ಅವನಿಪಾಲರು ಕಂಗಳಿಂದವೆ
ಕಿವಿಗೆ ಕರವೊಳ್ಳಿದರು ಕಂಡುದ
ನವರು ನಂಬರು ಕೊಂಡೆಯರ ನುಡಿಗೇಳ್ದು ನಂಬುವರು
ನಿವಗೆ ಹೇಳುವುದಲ್ಲ ಲೋಕದ
ಹವಣನೆಂದವು ನಾವು ಪಾಂಡವ
ರವರು ನಿನ್ನವರೆಂಬುದನು ನೀನೆಂದು ನೋಡೆಂದ (ದ್ರೋಣ ಪರ್ವ, ೧೮ ಸಂಧಿ, ೨ ಪದ್ಯ)
ತಾತ್ಪರ್ಯ:
ದ್ರೋಣಾಚಾರ್ಯರು ಉತ್ತರಿಸುತ್ತಾ, ರಾಜರು ಕಣ್ಣುಗಳಿಗಿಂತ ಕಿವಿಗಳಿಗೆ ಬಹಳ ಒಳ್ಳೆಯವರು. ಏಕೆಂದರೆ ನೋಡಿದುದನ್ನು ಅವರು ನಂಬುವುದಿಲ್ಲ, ಚಾಡಿಕಾರರ ಮಾತನ್ನು ಕೇಳಿ ನಂಬುತ್ತಾರೆ. ನಿನ್ನನ್ನು ಕುರಿತು ಈ ಮಾತನ್ನು ಹೇಳುತ್ತಿಲ್ಲ. ಲೋಕದಲ್ಲಿ ನಡೆಯುವುದನ್ನು ಹೇಳುತ್ತಿದ್ದೇನೆ. ನಾವು ಪಾಂಡವರ ಕಡೆಯವರೆಂದು ನೀನು ಹಂಗಿಸುತ್ತಿದ್ದೆಯಲ್ಲಾ, ನಾವು ಪಾಂಡವರ ಕಡೆಯೋ, ನಿನ್ನಕಡೆಯೋ ಎಂಬುದನ್ನು ಈಗ ನೋಡು ಎಂದು ದ್ರೋಣಾಚಾರ್ಯರು ತಿಳಿಸಿದರು.
ಅರ್ಥ:
ಅವನಿಪಾಲ: ರಾಜ; ಕಂಗಳು: ಕಣ್ಣು; ಕಿವಿ: ಕರ್ಣ; ಕರ: ಕೈ; ಕಂಡು: ನೋಡು; ನಂಬು: ವಿಶ್ವಾಸವಿಡು; ನುಡಿ: ಮಾತು; ಕೇಳು: ಆಲಿಸು; ಹೇಳು: ತಿಳಿಸು; ಲೋಕ: ಜಗ; ಹವಣ: ಮಿತಿ, ಅಳತೆ; ನೋಡು: ವೀಕ್ಷಿಸು; ಕೊಂಡೆ: ಚಾಡಿಯ ಮಾತು;
ಪದವಿಂಗಡಣೆ:
ಅವನಿಪಾಲರು+ ಕಂಗಳಿಂದವೆ
ಕಿವಿಗೆ +ಕರವೊಳ್ಳಿದರು +ಕಂಡುದನ್
ಅವರು +ನಂಬರು +ಕೊಂಡೆಯರ +ನುಡಿ+ಕೇಳ್ದು+ ನಂಬುವರು
ನಿವಗೆ+ ಹೇಳುವುದಲ್ಲ +ಲೋಕದ
ಹವಣನೆಂದವು+ ನಾವು +ಪಾಂಡವರ್
ಅವರು +ನಿನ್ನವರೆಂಬುದನು +ನೀನೆಂದು +ನೋಡೆಂದ
ಅಚ್ಚರಿ:
(೧) ಲೋಕೋಕ್ತಿಯ ಬಳಕೆ – ಅವನಿಪಾಲರು ಕಂಗಳಿಂದವೆ ಕಿವಿಗೆ ಕರವೊಳ್ಳಿದರು