ಪದ್ಯ ೪೦: ಯುದ್ಧದ ಅಂತ್ಯದಲ್ಲಿ ಯಾರು ಉಳಿದಿದ್ದರು?

ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿಧಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು (ಗದಾ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವನಿದಿರಿನಲ್ಲಿ ಛತ್ರ, ಚಾಮರಗಳನ್ನು ಹಿಡಿಯುವವರು, ತಾಂಬೂಲದ ಹಡಪವನ್ನು ಹಿಡಿದವರು, ಬಿರುದಾವಳಿಯವರು, ಪಾಠಕರು, ವಾದ್ಯ ವಾದಕರು, ಗಾಯಕರು, ನೀರು ತಿಂಡಿಗಳನ್ನು ಕೊಡುವವರು, ಆನೆ ಕುದುರೆಗಳ ಗಾಯಗಳನ್ನು ಚಿಕಿತ್ಸೆ ಮಾಡುವವರು, ರಥದ ಗಾಲಿಗಳನ್ನು ದಬ್ಬುವವರು, ಬಿಲ್ಲು ಬಾಣಗಳನ್ನು ಕೊಡುವವರು ಮಾತ್ರ ಇದ್ದರು.

ಅರ್ಥ:
ಉಳಿದ: ಮಿಕ್ಕ; ಇದಿರು: ಎದುರು; ಛತ್ರ: ಕೊಡೆ; ಚಮರಾವಳಿ: ಚಾಮರ; ಹಡಪಿಗ: ಅಡಕೆ ಎಲೆಯ ಚೀಲವನ್ನು ಹಿಡಿದವ; ಬಿರುದಾವಳಿ: ಗೌರವ ಸೂಚಕದ ಹೆಸರು; ಪಾಠಕ: ಹೊಗಳುಭಟ್ಟ; ವಾದ್ಯ: ಸಂಗೀತದ ಸಾಧನ; ಮಲ್ಲಗಾಯಕ: ಸಂಗೀತದಲ್ಲಿ ನಿಪುಣನಾದವ; ಸಲಿಲ: ನೀರು; ಭಕ್ಷ್ಯ: ಊಟ; ವಿಧಾನ: ರೀತಿ; ಗಜ: ಆನೆ; ಹಯ: ಕುದುರೆ; ಕುಲ: ವಂಶ; ರಕ್ಷ: ರಕ್ಷಣೆ, ಕಾಪಾಡು; ವ್ರಣ: ಹುಣ್ಣು; ಚಿಕಿತ್ಸ: ರೋಗಕ್ಕೆ ಮದ್ದು ನೀಡುವವ; ರಥ: ಬಂಡಿ; ಚಾರಕ: ಓಡಿಸುವ; ಕಾರ್ಮುಕ: ಬಿಲ್ಲು; ಬಾಣ: ಶರ;

ಪದವಿಂಗಡಣೆ:
ಉಳಿದುದ್+ಇದಿರಲಿ +ಛತ್ರ+ ಚಮರಾ
ವಳಿಯವರು +ಹಡಪಿಗರು +ಬಿರುದಾ
ವಳಿಯವರು +ಪಾಠಕರು +ವಾದ್ಯದ +ಮಲ್ಲಗಾಯಕರು
ಸಲಿಲ +ಭಕ್ಷ್ಯ+ವಿಧಾನ+ಗಜ+ಹಯ
ಕುಲದ+ ರಕ್ಷ+ವ್ರಣ+ಚಿಕಿತ್ಸಕ
ದಳಿತ+ ರಥಚಾರಕರು +ಕಾರ್ಮುಕ+ಬಾಣದಾಯಕರು

ಅಚ್ಚರಿ:
(೧) ಯುದ್ಧದಲ್ಲಿ ಸಹಾಯ ಮಾಡುವವರು – ಚಮರಾವಳಿ, ಹಡಪಿಗ, ಬಿರುದಾವಳಿ, ಪಾಠಕ, ಮಲ್ಲಗಾಯಕ, ವ್ರಣಚಿಕಿತ್ಸಕ, ರಥಚಾರಕ, ಬಾಣದಾಯಕ

ಪದ್ಯ ೨: ಸಂಜಯನು ಯಾರನ್ನು ಪ್ರಶ್ನಿಸಿದನು?

ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ (ಗದಾ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಹೊಗಳುಭಟ್ಟರು, ಭೇರಿ ಹೊಡೆಯುವವರು, ಹಡಪಿಗರು, ಸೂತರ ಗುಂಪುನಿಲ್ಲಿದ್ದವರು, ಚಾಮರ ಬೀಸುವವರು, ಔಷಧಿಯನ್ನು ಕೊಡುವವರು, ಆನೆ, ಕುದುರೆಯ ಮೇಲ್ವಿಚಾರಣೆಯನ್ನು ಮಾಡುವವರು ಅಸಂಖ್ಯಾತ ಸಂಖ್ಯೆಯಲ್ಲಿದ್ದರು. ಅವರೆಲ್ಲರನ್ನೂ ಸಂಜಯನು ಚಂದ್ರವಂಶ ಸಂಭೂತ ದುರ್ಯೋಧನನ್ನು ಕಂಡಿರಾ ಎಂದು ಪ್ರಶ್ನಿಸಿದನು.

ಅರ್ಥ:
ವಂದಿ: ಹೊಗಳುಭಟ್ಟ; ನಿಸ್ಸಾಳ: ಚರ್ಮವಾದ್ಯ; ಬಡಿಕರ: ಹೊಡೆಯುವವ; ಮಂದಿ: ಜನ; ಹಡಪಿಗ: ಚೀಲವನ್ನಿಟ್ಟುಕೊಂಡಿರುವವ; ಚಾಹಿ: ಚಾಮರ ಬೀಸುವವ; ಸೂತ: ಸಾರಥಿ; ಸಂದಣಿ: ಗುಂಪು; ಔಷಧಿಕ: ವೈದ್ಯ, ಔಷಧಿ ಕೊಡುವವ; ಹಯ: ಕುದುರೆ; ಗಜ: ಆನೆ; ಸಂವಿಧಾಯಕ: ವಿದ್ಯುಕ್ತವಾದುದು, ನಿರ್ಧರಿಸುವ; ನಿಂದು: ನಿಲ್ಲು; ಅಸಂಖ್ಯಾತ: ಲೆಕ್ಕವಿಲ್ಲದಷ್ಟು; ಇನಿಬರು: ಇಷ್ಟು ಜನ; ಕರೆದು: ಬರೆಮಾಡು; ಕೇಳು: ಆಲಿಸು; ಇಂದು: ಚಂದ್ರ; ಕುಲ: ವಂಶ; ಸಂಭವ: ಹುಟ್ಟು; ಕಂಡಿರೆ: ನೋಡಿದಿರೆ;

ಪದವಿಂಗಡಣೆ:
ವಂದಿಗಳ+ ನಿಸ್ಸಾಳ+ಬಡಿಕರ
ಮಂದಿ +ಹಡಪಿಗ +ಚಾಹಿ +ಸೂತರ
ಸಂದಣಿಗಳ್+ಔಷಧಿಕ +ಹಯ+ಗಜ+ಸಂವಿಧಾಯಕರು
ನಿಂದುದದ್+ಅಸಂಖ್ಯಾತವ್+ಇನಿಬರನ್
ಅಂದು +ಸಂಜಯ +ಕರೆದು +ಕೇಳಿದನ್
ಇಂದುಕುಲ+ಸಂಭವನ +ಕಂಡಿರೆ +ಕೌರವೇಶ್ವರನ

ಅಚ್ಚರಿ:
(೧) ಯುದ್ಧದಲ್ಲಿರುವ ಮಂದಿ – ವಂದಿ, ನಿಸ್ಸಾಳ ಬಡಿಕ, ಹಡಪಿಗ, ಚಾಹಿ, ಸೂತ, ಔಷಧಿಕ
(೨) ದುರ್ಯೋಧನನನ್ನು ಕರೆದ ಪರಿ – ಇಂದುಕುಲಸಂಭವನ ಕಂಡಿರೆ

ಪದ್ಯ ೮: ಕರ್ಣನ ಮರಣದ ಜ್ವರೆ ಯಾರ ಮೇಲೆ ಪ್ರಭಾವ ಬೀರಿತು?

ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ (ಶಲ್ಯ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನ ತಲೆಯು ಸಿಡಿದು ಭೂಮಿಗೆ ಬಿದ್ದೊಡನೆ, ದೊರೆಯು ಕಣ್ಮುಚ್ಚಿ, ಶೋಕಜ್ವರವೇರಲು, ಮೂರ್ಛಿತನಾದನು. ಹಡಪದವರು, ಚಾಮರದವರು ನೆಲಕ್ಕುರುಳಿದರು.

ಅರ್ಥ:
ಸಿಡಿ: ಸೀಳು; ತಲೆ: ಶಿರ; ಧರಿತ್ರಿ: ಭೂಮಿ; ಕೆಡೆ: ಬೀಳು, ಕುಸಿ; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಶೋಕ: ದುಃಖ; ಜ್ವರ: ಬೇನೆ, ತಾಪ; ಢಗೆ: ಕಾವು, ದಗೆ; ಜಡಿ: ಬೆದರಿಕೆ, ಹೆದರಿಕೆ; ಹಡಪ: ಎಲೆಯಡಿಕೆ ಚೀಲ; ಚಾಮರ: ಕುಂಚ; ಚಾಹಿ: ಚಾಮರ ಬೀಸುವವ; ನೆಲ: ಭೂಮಿ; ಉರುಳು: ಬೀಳು; ಸಾರಥಿ: ಸೂತ; ಕದಿ: ಸೀಲು; ನೇಣು: ಹಗ್ಗ, ಹುರಿ; ಕೊಂಡು: ಪಡೆದು; ತಿರುಹು: ಹಿಂದಿರುಗು; ರಥ: ಬಂಡಿ;

ಪದವಿಂಗಡಣೆ:
ಸಿಡಿದು +ಕರ್ಣನ +ತಲೆ +ಧರಿತ್ರಿಗೆ
ಕೆಡೆಯೆ +ಧೊಪ್ಪನೆ +ಮೂರ್ಛೆಯಲಿ +ನೃಪ
ಕೆಡೆದು +ಕಣ್ಮುಚ್ಚಿದನು +ಶೋಕ+ಜ್ವರದ +ಢಗೆ +ಜಡಿಯೆ
ಹಡಪಿಗರು +ಚಾಮರದ +ಚಾಹಿಯ
ರೊಡನೆ +ನೆಲಕುರುಳಿದರು +ಸಾರಥಿ
ಕಡಿಯಣದ +ಕುಡಿನೇಣ+ ಕೊಂಡನು +ತಿರುಹಿದನು +ರಥವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಡಿಯಣದ ಕುಡಿನೇಣ ಕೊಂಡನು

ಪದ್ಯ ೩೨: ಕರ್ಣನು ತನ್ನ ಅಹಂಕಾರವನ್ನು ಹೇಗೆ ಬಿಡಬೇಕಾಯಿತು?

ಮರಳಿ ಶಲ್ಯನನೆಚ್ಚನಾತನ
ಕರದ ವಾಘೆಯ ಕಡಿದನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ಹೊರೆಯ ಹಡಪಿಗ ಚಾಹಿಯರ ಚಾ
ಮರಿಯರನು ನೋಯಿಸಿದ ಗೆಲವಿನ
ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ (ಕರ್ಣ ಪರ್ವ, ೨೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬಾಣ ಪ್ರತಾಪವನ್ನು ಮುಂದುವರೆಸುತ್ತಾ, ಶಲ್ಯನನ್ನು ಹೊಡೆದನು, ಅವನ ಕೈಯಲ್ಲಿದ್ದ ವಾಘೆಯನ್ನು ಕತ್ತರಿಸಿ, ರಥದ ಕುರುರೆಗಳ ಮೈಯಲ್ಲಿ ಬಾಣಗಳನ್ನು ನೆಟ್ಟನು. ಅಕ್ಕ ಪಕ್ಕದ ತಾಂಬೂಲ ಛತ್ರ ಚಾಮರಧಾರಿಗಳನ್ನು ನೋಯಿಸಿದನು. ಗೆದ್ದೆನೆಂಬ ಅಹಂಕಾರವನ್ನು ಕರ್ಣನು ಬಡ್ಡಿಸಮೇತ ಉಗುಳಬೇಕಾಯಿತು.

ಅರ್ಥ:
ಮರಳಿ: ಮತ್ತೆ, ಪುನಃ; ಎಚ್ಚು: ಬಾಣಬಿಡು; ಕರ: ಕೈ; ವಾಘೆ: ಲಗಾಮು; ಕಡಿ: ಚೂರಾಗು, ತುಂಡು, ಹೋಳು; ರಥ: ಬಂಡಿ; ತುರಗ: ಕುದುರೆ; ಒಡಲು: ದೇಹ; ಹೂಳು: ಹೂತು ಹಾಕು, ಮುಚ್ಚು; ಹೇರಾಳು: ದೊಡ್ಡ, ವಿಶೇಷ; ಅಂಬು: ಬಾಣ; ಹೊರೆ: ರಕ್ಷಣೆ, ಆಶ್ರಯ; ಹಡಪಿಗ: ಚೀಲವನ್ನಿಟ್ಟುಕೊಂಡಿರುವವನು; ಚಾಹಿ: ಛತ್ರಹಿಡಿದವ; ಚಾಮರಿ: ಚಾಮರ ಬೀಸುವವ; ನೋವು: ಪೆಟ್ಟು; ಗೆಲುವು: ಜಯ; ಗರುವ: ಅಹಂಕಾರ; ಬಡ್ಡಿ:ಸಾಲವಾಗಿ ಕೊಡುವ ಯಾ ಪಡೆಯುವ ಹಣದ ಮೇಲೆ ತೆರುವ ಯಾ ಪಡೆಯುವ ಹೆಚ್ಚಿನ ಹಣ; ಸಹಿತ: ಜೊತೆ; ಉಗುಳಿಸು: ಹೊರಹಾಕು;

ಪದವಿಂಗಡಣೆ:
ಮರಳಿ +ಶಲ್ಯನನ್+ಎಚ್ಚನ್+ಆತನ
ಕರದ+ ವಾಘೆಯ +ಕಡಿದನಾ +ರಥ
ತುರಗದ್+ಒಡಲಲಿ +ಹೂಳಿದನು +ಹೇರಾಳದ್+ಅಂಬುಗಳ
ಹೊರೆಯ +ಹಡಪಿಗ+ ಚಾಹಿಯರ +ಚಾ
ಮರಿಯರನು +ನೋಯಿಸಿದ+ ಗೆಲವಿನ
ಗರುವತನವನು+ ಬಡ್ಡಿ+ಸಹಿತ್+ಉಗುಳಿಚಿದನಾ +ಪಾರ್ಥ

ಅಚ್ಚರಿ:
(೧) ಅಹಂಕಾರವನ್ನು ಮಣ್ಣುಮಾಡಿದನು ಎಂದು ಹೇಳುವ ಪರಿ, ಬಡ್ಡಿ ಪದದ ಬಳಕೆ – ಗೆಲವಿನ ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ
(೨) ಜೋಡಿ ಪದಗಳು – ಹೊರೆಯ ಹಡಪಿಗ; ಚಾಹಿಯರ ಚಾಮರಿಯರನು