ಪದ್ಯ ೨೮: ಎಷ್ಟು ಸೈನಿಕರು ಯುದ್ಧಕ್ಕೆ ಮುನ್ನುಗ್ಗಿದರು?

ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ (ಗದಾ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಂದೇ ಬಾರಿಗೆ ನಾಲ್ಕು ಸಾವಿರ ರಥಗಳು ಮೂಮ್ದಾದವು, ಮೂರುಸಾವಿರ ರಾಜಪುತ್ರರು ಮುತ್ತಿಗೆ ಹಾಕಿದರು. ಒಂದು ಸಾವಿರ ಜೋದರು ಬಾಣಗಳನ್ನು ಬಿಡುತ್ತಾ ಮುನ್ನುಗ್ಗಿದರು. ಒಂದು ಸಾವಿರ ಮತ್ತ ಆನೆಗಳು ಬೊಬ್ಬೆಯಿಡುತ್ತಾ ರಭಸದಿಂದ ಮುನ್ನುಗ್ಗಿತು. ಒಂದು ಲಕ್ಷ ಕಾಲಾಳುಗಳು ಯುದ್ಧಕ್ಕೆ ಮುಗಿಬಿದ್ದರು.

ಅರ್ಥ:
ನೂಕು: ತಳ್ಳು; ವಾಘೆ: ಲಗಾಮು; ಹಯ: ಕುದುರೆ; ಸಾವಿರ: ಸಹಸ್ರ; ರಥ: ಬಂಡಿ; ಜೋಡಿ: ಜೊತೆ; ಜೋಕೆ: ಎಚ್ಚರಿಕೆ, ಜಾಗರೂಕತೆ; ಕವಿ: ಆವರಿಸು; ಪುತ್ರ: ಕುಮಾರ; ತೋಕು: ಎಸೆ, ಬಾಣವನ್ನು ಪ್ರಯೋಗಿಸು; ಅಂಬು: ಬಾಣ; ಜೋದರು: ಆನೆ ಮೇಲೆ ಕೂತು ಹೋರಾಟ ಮಾಡುವವ; ಒಗ್ಗು: ಗುಂಪು, ಸಮೂಹ; ಔಕು: ಒತ್ತು, ಹಿಚುಕು; ಮದ: ಮತ್ತು, ಅಮಲು; ಇಭ: ಆನೆ; ಅನೀಕ: ಗುಂಪು; ಬೊಬ್ಬೆ: ಗರ್ಜಿಸು; ಲಳಿ: ರಭಸ, ಆವೇಶ; ಲಕ್ಕ: ಲಕ್ಷ; ಪಾಯದಳ: ಸೈನಿಕ;

ಪದವಿಂಗಡಣೆ:
ನೂಕಿತ್+ಒಂದೇ +ವಾಘೆಯಲಿ +ಹಯ
ನಾಕು +ಸಾವಿರ +ರಥದ +ಜೋಡಿಯ
ಜೋಕೆ +ಕವಿದುದು +ಮೂರು+ ಸಾವಿರ+ ರಾಜ+ಪುತ್ರರಲಿ
ತೋಕುವಂಬಿನ +ಜೋದರ್+ಒಗ್ಗಿನೊಳ್
ಔಕಿದವು +ಸಾವಿರ +ಮದ+ಇಭಾ
ನೀಕ +ಬೊಬ್ಬೆಯ +ಲಳಿಯಲ್+ಔಕಿತು +ಲಕ್ಕ+ ಪಾಯದಳ

ಪದ್ಯ ೭: ಕೌರವಸೇನೆಯು ಹೇಗೆ ಕಂಡಿತು?

ಹತ್ತು ಸಾವಿರದೇಳುನೂರರು
ವತ್ತು ಗಜ ಹನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ (ಶಲ್ಯ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಹತ್ತು ಸಾವಿರದ ಏಳುನೂರು ಅರವತ್ತು ಆನೆಗಳು, ಹನ್ನೊಂದು ಸಾವಿರ ರಥಗಳು, ಒಂದು ಲಕ್ಷ ಕುದುರೆಗಳು, ಮೂರು ಕೋಟಿ ಕಾಲಾಳುಗಳು, ಶಲ್ಯನ ಆಜ್ಞೆಯನ್ನು ಕಾದು ನಿಂತರು ಸಾಗರದಂತಿದ್ದ ಕೌರವಸೇನೆ ಬತ್ತಿಹೋಗಿ ತಳದಲ್ಲಿ ನಿಂತ ನೀರಿನಂತೆ ಕಾಣಿಸಿತು.

ಅರ್ಥ:
ಸಾವಿರ: ಸಹಸ್ರ; ಗಜ: ಆನೆ; ಹತ್ತು: ಮೇಲೇರು; ರಥ: ಬಂಡಿ; ಎಣಿಸು: ಲೆಕ್ಕ ಹಾಕು; ಹಯ: ಕುದುರೆ; ಪತ್ತಿ: ಪದಾತಿ; ವರ್ತಿಸು: ಚಲಿಸು, ಗಮಿಸು; ದಳಪತಿ: ಸೇನಾಧಿಪತಿ; ಸಾಗರ: ಸಮುದ್ರ; ಬತ್ತು: ಬರಡಾಗು; ನಿಂದು: ನಿಲ್ಲು; ನೀರು: ಜಲ;

ಪದವಿಂಗಡಣೆ:
ಹತ್ತು+ ಸಾವಿರದ್+ಏಳುನೂರ್
ಅರುವತ್ತು +ಗಜ +ಹನ್ನೊಂದು +ಸಾವಿರ
ಹತ್ತಿದವು +ರಥವೆರಡು +ಲಕ್ಕವನ್+ಎಣಿಸಿದರು +ಹಯವ
ಪತ್ತಿ +ಮೂರೇ +ಕೋಟಿಯದು +ಕೈ
ವರ್ತಿಸಿತು +ದಳಪತಿಗೆ+ ಸಾಗರ
ಬತ್ತಲ್+ಎಡೆಯಲಿ +ನಿಂದ +ನೀರವೊಲಾಯ್ತು +ಕುರುಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಗರ ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ
(೨) ಹತ್ತು, ನೂರು, ಸಾವಿರ, ಲಕ್ಕ, ಕೋಟಿ – ಎಣಿಕೆಯ ಬಳಕೆ

ಪದ್ಯ ೩೦: ಭೂಮಿಯ ವಿಸ್ತಾರವೆಷ್ಟು?

ಲಕ್ಕದೊಳು ಹದಿನಾರು ಸಾವಿರ
ಮಿಕ್ಕವಸುಧೆಯೊಳಾಳುಗೊಂಡುದು
ಮಿಕ್ಕ ಚೌರಾಶೀತಿಸಾಸಿರಯೋಜನದ ನಿಲುವು
ಲೆಕ್ಕಿಸಲು ಗಿರಿಶಿಖರದಗಲವ
ದಕ್ಕು ಮೂವತ್ತೆರಡುಸಾವಿರ
ದಿಕ್ಕಿನೊಡೆಯರಿಗೆಂಟು ಪಟ್ಟಣವದರ ಮೇಲಿಹುದು (ಅರಣ್ಯ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಲಕ್ಷಯೋಜನದುದ್ದದ ಮೇರುವಿನಲ್ಲಿ ಹದಿನಾರು ಸಾವಿರ ಯೋಜನ ಭೂಮಿಯೊಗಳಗಿದೆ. ಇದರ ಮೇಲೆ ಎಂಬತ್ನಾಲ್ಕು ಯೋಜವವಿದ್ದು, ಗಿರಿಶಿಖರದ ಅಗಲವು ಮೂವತ್ತೆರಡು ಸಾವಿರವಿದೆ. ಅದರ ಮೇಲೆ ಎಂಟು ದಿಕ್ಪಾಲಕರ ಪಟ್ಟಣಗಳಿವೆ.

ಅರ್ಥ:
ಲಕ್ಕ: ಲಕ್ಷ; ಸಾವಿರ: ಸಹಸ್ರ; ವಸುಧೆ: ಭೂಮಿ; ಆಳು: ಮುಳುಗು, ಪೋಷಿಸು; ಮಿಕ್ಕ: ಉಳಿದ; ಸಾಸಿರ: ಸಾವಿರ; ಯೋಜನ: ಅಳತೆಯ ಪ್ರಮಾಣ; ನಿಲುವು: ಇರುವಿಕೆ, ಸ್ಥಿತಿ, ಅವಸ್ಥೆ; ಲೆಕ್ಕಿಸು: ಎಣಿಕೆಮಾಡು; ಗಿರಿ: ಬೆಟ್ಟ; ಶಿಖರ: ತುದಿ; ಅಗಲ: ವಿಸ್ತಾರ; ದಿಕ್ಕು: ದಿಶೆ; ಒಡೆಯ: ನಾಯಕ; ಪಟ್ಟಣ: ಊರು; ಮೇಲೆ: ಅಗ್ರಭಾಗ;

ಪದವಿಂಗಡಣೆ:
ಲಕ್ಕದೊಳು +ಹದಿನಾರು +ಸಾವಿರ
ಮಿಕ್ಕ+ವಸುಧೆಯೊಳ್+ಆಳುಗೊಂಡುದು
ಮಿಕ್ಕ+ ಚೌರಾಶೀತಿ+ಸಾಸಿರ+ಯೋಜನದ+ ನಿಲುವು
ಲೆಕ್ಕಿಸಲು +ಗಿರಿ+ಶಿಖರದ್+ಅಗಲವ
ದಕ್ಕು+ ಮೂವತ್ತೆರಡು+ಸಾವಿರ
ದಿಕ್ಕಿನ್+ಒಡೆಯರಿಗ್+ಎಂಟು +ಪಟ್ಟಣವ್+ಅದರ+ ಮೇಲಿಹುದು

ಅಚ್ಚರಿ:
(೧) ಸಾವಿರ, ಸಾಸಿರ – ಸಮನಾರ್ಥಕ ಪದ
(೨) ಹದಿನಾರು ಸಾವಿರ, ಚೌರಾಶೀತಿ ಸಾವಿರ, ಮೂವತ್ತೆರಡು ಸಾವಿರ – ಅಳತೆಯ ವಿವರ