ಸೋತುದುಂಟರಿಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ (ವಿರಾಟ ಪರ್ವ, ೧೦ ಸಂಧಿ, ೧೪ ಪದ್ಯ)
ತಾತ್ಪರ್ಯ:
ಆಗ ಕಂಕನು ಶತ್ರು ಸೈನ್ಯವು ಸೋತದ್ದುಂಟು, ಗೋವುಗಳು ಮರಳಿ ಬಂದುದು ನಿಜ, ಈ ಗೆಲವು ಕುತೂಹಲಕರ ಮತ್ತು ಅದ್ಭುತವಾಗಿ ತೋರುತ್ತದೆ. ಜಗದ್ವಿಖ್ಯಾತನಾದ ಸಾರಥಿಯಿದ್ದರೆ ರಥಿಕನಿಗೆ ಎಲ್ಲಿಯ ಭೀತಿ ಎಂದು ಜನರು ಹೇಳುತ್ತಾರೆ, ಹಾಗೆಯೇ ನಡೆದಿದೆ ಎಂದು ಕಂಕನು ವಿರಾಟನಿಗೆ ಹೇಳಿದನು.
ಅರ್ಥ:
ಸೋತು: ಪರಾಭವ; ಅರಿ: ವೈರಿ; ಸೇನೆ: ಸೈನ್ಯ; ಸುರಭಿ: ಗೋವು; ವ್ರಾತ: ಗುಂಪು; ಮರಳು: ಹಿಂದಿರುಗು; ಗೆಲವು: ಜಯ; ಕೌತುಕ: ಕುತೂಹಲ; ಅಧ್ಬುತ: ಆಶ್ಚರ್ಯ; ಬಗೆ: ಯೋಚಿಸು; ಚಿತ್ತ: ಮನಸ್ಸು; ಮಾತು: ವಾಣಿ; ಹೋಲು: ಸದೃಶವಾಗು; ಜಗ: ಪ್ರಪಂಚ; ವಿಖ್ಯಾತ: ಪ್ರಸಿದ್ಧ; ಸಾರಥಿ: ಸೂತ; ಕುಮಾರ: ಪುತ್ರ; ಭೀತಿ: ಭಯ; ಬಳಿಕ: ತರುವಾಯ, ನಂತರ; ತಪ್ಪು: ಸರಿಯಲ್ಲದು;
ಪದವಿಂಗಡಣೆ:
ಸೋತುದುಂಟ್+ಅರಿ +ಸೇನೆ +ಸುರಭಿ
ವ್ರಾತ +ಮರಳಿದುದುಂಟು +ಗೆಲವಿದು
ಕೌತುಕವಲೇ+ ಬಗೆಯಲ್+ಅದ್ಭುತವೆಮ್ಮ +ಚಿತ್ತದಲಿ
ಮಾತು +ಹೋಲುವೆ+ಅಹುದು +ಜಗ+ವಿ
ಖ್ಯಾತ +ಸಾರಥಿಯಿರೆ +ಕುಮಾರಗೆ
ಭೀತಿ+ ಬಳಿಕೆಲ್ಲಿಯದು +ತಪ್ಪೇನೆಂದನಾ +ಕಂಕ
ಅಚ್ಚರಿ:
(೧) ಸಾರಥಿಯನ್ನು ಪ್ರಶಂಸಿದ ಪರಿ – ಜಗ ವಿಖ್ಯಾತ ಸಾರಥಿಯಿರೆ ಕುಮಾರಗೆ ಭೀತಿ ಬಳಿಕೆಲ್ಲಿಯದು