ಇತ್ತ ದುಗುಡವ ಹಿಡಿದ ರಾಯನ
ಕೆತ್ತ ಮುಖವನು ಕಂಡು ಭಟರೆದೆ
ಹೊತ್ತಿದವು ಹೊಗೆದೋರಿದವು ಮೋರೆಗಳು ಪಟುಭಟರ
ಇತ್ತ ನೋಡವನೀಶ ಸೈಂಧವ
ನೆತ್ತಲಿಹನತ್ತಲು ಮುರಾರಿಯ
ತೆತ್ತಿಗರ ಕಳುಹಿಸುವೆನೆಂದನು ಖಾತಿಯಲಿ ಕರ್ಣ (ದ್ರೋಣ ಪರ್ವ, ೧೫ ಸಂಧಿ, ೫ ಪದ್ಯ)
ತಾತ್ಪರ್ಯ:
ಕೌರವರ ಪಾಳಯದಲ್ಲಿ ದುಃಖಿಸುತ್ತಿದ್ದ ದುರ್ಯೋಧನನ ಮುಖ ವಿವರ್ಣವಾಗಿತ್ತು. ಅದನ್ನು ಕಂಡು ಕೌರವ ಸೈನ್ಯದ ವೀರರ ಎದೆಗಳಲ್ಲಿ ಕೋಪಾಗ್ನಿಯುಕ್ಕಿತು. ಮುಖ ಕಪ್ಪಿಟ್ಟವು. ಕರ್ಣನು ರಾಜಾ ಇತ್ತ ನೋಡು, ಸೈಂಧವನೆಲ್ಲಿರುವನೋ ಅಲ್ಲಿಗೆ ಕೃಷ್ಣನ ಆಶ್ರಿತರನ್ನು (ಪಾಂಡವರನ್ನಿ) ಕಳಿಸುತ್ತೇನೆ ಎಂದು ಕೋಪದಿಂದ ನುಡಿದನು.
ಅರ್ಥ:
ದುಗುಡ: ದುಃಖ; ಹಿಡಿ: ಗ್ರಹಿಸು; ರಾಯ: ರಾಜ; ಮುಖ: ಆನನ; ಕಂಡು: ನೋಡು; ಭಟ: ಸೈನಿಕ; ಹೊತ್ತು: ಹತ್ತಿಕೊಳ್ಳು, ಉರಿ; ಹೊಗೆ: ಧೂಮ; ತೋರು: ಗೋಚರಿಸು; ಮೋರೆ: ಮುಖ; ಪಟುಭಟ: ಶೂರನಾದ ಯೋಧ; ಅವನೀಶ: ರಾಜ; ಮುರಾರಿ: ಕೃಷ್ಣ; ತೆತ್ತು: ಮೋಸ; ಖಾತಿ: ಕೋಪ; ತೆತ್ತಿಗ: ನೆಂಟ, ಗೆಳೆಯ;
ಪದವಿಂಗಡಣೆ:
ಇತ್ತ +ದುಗುಡವ +ಹಿಡಿದ +ರಾಯನಕ್
ಎತ್ತ +ಮುಖವನು +ಕಂಡು +ಭಟರೆದೆ
ಹೊತ್ತಿದವು +ಹೊಗೆ+ತೋರಿದವು +ಮೋರೆಗಳು +ಪಟುಭಟರ
ಇತ್ತ +ನೋಡ್+ಅವನೀಶ +ಸೈಂಧವನ್
ಎತ್ತಲಿಹನ್+ಅತ್ತಲು +ಮುರಾರಿಯ
ತೆತ್ತಿಗರ +ಕಳುಹಿಸುವೆನೆಂದನು +ಖಾತಿಯಲಿ +ಕರ್ಣ
ಅಚ್ಚರಿ:
(೧) ಇತ್ತ, ಎತ್ತ – ೧,೨,೪, ೫ ಸಾಲಿನ ಮೊದಲ ಪದ
(೨) ಪಾಂಡವರು ಎಂದು ಹೇಳುವ ಪರಿ – ಮುರಾರಿಯ ತೆತ್ತಿಗರ