ವಿಮಳ ದರ್ಭಾಂಕುರದ ಶಯನದೊ
ಳಮರಪತಿಸುತ ಪವಡಿಸಿದನನು
ಪಮ ವಿಳಾಸನು ಕನಸ ಕಂಡೆನೆನುತ್ತ ಕಂದೆರೆದ
ಸಮರವಿಜಯಕೆ ಶಿವನ ಕೃಪೆ ಸಂ
ಕ್ರಮಿಸಿತೆನಗೆನುತಿರಲು ಮುಂದಣ
ಕಮಲನಾಭನ ಕಂಡು ಬಿನ್ನಹ ಮಾಡಿದನು ನಗುತ (ದ್ರೋಣ ಪರ್ವ, ೯ ಸಂಧಿ, ೭ ಪದ್ಯ)
ತಾತ್ಪರ್ಯ:
ಆಯುಧ ಶಾಲೆಯ ವೇದಿಕೆಯ ಮೇಲೆ ದರ್ಭೆಯ ಶಯ್ಯೆಯ ಮೇಲೆ ಮಲಗಿದ್ದ ಅರ್ಜುನನು ಕಣ್ಣು ತೆಗೆದು ಕನಸು ಬಿದ್ದಿತು, ಕನಸಿನಲ್ಲಿ ಶಿವನ ಕೃಪೆಯಾಯಿತು, ಎಂಉದ್ ಚಿಂತಿಸುತ್ತಾ ಕಣ್ತೆರೆದು ಮುಂದೆಯೇ ನಿಂತಿದ್ದ ಕೃಷ್ಣನಿಗೆ ಹೀಗೆಂದು ಹೇಳಿದನು.
ಅರ್ಥ:
ವಿಮಳ: ನಿರ್ಮಲ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಶಯನ: ನಿದ್ರೆ; ಅಮರಪತಿ: ಇಂದ್ರ; ಅಮರ: ದೇವತೆ; ಸುತ: ಮಗ; ಪವಡಿಸು: ನಿದ್ರಿಸು; ಅನುಪಮ: ಉತ್ಕೃಷ್ಟವಾದುದು; ಕನಸು: ಸ್ವಪ್ನ; ವಿಳಾಸ: ಅಂದ, ಸೊಬಗು; ಕಂಡು: ನೋಡು; ಕಂದೆರೆದ: ಕಣ್ಣನ್ನು ಬಿಟ್ಟು; ಸಮರ: ಯುದ್ಧ; ವಿಜಯ: ಗೆಲುವು; ಕೃಪೆ: ದಯೆ; ಸಂಕ್ರಮಿಸು: ಸೇರು, ಕೂಡು; ಮುಂದಣ: ಮುಂದೆ; ಕಮಲನಾಭ: ವಿಷ್ಣು; ಕಂಡು: ನೋಡು; ಬಿನ್ನಹ: ಕೋರಿಕೆ; ನಗು: ಹರ್ಷ;
ಪದವಿಂಗಡಣೆ:
ವಿಮಳ +ದರ್ಭಾಂಕುರದ+ ಶಯನದೊಳ್
ಅಮರಪತಿ+ಸುತ +ಪವಡಿಸಿದನ್+ಅನು
ಪಮ +ವಿಳಾಸನು +ಕನಸ +ಕಂಡೆನ್+ಎನುತ್ತ +ಕಂದೆರೆದ
ಸಮರ+ವಿಜಯಕೆ +ಶಿವನ +ಕೃಪೆ +ಸಂ
ಕ್ರಮಿಸಿತ್+ಎನಗ್+ಎನುತಿರಲು +ಮುಂದಣ
ಕಮಲನಾಭನ +ಕಂಡು +ಬಿನ್ನಹ +ಮಾಡಿದನು +ನಗುತ
ಅಚ್ಚರಿ:
(೧) ಅರ್ಜುನನನ್ನು ಅಮರಪತಿಸುತ, ಕೃಷ್ಣನನ್ನು ಕಮಲನಾಭ ಎಂದು ಕರೆದಿರುವುದು