ದೇವ ನಮ್ಮದು ಧರ್ಮಯುದ್ಧವಿ
ದಾವ ಹದನನು ಬೆಸಸಿದಿರಿ ತಲೆ
ಗಾವುದೇನರಿದಲ್ಲ ಮೊದಲಲಿ ನುಡಿದ ಸಮ್ಯವನು
ಭಾವಿಸುವುದೆನೆ ಮುಗುಳುನಗೆಯಲಿ
ರಾವಣಾಂತಕನೆಂದನೆಲೆ ಮರು
ಳಾವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ (ದ್ರೋಣ ಪರ್ವ, ೧೪ ಸಂಧಿ, ೧೨ ಪದ್ಯ)
ತಾತ್ಪರ್ಯ:
ಕೃಷ್ಣನ ಮಾತುಗಳನ್ನು ಕೇಳಿ, ಅರ್ಜುನನು, ದೇವ, ನಮ್ಮದ ಧರ್ಮಯುದ್ಧವೆಂದು ಹೇಳಿದೆ, ಆದರೆ ಇದೇನು ಅಪ್ಪಣೆ ಕೊಡುತ್ತಿದ್ದೀರಿ? ಸಾತ್ಯಕಿಯ ತಲೆಯನ್ನು ಕಾಯುವುದು ಕಷ್ಟವೇನಲ್ಲ. ಇದು ಧರ್ಮವೇ, ಎಂದು ನಾನು ಕೇಳುತ್ತಿದ್ದೇನೆ ಎಂಬ ಪ್ರಶ್ನೆಗೆ, ಕೃಷ್ಣನು ನಸುನಗುತ್ತಾ ಅಯ್ಯೋ ಮರುಳೇ, ಕೌರವನಲ್ಲಿ ಯಾವ ಧರ್ಮವಿತ್ತು ಎಂದು ಮರು ಪ್ರಶ್ನಿಸಿದನು.
ಅರ್ಥ:
ದೇವ: ಭಗವಂತ; ಧರ್ಮ: ಧಾರಣೆ ಮಾಡಿದುದು; ಯುದ್ಧ: ರಣರಂಗ; ಹದ: ಸ್ಥಿತಿ, ರೀತಿ; ಬೆಸಸು: ಕಾರ್ಯ; ತಲೆ: ಶಿರ; ಕಾವುದು: ರಕ್ಷಿಸು; ಅರಿ: ತಿಳಿ; ಮೊದಲು: ಆದಿ; ನುಡಿ: ಮಾತು; ಸಮಯ: ಕಾಲ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಮುಗುಳುನಗೆ: ಮಂದಸ್ಮಿತ; ಅಂತಕ: ಯಮ; ಮರುಳ: ಮೂಢ; ನಿರುತ: ದಿಟ, ಸತ್ಯ, ನಿಶ್ಚಯ;
ಪದವಿಂಗಡಣೆ:
ದೇವ +ನಮ್ಮದು +ಧರ್ಮಯುದ್ಧವ್+
ಇದಾವ +ಹದನನು +ಬೆಸಸಿದಿರಿ +ತಲೆ
ಕಾವುದೇನ್+ಅರಿದಲ್ಲ +ಮೊದಲಲಿ+ ನುಡಿದ +ಸಮಯವನು
ಭಾವಿಸುವುದ್+ಎನೆ +ಮುಗುಳುನಗೆಯಲಿ
ರಾವಣಾಂತಕನ್+ಎಂದನ್+ಎಲೆ +ಮರುಳ್
ಆವ +ನಿರುತದ +ಧರ್ಮವಿದ್ದುದು +ಕೌರವೇಂದ್ರನಲಿ
ಅಚ್ಚರಿ:
(೧) ಕೃಷ್ಣನನ್ನು ರಾವಣಾಂತಕ ಎಂದು ಕರೆದಿರುವುದು
(೨) ಕೌರವರು ಅಧರ್ಮಿಗಳೆಂದು ಹೇಳುವ ಪರಿ – ಆವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ