ಪದ್ಯ ೫೨: ಆನೆಗಳು ಧರ್ಮಜನ ಮೇಲೆ ಹೇಗೆ ಆಕ್ರಮಣ ಮಾಡಿದವು?

ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ
ಜೋಡಿಸಿದ ಭರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬು ಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ (ಗದಾ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕುರುಸೇನೆಯಲ್ಲಿ ಸಾವಿರ ಆನೆಗಳ ನೆತ್ತಿಯನ್ನು ತಿವಿದು ಧರ್ಮಜನ ಮೇಲೆ ಬಿಟ್ಟರು. ಪರಿಘ, ಲೌಡಿ ಮೊದಲಾದ ಆಯುಧಗಳನ್ನು ಆನೆಗಳ ಸೊಂಡಿಲಿಗೆ ಜೋಡಿಸಿ ಬಿಡಲು ಅವು ಮಹಾರಭಸದಿಂದ ಧರ್ಮಜನ ಸಮ್ಮುಖಕ್ಕೆ ಹೋದವು.

ಅರ್ಥ:
ಜೋಡಿಸು: ಕೂಡಿಸು; ಸಾವಿರ: ಸಹಸ್ರ; ಗಜ: ಆನೆ; ಈಡು: ಹೊಡೆಯ ಬೇಕಾದ ವಸ್ತು, ಗುರಿ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ನೆತ್ತಿ: ಶಿರ; ತೋಡು: ಅಗೆ, ಹಳ್ಳ ಮಾಡು; ನೃಪ: ರಾಜ; ಮತ: ವಿಚಾರ; ದೊರೆ: ರಾಜ; ಸಮ್ಮುಖ: ಎದುರು; ಭರಿಕೈ: ಆನೆಯ ಸೊಂಡಿಲು; ಪರಿಘ: ಅಗುಳು, ಲಾಳವಿಂಡಿಗೆ, ಗದೆ; ಲೌಡಿ: ತೊತ್ತು, ದಾಸಿ; ಪಟ್ಟೆಯ: ಎರಡು ಮೊನೆಯ ಕತ್ತಿ; ಉಬ್ಬು: ಹಿಗ್ಗು; ತೂಳು: ಆವೇಶ, ಉನ್ಮಾದ; ಯಮಸುತ: ಧರ್ಮಜ; ಸುತ: ಮಗ; ಪಡಿಮುಖ: ಎದುರು, ಮುಂಭಾಗ;

ಪದವಿಂಗಡಣೆ:
ಜೋಡಿಸಿದ+ ಸಾವಿರ+ ಗಜಂಗಳನ್
ಈಡಿರಿದರ್+ಅಂಕುಶದಿ+ ನೆತ್ತಿಯ
ತೋಡಿಬಿಟ್ಟರು +ನೃಪನ +ಮತದಲಿ +ದೊರೆಯ +ಸಮ್ಮುಖಕೆ
ಜೋಡಿಸಿದ +ಭರಿಕಯ್ಯ +ಪರಿಘದ
ಲೌಡಿಗಳ +ಪಟ್ಟೆಯದಲ್+ಉಬ್ಬುಳಿ
ಗೂಡಿ +ತೂಳಿದವ್+ಆನೆಗಳು +ಯಮಸುತನ+ ಪಡಿಮುಖಕೆ

ಅಚ್ಚರಿ:
(೧) ಸಮ್ಮುಖ, ಪಡಿಮುಖ – ೩, ೬ ಸಾಲಿನ ಕೊನೆಯ ಪದ
(೨) ಜೋಡಿಸಿದ – ೧, ೪ ಸಾಲಿನ ಮೊದಲ ಪದ

ಪದ್ಯ ೫: ಜೋಧರು ಆನೆಯನ್ನು ಹೇಗೆ ಏರಿದರು?

ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು (ದ್ರೋಣ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ರೆಂಚೆಯಲ್ಲಿ ಬಾಣಗಳು ಬಿಲ್ಲುಗಳು ಸೂನಿಗೆಗಳು ಸೇರಿಕೊಂಡಿದ್ದವು. ಸರಿಹಗ್ಗಗಳು ಕೈಗುಂಡು, ಕವಣೆಗಲ್ಲು, ಲೌಡಿ, ಖಡ್ಗಗಳನ್ನು ಜೋಡಿಸಿ ಮಾವುತರು ಗರ್ಜಿಸಿ ಆನೆಯನ್ನೇರಿದರು.

ಅರ್ಥ:
ಗಗನ: ಆಗಸ; ತಳ: ಕೆಳಗು, ಪಾತಾಳ, ನೆಲ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ತುಂಬು: ಅತಿಶಯ, ಬಾಹುಳ್ಯ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕಣೆ: ಬಾಣ; ಬಿಗಿ: ಭದ್ರವಾಗಿರುವುದು; ಆಳಿ: ಮೋಸ, ವಂಚನೆ, ಗುಂಪು; ಬಿಲ್ಲು: ಚಾಪ; ತೆತ್ತಿಸು: ಜೋಡಿಸು, ಕೂಡಿಸು; ಸೂನಿಗೆ: ಒಂದು ಬಗೆಯ ಆಯುಧ; ಉಗಿ: ಹೊರಹಾಕು; ನೇಣು: ಹಗ್ಗ, ಹುರಿ; ಗುಂಡು: ತುಪಾಕಿಯ ಗೋಲಿ, ಗುಂಡುಕಲ್ಲು; ಕವಣೆ: ಕಲ್ಲಿನಿಂದ ಬೀಸಿ ಹೊಡೆಯಲು ಮಾಡಿದ ಜಾಳಿಗೆಯ ಸಾಧನ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ಜೋಡಿಸು: ಕೂಡಿಸು; ಜೋಧ: ಆನೆ ಮೇಲೆ ಕೂತು ಯುದ್ಧ ಮಾಡುವವ; ಅಡರು: ಮೇಲಕ್ಕೆ ಹತ್ತು; ಬೊಬ್ಬಿರಿ: ಆರ್ಭಟಿಸು;

ಪದವಿಂಗಡಣೆ:
ಗಗನ+ ತಳವನು +ಬಿಗಿದ+ ಬಲು +ರೆಂ
ಚೆಗಳ +ತುಂಬಿದ +ಹೊದೆಯ +ಕಣೆಗಳ
ಬಿಗಿದನ್ + ಆಳಿಯ +ಬಿಲ್ಲುಗಳ +ತೆತ್ತಿಸಿದ +ಸೂನಿಗೆಯ
ಉಗಿವ+ ಸರಿನೇಣುಗಳ +ಕೈಗುಂ
ಡುಗಳ+ ಕವಣೆಯ +ಲೌಡಿ +ಕರವಾ
ಳುಗಳ+ ಜೋಡಿಸಿ +ಜೋದರ್+ಅಡರಿದರ್+ಅಂದು +ಬೊಬ್ಬಿರಿದು

ಪದ್ಯ ೧೭: ಚತುರಂಗ ಸೈನ್ಯದ ಸಾವೇಕೆ ಕೌತುಕವನ್ನು ತೋರಿತು?

ಪಿರಿದು ಮೊನೆಗುತ್ತಿನಲಿ ನೆತ್ತರು
ಸುರಿದುದಡಹೊಯ್ಲಿನಲಿ ಖಂಡದ
ಹೊರಳಿ ತುಳಿತುದು ಕಾಯವಜಿಗಿಜಿಯಾಯ್ತು ಲೌಡಿಯಲಿ
ಸರಳ ಚೌಧಾರೆಯಲಿ ಹಾಯ್ದವು
ಕರುಳು ಕಬ್ಬುನ ಕೋಲಿನಲಿ ಕ
ತ್ತರಿಸಿದವು ಕಾಲುಗಳು ಕೌತುಕವಾಯ್ತು ಚತುರಂಗ (ಭೀಷ್ಮ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಇರಿದಾಗ ನೆತ್ತರು ಚಿಮ್ಮಿ ಹಿರಿಯಿತು. ಪಕ್ಕದಿಂದ ಬೀಸಿದಾಗ ಮಾಂಸಖಂಡ ಹೊರಬಂತು. ಲೌಡಿಯ ಹೊಡೆತಕ್ಕೆ ದೇಹವು ಗಿಜಿಗಿಜಿಯಾಯ್ತು, ನಾಲ್ಕೂ ಕಡೆಯಿಂದ ಬಂದು ನಾಟಿದ ಬಾಣಗಳು ಕರುಳುಗಳನ್ನು ಹೊರ ತಂದವು. ಕಾಲುಗಳು ಕತ್ತರಿಸಿದವು. ಹೀಗೆ ಚತುರಂಗ ಸೈನ್ಯದ ಸಾವು ಕೌತುಕವನ್ನು ತಂದಿತು.

ಅರ್ಥ:
ಪಿರಿ: ದೊಡ್ಡ; ಮೊನೆ: ತುದಿ, ಚೂಪು; ಕುತ್ತು: ಚುಚ್ಚು, ತಿವಿ; ನೆತ್ತರು: ರಕ್ತ; ಸುರಿ: ಮೇಲಿನಿಂದ ಬೀಳು, ವರ್ಷಿಸು; ಹೊಯ್ಲು: ಏಟು, ಹೊಡೆತ; ಖಂಡ: ತುಂಡು, ಚೂರು; ಹೊರಳು: ತಿರುವು, ಬಾಗು; ತುಳಿ: ಮೆಟ್ಟುವಿಕೆ, ತುಳಿತ; ಕಾಯ: ದೇಹ; ಗಿಜಿಗಿಜಿ: ಅಸಹ್ಯ ಬರುವಂತೆ ಅಂಟಾಗಿರುವುದು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಸರಳ: ಬಾಣ; ಚೌಧಾರೆ: ನಾಲ್ಕು ಕಡೆಯ ಪ್ರವಾಹ; ಹಾಯ್ದು: ಹೊಡೆ; ಕರುಳು: ಪಚನಾಂಗ; ಕಬ್ಬು: ಇಕ್ಷುದಂಡ; ಕೋಲು: ಬಾಣ; ಕತ್ತರಿಸು: ಚೂರುಮಾಡು; ಕಾಲು: ಪಾದ; ಕೌತುಕ: ಆಶ್ಚರ್ಯ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಅಡವೊಯ್ಲು: ಅಡ್ಡ ಹೊಡೆತ;

ಪದವಿಂಗಡಣೆ:
ಪಿರಿದು +ಮೊನೆ+ಕುತ್ತಿನಲಿ +ನೆತ್ತರು
ಸುರಿದುದ್+ಅಡಹೊಯ್ಲಿನಲಿ +ಖಂಡದ
ಹೊರಳಿ +ತುಳಿತುದು +ಕಾಯವಜಿಗಿಜಿಯಾಯ್ತು +ಲೌಡಿಯಲಿ
ಸರಳ+ ಚೌಧಾರೆಯಲಿ+ ಹಾಯ್ದವು
ಕರುಳು +ಕಬ್ಬುನ +ಕೋಲಿನಲಿ+ ಕ
ತ್ತರಿಸಿದವು +ಕಾಲುಗಳು +ಕೌತುಕವಾಯ್ತು +ಚತುರಂಗ

ಅಚ್ಚರಿ:
(೧) ಕ ಕಾರದ ಸಾಲು ಪದ – ಕರುಳು ಕಬ್ಬುನ ಕೋಲಿನಲಿ ಕತ್ತರಿಸಿದವು ಕಾಲುಗಳು ಕೌತುಕವಾಯ್ತು

ಪದ್ಯ ೧೩: ಭೀಷ್ಮನು ಯಾರೊಡನೆ ಯುದ್ಧಕ್ಕೆ ಬಂದನು?

ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ (ಭೀಷ್ಮ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಝಳಪಿಸುವ ಕತ್ತಿಗಳ ಕಾಂತಿ, ಮೇಲೆತ್ತಿ ತೂಗುವ ಲೌಡಿಗಳು, ಝಾಡಿಸುವ ಸಬಳಗಳ ಹೊಳಪು, ತಿರುವುತ್ತಿದ್ದ ಅಂಕುಶಗಳು ಹೆದೆಯೇರಿಸಿದ ಬಿಲ್ಲು, ಕೈಯಲ್ಲಿ ಹಿಡಿದ ಕೂರಂಬುಗಳು ಇವನ್ನು ಧರಿಸಿದ ಸುಭಟರೊಡನೆ ಭೀಷ್ಮನು ಕಾಳಗದ ಕಣವನ್ನು ಹೊಕ್ಕನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಝಳ; ಪ್ರಕಾಶ, ಕಾಂತಿ; ಆಯುಧ: ಶಸ್ತ್ರ; ನೆಗಹು: ಮೇಲೆತ್ತು; ತೂಗು: ಅಲ್ಲಾಡಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಮೊನೆ: ಚೂಪು, ತುದಿ; ಝಗಿಸು: ಕಾಂತಿಯುಕ್ತವಾಗಿ ಹೊಳೆ; ಝಾಡಿ: ಕಾಂತಿ; ಸಬಳ: ಈಟಿ, ಭರ್ಜಿ; ತಿರುಹು: ತಿರುಗಿಸು; ಅಂಕುಶ: ಹಿಡಿತ, ಹತೋಟಿ; ಬಿಗಿ: ಕಟ್ಟು, ಬಂಧಿಸು; ಬಿಲ್ಲು: ಚಾಪ; ಬೆರಳು: ಅಂಗುಲಿ; ಒಗೆ: ಎಸೆ, ಹೊಡೆ; ಕೂರಂಬು: ಹರಿತವಾದ ಬಾಣ; ಸುಭಟ: ಸೈನಿಕ; ಆಳಿ: ಗುಂಪು; ಗಾಂಗೇಯ: ಭೀಷ್ಮ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ;

ಪದವಿಂಗಡಣೆ:
ಹೊಗರೊಗುವ +ಝಳಪಿಸುವಡ್+ಆಯುಧ
ನೆಗಹಿ+ ತೂಗುವ +ಲೌಡಿಗಳ +ಮೊನೆ
ಝಗಝಗಿಸಿ +ಝಾಡಿಸುವ +ಸಬಳದ +ತಿರುಹುವ್+ಅಂಕುಶದ
ಬಿಗಿದುಗಿವ+ ಬಿಲ್ಲುಗಳ+ ಬೆರಳೊಳಗ್
ಒಗೆವ +ಕೂರಂಬುಗಳ +ಸುಭಟಾ
ಳಿಗಳೊಡನೆ +ಗಾಂಗೇಯ +ಹೊಕ್ಕನು +ಕಾಳೆಗದ+ ಕಳನ

ಅಚ್ಚರಿ:
(೧) ಹೊಗರು, ಝಳ, ಝಗ, ಝಾಡಿ – ಸಾಮ್ಯಾರ್ಥ ಪದಗಳು

ಪದ್ಯ ೮೦: ಯೊಧರ ಪ್ರಾಣಗಳು ಎಲ್ಲಿ ಹಾರಿದವು?

ತಿರುಹಿ ಬಿಸುಟವು ಕಾಲುಗಾಹಿನ
ತುರಗವನು ಮುಂಬಾರೆಕಾರರ
ಶಿರವನೈದಾರೇಳನಡಸಿದವಣಲ ಹೊಳಲಿನೊಳು
ಅರರೆ ಪಟ್ಟೆಯ ಲೌಡಿ ಖಂಡೆಯ
ದುರವಣೆಯ ಹೊಯಿಲಿನೊಳು ರಿಪುಗಜ
ವುರುಳಿದವು ತೆರಳಿದವು ಜೋದರ ಜೀವವಂಬರಕೆ (ಭೀಷ್ಮ ಪರ್ವ, ೪ ಸಂಧಿ, ೮೦ ಪದ್ಯ)

ತಾತ್ಪರ್ಯ:
ಕಾವಲಿಗಿದ್ದ ಕುದುರೆಗಳನ್ನು ಎತ್ತಿ ಎಸೆದವು, ಆನೆಗಳನ್ನು ಹಿಡಿಯಲು ಬಂದ ಕಂಬಿಗಳನ್ನು ಹಿಡಿದ ಐದಾರು ಜನ ಯೋಧರನ್ನು ತೆಗೆದೆಸೆದು ಹೆಣಗಳಲ್ಲಿ ಕೂಡಿಸಿದವು. ಲೌಡಿ, ಖಂಡೆಯ ಪಟ್ಟೆಗಳ ಹೊಡೆತಕ್ಕೆ ವೈರಿ ಸೈನ್ಯದ ಆನೆಗಳು ಉರುಳಿದವು. ಯೋಧರ ಪ್ರಾಣಗಳು ಆಕಾಶಕ್ಕೆ ಹಾರಿದವು.

ಅರ್ಥ:
ತಿರುಹು: ತಿರುಗಿಸು, ಸುತ್ತಿಸು; ಬಿಸುಟು: ಹೊರಹಾಕು; ಕಾಲುಗಾಹಿ: ಬೆಂಗಾವಲು; ತುರಗ: ಕುದುರೆ; ಮುಂಬಾರೆಕಾರ: ಮುಂದಿನ ಸರದಿಯವ; ಶಿರ: ತಲೆ; ಐದು: ಬಂದು ಸೇರು; ಅಡಸು: ಮುತ್ತು, ಆಕ್ರಮಿಸು; ಹೊಳಲು: ಪ್ರಕಾಶ; ಅರರೆ: ಆಶ್ಚರ್ಯದ ಸಂಕೇತ; ಪಟ್ಟೆ: ಲೋಹದ ಪಟ್ಟಿ; ಲೌಡಿ: ಕಬ್ಬಿಣದ ಆಯುಧ; ಖಂಡೆಯ: ಕತ್ತಿ; ಉರವಣೆ: ಒಂದು ಬಗೆಯ ಕಬ್ಬಿಣದ ಆಯುಧ; ಹೊಯಿಲು: ಏಟು, ಹೊಡೆತ; ರಿಪು: ವೈರಿ; ಗಜ: ಆನೆ; ಉರುಳು: ಕೆಳಕ್ಕೆ ಬೀಳು; ತೆರಳು: ಹೋಗು, ನಡೆ; ಜೋದ: ಆನೆಯ ಮೇಲೆ ಕೂತು ಹೋರಾಡುವ ಯೋಧ; ಅಂಬರ: ಆಗಸ; ಜೀವ: ಪ್ರಾಣ;

ಪದವಿಂಗಡಣೆ:
ತಿರುಹಿ +ಬಿಸುಟವು +ಕಾಲುಗಾಹಿನ
ತುರಗವನು +ಮುಂಬಾರೆಕಾರರ
ಶಿರವನ್+ಐದಾರೇಳನ್+ಅಡಸಿದವಣಲ+ ಹೊಳಲಿನೊಳು
ಅರರೆ+ ಪಟ್ಟೆಯ +ಲೌಡಿ +ಖಂಡೆಯದ್
ಉರವಣೆಯ +ಹೊಯಿಲಿನೊಳು +ರಿಪು+ಗಜವ್
ಉರುಳಿದವು +ತೆರಳಿದವು+ ಜೋದರ +ಜೀವವ್+ಅಂಬರಕೆ

ಅಚ್ಚರಿ:
(೧) ಸತ್ತರು ಎಂದು ಹೇಳಲು – ತೆರಳಿದವು ಜೋದರ ಜೀವವಂಬರಕೆ

ಪದ್ಯ ೭೪: ವೀರರು ಆನೆಗಳನ್ನು ಹೇಗೆ ಯುದ್ಧಕ್ಕೆ ನೂಕಿದರು?

ಬಾರ ಸಂಕಲೆ ಪಕ್ಕ ಘಂಟೆಯ
ಚಾರು ಚಮರದ ಕೊಡತಿಗಳ ಕೈ
ಹಾರೆ ಕೂರಂಕುಶದ ಬಿರುದರು ಹೊದ್ದಿದರು ಗಜವ
ಬಾರ ದೂಹತ್ತಿಗಳ ಗುಂಡನು
ತೋರ ಲೌಡಿಯ ತೊಟ್ಟು ಕೈಯಲಿ
ವಾರಣದ ಮೋಹರವ ನೂಕಿದರುಭಯಸೇನೆಯಲಿ (ಭೀಷ್ಮ ಪರ್ವ, ೪ ಸಂಧಿ, ೭೪ ಪದ್ಯ)

ತಾತ್ಪರ್ಯ:
ತೂಕವಾದ ಸರಪಣಿ, ಗಂಟೆಗಳು, ಚಾಮರ, ಕೊಡತಿ, ಕೈಹಾರೆ, ಚೂಪಾದ ಅಂಕುಶಗಳನ್ನು ಹಿಡಿದ ವೀರರು ಆನೆಗಳ ಬಳಿ ಹೋಗಿ ಮೇಲೆ ಹತ್ತಿದರು. ದೂಹತ್ತಿ, ಗುಂಡು ಲೌಡಿಗಳನ್ನು ಹಿಡಿದು ಆನೆಗಳನ್ನು ಯುದ್ಧಕ್ಕೆ ನೂಕಿದರು.

ಅರ್ಥ:
ಬಾರ: ತೂಕವಾದುದು; ಸಂಕಲೆ: ಕಬ್ಬಿಣದ ಸರಪಣಿ; ಪಕ್ಕ: ಹತ್ತಿರ, ಸಮೀಪ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಚಾರು: ಸುಂದರ; ಚಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ, ಚಾಮರ; ಕೊಡತಿ: ಕಬ್ಬಿಣದಿಂದ ಅಥಾವಾ ಮರದಿಂದ ಮಾಡಿದ ಸುಮಾರು ಒಂದು ಅಡಿ ಉದ್ದವಿರುವ ಸಲಕರಣೆ; ಕೂರಂಕುಶ: ಚೂಪಾದ ಅಂಕುಶ; ಬಿರುದರು: ಗೌರವ ಸೂಚಕ ಹೆಸರುಗಳನ್ನು ಪಡೆದವರು, ವೀರರು; ಹೊದ್ದು: ಹೊಂದು, ಸೇರು; ಗಜ: ಆನೆ; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಗುಂಡು: ಗುಂಡುಕಲ್ಲು,ತುಪಾಕಿಯ ಗೋಲಿ; ತೋರು: ಕಾಣಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ತೊಟ್ಟು: ಧರಿಸು; ವಾರಣ: ಆನೆ; ಮೋಹರ: ಸೈನ್ಯ, ದಂಡು; ನೂಕು: ತಳ್ಳು; ಉಭಯ: ಎರಡು; ಸೇನೆ: ಸೈನ್ಯ;

ಪದವಿಂಗಡಣೆ:
ಬಾರ +ಸಂಕಲೆ +ಪಕ್ಕ +ಘಂಟೆಯ
ಚಾರು +ಚಮರದ +ಕೊಡತಿಗಳ +ಕೈ
ಹಾರೆ +ಕೂರಂಕುಶದ+ ಬಿರುದರು +ಹೊದ್ದಿದರು +ಗಜವ
ಬಾರ +ದೂಹತ್ತಿಗಳ+ ಗುಂಡನು
ತೋರ +ಲೌಡಿಯ +ತೊಟ್ಟು +ಕೈಯಲಿ
ವಾರಣದ +ಮೋಹರವ+ ನೂಕಿದರ್+ಉಭಯ+ಸೇನೆಯಲಿ

ಅಚ್ಚರಿ:
(೧) ಗಜ, ವಾರಣ – ಸಮನಾರ್ಥಕ ಪದಗಳು
(೨) ಆನೆಗಳನ್ನು ಸಿಂಗರಿಸಲು ಉಪಯೋಗಿಸುವ ವಸ್ತು – ಸಂಕಲೆ, ಘಂಟೆ, ಚಮರ, ಕೊಡತಿ, ಕೂರಂಕುಶ

ಪದ್ಯ ೬೨: ರಾವುತರ ಯುದ್ಧ ವೈಖರಿ ಹೇಗಿತ್ತು?

ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದವು ಲೋಹ ಸೀಸಕ
ವಡಸಿ ಬಲ್ಲೆಯ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ರಾವುತರ ದೂಹತ್ತಿಗಳ ಹೊಡೆತಕ್ಕೆ ಲೋಹದ ಶಿರಸ್ತ್ರಾಣಗಳು ಸಿಡಿದವು. ಈಟಿಯ ಮೂತಿಗಳು ಸರಪಣಿಗಳನ್ನು ಪುಡಿಪುಡಿ ಮಾದಿದವು. ಲೌಡಿಗಳು ನೆತ್ತಿಗಳನ್ನು ಒಡೆಯಲು ಮಿದುಳು ಹಾರಿತು. ಎರಡೂ ಕಡೆಗಳಿಂದ ರಕ್ತದ ಕಡಲು ಉಕ್ಕಿ ಒಂದಾದವು.

ಅರ್ಥ:
ಹೊಡೆ: ಏಟು, ಹೊಡೆತ; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಘಾಯ; ಪೆಟ್ಟು; ಸಿಡಿ: ಚಿಮ್ಮು; ಲೋಹ: ಕಬ್ಬಿಣ, ಉಕ್ಕು; ಸೀಸಕ: ಶಿರಸ್ತ್ರಾಣ; ಬಲ್ಲೆ: ಈಟಿ; ಬಿಗಿ: ಕಟ್ಟು; ನಟ್ಟು: ತಾಗು; ಸರಪಣಿ: ಸಂಕೋಲೆ, ಶೃಂಖಲೆ; ಝಗೆ: ಹೊಳಪು, ಪ್ರಕಾಶ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಒತ್ತು: ಚುಚ್ಚು; ನೆತ್ತಿ: ಶಿರ; ಬಿಡುಮಿದುಳು: ಒಡೆದ ತಲೆಯದಂಗ; ಕೆದರು: ಹರಡು; ರಕುತ: ನೆತ್ತರು; ಕಡಲು: ಸಾಗರ; ಕೂಡೆ: ಜೊತೆ; ಹೊಯ್ದಾಡು: ಹೋರಾಡು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಅಡಸು: ಬಿಗಿಯಾಗಿ ಒತ್ತು, ಆಕ್ರಮಿಸು;

ಪದವಿಂಗಡಣೆ:
ಹೊಡೆವ +ದೂಹತ್ತಿಗಳ +ಘಾಯದಲ್
ಒಡೆದು +ಸಿಡಿದವು+ ಲೋಹ +ಸೀಸಕವ್
ಅಡಸಿ +ಬಲ್ಲೆಯ+ ಬಗಿದು+ ನಟ್ಟುದು +ಸರಪಣಿಯ +ಝಗೆಯ
ಹೊಡೆವ+ ಲೌಡಿಗಳೊತ್ತಿ+ ನೆತ್ತಿಯ
ಬಿಡುಮಿದುಳ +ಕೆದರಿದವು +ರಕುತದ
ಕಡಲು+ ಕಡಲನು+ ಕೂಡೆ +ಹೊಯ್ದಾಡಿದರು+ ರಾವುತರು

ಅಚ್ಚರಿ:
(೧) ಯುದ್ದದ ತೀವ್ರತೆ – ರಕುತದ ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು

ಪದ್ಯ ೫೯: ಎಂತಹ ರಾವುತರು ಮುನ್ನುಗ್ಗಿದರು?

ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿಅಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು (ಭೀಷ್ಮ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ನೂಲಿನ ಗುರಾಣಿ, ಹೆಗಲಲ್ಲಿ ಹಗ್ಗ, ದೃಢವಾದ ತೋಳುಗಳಲ್ಲಿ ಹಿಡಿದ ಲೌಡಿ ಕತ್ತಿಗಳ ಹೊಳಪು, ಮನಸ್ಸಿನ ನಿಷ್ಠುರ ಪರಾಕ್ರಮ, ತಲೆಯ ಮೇಲೆ ದಾವಣಿಗಳು, ಅವಕ್ಕೆ ಕಟ್ಟಿದ ಗಂಟಲಿನ ಕೊಕ್ಕೆ, ಕತ್ತರಿ, ಗರಗಸಗಳು ಇವುಗಳಿಂದ ಕೂಡಿದ ಬಿರುದನ್ನುಳ್ಳವರೂ, ಛಲಗಾರರೂ ಆದ ರಾವುತರು ಮುನ್ನುಗ್ಗಿದರು.

ಅರ್ಥ:
ನೂಲು: ಬಟ್ಟೆ, ವಸ್ತ್ರ; ಹರಿಗೆ: ಗುರಾಣಿ; ಹೆಗಲು: ಭುಜ; ಬಾರಿ: ಬಲಿ, ಆಹುತಿ, ಲಗ್ಗೆ; ತೋಳ: ಭುಜ; ತೋರ: ದಪ್ಪನಾದ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ತಳಪಥ: ಕಾಂತಿ; ಮಿಂಚು: ಪ್ರಕಾಶ; ತನುಮನ: ದೇಹ ಮತ್ತು ಮನಸ್ಸು; ಕೆಚ್ಚು: ಧೈರ್ಯ, ಸಾಹಸ; ಸಾಲು: ಗುಂಪು, ಆವಳಿ; ದಾವಣಿ: ಕಟ್ಟು, ಬಂಧನ; ತಲೆ: ಶಿರ; ಗಂಟಲು: ಕೊರಳು; ಕತ್ತರಿ: ಒಂದು ಬಗೆಯ ಆಯುಧ; ಗರಗಸ: ಮರ ಕೊಯ್ಯುವ ಸಾಧನ, ಗಂಪ; ಬಿರುದ: ಬಿರುದುಳ್ಳವ; ಛಲ: ದೃಢ ನಿಶ್ಚಯ; ಅಂಕ: ಯುದ್ಧ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನೂಕು: ತಳ್ಳು; ಗಾಳ: ಕೊಕ್ಕೆ;

ಪದವಿಂಗಡಣೆ:
ನೂಲ+ ಹರಿಗೆಯ+ ಹೆಗಲ+ ಬಾರಿಯ
ತೋಳ +ತೋರಿಯ +ಲೌಡಿಗಳ+ ಕರ
ವಾಳ +ತಳಪದ +ಮಿಂಚುಗಳ +ತನುಮನದ +ಕೆಚ್ಚುಗಳ
ಸಾಲ+ದಾವಣಿ+ತಲೆಯ +ಗಂಟಲ
ಗಾಳ+ಕತ್ತರಿ+ಗರಗಸದ +ಬಿರು
ದಾಳಿಗಳ +ಛಲದ್+ಅಂಕ+ರಾವುತರ್+ಒತ್ತಿ +ನೂಕಿದರು

ಅಚ್ಚರಿ:
(೧) ಹರಿಗೆ, ಲೌಡಿ, ಕರವಾಳ, ಕತ್ತರಿ, ಗರಗಸ – ಆಯುಧಗಳ ಹೆಸರು
(೨) ರಾವುತರ ತೋರಿದ ಪರಿ – ನೂಲ ಹರಿಗೆಯ ಹೆಗಲ ಬಾರಿಯ ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ

ಪದ್ಯ ೫೮: ರಾವುತರು ಹೇಗೆ ಆವರಿಸಿದರು?

ಹಿಡಿಯೆ ಜವನಿಕೆ ಸಮರ ಮೋನದ
ಬಿಡುದಲೆಯ ಬಿರುದಾವಳಿಯಲು
ಗ್ಗಡಣೆಗಳ ಸೋಲಿಸುತ ತಮ್ಮನ್ವಯವ ಪಾಲಿಸುತ
ಝಡಿವ ದೂಹತ್ತಿಗಳ ಹಾಯಿಕಿ
ಹಿಡಿವ ಲೌಡಿಯ ಹತ್ತಳದ ತನಿ
ಗಡಣಿಗರು ಮೂದಲಿಸಿ ಕವಿದುದು ರಾಯರಾವುತರು (ಭೀಷ್ಮ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸಮರದಲ್ಲಿ ಅದುವರೆಗೆ ಹಿಡಿದಿದ್ದ ಮೌನದ ತೆರೆಯನ್ನು ಸರಿಸಿ ಬಿರುದಾವಳಿಗಳು ಉಗ್ಗಡಿಸುತ್ತಿರಲು, ತಮ್ಮ ವಂಶದ ಕ್ರಮವನ್ನು ಪಾಲಿಸಿ, ದೂಹತ್ತಿ, ಲೌಡಿ ಮೊದಲಾದ ಆಯುಧಗಳನ್ನು ಲಗಾಮನ್ನು ಹಿಡಿದು ಶತ್ರುಗಳನ್ನು ಮೂದಲಿಸುತ್ತಾ ರಾವುತರು ಆವರಿಸಿದರು.

ಅರ್ಥ:
ಹಿಡಿ: ಬಂಧಿಸು; ಜವನಿಕೆ: ಪರದೆ; ಸಮರ: ಯುದ್ಧ; ಮೋನ: ಚೂಪಾದ; ಬಿಡುದಲೆ: ಬಿರಿಹೋಯ್ದ ಕೂದಲಿನ ತಲೆ; ಬಿರುದವಳಿ: ಗೌರವಸೂಚಕ ಹೆಸರು; ಉಗ್ಗಡಣೆ: ಉದ್ಘೋಷಣೆ, ಕೂಗು; ಸೋಲು: ಪರಾಭವ; ಅನ್ವಯ: ವಂಶ; ಪಾಲಿಸು: ನಡೆಸು; ಝಡಿಕೆ: ಅವಸರ; ದೂಹತ್ತಿ: ಎರಡು ಕಡೆ ಚೂಪಾದ ಹತ್ತಿ;
ಹಾಯ್ಕು: ತಿವಿ; ಹಿಡಿ: ಬಂಧಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಹತ್ತಳ:ಚಾವಟಿ, ಬಾರುಗೋಲು; ಗಡಣ: ಗುಂಪು; ಮೂದಲಿಸು: ಹಂಗಿಸು; ಕವಿ: ಆವರಿಸು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಹಿಡಿಯೆ +ಜವನಿಕೆ +ಸಮರ +ಮೋನದ
ಬಿಡುದಲೆಯ +ಬಿರುದಾವಳಿಯಲ್
ಉಗ್ಗಡಣೆಗಳ +ಸೋಲಿಸುತ +ತಮ್ಮ್+ಅನ್ವಯವ +ಪಾಲಿಸುತ
ಝಡಿವ +ದೂಹತ್ತಿಗಳ +ಹಾಯಿಕಿ
ಹಿಡಿವ +ಲೌಡಿಯ +ಹತ್ತಳದ+ ತನಿ
ಗಡಣಿಗರು +ಮೂದಲಿಸಿ+ ಕವಿದುದು +ರಾಯ+ರಾವುತರು

ಅಚ್ಚರಿ:
(೧) ದೂಹತ್ತಿ, ಲೌಡಿ, ಹತ್ತಳ – ಆಯುಧಗಳ ಹೆಸರು

ಪದ್ಯ ೩೧ : ಅರ್ಜುನನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು -೩?

ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿದಡಾಯ್ದಕೆ ಸುಳಿವ ಸುರಗಿಗೆ ತಿವಿದ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ (ಕರ್ಣ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬೈಗಳನ್ನು ಮುಂದುವರೆಸುತ್ತಾ, ರಾಜ ಯುದ್ಧವೆಂದರೆ ಊಟದ ಮನೆಯಲ್ಲ. ತಲೆಯ ಮೇಲೆರಗುವ ಕತ್ತಿಗೆ ಸುಳಿಯುವ ಸುರಗಿಗೆ, ತಿವಿಯುವ ಬಲ್ಲೆಯಹಕ್ಕೆ, ಹೊಡೆಯುವ ಲೌಡಿಗೆ, ಹಾರಿಬಂದು ತಾಗುವ ಬಾಣಕ್ಕೆ ಯುದ್ಧದಲ್ಲಿ ರಕ್ತದ ಮೃಷ್ಟಾನ ಭೋಜನವನ್ನು ಮಾಡಿಸದೇ ಸುಮ್ಮನಿದ್ದು ರಾಜ್ಯವನ್ನು ಪಡೆಯುವೆಯಾ ಎಂದು ಕೇಳಿದನು.

ಅರ್ಥ:
ರಣ: ಯುದ್ಧ; ಘಾರಾಘಾರಿ: ಕಡೆತದಿಂದ ಉಂಟಾದ ಹಿಂಸೆ; ಆರೋಗಣೆ: ಊಟ, ಭೋಜನ; ಮನೆ: ಆಲಯ; ಅರಸ: ರಾಜ; ಶಿರ: ತಲೆ; ಕುಣಿ: ನರ್ತಿಸು, ಆಡು; ಸುಳಿ: ತಿರುಗು; ಸುರಗಿ: ಸಣ್ಣ ಕತ್ತಿ, ಚೂರಿ; ತಿವಿ: ಚುಚ್ಚು; ಹಣಿವ: ಬಲ್ಲೆಹ: ಈಟಿ, ಆಯುಧದ ಬಗೆ; ಹಣಿತ: ಹೊಡೆಯುವ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಹಾಯ್ದು: ಮೇಲೆ ಬಿದ್ದು; ಬೀಳು: ಕೆಳಕ್ಕೆ ಕುಸಿ; ಕಣೆ:ಬಾಣ; ಖಂಡ: ತುಂಡು, ಚೂರು; ರುಧಿರ: ರಕ್ತ; ಔತಣ:ವಿಶೇಷವಾದ ಊಟ; ರಚಿಸು: ತಯಾರಿಸು; ಬರಿ: ಕೇವಲ; ರಾಜ್ಯ: ರಾಷ್ಟ್ರ; ಕೊಂಬೆ: ಪಡೆ;

ಪದವಿಂಗಡಣೆ:
ರಣದ +ಘಾರಾಘಾರಿ+ಆರೋ
ಗಣೆಯ +ಮನೆಯಲ್ಲ್+ಅರಸ +ಶಿರದಲಿ
ಕುಣಿದಡ್+ಆಯ್ದಕೆ +ಸುಳಿವ +ಸುರಗಿಗೆ +ತಿವಿದ +ಬಲ್ಲೆಹಕೆ
ಹಣಿವ +ಲೌಡಿಗೆ +ಪಾಯ್ದು +ಬೀಳುವ
ಕಣೆಗೆ +ಖಂಡದ +ರುಧಿರ +ರಣದೌ
ತಣವ +ರಚಿಸದೆ +ಬರಿದೆ +ರಾಜ್ಯವ +ಕೊಂಬೆ +ನೀನೆಂದ

ಅಚ್ಚರಿ:
(೧) ರಣರಂಗವನ್ನು ಅಡುಗೆಮನೆಗೆ ಹೋಲಿಕೆ ನೀಡಿರುವ ಪದ್ಯ
(೨) ರ ಕಾರದ ತ್ರಿವಳಿ ಪದ – ರುಧಿರ ರಣದೌತಣವ ರಚಿಸದೆ
(೩) ಆಯುಧಗಳ ಪದಗಳು – ಸುರಗಿ, ಬಲ್ಲೆಹ, ಲೌಡಿ,ಕಣೆ