ಪದ್ಯ ೩೨: ಶಲ್ಯನ ಬಾಣಗಳು ಧರ್ಮಜನನ್ನು ಹೇಗೆ ತಾಕಿದವು?

ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ (ಶಲ್ಯ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಲ್ಯನು ಮೊದಲು ಬಿಟ್ಟಬಾಣದ ತುದಿಯನ್ನು ಹಿಂದಿನ ಬಾಣಗಳು ಒದೆದು ಮುಂದಾದವು. ಮುಂದಾದ ಬಾಣಗಳನ್ನು ಹಿಂದಿನ ಬಾಣಗಳು ಚುಚ್ಚಿದವು. ಹಿಂದೆ ಬಿಟ್ಟ ಬಾಣಗಳನ್ನು ಅದರ ಹಿಂದಿನ ಬಾಣಗಳು ಮುಂಚಿದವು. ಹೀಗೆ ಶಲ್ಯನ ಬಾಣಗಳು ಧರ್ಮಜನನ್ನು ತಾಕಿದವು.

ಅರ್ಥ:
ಮುಂದಣ: ಮುಂಚೆ; ಮೊನೆ: ತುದಿ, ಕೊನೆ, ಹರಿತವಾದ; ಒದೆ: ನೂಕು; ಹಿಂದಣ: ಹಿಂದೆ; ಅಂಬು: ಬಾಣ; ಹಿಳುಕು: ಬಾಣದ ಗರಿ; ಹೊಕ್ಕು: ಸೇರು; ಮುಂಚೆ: ಮುಂದೆ; ಹಿಂದಣ: ಹಿಂಭಾಗ; ಮಿಗೆ: ಮತ್ತು, ಅಧಿಕವಾಗಿ; ಎಂಜಲಿಸು: ಮುಟ್ಟು; ಬಳಿ: ಹತ್ತಿಅ; ಸಂದು: ಸಹವಾಸ; ಉಳಿದ: ಮಿಕ್ಕ; ಕವಿ: ಆವರಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅವನಿಪ: ರಾಜ;

ಪದವಿಂಗಡಣೆ:
ಮುಂದಣ್+ಅಂಬಿನ +ಮೊನೆಯನ್+ಒದೆದವು
ಹಿಂದಣ್+ಅಂಬುಗಳ್+ಅವರ+ ಮೊನೆಗಳ
ಹಿಂದಣ್+ಅಂಬಿನ +ಹಿಳುಕು +ಹೊಕ್ಕವು +ಮುಂಚಿದ್+ಅಂಬುಗಳ
ಹಿಂದಣವು +ಹಿಂದಿಕ್ಕಿದವು +ಮಿಗೆ
ಹಿಂದಣ್+ಅಂಬುಗಳ್+ಎಂಜಲಿಸಿ +ಬಳಿ
ಸಂದ+ಉಳಿದ+ಅಂಬುಗಳ್+ಎನಲು +ಕವಿದೆಚ್ಚನ್+ಅವನಿಪನ

ಅಚ್ಚರಿ:
(೧) ಮುಂದಣ, ಹಿಂದಣ – ವಿರುದ್ಧ ಪದಗಳ ಬಳಕೆ
(೨) ಹಿಂದಣ – ೨-೫ ಸಾಲಿನ ಮೊದಲ ಪದ

ಪದ್ಯ ೩೫: ಯಾರು ಯಾರ ಹಿಂದೆ ನಿಂತರು?

ಮುಂದೆ ಹೊಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನು ನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ (ದ್ರೋಣ ಪರ್ವ, ೧೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಮುಂದೆ ನುಗ್ಗಿದ ವೀರರು ಹಿಂದೆ ಬರುತ್ತಿದ್ದವರ ಮರೆಹೊಕ್ಕರು. ಅವರು ಹಿಂದಿದ್ದವರ ಹಿಂದೆ ಹೋಗಿ ಮುಂದಿರುವವರಿಂದ ನಾವು ಉಳಿಯಬಹುದೆಂದು ಹಾರೈಸಿದರು. ಹೀಗೆ ಒಬ್ಬರ ಹಿಂದೊಬ್ಬರು ಹೊಕ್ಕು ಇಡೀ ಸೇನೆಯೇ ಅರ್ಜುನನ ಹಿಂದೆ ನಿಂತಿತು. ಅರ್ಜುನನು ಕೃಷ್ಣನ ಬಲದಿಂದೆ ನಿಂತನು. ಕಪಟವನ್ನು ಬಿಟ್ಟು ಕಾದಿದರೆ, ನಿನ್ನವರು ಯಾವಾಗ ಬೇಕಿದ್ದರು ಗೆಲ್ಲದಿರುವರೇ? ಎಂದು ಸಂಜಯನು ವಿವರಿಸಿದನು.

ಅರ್ಥ:
ಮುಂದೆ: ಎದುರು; ಹೊಗು: ತೆರಳು; ಅತಿಬಳರು: ಪರಾಕ್ರಮಿ; ಹಾರು: ಲಂಘಿಸು; ಹಿಂದಣ: ಹಿಂಭಾಗ; ನಿಲು: ನಿಲ್ಲು; ಮುಂದಣ: ಮುಂದೆ; ಆಸೆ: ಇಚ್ಛೆ; ನಿಂದು: ನಿಲ್ಲು; ಪರಿ: ತೀರಿ; ಬಲ: ಶಕ್ತಿ; ಗಾಹುಗತ: ಮೋಸ, ಭ್ರಾಂತಿ; ಉಳಿದು: ಮಿಕ್ಕ; ಕಾದು: ಹೋರಾಡು;

ಪದವಿಂಗಡಣೆ:
ಮುಂದೆ+ ಹೊಗುವ್+ಅತಿಬಳರು+ ಹಾರಿತು
ಹಿಂದಣವರನು+ ಹಿಂದೆ+ ನಿಲುವರು
ಮುಂದಣವರ್+ಆಸೆಯಲಿ +ನಿಂದುದು +ಪಾರ್ಥ+ಪರಿಯಂತ
ಅಂದು +ಪಾರ್ಥನು +ಕೃಷ್ಣ+ಬಲದಲಿ
ನಿಂದನೇವೇಳುವೆನು +ನಿನ್ನವ
ರೆಂದು +ಗೆಲ್ಲರು+ ಗಾಹುಗತಕವನ್+ಉಳಿದು +ಕಾದುವರೆ

ಅಚ್ಚರಿ:
(೧) ಮುಂದೆ, ಹಿಂದಣ – ವಿರುದ್ಧ ಪದಗಳು
(೨) ಪಾರ್ಥನು ಯಾರ ಹಿಂದೆ ನಿಂತನು – ಪಾರ್ಥನು ಕೃಷ್ಣಬಲದಲಿ ನಿಂದನ್

ಪದ್ಯ ೭: ಅರ್ಜುನನಿಗೆ ಯಾವ ಕನಸು ಬಿದ್ದಿತು?

ವಿಮಳ ದರ್ಭಾಂಕುರದ ಶಯನದೊ
ಳಮರಪತಿಸುತ ಪವಡಿಸಿದನನು
ಪಮ ವಿಳಾಸನು ಕನಸ ಕಂಡೆನೆನುತ್ತ ಕಂದೆರೆದ
ಸಮರವಿಜಯಕೆ ಶಿವನ ಕೃಪೆ ಸಂ
ಕ್ರಮಿಸಿತೆನಗೆನುತಿರಲು ಮುಂದಣ
ಕಮಲನಾಭನ ಕಂಡು ಬಿನ್ನಹ ಮಾಡಿದನು ನಗುತ (ದ್ರೋಣ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಆಯುಧ ಶಾಲೆಯ ವೇದಿಕೆಯ ಮೇಲೆ ದರ್ಭೆಯ ಶಯ್ಯೆಯ ಮೇಲೆ ಮಲಗಿದ್ದ ಅರ್ಜುನನು ಕಣ್ಣು ತೆಗೆದು ಕನಸು ಬಿದ್ದಿತು, ಕನಸಿನಲ್ಲಿ ಶಿವನ ಕೃಪೆಯಾಯಿತು, ಎಂಉದ್ ಚಿಂತಿಸುತ್ತಾ ಕಣ್ತೆರೆದು ಮುಂದೆಯೇ ನಿಂತಿದ್ದ ಕೃಷ್ಣನಿಗೆ ಹೀಗೆಂದು ಹೇಳಿದನು.

ಅರ್ಥ:
ವಿಮಳ: ನಿರ್ಮಲ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಶಯನ: ನಿದ್ರೆ; ಅಮರಪತಿ: ಇಂದ್ರ; ಅಮರ: ದೇವತೆ; ಸುತ: ಮಗ; ಪವಡಿಸು: ನಿದ್ರಿಸು; ಅನುಪಮ: ಉತ್ಕೃಷ್ಟವಾದುದು; ಕನಸು: ಸ್ವಪ್ನ; ವಿಳಾಸ: ಅಂದ, ಸೊಬಗು; ಕಂಡು: ನೋಡು; ಕಂದೆರೆದ: ಕಣ್ಣನ್ನು ಬಿಟ್ಟು; ಸಮರ: ಯುದ್ಧ; ವಿಜಯ: ಗೆಲುವು; ಕೃಪೆ: ದಯೆ; ಸಂಕ್ರಮಿಸು: ಸೇರು, ಕೂಡು; ಮುಂದಣ: ಮುಂದೆ; ಕಮಲನಾಭ: ವಿಷ್ಣು; ಕಂಡು: ನೋಡು; ಬಿನ್ನಹ: ಕೋರಿಕೆ; ನಗು: ಹರ್ಷ;

ಪದವಿಂಗಡಣೆ:
ವಿಮಳ +ದರ್ಭಾಂಕುರದ+ ಶಯನದೊಳ್
ಅಮರಪತಿ+ಸುತ +ಪವಡಿಸಿದನ್+ಅನು
ಪಮ +ವಿಳಾಸನು +ಕನಸ +ಕಂಡೆನ್+ಎನುತ್ತ +ಕಂದೆರೆದ
ಸಮರ+ವಿಜಯಕೆ +ಶಿವನ +ಕೃಪೆ +ಸಂ
ಕ್ರಮಿಸಿತ್+ಎನಗ್+ಎನುತಿರಲು +ಮುಂದಣ
ಕಮಲನಾಭನ +ಕಂಡು +ಬಿನ್ನಹ +ಮಾಡಿದನು +ನಗುತ

ಅಚ್ಚರಿ:
(೧) ಅರ್ಜುನನನ್ನು ಅಮರಪತಿಸುತ, ಕೃಷ್ಣನನ್ನು ಕಮಲನಾಭ ಎಂದು ಕರೆದಿರುವುದು

ಪದ್ಯ ೨: ಧರ್ಮಜನನಿಗೆ ಯಾವ ಚಿಂತೆ ಕಾಡಿತು?

ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿನ ಹದನು ತಮಗಿ
ನ್ನೊಂದಬುದವಜ್ಞಾತವುತ್ಕಟವಾಯ್ತುಲಾಯೆಂದ (ವಿರಾಟ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಪಾಂಡವರು ದ್ರೌಪದಿಯೊಡನೆ ಆಲದ ಮರದ ಕೆಳಗೆ ಬಳಲಿಕೆಯಿಮ್ದ ಸ್ವಲ್ಪಕಾಲ ವಿಶ್ರಮಿಸಿಕೊಂಡರು. ಬಳಿಕ ಯುಧಿಷ್ಠಿರನು ಚಿಂತಿಸಿ, ಈ ಹಿಂದೆ ಹನ್ನೆರಡು ವರ್ಷಗಳು ಕಳೆದವು. ಮುಂದೆ ಬರುವ ಯಾತನೆಯು ಅಜ್ಞಾತವಾಸ. ಇದು ಬಹು ಕಷ್ಟ ಇದನ್ನು ಹೇಗೆ ಕಳೆಬೇಕೆಂದು ಕೇಳಿದನು.

ಅರ್ಥ:
ಬಂದು: ಆಗಮಿಸು; ವಟಕುಜ: ಆಲದಮರ; ಅಡಿ: ಕೆಳಗೆ; ಅನಿಬರು: ಅಷ್ಟು ಜನ; ನಿಂದು: ನಿಲ್ಲು ದುರುಪದಿ: ದ್ರೌಪದಿ; ಸಹಿತ: ಜೊತೆ; ಬಳಲಿಕೆ: ಆಯಾಸ; ವಿಶ್ರಮ: ವಿರಾಮ; ಚಿಂತಿಸು: ಯೋಚಿಸು; ನಂದನ: ಮಗ; ಹಿಂದೆ: ನಡೆದ; ಅಬುದ: ವರ್ಷ; ಸವೆದು: ಕಳೆದು; ಮುಂದಣ: ಮುಂದಿನ; ಅನುವು: ರೀತಿ; ಹದ: ಸ್ಥಿತಿ; ಅಜ್ಞಾತ: ಯಾರಿಗೂ ತಿಳಿಯದ; ಉತ್ಕಟ: ಉಗ್ರತೆ, ಆಧಿಕ್ಯ;

ಪದವಿಂಗಡಣೆ:
ಬಂದು +ವಟಕುಜದ್+ಅಡಿಯಲ್+ಅನಿಬರು
ನಿಂದು +ದುರುಪದಿ+ ಸಹಿತ+ ಬಳಲಿಕೆ
ಯಿಂದ +ವಿಶ್ರಮಿಸಿದರು +ಚಿಂತಿಸಿ +ಧರ್ಮ+ನಂದನನು
ಹಿಂದೆ +ಹನ್ನೆರಡ್+ಅಬುದ +ಸವೆದವು
ಮುಂದಣನುವಿನ +ಹದನು +ತಮಗಿನ್
ಒಂದ್+ಅಬುದವ್+ಅಜ್ಞಾತವ್+ಉತ್ಕಟವಾಯ್ತಲಾಯೆಂದ

ಅಚ್ಚರಿ:
(೧) ಬಂದು, ನಿಂದು – ಪ್ರಾಸ ಪದ
(೨) ಹಿಂದೆ, ಮುಂದಣ – ವಿರುದ್ಧ ಪದ

ಪದ್ಯ ೧೮: ಸಹದೇವನ ಸ್ಥಿತಿ ಏನಾಯಿತು?

ಬಿಡು ಬಿಡೆಲೆ ಸಹದೇವಯೆನ್ನಯ
ನುಡಿಗೆ ಮಾರುತ್ತರವ ಕೊಡು ಮುಂ
ಗೆಡದೆ ಮುಂದಣ ನಿನ್ನವನ ಕಂಡಿಂತು ಮರುಳಹರೆ
ಮಡಿಯಲೆಳಸದಿರೆನಲು ಢಗೆಯವ
ಗಡಿಸೆ ಸೈರಿಸಲರಿಯದುತ್ತರ
ಗುಡದೆ ಜಲವೀಂಟಿದನು ದಾಟಿದುದಸು ಕಳೇಬರವ (ಅರಣ್ಯ ಪರ್ವ, ೨೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಯಕ್ಷನು, ಸಹದೇವ ನೀರನ್ನು ಕೆಳಕ್ಕೆ ಬಿಡು, ನನ್ನ ಮಾತಿಗೆ ಉತ್ತರ ಕೊಡು. ನಿನ್ನಣ್ಣನಿಗೆ ಆದ ಗತಿಯನ್ನು ಕಂಡೂ ಕಂಡೂ ಮುಂಗೆಡಬೇಡ. ಹುಚ್ಚನಂತೆ ಸಾಯಲು ಬಯಸಬೇಡ ಎಂದನು, ಸಹದೇವನಿಗೆ ಬಾಯಾರಿಕೆ ಹೆಚ್ಚಿ ಉತ್ತರವನ್ನು ಕೊಡದೆ ನೀರು ಕುಡಿದನು. ಅವನ ಪ್ರಾಣವು ದೇಹವನ್ನು ಬಿಟ್ಟುಹೋಯಿತು.

ಅರ್ಥ:
ಬಿಡು: ತೊರೆ; ನುಡಿ: ಮಾತು; ಮಾರುತ್ತರ: ಎದುರುಮಾತು, ಪ್ರತ್ಯುತ್ತರ; ಕೊಡು: ನೀಡು; ಮುಂಗೆಡು: ದಿಕ್ಕು ತೋಚದಂತಾಗು; ಮುಂದಣ: ಎದುರು; ಕಂಡು: ನೋಡು; ಮರುಳು: ಬುದ್ಧಿಭ್ರಮೆ; ಮಡಿ: ಸಾವು; ಎಳಸು: ಬಯಸು, ಅಪೇಕ್ಷಿಸು; ಢಗೆ: ಬಾಯಾರಿಕೆ; ಅವಗಡಿಸು: ಕಡೆಗಣಿಸು; ಸೈರಿಸು: ತಾಳು, ಸಹಿಸು; ಅರಿ: ತಿಳಿ; ಜಲ: ನೀರು; ಈಂಟು: ಪಾನಮಾಡು; ದಾಟು: ಹಾಯ್ದುಹೋಗು; ಕಳೇಬರ: ಮೃತದೇಹ;

ಪದವಿಂಗಡಣೆ:
ಬಿಡು +ಬಿಡೆಲೆ +ಸಹದೇವ+ಎನ್ನಯ
ನುಡಿಗೆ +ಮಾರುತ್ತರವ +ಕೊಡು +ಮುಂ
ಗೆಡದೆ +ಮುಂದಣ +ನಿನ್ನವನ +ಕಂಡಿಂತು +ಮರುಳಹರೆ
ಮಡಿಯಲ್+ಎಳಸದಿರ್+ಎನಲು +ಢಗೆ+ಅವ
ಗಡಿಸೆ +ಸೈರಿಸಲ್+ಅರಿಯದ್+ಉತ್ತರ
ಕುಡದೆ+ ಜಲವ್+ಈಂಟಿದನು +ದಾಟಿದುದ್+ಅಸು +ಕಳೇಬರವ

ಅಚ್ಚರಿ:
(೧) ಮಾರುತ್ತರ, ಮುಂಗೆಡದೆ, ಮುಂದಣ, ಮರುಳಹರೆ, ಮಡಿ – ಮ ಕಾರದ ಪದಗಳು