ಬಂದಳಾ ದ್ರೌಪದಿಯಹಹ ಗುರು
ನಂದನ ಕೊಲಬಾರದಕಟೀ
ನಂದನರ ಮರಣದ ಮಹಾ ವ್ಯಥೆಯೀತನಳಿವಿನಲಿ
ಕೊಂದು ಕೂಗದೆ ಕೃಪೆಯಸಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ (ಗದಾ ಪರ್ವ, ೧೦ ಸಂಧಿ, ೨೬ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನನ್ನು ಕೊಲ್ಲಲು ಸಜ್ಜಾಗಿದ್ದ ಭೀಮಾರ್ಜುನರನ್ನು ದ್ರೌಪದಿಯು ಮುಂದೆ ಬಂದು ತಡೆದಳು. ಅಹಹಾ ಗುರುಪುತ್ರನನ್ನು ಕೊಲ್ಲಬಾರದು. ಹಾಗೆ ಮಾಡಿದರೆ ಪುತ್ರಶೋಕವು ಕೃಪೆಯನ್ನು ಘಾತಿಸುವುದಿಲ್ಲವೇ? ಹೆಣ್ಣು ಮಕ್ಕಳು ಸುಖ ದುಃಖದಲ್ಲಿ ಸಮಾನರು. ಬೇಡ, ಗುರುಪುತ್ರನನ್ನು ಬಿಡಿ ಎಂದು ಭೀಮಾರ್ಜುನರನ್ನು ನಿಲ್ಲಿಸಿದಳು.
ಅರ್ಥ:
ಬಂದಳು: ಆಗಮಿಸು; ಗುರು: ಆಚಾರ್ಯ; ನಂದನ: ಮಗ; ಕೊಲು: ಸಾಯಿಸು; ಅಕಟ: ಅಯ್ಯೋ; ಮರಣ: ಸವು; ವ್ಯಥೆ: ದುಃಖ; ಅಳಿವು: ನಾಶ; ಕೂಗು: ಕಿರುಚು, ಆರ್ಭಟಿಸು; ವೃಂದ: ಗುಮ್ಫು; ಅಬಲ: ಹೆಣ್ಣು; ಸಮ: ಸರಿಸಾಟಿ; ಸುಖ: ಸಂತಸ; ದುಃಖ: ನೋವು; ಸಾರು: ತಳ್ಳು; ತೆಗೆ: ಈಚೆಗೆ ತರು, ಹೊರತರು; ಬಳಿಕ: ನಂತರ;
ಪದವಿಂಗಡಣೆ:
ಬಂದಳಾ +ದ್ರೌಪದಿ+ಅಹಹ +ಗುರು
ನಂದನ +ಕೊಲಬಾರದ್+ಅಕಟೀ
ನಂದನರ +ಮರಣದ +ಮಹಾ +ವ್ಯಥೆ+ಈತನ್+ಅಳಿವಿನಲಿ
ಕೊಂದು +ಕೂಗದೆ +ಕೃಪೆಯಸ್+ಅಬಲಾ
ವೃಂದ +ಸಮಸುಖದುಃಖಿಗಳು +ಸಾ
ರೆಂದು +ಭೀಮಾರ್ಜುನರ+ ತೆಗೆದಳು +ಬಳಿಕ +ಪಾಂಚಾಲಿ
ಅಚ್ಚರಿ:
(೧) ದ್ರೌಪದಿಯ ಮೇರು ಚಿಂತನೆ – ಕೊಂದು ಕೂಗದೆ ಕೃಪೆಯಸಬಲಾವೃಂದ ಸಮಸುಖದುಃಖಿಗಳು
(೨) ಕೊಂದು, ಕೊಲು, ಮರನ, ಅಳಿವು – ಸಾಮ್ಯಾರ್ಥ ಪದಗಳು