ಪದ್ಯ ೪೭: ಕುಂತಿಯು ಯಾವ ದೇವತೆಯನ್ನು ಕರೆದಳು?

ನಿಯಮದಲಿ ಕಾಮಿನಿ ಸರೋವಾ
ರಿಯಲಿ ಮಿಂದಳು ಬೀಜಮಂತ್ರ
ವ್ಯಯವ ಮಾಡಿದಳಮರ ನಿಕರವ ನೋಡಿ ಕೈಮುಗಿದು
ಬಯಸಿದಳು ವಾಯುವನು ನಿಜಮೂ
ರ್ತಿಯಲಿ ಬಂದು ಸಮೀರನಾ ಕುಂ
ತಿಯನು ನುಡಿಸಿದನೆಮ್ಮ ಬರಿಸಿದ ಹದನದೇನೆಂದು (ಆದಿ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕುಂತಿಯು ಪಾಂಡುವಿನಪ್ಪಣೆಯೊಂದಿಗೆ ಸರೋವರದಲ್ಲಿ ಮಿಂದು, ದುರ್ವಾಸ ಮುನಿಗಳು ನೀಡಿದ್ದ ಬೀಜಮಂತ್ರವನ್ನು ಜಪಿಸಿ ದೇವತೆಗಳಿಗೆ ಕೈಮುಗಿದು ವಾಯುವನ್ನು ಬಯಸಿ ಕರೆದಳು. ವಾಯುವು ತನ್ನ ರೂಪದಿಂದ ಬಂದು ನನ್ನನ್ನೇಕೆ ಕರೆದೆ ಎಂದು ಕುಂತಿಯನ್ನು ಕೇಳಿದನು.

ಅರ್ಥ:
ನಿಯಮ: ಕಟ್ಟುಪಾಡು, ಕಟ್ಟಳೆ; ಕಾಮಿನಿ: ಹೆಣ್ಣು; ಸರೋವಾರಿ: ಸರೋವರ; ಮಿಂದು: ಸ್ನಾನ, ಮುಳುಗು; ಬೀಜ: ಮೂಲ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ವ್ಯಯ: ವೆಚ್ಚ; ಅಮರ: ದೇವತೆ; ನಿಕರ: ಗುಂಪು; ನೋಡು: ವೀಕ್ಷಿಸು; ಕೈಮುಗಿ: ನಮಸ್ಕರಿಸು; ಬಯಸು: ಇಚ್ಛಪಡು, ಆಸೆ; ವಾಯು: ಗಾಳಿ, ಸಮೀರ; ಮೂರ್ತಿ: ರೂಪ; ಬಂದು: ಆಗಮಿಸು; ಸಮೀರ: ವಾಯು; ನುಡಿಸು: ಮಾತನಾಡಿಸು; ಬರಿಸಿ: ಕರೆದಿರಿ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ನಿಯಮದಲಿ+ ಕಾಮಿನಿ +ಸರೋವಾ
ರಿಯಲಿ +ಮಿಂದಳು +ಬೀಜಮಂತ್ರ
ವ್ಯಯವ +ಮಾಡಿದಳ್+ಅಮರ +ನಿಕರವ +ನೋಡಿ +ಕೈಮುಗಿದು
ಬಯಸಿದಳು +ವಾಯುವನು +ನಿಜ+ಮೂ
ರ್ತಿಯಲಿ +ಬಂದು +ಸಮೀರನ್+ಆ+ ಕುಂ
ತಿಯನು +ನುಡಿಸಿದನ್+ಎಮ್ಮ+ ಬರಿಸಿದ+ ಹದನದ್+ಏನೆಂದು

ಅಚ್ಚರಿ:
(೧) ವಾಯು, ಸಮೀರ – ಸಮಾನಾರ್ಥಕ ಪದ