ರತ: ನಿಯಮ; ನಿಷ್ಠೆ: ದೃಢತೆ, ಸ್ಥಿರತೆ; ಚಿತ್ತ: ಮನಸ್ಸು; ನೆಲೆಗೊಳಿಸು: ಭದ್ರಮಾಡು; ಸಂತೋಷ: ಸಂತಸ; ಸಮೇಳ: ಜೊತೆ; ನೆತ್ತ: ಪಗಡೆಯ ದಾಳ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಹರಹು: ವಿಸ್ತಾರ, ವೈಶಾಲ್ಯ; ಹಾಸಂಗಿ: ಜೂಜಿನ ದಾಳ, ಲೆತ್ತ; ದಾಳಿ

ಪದವಿಂಗಡಣೆ:
ಇತ್ತ +ದ್ವಾರಾವತಿಯೊಳಗೆ +ದೇ
ವೋತ್ತಮನು +ಭಕುತರಿಗೆ +ತನ್ನನು
ತೆತ್ತು +ಬದುಕುವೆನೆಂಬ+ ಪರಮವ್ರತದ+ ನಿಷ್ಠೆಯನು
ಚಿತ್ತದಲಿ+ ನೆಲೆಗೊಳಿಸಿ+ ರುಕ್ಮಿಣಿ
ಯತ್ತ+ ಸಂತೋಷದಿ +ಸಮೇಳದ
ನೆತ್ತ +ಸಾರಿಯ +ಹರಹಿ +ಹಾಸಂಗಿಯನು +ದಾಳಿಸುತ

ಅಚ್ಚರಿ:
(೧) ಶ್ರೀಕೃಷ್ಣನ ಅಭಯ – ದೇವೋತ್ತಮನು ಭಕುತರಿಗೆ ತನ್ನನು ತೆತ್ತು ಬದುಕುವೆನೆಂಬ ಪರಮವ್ರತದ ನಿಷ್ಠೆಯನುಚಿತ್ತದಲಿ ನೆಲೆಗೊಳಿಸಿ

ಪದ್ಯ ೧೩೪: ಶ್ರೀಕೃಷ್ಣನು ಆಟದ ಮಧ್ಯೆ ಯಾವ ಪದವನ್ನು ಪ್ರಯೋಗಿಸಿದನು?

ಹರಿಯ ಚಿತ್ತದ ದುಗುಡವನು ತಾ
ನರಿದು ಸತ್ರಾಜಿತನ ಸುತೆಯಂ
ದುರುತರದ ದುಗುಡವನು ಪರಿಹರಿಪನುವ ನೆನೆದಾಗ
ವಿರಚಿಸಿದಳೊಲವಿನಲಿ ಸಾರಿಯ
ನಿರದೆ ಹಾಸಂಗಿಗಳ ಢಾಳಿಸಿ
ಸರಿಬೆಸನೊ ಹೇಳೆಂದುದಕ್ಷಯವೆಂದನಾ ಸತಿಗೆ (ಸಭಾ ಪರ್ವ, ೧೫ ಸಂಧಿ, ೧೩೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಮುಖಭಾವದಲ್ಲಿ ದುಃಖವನ್ನು ಕಂಡ ಸತ್ಯಭಾಮೆಯು ಅವನ ದುಃಖವನ್ನು ಹೋಗಲಾಡಿಸಲು ಪಗಡೆಯ ಹಾಸನ್ನು ಹಾಕಿ ಕಾಯಿಗಳನ್ನು ಹೂಡಿ, ದಾಳಗಳನ್ನಿಟ್ಟು ಈಗ ಸರಿ ಸಂಖ್ಯೆಯೋ ಬೆಸ ಸಂಖ್ಯೆಯೋ ಎಂದು ಕೃಷ್ಣನನ್ನು ಕೇಳಲು ಅವನು ಅಕ್ಷಯ ಎಂದು ಹೆಂಡತಿಗೆ ಉತ್ತರಿಸಿದನು.

ಅರ್ಥ:
ಹರಿ: ಕೃಷ್ಣ; ಚಿತ್ತ: ಮನಸ್ಸು; ದುಗುಡ: ದುಃಖ; ಅರಿ: ತಿಳಿ; ಸುತೆ: ಮಗಳು; ದುರುತರ: ಹೆಚ್ಚಿನ; ಪರಿಹರಿಸು: ನಿವಾರಣೆ, ಹೋಗಲಾಡಿಸು; ನೆನೆ: ಸ್ಮರಿಸು, ವಿಚಾರಿಸು; ವಿರಚಿಸು: ರಚಿಸು, ನಿರ್ಮಿಸು; ಒಲವು: ಪ್ರೀತಿ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಹಾಸಂಗಿ: ಪಗಡೆಯ ಹಾಸು; ಢಾಳಿಸು: ಕಾಂತಿಗೊಳ್ಳು; ಸರಿ: ಸಮಸಂಖ್ಯೆ; ಬೆಸ: ವಿಷಮ ಸಂಖ್ಯೆ; ಹೇಳು: ತಿಳಿಸು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ಸತಿ: ಹೆಂಡತಿ;

ಪದವಿಂಗಡಣೆ:
ಹರಿಯ+ ಚಿತ್ತದ +ದುಗುಡವನು +ತಾನ್
ಅರಿದು +ಸತ್ರಾಜಿತನ +ಸುತೆಯಂ
ದುರುತರದ +ದುಗುಡವನು +ಪರಿಹರಿಪನುವ +ನೆನೆದಾಗ
ವಿರಚಿಸಿದಳ್+ಒಲವಿನಲಿ +ಸಾರಿಯ
ನಿರದೆ+ ಹಾಸಂಗಿಗಳ +ಢಾಳಿಸಿ
ಸರಿ+ಬೆಸನೊ +ಹೇಳೆಂದುದ್+ಅಕ್ಷಯವೆಂದನಾ+ ಸತಿಗೆ

ಅಚ್ಚರಿ:
(೧) ಹರಿ, ಅರಿ, ಸರಿ – ಪ್ರಾಸ ಪದಗಳು
(೨) ಸತ್ಯಭಾಮೆಯನ್ನು ಸತ್ರಾಜಿತನ ಸುತೆೆ ಎಂದು ಕರೆದಿರುವುದು

ಪದ್ಯ ೧೪: ಶಕುನಿ ನಕುಲನನ್ನು ಗೆದ್ದನೆ?

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದವನಿಪಗೆ ನುಡಿದ (ಸಭಾ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹಠದಿಂದ ತಮ್ಮನನ್ನು ಒಡ್ಡಿದರೆ ನಮಗೇನು ಭಯವಿಲ್ಲ, ಒಂದು ಕೈಯಿ ನೋಡೋಣ, ದಾಳವನ್ನು ಹಾಕು ಎಂದನು. ಪೂರ್ವಜನ್ಮದಲ್ಲಿ ಗಳಿಸಿದ ಮೋಸದಿಂದ ಧರ್ಮವಿನಾಶಮಾಡುವ ರಭಸದಿಂದ ನಕುಲನನ್ನು ಗೆದ್ದು ಆರ್ಭಟಿಸುತ್ತಾ ಹೀಗೆ ಹೇಳಿದನು.

ಅರ್ಥ:
ವಾಸಿ: ಪ್ರತಿಜ್ಞೆ, ಶಪಥ; ಅನುಜ: ತಮ್ಮ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಸರ: ರೀತಿ; ಭಯ: ಅಂಜಿಕೆ; ಐಸಲೇ: ಅಲ್ಲವೇ; ನೃಪ: ರಾಜ; ಹಾಯ್ಕು: ಇಡು, ಇರಿಸು, ಧರಿಸು; ಹಾಸಂಗಿ: ಜೂಜಿನ ದಾಳ; ಪೂರ್ವಾರ್ಜಿತ: ಹಿಂದೆಯೇ ಗಳಿಸಿದ; ಡೊಳ್ಳಾಸ: ಮೋಸ, ಕಪಟ; ಡಾವರಿಸು: ಸುತ್ತು, ತಿರುಗಾಡು; ಧರ್ಮ: ಧಾರಣ ಮಾಡಿದುದು, ನಿಯಮ; ವಿನಾಶ: ಹಾಳು, ಸರ್ವನಾಶ; ಗೆಲಿ: ಗೆಲ್ಲು, ಜಯ; ಬೊಬ್ಬಿರಿ: ಗರ್ಜಿಸು, ಆರ್ಭಟ; ನುಡಿ: ಮಾತಾಡು; ಅವನಿಪ: ರಾಜ;

ಪದವಿಂಗಡಣೆ:
ವಾಸಿಗ್+ಅನುಜನನ್+ಒಡ್ಡಿದರೆ+ ನಮಗ್
ಈಸರಲಿ +ಭಯವೇನು +ನೋಡುವೆವ್
ಐಸಲೇ +ನೃಪ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆ +ಶಕುನಿ +ಪೂರ್ವಾರ್ಜಿತದ +ಡೊ
ಳ್ಳಾಸದಲಿ +ಡಾವರಿಸಿ+ ಧರ್ಮ +ವಿ
ನಾಶಿ +ನಕುಲನ +ಗೆಲಿದು +ಬೊಬ್ಬಿರಿದ್+ಅವನಿಪಗೆ+ ನುಡಿದ

ಅಚ್ಚರಿ:
(೧) ಶಕುನಿಯ ವರ್ಣನೆ – ಪೂರ್ವಾರ್ಜಿತದ ಡೊಳ್ಳಾಸದಲಿ ಡಾವರಿಸಿ ಧರ್ಮ ವಿನಾಶಿ
(೨) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ

ಪದ್ಯ ೬: ಯುಧಿಷ್ಠಿರನು ಎಷ್ಟು ಹಣವನ್ನು ಸೋತನು?

ಹೂಡು ಸಾರಿಯ ರೇಖೆ ರೇಖೆಗೆ
ಮಾಡಿದರ್ಬುದ ಧನ ಸುಯೋಧನ
ನಾಡಿ ನೋಡಲಿ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆಡಿದನು ಯಮಸೂನು ಖಾಡಾ
ಖಾಡಿಯಲಿ ಸಾರಿಗಳೊಡನೆ ಹೋ
ಗಾಡಿದನು ಭಂಡಾರವನು ಭೂಪಾಲ ಕೇಳೆಂದ (ಸಭಾ ಪರ್ವ, ೧೫ ಸಂಧಿ, ೬ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಧರ್ಮಜನು ಕಾಯಿಗಳನ್ನು ಹೂಡಿದನು. ಒಂದೊಂದು ರೇಖೆಗೆ ಒಂದು ಅರ್ಬುದ ಹಣವನ್ನು ಪಣವಾಗಿ ಇಟ್ಟು, ದುರ್ಯೋಧನನು ಆಡಿನೋಡಲಿ, ದಾಳವನ್ನು ಹಾಕು ಎಂದು ಹೇಳಿ ಕಾಯಿಗಳನ್ನು ನಡೆಸಿದ ಯುಧಿಷ್ಠಿರನು ತನ್ನ ಭಂಡಾರವನ್ನೇ ಸೋತನು.

ಅರ್ಥ:
ಹೂಡು: ಜೋಡಿಸು, ಸೇರಿಸು, ಆರಂಭಿಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ರೇಖೆ: ಗೆರೆ; ಅರ್ಬುದ: ಹತ್ತುಕೋಟಿ; ಧನ: ಐಶ್ವರ್ಯ; ನೋಡು: ವೀಕ್ಷಿಸು; ಹಾಯ್ಕು: ಧರಿಸು, ತೊಡು; ಹಾಸಂಗಿ: ಜೂಜಿನ ದಾಳ, ಲೆತ್ತ; ಸೂನು: ಮಗ; ಖಾಡಾಖಾಡಿ: ಕೈ ಕೈಯುದ್ಧ; ಹೋಗಾಡು: ನಾಶ, ಅಳಿವು; ಭಂಡಾರ: ಬೊಕ್ಕಸ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೂಡು +ಸಾರಿಯ +ರೇಖೆ +ರೇಖೆಗೆ
ಮಾಡಿದ್+ಅರ್ಬುದ +ಧನ +ಸುಯೋಧನನ್
ಆಡಿ +ನೋಡಲಿ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆಡಿದನು +ಯಮಸೂನು +ಖಾಡಾ
ಖಾಡಿಯಲಿ +ಸಾರಿಗಳೊಡನೆ +ಹೋ
ಗಾಡಿದನು +ಭಂಡಾರವನು +ಭೂಪಾಲ +ಕೇಳೆಂದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ

ಪದ್ಯ ೩: ಶಕುನಿಯ ವ್ಯಂಗ್ಯ ನುಡಿಗೆ ಧರ್ಮಜನ ಉತ್ತರವೇನು?

ಎಲವೊ ಸೌಬಲ ವಿತ್ತವೀಸರ
ಲಳಿದುದೇ ನೀ ನಗುವವೋಲ್ನ
ಮ್ಮೊಳಗು ಡಿಳ್ಳವೆ ರಪಣವಿದೆಲಾ ಬಹಳ ಭಂಡಾರ
ಸುಳಿಸು ಹಾಸಂಗಿಗಳ ಮೋಹರ
ಗೊಳಿಸು ಸಾರಿಯನೊಂದು ರೇಖೆಯ
ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ (ಸಭಾ ಪರ್ವ, ೧೫ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮನಂದನನು ಶಕುನಿಗೆ ಉತ್ತರಿಸುತ್ತಾ, ಎಲವೋ ಶಕುನಿ ನನ್ನ ಐಶ್ವರ್ಯ ಇಷ್ಟಕ್ಕೆ ತೀರಿತೆಂದು ತಿಳಿದೆಯಾ? ನಮ್ಮ ಅಂತಃಸತ್ವವು ನೀನು ನಕ್ಕ ಮಾತ್ರಕ್ಕೆ ಬರಡಾಗುವುದೇ? ಕಾಯಿ ಹೂಡು, ದಾಳವನ್ನು ಹಾಕು. ಒಂದಾಟಕ್ಕೆ ಒಂದು ಕೋಟಿ ಹಣವನ್ನೊಡ್ಡಿದ್ದೇನೆ ಎಂದು ಕೂಗಿದನು.

ಅರ್ಥ:
ಸೌಬಲ: ಶಕುನಿ; ವಿತ್ತ: ಐಶ್ವರ್ಯ; ಅಳಿ: ನಾಶ; ನಗು: ಸಂತಸ; ಡಿಳ್ಳ: ದಿಗಿಲು, ಭಯ; ರಪಣ: ಜೂಜಿನಲ್ಲಿ ಒಡ್ಡುವ ಪಣ, ಐಶ್ವರ್ಯ; ಬಹಳ: ತುಂಬಾ; ಭಂಡಾರ: ಬೊಕ್ಕಸ, ಖಜಾನೆ; ಸುಳಿಸು: ತಿರುಗಿಸು, ಬೀಸು; ಹಾಸಂಗಿ: ಜೂಜಿನ ದಾಳ; ಮೋಹರ: ಯುದ್ಧ, ಕಾಳಗ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ರೇಖೆ: ಗೆರೆ; ಬಳಿ: ಹತ್ತಿರ; ಧನ: ದುಡ್ಡು, ಐಶ್ವರ್ಯ; ಒದರು: ಹೇಳು; ಭೂಪ: ರಾಜ;

ಪದವಿಂಗಡಣೆ:
ಎಲವೊ +ಸೌಬಲ +ವಿತ್ತವ್+ಈಸರಲ್
ಅಳಿದುದೇ +ನೀ +ನಗುವವೋಲ್+
ನಮ್ಮೊಳಗು+ ಡಿಳ್ಳವೆ +ರಪಣವಿದೆಲಾ +ಬಹಳ+ ಭಂಡಾರ
ಸುಳಿಸು +ಹಾಸಂಗಿಗಳ+ ಮೋಹರ
ಗೊಳಿಸು +ಸಾರಿಯನ್+ಒಂದು +ರೇಖೆಯ
ಬಳಿಯಲ್+ಒಂದೇ +ಕೋಟಿ +ಧನವೆಂದ್+ಒದರಿದನು +ಭೂಪ

ಅಚ್ಚರಿ:
(೧) ಧರ್ಮಜನ ದಿಟ್ಟ ನುಡಿ – ನೀ ನಗುವವೋಲ್ನಮ್ಮೊಳಗು ಡಿಳ್ಳವೆ

ಪದ್ಯ ೬೫: ಶಕುನಿಯು ದಾಳವನ್ನು ಹೇಗೆ ಹಾಕಿದನು?

ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತ ಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೬೫ ಪದ್ಯ)

ತಾತ್ಪರ್ಯ:
ಪಣವನ್ನಿಟ್ಟ ಧರ್ಮರಾಯನನ್ನು ನೋಡಿ, ಶಕುನಿಯು ಇದೇ ಪಣವಾಗಲಿ, ರಾಜ ದಾಳಗಳನ್ನು ಹಾಕು ಕೃಷ್ಣನೇ ಮೊದಲಾದವರು ನಿನ್ನ ಸಹಾಯಕ್ಕಿದ್ದಾರೆ. ದುರ್ಯೋಧನನಿಗೆ ಸಹಾಯ ಮಾಡುವವರೇ ಇಲ್ಲ. ಗರಗಳು ಕಣ್ಣು ತೆರೆದರೆ ದುರ್ಯೋಧನನು ಕೂಡಿಸಿಟ್ಟ ಪುಣ್ಯದ ಫಲ ಕೈಗೂಡಿದಂತೆ. ಗರವೇ ಬಾ ಎಂದು ಶಕುನಿಯು ಜೋರಾಗಿ ಕೂಗಿದನು.

ಅರ್ಥ:
ಆಯಿತು: ಮುಗಿಯಿತು; ಪಣ:ಜೂಜಿಗೆ ಒಡ್ಡಿದ ವಸ್ತು, ಬಾಜಿ; ನೃಪ: ರಾಜ; ಹಾಯಿಕು: ಹಾಕು; ಹಾಸಂಗಿ: ಜೂಜಿನ ದಾಳ, ಲೆತ್ತ; ಸಾಹಾಯ: ಸಹಾಯ, ನೆರವು; ಆದಿ: ಮೊದಲಾದ; ದಾಯ: ಪಗಡೆಯ ಗರ; ಕಂದೆರೆವ: ಕಣ್ಣು ಬಿಡು; ರಾಯ: ರಾಜ; ಉಪಚಿತ: ಯೋಗ್ಯ; ಪುಣ್ಯ: ಒಳ್ಳೆಯ ಕಾರ್ಯ; ಅಕಟ: ಅಯ್ಯೋ; ಮಿಗೆ: ಹೆಚ್ಚು; ಬೊಬ್ಬಿರಿ: ಕೂಗು;

ಪದವಿಂಗಡಣೆ:
ಆಯಿತಿದು+ ಪಣವ್+ಅಹುದಲೇ +ನೃಪ
ಹಾಯಿಕಾ +ಹಾಸಂಗಿಗಳ+ ಸಾ
ಹಾಯ +ಕುರುಪತಿಗಿಲ್ಲ+ ಕೃಷ್ಣಾದಿಗಳು+ ನಿನ್ನವರು
ದಾಯ +ಕಂದೆರೆವರೆ+ ಸುಯೋಧನ
ರಾಯನ್+ಉಪಚಿತ +ಪುಣ್ಯವ್+ಅಕಟ್+ಆ
ದಾಯವೇ +ಬಾ+ಎಂದು +ಮಿಗೆ +ಬೊಬ್ಬಿರಿದನಾ +ಶಕುನಿ

ಅಚ್ಚರಿ:
(೧) ಶಕುನಿಯ ಆಟವನ್ನು ಚಿತ್ರಿಸುವ ಪರಿ – ಆ ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ
(೨) ಸಾಹಾಯ, ದಾಯ, ರಾಯ – ಪ್ರಾಸ ಪದಗಳು
(೩) ದುರ್ಯೋಧನನು ನಿಮ್ಮನ್ನು ಸೋಲಿಸಲು ದ್ಯೂತವೇ ಮಾರ್ಗ ಎಂದು ಸೂಚಿಸುವ ಪರಿ – ದಾಯ ಕಂದೆರೆವರೆ ಸುಯೋಧನರಾಯನುಪಚಿತ ಪುಣ್ಯ

ಪದ್ಯ ೫೦: ಪಗಡೆಯಾಟವು ಹೇಗೆ ನಡೆಯಿತು?

ದುಗನ ಹಾಯಿತು ತನಗೆ ಹಾಯ್ಕಿ
ತ್ತಿಗನವೆಂಬಬ್ಬರದ ಹಾಸಂ
ಗಿಗಳ ಬೊಬ್ಬೆಯ ಸಾರಿಗಳ ಕಟಕಟತ ವಿಸ್ವನದ
ಉಗಿವಸೆರೆಗಳ ಬಳಿದು ಹಾರದ
ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾ ಧೂಳಿ ಮಸಗಿತು ಭೂಪ ಕೇಳೆಂದ (ಸಭಾ ಪರ್ವ, ೧೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ದ್ಯೂತದ ಆಟವು ಜೋರಾಗಿ ನಡೆದಿತ್ತು. ನನಗೆ ಎರಡನ್ನು ಹಾಕು, ನನಗೆ ಆರು ಬೇಕು ಎಂದು ದಾಳಗಳನ್ನು ಕಟೆಯುವರು. ಪಗಡೆ ಹಾಸಿನ ಚಿತ್ರದ ಹಲಗೆಯ ಮೇಲೆ ಕಾಯಿಗಳನ್ನು ಕಟ್ ಕಟ್ ಎಂಬ ಶಬ್ದದೊಂದಿಗೆ ನಡೆಸುವರು. ಆಟದಲ್ಲಿ ಸಿಕ್ಕ ಕಾಯನ್ನು ಬಿಡಿಸುವರು. ಜೋಡುಕಾಯಿ ಕಟ್ಟುವರು, ತಮ್ಮ ತಮ್ಮ ಕಾಯಿಗಳನ್ನು ಗರಕ್ಕನುಸಾರವಾಗಿ ನಡೆಸುವರು. ಹೀಗೆ ಪಗಡೆಯಾಟದ ಕೋಲಾಹಲವು ಮುಂದುವರೆಯಿತು.

ಅರ್ಥ:
ದುಗ: ಲೆತ್ತದ ಆಟದಲ್ಲಿ ಎರಡರ ಗರ; ಹಾಯಿತು: ಹಾಕು, ಹೊರಳಿಸು; ಇತ್ತಿಗ: ಲೆತ್ತದ ಆಟದಲ್ಲಿ ಆರರ ಗರ; ಅಬ್ಬರ: ಜೋರು; ಹಾಸಂಗಿ: ಜೂಜಿನ ದಾಳ; ಬೊಬ್ಬೆ: ಆರ್ಭಟ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಕಟಕಟ: ಶಬ್ದವನ್ನು ಸೂಚಿಸುವ ಪದ; ನಿಸ್ವನ: ಶಬ್ದ, ಧ್ವನಿ; ಉಗಿವ: ಹೊರಬೀಳುವ; ಸೆರೆ: ಬಂಧನ; ಬಳಿ: ಹತ್ತಿರ; ಹಾರದ: ಜೋಡು; ಬಿಗುಹು: ಗಟ್ಟಿ, ಬಂಧನ; ಬೀದಿ: ಮಾರ್ಗ; ತಳಿ: ಚೆಲ್ಲು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಮಸಗು: ಹರಡು; ಕೆರಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದುಗನ +ಹಾಯಿತು +ತನಗೆ +ಹಾಯ್ಕ್
ಇತ್ತಿಗನವೆಂಬ್+ಅಬ್ಬರದ+ ಹಾಸಂ
ಗಿಗಳ +ಬೊಬ್ಬೆಯ +ಸಾರಿಗಳ +ಕಟಕಟತ+ ವಿಸ್ವನದ
ಉಗಿವ+ಸೆರೆಗಳ +ಬಳಿದು +ಹಾರದ
ಬಿಗುಹುಗಳ+ ಬೀದಿಗಳ+ ತಳಿ +ಸಾ
ರಿಗಳ +ಧಾಳಾ ಧೂಳಿ +ಮಸಗಿತು +ಭೂಪ +ಕೇಳೆಂದ

ಅಚ್ಚರಿ:
(೧) ಪಗಡೆ ಆಟದ ವೈಖರಿ – ಉಗಿವಸೆರೆಗಳ ಬಳಿದು ಹಾರದ ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾ ಧೂಳಿ ಮಸಗಿತು