ವಿನುತ ಸುಕವಿಯ ಸೂಕ್ತಿ ತಾಗಿದ
ಮುನಿಗಳಂತಃಕರಣದಂತಿರೆ
ಹೊನಲುವರಿದವು ಚಂದ್ರಕಾಂತದ ಸಾಲಶಿಲೆ ಕರಗಿ
ಮನದ ಕತ್ತಲೆ ಗುರುವರನ ವಾ
ಕ್ಕಿನಲಿ ತೊಲಗುವವೋಲು ತುಂಬಿಯ
ತನತನಗೆ ನೂಕಿದವು ವಿಕಸಿತ ಕೈರವಾದಿಗಳು (ದ್ರೋಣ ಪರ್ವ, ೧೭ ಸಂಧಿ, ೧೬ ಪದ್ಯ)
ತಾತ್ಪರ್ಯ:
ಸುಜ್ಞಾನಿಯ ಸೂಕ್ತಿಯು ಸೊಗಸಿದ ಮುನಿಗಳಂತಃಕರಣದಂತೆ ಚಂದ್ರಕಾಂತ ಶಿಲೆಗಳ ಸಾಲು ಕರಗಿ ಹಳ್ಳ ಹರಿದವು. ಮನಸ್ಸಿನ ಕತ್ತಲೆಯು ಗುರು ಉಪದೇಶದಿಂದ ತೊಲಗುವಂತೆ, ಅರಳಿದ ಕುಮುದಗಳು ದುಂಬಿಗಳನ್ನು ನೂಕಿದವು.
ಅರ್ಥ:
ವಿನುತ: ಸ್ತುತಿಗೊಂಡ; ಕವಿ: ಕಾವ್ಯವನ್ನು ರಚಿಸುವವ; ಸೂಕ್ತಿ: ಒಳ್ಳೆಯ ಮಾತು; ತಾಗು: ಮುಟ್ಟು; ಮುನಿ: ಋಷಿ; ಅಂತಃಕರಣ: ಮನಸ್ಸು; ಹೊನಲು: ಪ್ರವಾಹ, ನೀರೋಟ; ಚಂದ್ರಕಾಂತ: ಬೆಳದಿಂಗಳಿನಲ್ಲಿ ದ್ರವಿಸುವುದೆಂದು ಭಾವಿಸಲಾದ ಒಂದು ಬಗೆಯ ಬಿಳಿಯ ಕಲ್ಲು; ಶಿಲೆ: ಕಲ್ಲು; ಕರಗು: ಮಾಯವಾಗು; ಮನ: ಮನಸ್ಸು; ಕತ್ತಲೆ: ಅಂಧಕಾರ; ಗುರು: ಆಚಾರ್ಯ; ವರ: ಶ್ರೇಷ್ಠ; ವಾಕ್ಕು: ಮಾತು; ತೊಲಗು: ಹೊರಹಾಕು; ತುಂಬಿ: ಭ್ರಮರ; ನೂಕು: ತಳ್ಳು; ವಿಕಸಿತ: ಅರಳಿದ; ಕೈರವ: ಬಿಳಿಯ ನೈದಿಲೆ, ನೀಲಕಮಲ; ಆದಿ: ಮುಂತಾದ;
ಪದವಿಂಗಡಣೆ:
ವಿನುತ +ಸುಕವಿಯ +ಸೂಕ್ತಿ +ತಾಗಿದ
ಮುನಿಗಳ್+ಅಂತಃಕರಣದಂತಿರೆ
ಹೊನಲುವ್+ಅರಿದವು+ ಚಂದ್ರಕಾಂತದ +ಸಾಲಶಿಲೆ +ಕರಗಿ
ಮನದ +ಕತ್ತಲೆ +ಗುರುವರನ +ವಾ
ಕ್ಕಿನಲಿ +ತೊಲಗುವವೋಲು +ತುಂಬಿಯ
ತನತನಗೆ+ ನೂಕಿದವು +ವಿಕಸಿತ +ಕೈರವಾದಿಗಳು
ಅಚ್ಚರಿ:
(೧) ಉಪಮಾನದ ಪ್ರಯೋಗ – ವಿನುತ ಸುಕವಿಯ ಸೂಕ್ತಿ ತಾಗಿದಮುನಿಗಳಂತಃಕರಣದಂತಿರೆ; ಮನದ ಕತ್ತಲೆ ಗುರುವರನ ವಾಕ್ಕಿನಲಿ ತೊಲಗುವವೋಲು