ಕುದುರೆ ಕಂಗೆಟ್ಟವು ಮುರಾರಿಯ
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದ (ಭೀಷ್ಮ ಪರ್ವ, ೬ ಸಂಧಿ, ೧೭ ಪದ್ಯ)
ತಾತ್ಪರ್ಯ:
ಶತ್ರುಗಳ ಬಾಣಪ್ರಯೋಗದಿಂದ ಅರ್ಜುನನ ರಥದ ಕುದುರೆಗಳು ಕಂಗೆಟ್ಟವು. ಶ್ರೀಕೃಷ್ಣನ ಹೃದಯವು ಬಡಿದುಕೊಂಡಿತು. ರಥದ ಗಾಲಿಗಳು ಅದುರಿದವು. ರಥದಲ್ಲಿದ್ದ ಹನುಮಮ್ತನು ಗಾಮ್ಭೀರ್ಯವನ್ನು ಕಳೆದುಕೊಂಡು ಒರಲಿದನು. ಪಾಂಡವರ ಪರಾಕ್ರಮ ಮುರಿದು ಪಾಂಡವ ನಾಯಕರು ಹೆದರಿದರು. ಯುದ್ಧವನ್ನು ನೋಡುತ್ತಿದ್ದ ದೇವತೆಗಳು ತಾವು ಅರ್ಜುನನ ಪಕ್ಷವನ್ನು ಹಿಡಿದುದು ವ್ಯರ್ಥವಾಯಿತೆಂದು ಮನಸ್ಸಿನಲ್ಲೇ ಕುದಿದರು.
ಅರ್ಥ:
ಕುದುರೆ: ಅಶ್ವ; ಕಂಗೆಡು: ಗಾಬರಿಯಾಗು; ಮುರಾರಿ: ಕೃಷ್ಣ; ಹೃದಯ: ಎದೆ; ಸಂಚಲ: ಚಲನೆ, ಚಾಂಚಲ್ಯ; ಗಾಲಿ: ಚಕ್ರ; ಉದುರು: ಕೆಳಗೆ ಬೀಳು; ಗರುವಾಯಿ: ದೊಡ್ಡತನ, ಠೀವಿ; ಕೆಡು: ಹಾಳು; ಹೆದರು: ಭಯಗೊಳ್ಳು; ನಾಯಕ: ಒಡೆಯ; ಅದಟು: ಪರಾಕ್ರಮ, ಶೌರ್ಯ; ಮುರಿ: ಸೀಳು; ಸುರ: ದೇವತೆ; ಚಿಂತಿಸು: ಯೋಚಿಸು; ಕುದಿ: ಕೋಪಗೊಳ್ಳು; ಪಕ್ಷ: ಗುಂಪು; ವ್ಯರ್ಥ: ನಿರುಪಯುಕ್ತತೆ;
ಪದವಿಂಗಡಣೆ:
ಕುದುರೆ +ಕಂಗೆಟ್ಟವು +ಮುರಾರಿಯ
ಹೃದಯ +ಸಂಚಲವಾಯ್ತು +ಗಾಲಿಗಳ್
ಅದುರಿದುವು+ ಗರುವಾಯಿಗೆಟ್ಟನು +ಮೇಲೆ +ಹನುಮಂತ
ಹೆದರಿದರು+ ನಾಯಕರು+ ಪಾಂಡವರ್
ಅದಟು +ಮುರಿದುದು +ಸುರರು+ ಚಿಂತಿಸಿ
ಕುದಿದರ್+ಅರ್ಜುನ+ಪಕ್ಷಪಾತ +ವ್ಯರ್ಥವಾಯ್ತೆಂದ
ಅಚ್ಚರಿ:
(೧) ಕಂಗೆಟ್ಟು, ಸಂಚಲ, ಅದುರು, ಹೆದರು, ಅದಟು, ಮುರಿ – ಆತಂಕವನ್ನು ವಿವರಿಸಲು ಬಳಸಿದ ಪದಗಳು