ಇತ್ತ ರವಿರಶ್ಮಿಗಳು ನೆರೆ ಕೆಂ
ಪೊತ್ತಿದವು ಸೈಂಧವನನೀಗೊ
ತ್ತೊತ್ತೆಯಲಿ ನೆಲೆ ಕಾಣಬಾರದು ಸಾಕು ದುಮ್ಮಾನ
ಇತ್ತ ನಿಜ ಭಾಷೆಗೆ ಪರಾಭವ
ಹತ್ತಿರಾಯಿತು ನರ ನಿದಾನಿಸೆ
ನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ (ದ್ರೋಣ ಪರ್ವ, ೧೪ ಸಂಧಿ, ೨೫ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನಿಗೆ, ಇತ್ತ ಸೂರ್ಯ ಕಿರಣಗಳು ಕೆಂಪಾದವು. ಈ ಸೈನ್ಯದ ದಟ್ಟಣೆಯಲ್ಲಿ ಸೈಂಧವನೆಲ್ಲಿರುವನೋ ಕಾಣಿಸುತ್ತಿಲ್ಲ. ನೀನು ಮಾಡಿದ ಪ್ರತಿಜ್ಞೆಗೆ ಸೋಲು ಹತ್ತಿರವಾಗುತ್ತಿದೆ, ಅರ್ಜುನ ಸೈರಿಸು ಧೃತಿಗೆಡಬೇಡ ಎನ್ನುತ್ತಾ ರಥವನ್ನು ಸೈಂಧವನಿದ್ದ ಕೊನೆಯ ವ್ಯೂಹಕ್ಕೆ ಅತಿವೇಗದಿಂದ ನಡೆಸಿದನು.
ಅರ್ಥ:
ರವಿ: ಸೂರ್ಯ; ರಶ್ಮಿ: ಕಿರಣ, ಕಾಂತಿ; ನೆರೆ: ಗುಂಪು; ಕೆಂಪು: ಅರುಣ ಬಣ್ಣ; ಒತ್ತು: ಲೇಪಿಸು, ಮುತ್ತು, ದಟ್ಟಣೆ; ನೆಲೆ: ಸ್ಥಾನ; ಕಾಣು: ತೋರು; ಸಾಕು: ನಿಲ್ಲು; ದುಮ್ಮಾನ: ದುಃಖ; ನಿಜ: ತನ್ನ; ಭಾಷೆ: ನುಡಿ; ಪರಾಭವ: ಸೋಲು; ಹತ್ತಿರ: ಸಮೀಪ; ನರ: ಅರ್ಜುನ; ನಿದಾನಿಸು: ಸೈರಿಸು; ಮುರರಿಪು: ಕೃಷ್ಣ; ರಥ: ಬಂಡಿ; ಬಿಡು: ತೊರೆ; ಕಡೆ: ಕೊನೆ; ಮೋಹರ: ಯುದ್ಧ;
ಪದವಿಂಗಡಣೆ:
ಇತ್ತ+ ರವಿರಶ್ಮಿಗಳು +ನೆರೆ +ಕೆಂಪ್
ಒತ್ತಿದವು +ಸೈಂಧವನನೀಗ್
ಒತ್ತೊತ್ತೆಯಲಿ +ನೆಲೆ +ಕಾಣಬಾರದು +ಸಾಕು +ದುಮ್ಮಾನ
ಇತ್ತ +ನಿಜ +ಭಾಷೆಗೆ +ಪರಾಭವ
ಹತ್ತಿರಾಯಿತು +ನರ+ ನಿದಾನಿಸ್
ಎನುತ್ತ +ಮುರರಿಪು +ರಥವ +ಬಿಟ್ಟನು +ಕಡೆಯ +ಮೋಹರಕೆ
ಅಚ್ಚರಿ:
(೧) ಸಂಜೆಯಾಯಿತೆಂದು ವಿವರಿಸುವ ಪರಿ – ರವಿರಶ್ಮಿಗಳು ನೆರೆ ಕೆಂಪೊತ್ತಿದವು