ಪದ್ಯ ೧: ಹಸ್ತಿನಾಪುರದ ಜನರ ಮುಖವೇಕೆ ಕಳಾಹೀನವಾಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ (ಗದಾ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನ ಮರಣ ವಾರ್ತೆಯ ವಿಷವು ಹಸ್ತಿನಾಪುರದ ಜನರ ಮನಸ್ಸುಗಳನ್ನು ಆವರಿಸಿತು. ಜನತೆಯ ಉತ್ಸಾಹ ಹೂಳಿಹೋಯಿತು. ಮೌನವು ಎಲ್ಲೆಡೆ ಆವರಿಸಿತು. ಚಿಂತೆಯು ಮತ್ತೆ ಮತ್ತೆ ಮನಸ್ಸನ್ನು ಮುತ್ತುತ್ತಿತ್ತು. ಭಯ ದುಃಖಗಳು ಎಲ್ಲರ ಮುಖಗಳಲ್ಲೂ ಕಾಣಿಸಿತು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ವಿಳಯ: ಅಳಿವು, ಮರಣ; ವಾರ್ತೆ: ವಿಷಯ, ವಿಚಾರ; ವ್ಯಾಳ: ಸರ್ಪ; ವಿಷ: ಗರಳ; ವೇಡೈಸು: ಸುತ್ತುವರಿ, ಮುತ್ತು; ಗಜಪುರ: ಹಸ್ತಿನಾಪುರ; ಜನ: ಮನುಷ್ಯ; ಮನ: ಮನಸ್ಸು; ಹೂಳು: ಅಡಗು, ಹೂತು ಹಾಕು, ಹುದುಗು; ಹುದಿ: ಒಳಸೇರು, ಒಳಗೊಂಡಿರು; ಉಬ್ಬು: ಹಿಗ್ಗು; ಮೋನ: ಮಾತನಾಡದಿರುವಿಕೆ, ಮೌನ; ಸೂಳು: ಆವೃತ್ತಿ, ಬಾರಿ; ಚಿಂತೆ: ಯೋಚನೆ; ಬಲಿ: ಗಟ್ಟಿಯಾಗು; ಭೀತಿ: ಭಯ; ಮೇಲು: ಹೆಚ್ಚು; ದುಗುಡ: ದುಃಖ; ದಡಿ: ದಂಡೆ, ತೀರ,ಅಂಚು; ವದನ: ಮುಖ; ಅಖಿಳ: ಎಲ್ಲಾ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುರುಪತಿ +ವಿಳಯ+ವಾರ್ತಾ
ವ್ಯಾಳವಿಷ +ವೇಢೈಸಿದುದು +ಗಜಪುರದ +ಜನ+ಮನವ
ಹೂಳಿದ್+ಉಬ್ಬಿನ +ಹುದಿದ +ಮೋನದ
ಸೂಳುಚಿಂತೆಯ+ ಬಲಿದ +ಭೀತಿಯ
ಮೇಲು+ದುಗುಡದ +ದಡಿಯ +ವದನದಲಿದ್ದುದ್+ಅಖಿಳ+ಜನ

ಅಚ್ಚರಿ:
(೧) ರೂಪಕದ ಪ್ರಯೋಗ – ವಿಳಯವಾರ್ತಾ ವ್ಯಾಳವಿಷ
(೨) ವ ಕಾರದ ತ್ರಿವಳಿ ಪದ – ವಿಳಯವಾರ್ತಾ ವ್ಯಾಳವಿಷ ವೇಢೈಸಿದುದು
(೩) ದುಃಖವನ್ನು ವಿವರಿಸುವ ಪರಿ – ಹೂಳಿದುಬ್ಬಿನ ಹುದಿದ ಮೋನದಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ

ಪದ್ಯ ೧೨: ಶಕುನಿಯ ಸೈನ್ಯದ ಸ್ಥಿತಿ ಏನಾಯಿತು?

ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ (ಗದಾ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಸ್ವಲ್ಪ ದೂರದಲ್ಲೇ ಅದೋ, ಸುಯೋಧನನ ಸೈನ್ಯ ಕಾಣುತ್ತಿದೆ. ಮುತ್ತಿರಿ ಎಂದು ಕೂಗುತ್ತಾ ಭೀಮಾರ್ಜುನಾರ ಚತುರಂಗ ಸೈನ್ಯವು ದಾಳಿಯಿಟ್ಟಿರು. ಶಕುನಿಯ ಸೈನ್ಯವು ಭುಜಬಲ ಪರಾಕ್ರಮದಿಂದ ಕಾದಿತು. ಆದರೆ ಅದರ ಮಾನ ಮೌನತಾಳಿತು (ಸೋತರು).

ಅರ್ಥ:
ಒಡ್ಡು: ರಾಶಿ, ಸಮೂಹ; ನಸು: ಸ್ವಲ್ಪ; ದೂರ: ಅಂತರ; ಕವಿ: ಆವರಿಸು; ಧಾಳಿ: ಲಗ್ಗೆ, ಮುತ್ತಿಗೆ; ರಥ: ಬಂಡಿ; ಚೂಣಿ: ಮೊದಲು; ಹೊದರು: ಗುಂಪು, ಸಮೂಹ; ಹಳಚು: ತಾಗು, ಬಡಿ; ಭಟ: ಸೈನಿಕ; ಭುಜ: ಬಾಹು; ಗರ್ವ: ಅಹಂಕಾರ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ; ಶೌರ್ಯ: ಸಾಹಸ, ಪರಾಕ್ರಮ; ಮದ: ಅಹಂಕಾರ; ಮಡ: ಹಿಮ್ಮಡಿ, ಹರಡು; ಮುರಿ: ಸೀಳು; ಸಿಲುಕು: ಹಿಡಿ; ಮಾನ: ಮರ್ಯಾದೆ; ಮೋನ: ಮೌನ;

ಪದವಿಂಗಡಣೆ:
ಅದೆ+ ಸುಯೋಧನನ್+ಒಡ್ಡು +ನಸುದೂ
ರದಲಿ +ಕವಿಕವಿ+ಎನುತ +ಧಾಳಿ
ಟ್ಟುದು +ಚತುರ್ಬಲ +ಭೀಮಪಾರ್ಥರ +ರಥದ +ಚೂಣಿಯಲಿ
ಹೊದರು +ಹಳಚಿತು +ಭಟರು +ಭುಜ+ಗ
ರ್ವದಲಿ +ಗರುವರ +ಗಾಢ +ಶೌರ್ಯದ
ಮದಕೆ +ಮಡ+ಮುರಿಯಾಯ್ತು +ಸಿಲುಕಿತು+ ಮಾನ +ಮೋನದಲಿ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಗಾಢ ಶೌರ್ಯದ ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ

ಪದ್ಯ ೨೧: ರಾಜರು ಯಾವ ಅವಸ್ಥೆಯಲ್ಲಿದ್ದರು?

ತಳಿತ ಮುಸುಕಿನ ಬೆರಲ ಮೂಗಿನ
ನೆಲನ ನೋಟದ ಮೆಯ್ಯ ತೂಕದ
ಝಳದ ಸುಯ್ಲಿನ ಮುಖದ ಮೋನದ ನಸಿದ ನೆನಹುಗಳ
ಕಳಿದ ಕಡುಹಿನ ಬೀತ ಬಿರುದಿನ
ಬಲಿದ ಭಂಗದ ನೃಪತಿಗಳನ
ಗ್ಗಳೆಯ ರವಿಸುತ ಕಂಡು ಹೊಗಳಿದನಾ ಘಟೋತ್ಕಚನ (ದ್ರೋಣ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮುಖಕ್ಕೆ ಹಾಕಿಕೊಂಡು ಮುಸುಕುಗಳ, ಮೂಗಿನ ಮೇಲಿಟ್ಟ ಬೆರಳುಗಳ, ತಲೆತಗ್ಗಿಸಿ ನೆಲವನ್ನೇ ನೋಡುವ ನೋಟಗಳ, ಭಾರೈಸಿದ ಮೈಗಳ, ಕುಗ್ಗಿದ ಪರಾಕ್ರಮದ ತೊರೆದ ಬಿರುದುಗಳ, ಅನುಭವಿಸಿದ ಮಹಾಭಂಗಗಳ ರಾಜರನ್ನು ನೋಡಿ ಕರ್ಣನು ಘಟೋತ್ಕಚನನ್ನು ಹೊಗಳಿದನು.

ಅರ್ಥ:
ತಳಿತ: ಚಿಗುರಿದ; ಮುಸುಕು: ಆವರಿಸು; ಮೂಗು: ನಾಸಿಕ; ನೆಲ: ಭೂಮಿ; ನೋಟ: ದೃಷ್ಟಿ; ಮೆಯ್ಯ: ತನು; ತೂಕ: ಭಾರ; ಝಳ: ಪ್ರಕಾಶ, ಕಾಂತಿ; ಸುಯ್ಲು: ನಿಡಿದಾದ ಉಸಿರು, ನಿಟ್ಟುಸಿರು; ಮುಖ: ಆನನ; ಮೋನ: ಮಾತನಾಡದಿರುವಿಕೆ, ಮೌನ; ನಸಿ: ಹಾಳಾಗು, ನಾಶವಾಗು; ನೆನಹು: ಜ್ಞಾಪಕ, ನೆನಪು; ಕಳಿ: ಕಳೆದುಹೋಗು; ಕಡುಹು: ಸಾಹಸ, ಹುರುಪು; ಬೀತ: ಜರುಗಿದ; ಬಿರುದು: ಗೌರವ ಸೂಚಕ ಪದ; ಬಲಿ: ಗಟ್ಟಿ; ಭಂಗ: ಮೋಸ, ವಂಚನೆ; ನೃಪತಿ: ರಾಜ; ಅಗ್ಗಳೆ: ಶ್ರೇಷ್ಠ; ರವಿಸುತ: ಸೂರ್ಯಪುತ್ರ; ಕಂಡು: ನೋಡು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ತಳಿತ +ಮುಸುಕಿನ +ಬೆರಳ +ಮೂಗಿನ
ನೆಲನ +ನೋಟದ +ಮೆಯ್ಯ +ತೂಕದ
ಝಳದ +ಸುಯ್ಲಿನ +ಮುಖದ +ಮೋನದ +ನಸಿದ +ನೆನಹುಗಳ
ಕಳಿದ+ ಕಡುಹಿನ+ ಬೀತ +ಬಿರುದಿನ
ಬಲಿದ +ಭಂಗದ +ನೃಪತಿಗಳನ್
ಅಗ್ಗಳೆಯ +ರವಿಸುತ +ಕಂಡು +ಹೊಗಳಿದನಾ +ಘಟೋತ್ಕಚನ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೀತ ಬಿರುದಿನ ಬಲಿದ ಭಂಗದ
(೨) ಒಂದೇ ಅಕ್ಷರದ ಜೋಡಿ ಪದಗಳು – ಮುಖದ ಮೋನದ ನಸಿದ ನೆನಹುಗಳ ಕಳಿದ ಕಡುಹಿನ

ಪದ್ಯ ೪೪: ಕರ್ಣನೇಕೆ ಮೌನದಿಂದ ಹಿಮ್ಮೆಟ್ಟಿದನು?

ಧನುವನಿಕ್ಕಡಿಗಳೆದು ರಿಪು ಸೂ
ತನ ಶಿರವ ಹರಿಯೆಸಲು ಸಾರಥಿ
ತನವ ತಾನೇ ಮಾಡುತಿದಿರಾದನು ಕೃಪಾಣದಲಿ
ಕನಲಿ ಖಡ್ಗವ ಮುರಿಯೆಸಲು ಮು
ಮ್ಮೊನೆಯ ಶೂಲದಲಿಟ್ಟನಂತದ
ನನಿಲಸುತ ಖಂಡಿಸಲು ಮುರಿದನು ಮೋನದಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭೀಮನು ಕರ್ನನ ಧನುಸ್ಸನ್ನು ಎರಡು ತುಂಡಾಗಿ ಮುರಿದು, ಸಾರಥಿಯ ತಲೆ ಹಾರಿ ಹೋಗುವಂತೆ ಹೊಡೆಯಲು, ತಾನೇ ಸಾರಥಿತನವನ್ನು ಮಾಡುತ್ತಾ ಕರ್ಣನು ಕತ್ತಿಯನ್ನು ಹಿಡಿದು ಬರಲು, ಭೀಮನು ಅದನ್ನು ತುಂಡರಿಸಿದನು. ತ್ರಿಶೂಲವನ್ನು ಕರ್ಣನು ಪ್ರಯೋಗಿಸಲು, ಭೀಮನು ಅದನ್ನು ತುಂಡುಮಾಡಿದನು. ಕರ್ಣನು ಮೌನದಿಂದ ಹಿಮ್ಮೆಟ್ಟಿದನು.

ಅರ್ಥ:
ಧನು: ಬಿಲ್ಲು; ಇಕ್ಕಡಿ: ಎರಡೂ ಬದಿ; ರಿಪು: ವೈರಿ; ಸೂತ: ಸಾರಥಿ; ಶಿರ: ತಲೆ; ಹರಿ: ಸೀಳು; ಸಾರಥಿ: ಸೂತ; ಇದಿರು: ಎದುರು; ಕೃಪಾಣ: ಕತ್ತಿ, ಖಡ್ಗ; ಕನಲು: ಬೆಂಕಿ, ಉರಿ; ಖಡ್ಗ: ಕತ್ತಿ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಮುಮ್ಮೊನೆ: ಮೂರು ಚೂಪಾದ ತುದಿಯುಳ್ಳ; ಶೂಲ: ತ್ರಿಶೂಲ; ಅನಿಲಸುತ: ಭೀಮ, ವಾಯುಪುತ್ರ; ಖಂಡಿಸು: ಕಡಿ, ಕತ್ತರಿಸು; ಮುರಿ: ಸೀಳು; ಮೋನ: ಮೌನ;

ಪದವಿಂಗಡಣೆ:
ಧನುವನ್+ಇಕ್ಕಡಿಗಳೆದು +ರಿಪು +ಸೂ
ತನ +ಶಿರವ +ಹರಿ+ಎಸಲು +ಸಾರಥಿ
ತನವ+ ತಾನೇ +ಮಾಡುತ್+ಇದಿರಾದನು +ಕೃಪಾಣದಲಿ
ಕನಲಿ +ಖಡ್ಗವ +ಮುರಿ+ಎಸಲು +ಮು
ಮ್ಮೊನೆಯ +ಶೂಲದಲಿಟ್ಟ್+ಅನಂತದನ್
ಅನಿಲಸುತ +ಖಂಡಿಸಲು +ಮುರಿದನು +ಮೋನದಲಿ +ಕರ್ಣ

ಅಚ್ಚರಿ:
(೧) ತಾನೇ ರಥವನ್ನೋಡಿಸಿದ ಎಂದು ಹೇಳುವ ಪರಿ – ಸಾರಥಿ ತನವ ತಾನೇ ಮಾಡುತಿದಿರಾದನು ಕೃಪಾಣದಲಿ

ಪದ್ಯ ೧: ಕೌರವ ಪಾಂಡವ ಸೈನ್ಯದಲ್ಲಿ ಏನು ತೋರುತ್ತಿತ್ತು?

ನೀನು ನೆರಹಿದ ಸುಕೃತ ಫಲವದ
ನೇನ ಹೇಳುವೆನಿತ್ತಲುಗ್ಗಡ
ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ
ಧ್ಯಾನವಿತ್ತಲು ರಾಗವತ್ತಲು
ಮೋನವಿತ್ತಲು ರಭಸವತ್ತಲು
ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ನೀನು ಗಳಿಸಿದ ಪುಣ್ಯದ ಫಲವನ್ನು ಏನೆಂದು ಹೇಳಲಿ, ಮಹಾಗಜವಾದ ಸುಪ್ರತೀಕವು ಸತ್ತುಬಿದ್ದಿತು. ಯುದ್ಧದಲ್ಲಿ ಶತ್ರುಗಳ ಸೈನ್ಯಕ್ಕೆ ಸ್ವಲ್ಪ ಹಾನಿಯಾಯಿತು, ಅವರ ಸೈನ್ಯದಲ್ಲಿ ಅತಿ ಸಂತೋಷವಿದ್ದರೆ, ನಮ್ಮಲ್ಲಿ ಚಿಂತೆ, ಅಲ್ಲಿ ರಭಸ ಆವೇಶವಿದ್ದರೆ ಇಲ್ಲಿ ಮೌನ, ಅಲ್ಲಿ ಏಳಿಗೆ ಅಭ್ಯುದಯ ಕಾಣಿಸಿದರೆ ಇಲ್ಲಿ ಹಾನಿ ತೋರುತ್ತಿತ್ತು.

ಅರ್ಥ:
ನೆರಹು: ಗುಂಪು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಹೇಳು: ತಿಳಿಸು; ಉಗ್ಗಡ: ಉತ್ಕಟತೆ, ಅತಿಶಯ; ಆನೆ: ಗಜ; ಬಿದ್ದು: ಉರುಳು; ಕಾದು: ಹೋರಾಡು; ನಸು: ಕೊಂಚ, ಸ್ವಲ್ಪ; ಸೊಪ್ಪಾದು: ಹಾನಿಯಾಗು; ಅರಿ: ವೈರಿ; ಸೇನೆ: ಸೈನ್ಯ; ಧ್ಯಾನ: ಆತ್ಮಚಿಂತನೆ; ರಾಗ:ಹಿಗ್ಗು, ಸಂತೋಷ; ಮೋನ: ಮೌನ; ರಭಸ: ವೇಗ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀನು +ನೆರಹಿದ +ಸುಕೃತ+ ಫಲವದನ್
ಏನ +ಹೇಳುವೆನ್+ಇತ್ತಲ್+ಉಗ್ಗಡದ್
ಆನೆ +ಬಿದ್ದುದು +ಕಾದಿ +ನಸು +ಸೊಪ್ಪಾದುದ್+ಅರಿಸೇನೆ
ಧ್ಯಾನವಿತ್ತಲು +ರಾಗವತ್ತಲು
ಮೋನವಿತ್ತಲು +ರಭಸವತ್ತಲು
ಹಾನಿಯಿತ್ತಲು +ವೃದ್ಧಿಯತ್ತಲು +ಭೂಪ +ಕೇಳೆಂದ

ಅಚ್ಚರಿ:
(೧) ಇತ್ತಲು ಅತ್ತಲು ಪದದ ಬಳಕೆ
(೨) ಎಂಥಾ ಪುಣ್ಯನಿನ್ನದು ಎಂದು ಹಂಗಿಸುವ ಪರಿ – ನೀನು ನೆರಹಿದ ಸುಕೃತ ಫಲವದನೇನ ಹೇಳುವೆನ್

ಪದ್ಯ ೧೧: ಕೌರವರು ಹೇಗೆ ತಮ್ಮ ಪಾಳೆಯವನ್ನು ಸೇರಿದರು?

ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೊರೆಯ ಮಹೀಪತಿ ಹೊಕ್ಕನರಮನೆಯ (ದ್ರೋಣ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಾಣದ ಪಲ್ಲಂಗದಲ್ಲಿ ಮಲಗಿದ ಭೀಷ್ಮನನ್ನು ಬೀಳ್ಕೊಂಡು ಪಾಂಡವರು ತಮ್ಮ ಪಾಳಯಕ್ಕೆ ಹೋದರು, ಇತ್ತ ಕೌರವರೂ ತಮ್ಮ ಪಾಳೆಯಕ್ಕೆ ಬಂದರು. ಅವರು ಬರುವಾಗ ಯಾವ ವಾದ್ಯಗಳೂ ಮೊಳಗಲಿಲ್ಲ. ಪಾಠಕರು ಬಿರುದುಗಳನ್ನು ಹೊಗಳಲಿಲ್ಲ.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಮಲಗು: ಶಯನ; ಮುತ್ತಯ್ಯ: ತಾತ; ಬೀಳ್ಕೊಂಡು: ತೆರಳು; ಸರಿದರು: ಬಂದರು; ನಂದನ: ಮಕ್ಕಳು; ತಿರುಗು: ಸುತ್ತು; ಹೊತ್ತ: ಧರಿಸು; ಮೋನ: ಮಾತನಾಡದಿರುವಿಕೆ, ಮೌನ; ವಿವಿಧ: ಹಲವಾರು; ವಾದ್ಯ: ಸಂಗೀತದ ಸಾಧನ; ಕೆತ್ತು: ಅದಿರು, ನಡುಗು; ಪಾಠಕ: ಹೊಗಳುಭಟ್ಟ; ಹತ್ತುಗೆ: ಸೇರಿಕೊಂಡಿರುವಿಕೆ; ಮೋರೆ: ಮುಖ; ಮಹೀಪತಿ: ರಾಜ; ಹೊಕ್ಕು: ಸೇರು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಚಿತ್ತವಿಸು +ಧೃತರಾಷ್ಟ್ರ +ಮಲಗಿದ
ಮುತ್ತಯನ +ಬೀಳ್ಕೊಂಡು +ಕೌರವರ್
ಇತ್ತ+ ಸರಿದರು+ ಪಾಂಡುನಂದನರ್+ಅತ್ತ +ತಿರುಗಿದರು
ಹೊತ್ತ +ಮೋನದ +ವಿವಿಧ +ವಾದ್ಯದ
ಕೆತ್ತ +ಬಾಯ್ಗಳ +ಪಾಠಕರ +ಕೈ
ಹತ್ತುಗೆಯ +ಮೊರೆಯ +ಮಹೀಪತಿ+ ಹೊಕ್ಕನ್+ಅರಮನೆಯ

ಅಚ್ಚರಿ:
(೧) ಇತ್ತ ಅತ್ತ – ಪ್ರಾಸ ಪದಗಳು
(೨) ನೀರವತೆಯನ್ನು ವಿವರಿಸುವ ಪರಿ – ಹೊತ್ತ ಮೋನದ ವಿವಿಧ ವಾದ್ಯದಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೊರೆಯ

ಪದ್ಯ ೨೭: ದ್ರೌಪದಿಯ ದಿಟ್ಟ ನಿರ್ಧಾರವೇನು?

ಅರರೆ ಹೆಂಗಸು ದಿಟ್ಟೆ ಮೋನದೊ
ಳಿರಲದಾವಂತರವು ರಾಯನ
ಹೊರೆಯಲೀ ಬಾಯ್ಬಡಿತಕನ ಗರುವಾಯಿತೇ ಯೆನಲು
ಕೆರಳಿದಳು ಲಲಿತಾಂಗಿಯಿಲ್ಲಿಯ
ಹಿರಿಯರಲಿ ಹುರುಳಿಲ್ಲ ಮಾರುತಿ
ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು (ವಿರಾಟ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಭೆಯಲ್ಲಿದ್ದವರು ದ್ರೌಪದಿಯ ಮಾತನ್ನು ಕೇಳಿ, ಅರೆರೆ ಈ ಹೆಂಗಸು ಗೈಯ್ಯಾಳಿ, ಮೌನದಿಂದಿದ್ದರೆ ಆಗಿತ್ತು, ರಾಜನೆದುರಿನಲ್ಲಿ ಬಾಯಿಬಡುಕತನದಿಂದ ಮಾತನಾಡಿದಳು, ಇದು ಗೌರವದ ಲಕ್ಷಣವಲ್ಲ ಎನಲು, ದ್ರೌಪದಿಯು ಕೆರಳಿ, ಇಲ್ಲಿಯ ಹಿರಿಯರಲ್ಲಿ ಯಾವ ಸತ್ವವೂ ಇಲ್ಲ, ಭೀಮನಿಗೆ ಹೇಳುತ್ತೇನೆ ಆದುದಾಗಲಿ ಎಂದುಕೊಂಡು ಸಭೆಯಿಂದ ಹೊರನಡೆದಳು.

ಅರ್ಥ:
ಹೆಂಗಸು: ಸ್ತ್ರೀ; ದಿಟ್ಟೆ: ಗಟ್ಟಿ, ಧೈರ್ಯಶಾಲಿನಿ; ಮೋನ: ಮೌನ; ಅಂತರ: ದೂರ; ರಾಯ: ರಾಜ; ಹೊರೆ: ರಕ್ಷಣೆ, ಆಶ್ರಯ; ಬಾಯ್ಬಡಿತ: ಒರಟಾಗಿ/ಸುಮ್ಮನೆ ಮಾತಾಡು; ಗರುವಾಯಿ: ದೊಡ್ಡತನ, ಠೀವಿ; ಕೆರಳು: ರೇಗು, ಕನಲು; ಲಲಿತಾಂಗಿ: ಹೆಣ್ಣು, ಬಳ್ಳಿಯಂತ ಅಂಗವನ್ನುಳ್ಳವಳು; ಹಿರಿಯ: ದೊಡ್ಡವ; ಹುರುಳು: ಸತ್ವ; ಮಾರುತಿ: ವಾಯುಪುತ್ರ; ಅರುಹು: ಹೇಳು; ಬಳಿಕ: ನಂತರ; ತಿರುಗು: ಮಗ್ಗುಲಾಗು;

ಪದವಿಂಗಡಣೆ:
ಅರರೆ +ಹೆಂಗಸು +ದಿಟ್ಟೆ +ಮೋನದೊಳ್
ಇರಲ್+ಅದಾವ್+ಅಂತರವು+ ರಾಯನ
ಹೊರೆಯಲೀ+ ಬಾಯ್ಬಡಿತಕನ+ ಗರುವಾಯಿತೇ +ಯೆನಲು
ಕೆರಳಿದಳು+ ಲಲಿತಾಂಗಿ+ಇಲ್ಲಿಯ
ಹಿರಿಯರಲಿ +ಹುರುಳಿಲ್ಲ +ಮಾರುತಿಗ್
ಅರುಹುವೆನು +ಬಳಿಕ್+ಆದುದಾಗಲಿ+ಎನುತ +ತಿರುಗಿದಳು

ಅಚ್ಚರಿ:
(೧) ದ್ರೌಪದಿಯ ದಿಟ್ಟ ಹೆಜ್ಜೆ – ಮಾರುತಿಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು

ಪದ್ಯ ೬: ಕೃಷ್ಣನು ಅರ್ಜುನನು ಕತ್ತಿ ಹಿಡಿದದ್ದಕ್ಕೆ ಏನು ಹೇಳಿದ?

ಧರಣಿಪನ ಕೊಲಲೆಂದೊ ಮೇಣೀ
ತರುಣಿಯರಿಗೋ ನಕುಲ ಸಹದೇ
ವರಿಗೆಯೋ ಮೇಣೆನಗೆಯೋ ನೀನುಗಿದಡಾಯುಧದ
ಪರಿಯ ಹೇಳೈ ಪಾರ್ಥ ಮೋನದೊ
ಳಿರದಿರೆನ್ನಾಣೆನಲು ಬೆರಗಿನ
ಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ (ಕರ್ಣ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ನೀನೇಕೆ ಕತ್ತಿಯನ್ನೆಳೆದೆ? ಧರ್ಮಜನನ್ನು ಕೋಲ್ಲಲೋ, ಅಥವ ರಾಣಿವಾಸದವರನ್ನು ಸಾಯಿಸಲೋ, ಅಥವ ನಕುಲ ಸಹದೇವರನ್ನೋ ಅಥವ ನನ್ನನ್ನೋ, ಏಕೆ ಕತ್ತಿ ಹಿರಿದೆ, ಸುಮ್ಮನಿರಬೇಡ, ನನ್ನಾಣೆ ಉತ್ತರವನ್ನು ಹೇಳು ಎಂದು ಕೃಷ್ಣನು ಕೇಳಲು ಅರ್ಜುನನು ಮೌನದೊಳಿದ್ದನು.

ಅರ್ಥ:
ಧರಣಿಪ: ರಾಜ; ಕೊಲಲು: ಕೊಂದು, ಸಾಯಿಸು; ಮೇಣ್: ಅಥವ; ತರುಣಿ: ಸ್ತ್ರೀ; ಎನಗೆ: ನನಗೆ; ಉಗಿದು: ಹೊರತೆಗೆ; ಆಯುಧ: ಶಸ್ತ್ರ; ಪರಿ: ರೀತಿ; ಮೋನ: ಮೌನ; ಆಣೆ: ಪ್ರಮಾಣ; ಬೆರಗು: ವಿಸ್ಮಯ, ಸೋಜಿಗ; ಅಗರು: ಒಂದು ಬಗೆಯ ಕೆಂಪುದ್ರವ್ಯ, ಲಾಕ್ಷ; ಗಾಹು: ಪ್ರಭಾವ, ತಿಳುವಳಿಕೆ; ಅದ್ದು: ತೋಯ್ದು;

ಪದವಿಂಗಡಣೆ:
ಧರಣಿಪನ +ಕೊಲಲೆಂದೊ +ಮೇಣ್+ಈ
ತರುಣಿಯರಿಗೋ +ನಕುಲ +ಸಹದೇ
ವರಿಗೆಯೋ +ಮೇಣ್+ಎನಗೆಯೋ +ನೀನ್+ಉಗಿದಡ್+ಆಯುಧದ
ಪರಿಯ +ಹೇಳೈ +ಪಾರ್ಥ +ಮೋನದೊಳ್
ಇರದಿರ್+ಎನ್ನಾಣ್+ಎನಲು +ಬೆರಗಿನ್
ಅಗರದ+ ಗಾಹಿನಲದ್ದು +ಮೋನದೊಳ್+ಇದ್ದನಾ ಪಾರ್ಥ

ಅಚ್ಚರಿ:
(೧) ತೆಗೆದ ಆಯುಧ ಎಂದು ಹೇಳಲು – ಉಗಿದಡಾಯುಧ ಪದದ ಬಳಕೆ
(೨) ಅರ್ಜುನನು ಮೌನದೊಳಿದ್ದ ಪರಿ – ಬೆರಗಿನಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ

ಪದ್ಯ ೨೭: ಅರ್ಜುನನಲ್ಲಿ ಯಾವ ರಸಭಾವ ಹೊಮ್ಮಿತು?

ಉಕ್ಕಿದುದು ತನಿ ವೀರರಸ ಕುದಿ
ದುಕ್ಕಿ ಹರಿದುದು ರೌದ್ರ ರಸವವ
ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ
ಮಿಕ್ಕು ಬಹಳ ಕ್ರೋಧವೊಡಲೊಳ
ಗುಕ್ಕಿ ತಮಳೋತ್ಸಾಹ ಚಾಪಳ
ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ (ಕರ್ಣ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮಜನ ಹಂಗಿಸುವ ನುಡಿಗಳನ್ನು ಕೇಳಿ ಶೂರನಾದ ಅರ್ಜುನನ ಮನಸ್ಸಿನಲ್ಲಿ ವೀರರಸ ಉಕ್ಕಿತು. ರೌದ್ರರಸವು ದೇಹದ ಕಣಕಣದಲ್ಲಿ ಹೊರಹೊಮ್ಮಿತು, ಮತ್ಸರ ಹೊಟ್ಟೆಕಿಚ್ಚಿನ ರಸವನ್ನು ನಭಕ್ಕೆ ತೂರಿ ಶಾಂತಿರಸವು ಮನವನ್ನು ಆವರಿಸಿತು. ಅತಿಶಯ ಕೋಪವುಂಟಾಗಿ ನಿರುತ್ಸಾಹತೆ ಮೂಡಿತು. ಒಂದು ಕ್ಷಣದಲ್ಲಿ ಚಿತ್ತದ ಚಪಲತೆ ಮಾಯವಾಗಿ ಮೌನವು ಅರ್ಜುನನನ್ನು ಆವರಿಸಿತು.

ಅರ್ಥ:
ಉಕ್ಕು: ಹೊಮ್ಮಿ ಬರು ; ತನಿ:ಅತಿಶಯವಾಗು; ವೀರ: ಕಲಿ, ಶೂರ, ಪರಾಕ್ರಮಿ; ರಸ: ತಿರುಳು, ಸಾರ; ಕುದಿ: ಕೋಪಗೊಳ್ಳು, ಮರುಳು; ಹರಿ: ಚದರು; ರೌದ್ರ: ಭಯಂಕರ; ಅಕ್ಕಜ: ಹೊಟ್ಟೆಕಿಚ್ಚು, ಅಸೂಯೆ; ನಭ: ಆಗಸ; ಒತ್ತು: ನೂಕು; ಪರಿ: ರೀತಿ; ಶಾಂತಿ: ಮೌನ, ನೀರವತೆ; ಲಹರಿ: ರಭಸ, ಆವೇಗ; ಮಿಕ್ಕು: ಉಳಿದ; ಬಹಳ: ತುಂಬ; ಕ್ರೋಧ: ಕೋಪ; ಒಡಲು: ದೇಹ; ತಮ: ಅಂಧಕಾರ; ಉತ್ಸಾಹ: ಶಕ್ತಿ, ಬಲ, ಹುರುಪು; ಚಾಪಳ: ಚಪಲತೆ; ಸುಕ್ಕು:ನಿರುತ್ಸಾಹ, ಮಂಕಾಗು; ಮೋನ: ಮಾತನಾಡದಿರುವಿಕೆ, ಮೌನ;

ಪದವಿಂಗಡಣೆ:
ಉಕ್ಕಿದುದು +ತನಿ +ವೀರರಸ +ಕುದಿದ್
ಉಕ್ಕಿ +ಹರಿದುದು +ರೌದ್ರ +ರಸವವರ್
ಅಕ್ಕಜವ +ನಭಕೊತ್ತಿ+ ಪರಿದುದು+ ಶಾಂತಿ+ರಸ+ಲಹರಿ
ಮಿಕ್ಕು +ಬಹಳ +ಕ್ರೋಧ+ಒಡಲೊಳಗ್
ಉಕ್ಕಿ +ತಮಳೋತ್ಸಾಹ +ಚಾಪಳ
ಸುಕ್ಕಿತ್+ಒಂದೇ +ನಿಮಿಷ+ ಮೋನದೊಳ್+ಇರ್ದನಾ +ಪಾರ್ಥ

ಅಚ್ಚರಿ:
(೧) ಅರ್ಜುನನಲ್ಲಿ ಉಕ್ಕಿದ ಹಲವು ರಸಗಳು – ವೀರ, ರೌದ್ರ, ಶಾಂತಿ, ಕ್ರೋಧ

ಪದ್ಯ ೨೫: ಶಿವನ ಮಾತಿನಿಂದ ದೇವತೆಗಳೇಕೆ ದುಃಖಿತರಾದರು?

ಜಾರಿದುಬ್ಬಿನ ಹೊತ್ತ ದುಗುಡದ
ಮೋರೆಗಳ ಮೋನದ ನಿಹಾರದ
ದೂರುಗಂಗಳ ದೇವ ನಿಕರವ ಕಂಡು ಕರುಣದಲಿ
ಏರುವಡೆದುದು ಮನವವಿದ್ಯೆಗೆ
ಮಾರುವೋದಿರಲಾ ಎನುತ ಶಿವ
ತೋರಿ ನುಡಿದನು ಪಾಶುಪತ್ಯದ ಸಾರ ಸಂಗತಿಯ (ಕರ್ಣ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ನೀವೆಲ್ಲರು ಪಶುಗಳಾಗಿರೆಂದ ಶಿವನ ಮಾತುಗಳನ್ನು ಕೇಳಿದ ದೇವತೆಗಳಿಗೆ ಉತ್ಸಾಹ ತಗ್ಗಿತು, ಮುಖಗಳು ದುಃಖದಿಂದ ಸೊಪ್ಪಾದವು. ಮೌನವನ್ನು ಹಿಡಿದು, ದೂರುವ ಕಣ್ಣುಗಳಿಂದ ಶಿವನನ್ನು ನೋಡಿದರು. ಆಗ ಶಿವನು ನಿಮ್ಮ ಮನಸ್ಸಿಗೆ ನೋವಾಗಿದೆ, ಅವಿದ್ಯೆಗೆ ನೀವು ಮಾರುಹೋಗಿದ್ದೀರಿ ಎಂದು ಪಾಶುಪತ್ಯದ ಸಾರವನ್ನು ಅವರಿಗೆ ತಿಳಿಸಿದನು.

ಅರ್ಥ:
ಜಾರು: ಕೆಳಕ್ಕೆ ಬೀಳು; ಉಬ್ಬು: ಕಂದು ಬಣ್ಣದಿಂದ ಕೂಡಿದ; ಹೊತ್ತು: ಉಂಟಾಗು; ದುಗುಡ: ದುಃಖ; ಮೋರೆ: ಮುಖ; ಮೋನ: ಮಾತನಾಡದಿರುವಿಕೆ, ಮೌನ; ನಿಹಾರ: ಮಂಜಿನಂತೆ ದಟ್ಟವಾದ; ದೂರು: ಆರೋಪ ಮಾಡು, ನಿಂದೆ; ಕಂಗಳು: ನಯನ; ದೇವ: ದೇವತೆ, ಸುರ; ನಿಕರ: ಗುಂಪು; ಕಂಡು: ನೋಡಿ; ಕರುಣ: ದಯೆ, ಕಾರುಣ್ಯ; ಏರು: ಗಾಯ; ಮನ: ಮನಸ್ಸು; ಅವಿದ್ಯೆ: ಅಜ್ಞಾನ ; ಮಾರುಹೋಗು: ವಶವಾಗು, ಅಧೀನವಾಗು; ತೋರು: ಗೋಚರ; ನುಡಿ: ಮಾತಾಡು; ಸಾರ: ರಸ, ತಿರುಳು; ಸಂಗತಿ: ವಿಚಾರ;

ಪದವಿಂಗಡಣೆ:
ಜಾರಿದ್+ಉಬ್ಬಿನ +ಹೊತ್ತ +ದುಗುಡದ
ಮೋರೆಗಳ+ ಮೋನದ+ ನಿಹಾರದ
ದೂರು+ಕಂಗಳ+ ದೇವ +ನಿಕರವ+ ಕಂಡು +ಕರುಣದಲಿ
ಏರುವಡೆದುದು +ಮನವ್+ಅವಿದ್ಯೆಗೆ
ಮಾರುವೋದಿರಲಾ +ಎನುತ +ಶಿವ
ತೋರಿ +ನುಡಿದನು+ ಪಾಶುಪತ್ಯದ +ಸಾರ +ಸಂಗತಿಯ

ಅಚ್ಚರಿ:
(೧) ಜೋಡಿ ಪದಗಳ ಬಳಕೆ: ಮೋರೆಗಳ ಮೋನದ; ಕಂಡು ಕರುಣದಲಿ; ಸಾರ ಸಂಗತಿ
(೨) ಶಿವನು ತನ್ನ ಸಂಕಟವನ್ನು ಹೇಳುವ ಬಗೆ: ಏರುವಡೆದುದು ಮನವವಿದ್ಯೆಗೆ ಮಾರುವೋದಿರಲಾ