ಇದು ನಿಮಗೆ ವಂದನೆಯೆನುತ ನಿಜ
ಗದೆಯಲಾತನ ರಥವ ಹುಡಿಗು
ಟ್ಟಿದನು ಸುರಗಿಯನುಗಿಯಲಪ್ಪಳಿಸಿದನು ಮೋಹರವ
ಇದಿರಲಿರಲಳವಡದೆ ಗುರು ಹಿಂ
ಗಿದನು ಶಕಟವ್ಯೂಹವನು ಮ
ಧ್ಯದೊಳು ಥಟ್ಟುಗಿದುರವಣಿಸಿ ಪವಮಾನಸುತ ನಡೆದ (ದ್ರೋಣ ಪರ್ವ, ೧೨ ಸಂಧಿ, ೧೮ ಪದ್ಯ)
ತಾತ್ಪರ್ಯ:
ಗುರುಗಳೇ ಇದೇ ನಿಮಗೆ ನಮಸ್ಕಾರ ಎಂದು ದ್ರೋಣನ ರಥಾನ್ನು ಗದೆಯಿಂದ ಪುಡಿಮಾಡಿದನು. ದ್ರೋಣನು ಕತ್ತಿಯನ್ನು ಸೆಳೆಯಲು, ಅವನ ಸೈನ್ಯವನ್ನು ಅಪ್ಪಳಿಸಿದನು. ಇವನ ಎದುರಿನಲ್ಲಿ ನಿಲ್ಲಲು ಸಾಧ್ಯವಾಗದೆ, ದ್ರೋಣನು ಮರಳಿದನು. ಭೀಮನು ಶಕಟವ್ಯೂಹದ ಮಧ್ಯದಲ್ಲಿ ಹೊಕ್ಕು ಸಿಕ್ಕವರನ್ನೆಲ್ಲಾ ಗುಂಪುಗುಂಪಾಗಿ ಕೊಂದು ವೇಗವಾಗಿ ಮುಂದುವರೆದನು.
ಅರ್ಥ:
ವಂದನೆ: ನಮಸ್ಕಾರ; ನಿಜ: ತನ್ನ; ಗದೆ: ಮುದ್ಗರ; ರಥ: ಬಂಡಿ; ಹುಡಿ: ಹಿಟ್ಟು, ಪುಡಿ; ಸುರಗಿ: ಸಣ್ಣ ಕತ್ತಿ, ಚೂರಿ; ಉಗಿ: ಹೊರಹಾಕು; ಅಪ್ಪಳಿಸು: ತಟ್ಟು, ತಾಗು; ಮೋಹರ: ಯುದ್ಧ; ಇದಿರು: ಎದುರು; ಅಳವಡು: ಹೊಂದು, ಸೇರು, ಕೂಡು; ಗುರು: ಆಚಾರ್ಯ; ಹಿಂಗು: ಹಿಮ್ಮೆಟ್ಟು; ಮಧ್ಯ: ನಡುವೆ; ಥಟ್ಟು: ಗುಂಪು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಪವಮಾನ: ವಾಯು; ಸುತ: ಪುತ್ರ; ನಡೆ: ಚಲಿಸು;
ಪದವಿಂಗಡಣೆ:
ಇದು +ನಿಮಗೆ +ವಂದನೆ+ಎನುತ +ನಿಜ
ಗದೆಯಲ್+ಆತನ +ರಥವ +ಹುಡಿಗು
ಟ್ಟಿದನು +ಸುರಗಿಯನ್+ಉಗಿಯಲ್+ಅಪ್ಪಳಿಸಿದನು +ಮೋಹರವ
ಇದಿರಲ್+ಇರಲ್+ಅಳವಡದೆ+ ಗುರು+ ಹಿಂ
ಗಿದನು +ಶಕಟವ್ಯೂಹವನು +ಮ
ಧ್ಯದೊಳು +ಥಟ್ಟುಗಿದ್+ಉರವಣಿಸಿ +ಪವಮಾನಸುತ +ನಡೆದ
ಅಚ್ಚರಿ:
(೧) ಹಿಮ್ಮೆಟ್ಟು ಎಂದು ಹೇಳುವ ಪರಿ – ಇದಿರಲಿರಲಳವಡದೆ ಗುರು ಹಿಂಗಿದನು