ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ (ಗದಾ ಪರ್ವ, ೧೧ ಸಂಧಿ, ೧ ಪದ್ಯ)
ತಾತ್ಪರ್ಯ:
ದುರ್ಯೋಧನನ ಮರಣ ವಾರ್ತೆಯ ವಿಷವು ಹಸ್ತಿನಾಪುರದ ಜನರ ಮನಸ್ಸುಗಳನ್ನು ಆವರಿಸಿತು. ಜನತೆಯ ಉತ್ಸಾಹ ಹೂಳಿಹೋಯಿತು. ಮೌನವು ಎಲ್ಲೆಡೆ ಆವರಿಸಿತು. ಚಿಂತೆಯು ಮತ್ತೆ ಮತ್ತೆ ಮನಸ್ಸನ್ನು ಮುತ್ತುತ್ತಿತ್ತು. ಭಯ ದುಃಖಗಳು ಎಲ್ಲರ ಮುಖಗಳಲ್ಲೂ ಕಾಣಿಸಿತು.
ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ವಿಳಯ: ಅಳಿವು, ಮರಣ; ವಾರ್ತೆ: ವಿಷಯ, ವಿಚಾರ; ವ್ಯಾಳ: ಸರ್ಪ; ವಿಷ: ಗರಳ; ವೇಡೈಸು: ಸುತ್ತುವರಿ, ಮುತ್ತು; ಗಜಪುರ: ಹಸ್ತಿನಾಪುರ; ಜನ: ಮನುಷ್ಯ; ಮನ: ಮನಸ್ಸು; ಹೂಳು: ಅಡಗು, ಹೂತು ಹಾಕು, ಹುದುಗು; ಹುದಿ: ಒಳಸೇರು, ಒಳಗೊಂಡಿರು; ಉಬ್ಬು: ಹಿಗ್ಗು; ಮೋನ: ಮಾತನಾಡದಿರುವಿಕೆ, ಮೌನ; ಸೂಳು: ಆವೃತ್ತಿ, ಬಾರಿ; ಚಿಂತೆ: ಯೋಚನೆ; ಬಲಿ: ಗಟ್ಟಿಯಾಗು; ಭೀತಿ: ಭಯ; ಮೇಲು: ಹೆಚ್ಚು; ದುಗುಡ: ದುಃಖ; ದಡಿ: ದಂಡೆ, ತೀರ,ಅಂಚು; ವದನ: ಮುಖ; ಅಖಿಳ: ಎಲ್ಲಾ;
ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುರುಪತಿ +ವಿಳಯ+ವಾರ್ತಾ
ವ್ಯಾಳವಿಷ +ವೇಢೈಸಿದುದು +ಗಜಪುರದ +ಜನ+ಮನವ
ಹೂಳಿದ್+ಉಬ್ಬಿನ +ಹುದಿದ +ಮೋನದ
ಸೂಳುಚಿಂತೆಯ+ ಬಲಿದ +ಭೀತಿಯ
ಮೇಲು+ದುಗುಡದ +ದಡಿಯ +ವದನದಲಿದ್ದುದ್+ಅಖಿಳ+ಜನ
ಅಚ್ಚರಿ:
(೧) ರೂಪಕದ ಪ್ರಯೋಗ – ವಿಳಯವಾರ್ತಾ ವ್ಯಾಳವಿಷ
(೨) ವ ಕಾರದ ತ್ರಿವಳಿ ಪದ – ವಿಳಯವಾರ್ತಾ ವ್ಯಾಳವಿಷ ವೇಢೈಸಿದುದು
(೩) ದುಃಖವನ್ನು ವಿವರಿಸುವ ಪರಿ – ಹೂಳಿದುಬ್ಬಿನ ಹುದಿದ ಮೋನದಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ