ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪತಿಕರಿಸಿ
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತನರ್ಜುನನ ಸೂತಜನ ಸಮರದಲಿ (ಗದಾ ಪರ್ವ, ೧೧ ಸಂಧಿ, ೫ ಪದ್ಯ)
ತಾತ್ಪರ್ಯ:
ಅವರು ಸುಚರಿತರೆಂದೇ ಶ್ರೀಕೃಷ್ಣನು ಅವರಿಗೆ ಮರುಳಾದನು. ಶಿವನು ಅರ್ಜುನನಿಗೆ ಮೆಚ್ಚಿ ಪಾಶುಪತಾಸ್ತ್ರವನ್ನು ನೀಡಿದನು. ಕರ್ಣಾರ್ಜುನರ ಯುದ್ಧದಲ್ಲಿ ಲೋಕವು ಎರಡು ಪಕ್ಷವಾದಾಗ ಸಾಧುಗಳು ಪಾಂಡವರ ಕಡೆಗೂ, ದುಷ್ಟರು ನಿನ್ನ ಕಡೆಗೂ ಬೆಂಬಲಕ್ಕೆ ನಿಂತರಲ್ಲವೇ ಎಂದು ವೇದವ್ಯಾಸರು ಕೇಳಿದರು.
ಅರ್ಥ:
ಸುಚರಿತ: ಒಳ್ಳೆಯ ಚರಿತ್ರೆ ಉಳ್ಳವರು; ಮಾಧವ: ಕೃಷ್ಣ; ನೆರೆ: ಗುಂಪು; ಮರುಳು: ಪ್ರೀತಿ, ಮೋಹ; ಶಿವ: ಶಂಕರ; ಮೆಚ್ಚು: ಒಲುಮೆ, ಪ್ರೀತಿ; ಶರ: ಬಾಣ; ನರ: ಮನುಷ್ಯ; ಪತಿಕರಿಸು: ಅನುಗ್ರಹಿಸು; ಭುವನ: ಭೂಮಿ; ಸಾಧು: ಶುದ್ಧವಾದುದು; ದೆಸೆ: ದಿಕ್ಕು; ದುಸ್ಸಾಧು: ಕೆಟ್ಟವರು, ದುಷ್ಟ; ಸೂತಜ: ಕರ್ಣ; ಸಮರ: ಯುದ್ಧ;
ಪದವಿಂಗಡಣೆ:
ಅವರು +ಸುಚರಿತರ್+ಎಂದಲೇ +ಮಾ
ಧವನು +ನೆರೆ +ಮರುಳಾದನ್+ಅವರಿಗೆ
ಶಿವನು +ಮೆಚ್ಚಿದು +ಶರವನಿತ್ತನು+ ನರನ +ಪತಿಕರಿಸಿ
ಭುವನವ್+ಎರಡಾದಲ್ಲಿ+ ಸಾಧುಗಳ್
ಅವರ +ದೆಸೆ +ದುಸ್ಸಾಧುಗಳು +ನಿ
ನ್ನವರ +ದೆಸೆಯಾಯ್ತನ್+ ಅರ್ಜುನನ +ಸೂತಜನ +ಸಮರದಲಿ
ಅಚ್ಚರಿ:
(೧) ಕೃಷ್ಣನು ಪಾಂಡವರ ಕಡೆಯಿದ್ದ ಕಾರಣ – ಅವರು ಸುಚರಿತರೆಂದಲೇ ಮಾಧವನು ನೆರೆ ಮರುಳಾದನವರಿಗೆ
(೨) ಕರ್ಣನನ್ನು ಸೂತಜ ಎಂದು ಕರೆದಿರುವುದು