ಪದ್ಯ ೮: ಭೀಷ್ಮರು ಯಾರನ್ನು ಎದುರಿಸಿದರು?

ಕೊಂಡುಬಹ ಬಲುನಾಯಕರ ಖತಿ
ಗೊಂಡು ದಡಿಯಲಿ ಹೊಯ್ಸಿ ಸೇನೆಯ
ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ
ಗಂಡುಗಲಿಯಭಿಮನ್ಯು ಸಾತ್ಯಕಿ
ಚಂಡಬಲ ಹೈಡೆಇಂಬರನು ಸಮ
ದಂಡಿಯಲಿ ಮೋಹರಿಸಿ ಸ್ಮರಕೆ ನಡೆದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ತನ್ನ ಮೇಲೆ ನುಗ್ಗಿದ ನಾಯಕರನ್ನು ಹಿಂದಕ್ಕೆ ದಬ್ಬಿ ಹೊಡೆದು ಸೇನೆಯು ಒಟ್ಟಾಗಿರುವಾಗಲೇ ರಾಜರನ್ನು ಮರ್ದಿಸಿ, ಅಭಿಮನ್ಯು, ಸಾತ್ಯಕಿ, ಘಟೋತ್ಕಚರನ್ನು ಸಮಯುದ್ಧದಲ್ಲಿ ಎದುರಿಸಿದನು.

ಅರ್ಥ:
ಕೊಂಡು: ತೆಗೆದು; ಬಹ: ತುಂಬ; ಬಲು: ಬಹಳ; ನಾಯಕ: ಒಡೆಯ; ಖತಿ: ಕೋಪ; ದಡಿ: ಕೋಲು, ಬಡಿಗೆ; ಹೊಯ್ಸು: ಹೊಡೆ; ಸೇನೆ: ಸೈನ್ಯ; ಹಿಂಡು: ಗುಂಪು; ಒಡೆ: ಸೀಳು; ಓಜೆ: ಶ್ರೇಣಿ, ಸಾಲು; ಹುರಿ:ನಾಶಪಡಿಸು; ಮಹೀಶ್ವರ: ರಾಜ; ಗಂಡುಗಲಿ: ಪರಾಕ್ರಮಿ; ಚಂಡಬಲ: ಪರಾಕ್ರಮಿ; ದಂಡಿ: ಶಕ್ತಿ, ಸಾಮರ್ಥ್ಯ; ಮೋಹರ: ಯುದ್ಧ; ಸಮರ: ಕಾಳಗ;

ಪದವಿಂಗಡಣೆ:
ಕೊಂಡುಬಹ+ ಬಲುನಾಯಕರ+ ಖತಿ
ಗೊಂಡು +ದಡಿಯಲಿ +ಹೊಯ್ಸಿ +ಸೇನೆಯ
ಹಿಂಡೊಡೆಯದ್+ಓಜೆಯಲಿ +ಹುರಿ+ಏರಿಸಿ+ ಮಹೀಶ್ವರರ
ಗಂಡುಗಲಿ+ಅಭಿಮನ್ಯು +ಸಾತ್ಯಕಿ
ಚಂಡಬಲ+ ಹೈಡಿಂಬರನು +ಸಮ
ದಂಡಿಯಲಿ +ಮೋಹರಿಸಿ+ ಸಮರಕೆ+ ನಡೆದನಾ+ ಭೀಷ್ಮ

ಅಚ್ಚರಿ:
(೧) ಗಂಡುಗಲಿ, ಚಂಡಬಲ – ಪರಾಕ್ರಮಿಗಳನ್ನು ವಿವರಿಸುವ ಪದ

ಪದ್ಯ ೪೩: ಕೌರವರ ಸೈನ್ಯವು ಹೇಗೆ ಹೊರಟಿತು?

ಬೀಳುಕೊಂಡುದು ರಜನಿ ಮರುದಿನ
ವಾಳು ಕುದುರೆಯ ನೆರಹಿ ಧರಣೀ
ಪಾಲ ಸುಮುಹೂರ್ತದಲಿ ಹೊಯ್ಸಿದನಂದು ಹೊರಗುಡಿಯ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳಕೋಟಿಗಳುರುಚತುರ್ಬಲ
ಮೇಳವಿಸಿ ನಡೆದುದು ಸಮಸ್ತ ಮಹಾಮಹೀಶ್ವರರು (ಭೀಷ್ಮ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅಂದಿನ ರಾತ್ರಿ ಕಳೆಯಿತು, ಮುಂಜಾನೆ ಆರುದ್ದದ ಕುದುರೆಯನ್ನೇರಿ ಕೌರವನು ಒಳ್ಳೆಯ ಸಮಯದಲ್ಲಿ ಸೈನ್ಯವನ್ನು ಸೇರಿಸಿ ಹೊರಬೀಡುಬಿಟ್ಟನು. ಆಗ ಲೆಕ್ಕವಿಲ್ಲದಷ್ಟು ಭೇರಿಗಳು ಮೊರೆದವು. ಎಲ್ಲಾ ರಾಜರು ಚತುರಂಗ ಸೈನ್ಯದೊಂದಿಗೆ ಹೊರಟರು.

ಅರ್ಥ:
ಬೀಳುಕೊಡು: ತೆರಳು; ರಜನಿ: ರಾತ್ರಿ; ಮರುದಿನ: ನಾಳೆ; ಆಳು: ಸುಮಾರು ಐದರಿಂದ ಆರಡಿ ಎತ್ತರ, ಆಳುದ್ದ; ಕುದುರೆ: ಅಶ್ವ; ನೆರಹು: ಒಟ್ಟುಗೂಡು; ಧರಣೀಪಾಲ: ರಾಜ; ಸುಮುಹೂರ್ತ: ಒಳ್ಳೆಯ ಕಾಲ; ಹೊಯ್ಸು: ಸಾರಿಸು, ಡಂಗುರ ಹೊಡೆಸು; ಹೊರ: ಆಚೆ; ಗುಡಿ: ನೆಲೆ; ಸೂಳೈಸು: ಧ್ವನಿ ಮಾಡು; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ಉರು: ಶ್ರೇಷ್ಠ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಮೇಳವಿಸು: ಸೇರು, ಜೊತೆಯಾಗು; ನಡೆ: ಚಲಿಸು; ಸಮಸ್ತ: ಎಲ್ಲಾ; ಮಹೀಶ್ವರ: ರಾಜ;

ಪದವಿಂಗಡಣೆ:
ಬೀಳುಕೊಂಡುದು+ ರಜನಿ +ಮರುದಿನವ್
ಆಳು +ಕುದುರೆಯ +ನೆರಹಿ+ ಧರಣೀ
ಪಾಲ+ ಸುಮುಹೂರ್ತದಲಿ+ ಹೊಯ್ಸಿದನ್+ಅಂದು +ಹೊರಗುಡಿಯ
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳ+ಕೋಟಿಗಳ್+ಉರು+ಚತುರ್ಬಲ
ಮೇಳವಿಸಿ +ನಡೆದುದು +ಸಮಸ್ತ +ಮಹಾ+ಮಹೀಶ್ವರರು

ಅಚ್ಚರಿ:
(೧) ರಾತ್ರಿಕಳೆಯಿತು ಎಂದು ಹೇಳಲು – ಬೀಳುಕೊಂಡುದು ರಜನಿ
(೨) ಧರಣೀಪಾಲ, ಮಹೀಶ್ವರ – ಸಮನಾರ್ಥಕ ಪದಗಳು

ಪದ್ಯ ೧೨: ಯಾಗದ ನಂತರ ಶ್ರೀಕೃಷ್ಣನು ಪಾಂಡವರನ್ನು ಹೇಗೆ ವಿಚಾರಿಸಿದನು?

ಕರೆಸಿದನು ಹರಿ ಪಾಂಡುಪುತ್ರರ
ನರಸಿ ಸಹಿತೇಕಾಂತಭವನ ದೊ
ಳುರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ತ್ಯಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡುಪದವೆಂದ (ಸಭಾ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲ್ಲಾ ರಾಜರು ತೆರಳಿದ ನಂತರ, ಶ್ರೀಕೃಷ್ಣನು ಪಾಂಡವರನ್ನು ಮತ್ತು ದ್ರೌಪದಿಯನ್ನು ಏಕಾಂತಭವನಕ್ಕೆ ಕರೆಸಿದನು. ಅವರು ಬಂದ ಮೇಲೆ ಪ್ರೀತಿಯಿಂದ ಮಾತುಗಳನ್ನಾಡಿ, ಒಳ್ಳೆಯ ಆಹಿತಿಯಿಂದ ದೇವತೆಗಳಿಗೆ ತೃಪ್ತಿಯನ್ನು ನೀಡಿದ ರಾಜಸೂಯ ಯಾಗವು ಸಂಪನ್ನವಾಯಿತೆ ಎಂದು ಕೇಳುತ್ತಾ, ನಿಮ್ಮ ತಂದೆ ಪಾಂಡುರಾಜನು ಈ ಯಾಗದ ಸಮಾಪ್ತಿಯಿಂದ ವೈಭವದಿಂದ ದೇವೇಂದ್ರನ ಆಸ್ಥಾನವನ್ನು ಸೇರಿದನೇ ಎಂದು ಕೇಳಿದನು.

ಅರ್ಥ:
ಕರೆಸು: ಬರೆಮಾಡು; ಹರಿ: ಕೃಷ್ಣ; ಪುತ್ರ: ಮಗ; ಅರಸಿ: ರಾಣಿ; ಸಹಿತ: ಜೊತೆ; ಏಕಾಂತ: ಒಂಟಿಯಾದ; ಭವನ: ಆಲಯ; ಉರುತರ: ಅತಿಶ್ರೇಷ್ಠ; ಪ್ರೇಮ: ಒಲವು; ರಸ: ಸಾರ; ಸಂಸಕ್ತ: ಆಸಕ್ತ; ವಚನ: ನುಡಿ, ಮಾತು; ಭರಿತ: ತುಂಬಿದ; ಅಧ್ವರ: ಯಾಗ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ತೃಪ್ತ: ಸಂತುಷ್ಟಿ; ಅಮರ: ದೇವತೆ; ಮಹೀಶ್ವರ: ರಾಜ; ವಿಭವ: ಸಿರಿ, ಸಂಪತ್ತು; ವಿಳಸಿತ: ಮನೋಹರವಾದ; ಪದ: ಸ್ಥಾನ;

ಪದವಿಂಗಡಣೆ:
ಕರೆಸಿದನು+ ಹರಿ+ ಪಾಂಡುಪುತ್ರರನ್
ಅರಸಿ +ಸಹಿತ+ಏಕಾಂತ+ಭವನ+ ದೊಳ್
ಉರುತರ+ ಪ್ರೇಮೈಕ +ರಸ+ ಸಂಸಿಕ್ತ +ವಚನದಲಿ
ಭರಿತವಾಯಿತೆ +ರಾಜಸೂಯ
ಅಧ್ವರ +ಸದ್+ಆಹುತಿ+ ತೃಪ್ತ್ಯಮಾಣ
ಅಮರ +ಮಹೀಶ್ವರ+ ವಿಭವ +ವಿಳಸಿತ+ ಪಾಂಡುಪದವೆಂದ

ಅಚ್ಚರಿ:
(೧) ಪ್ರೀತಿಯ ಭಾವ – ಉರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
(೨) ದ್ರೌಪದಿಯನ್ನು ಅರಸಿ ಎಂದು ಕರೆದಿರುವುದು

ಪದ್ಯ ೯: ರಾಜರನ್ನು ಧರ್ಮರಾಯ ಹೇಗೆ ಬೀಳ್ಕೊಟ್ಟನು?

ರಾಜವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜರಥ
ವಾಜಿ ವಿವಿಧಾಭರಣ ವಸನ ವಧೂಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ (ಸಭಾ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗಕ್ಕೆ ಬಂದಿದ್ದ ರಾಜರನ್ನೆಲ್ಲಾ ಅವರವರ ಪರಾಕ್ರಮ, ಐಶ್ವರ್ಯಕ್ಕೆ ಅನುಗುಣವಗಿ ಸರಿಯಾದ ರೀತಿಯಲ್ಲಿ ಆನೆ, ಕುದುರೆ, ರಥ, ಆಭರಣ, ವಸ್ತ್ರ, ಸ್ತ್ರೀಯರು, ಪರಿಮಳದ ವಸ್ತುಗಳನ್ನು ನೀಡಿ ಗೌರವಿಸಿ ಧರ್ಮರಾಜನು ತನ್ನ ತಮ್ಮಂದಿರೊಡನೆ ಅವರೆಲ್ಲರನ್ನು ಬೀಳ್ಕೊಟ್ಟನು. ಕೃಷ್ಣನು ಇಂದ್ರಪ್ರಸ್ಥದಲ್ಲೇ ಉಳಿದನು.

ಅರ್ಥ:
ರಾಜ: ಅರಸ; ವರ್ಗ: ಗುಂಪು; ನಿಜ: ಸತ್ಯ; ತೇಜ: ಕಾಂತಿ, ಶ್ರೇಷ್ಠತೆ; ಮಾನ: ಮರ್ಯಾದೆ, ಗೌರವ; ಉಚಿತ: ಸರಿಯಾದ; ಗಜ: ಆನೆ; ರಥ; ಬಂಡಿ; ವಾಜಿ: ಕುದುರೆ; ವಿವಿಧ: ಹಲವಾರು; ಆಭರಣ: ಒಡವೆ; ವಸನ: ಬಟ್ಟೆ; ವಧು: ಸ್ತ್ರೀ, ಹೆಣ್ಣು; ಕದಂಬ: ಪರಿಮಳ ವಸ್ತು; ಜಗತ್ಪತಿ: ಜಗತ್ತಿನ ಒಡೆಯ (ಕೃಷ್ಣ); ಉಳಿ: ತಂಗು; ಪಾರ್ಥಿವ: ರಾಜ; ಮನ್ನಿಸು: ಗೌರವಿಸು; ಅನುಜ: ತಮ್ಮ; ಕೂಡಿ: ಜೊತೆ; ಕಳುಹಿಸು: ಬೀಳ್ಕೊಡು; ಮಹೀಶ್ವರ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ರಾಜವರ್ಗವನ್+ಅವರವರ +ನಿಜ
ತೇಜ +ಮಾನ್ಯ+ಉಚಿತದ +ಗಜ+ರಥ
ವಾಜಿ +ವಿವಿಧ+ಆಭರಣ+ ವಸನ +ವಧೂ+ಕದಂಬದಲಿ
ಆ +ಜಗತ್ಪತಿ+ಉಳಿಯೆ +ಪಾರ್ಥಿವ
ರಾಜಿಯನು +ಮನ್ನಿಸಿ +ಯುಧಿಷ್ಠಿರ
ರಾಜನ್+ಅನುಜರು +ಕೂಡಿ +ಕಳುಹಿಸಿದನು +ಮಹೀಶ್ವರರ

ಅಚ್ಚರಿ:
(೧) ರಾಜ, ಪಾರ್ಥಿವ – ಸಮನಾರ್ಥಕ ಪದ
(೨) ರಾಜ – ೧, ೬ ಸಾಲಿನ ಮೊದಲ ಪದ
(೩) ವಾಜಿ, ರಾಜಿ – ಪ್ರಾಸ ಪದಗಳು

ಪದ್ಯ ೨೩: ಕರ್ಣನು ಸಂಧಿಯನ್ನರಿಯೆ ಎಂದು ಏಕೆ ಹೇಳಿದ

ಮಸೆದುದಿತ್ತಂಡಕೆ ಮತ್ಸರ
ವಸಮಸಂಗರರೀಗ ಸಂಧಿಯ
ನುಸಿರಿದೊಡೆ ಮನಗಾಣನೇ ಕೌರವ ಮಹೀಶ್ವರನು
ವಿಷಮನಹ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ಬೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ (ಉದ್ಯೋಗ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ನೀನು ಎರಡು ತಂಡಗಳಿಗೂ ಮತ್ಸರವನ್ನು ಮಸೆದು ಅಸಮಾನ ವೀರನು ಸಂಧಿಯನ್ನು ಪ್ರತಿಪಾದಿಸಿದರೆ ಕೌರವನು ಏನೆಂದು ಕೊಂಡಾನು? ಯುದ್ಧವೇ ಇಲ್ಲದ ವೀರನು ಮಂತ್ರಾಲೋಚನೆ ಮಾಡಬಾರದು; ಹಾಗೆ ಮಾಡಿದರೆ ಅದು ನನ್ನ ಪರಾಕ್ರಮಕ್ಕೆ ಮಂಕುಬಡಿದಂತೆ ಆದುದರಿಂದ ನಾನು ಸಂಧಿಯನ್ನು ಅರಿಯೆ ಎಂದು ಕರ್ಣನು ಹೇಳಿದನು.

ಅರ್ಥ:
ಮಸೆ:ಹರಿತವಾದುದು; ತಂಡ: ಗುಂಪು; ಮತ್ಸರ: ಹೊಟ್ಟೆಕಿಚ್ಚು; ಅಸಮ:ಅಸದೃಶವಾದ; ಸಂಗರ:ಯುದ್ಧ, ಕಾಳಗ; ಸಂಧಿ: ಸಂಯೋಗ; ಉಸಿರು: ಸದ್ದು ಮಾಡು; ಮನ: ಮನಸ್ಸು; ಮನಗಾಣು: ತಿಳಿದುಕೊ; ಮಹೀಶ್ವರ: ರಾಜ; ವಿಷಮ: ಕಷ್ಟಕರವಾದುದು; ಕಟ್ಟಾಳು: ಶೂರ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಎಸಗು: ಕೆಲಸ, ಉದ್ಯೋಗ; ಬೀರ: ವೀರ; ಮಸುಳ:ಕಾಂತಿಹೀನವಾಗು; ಮುರವೈರಿ: ಕೃಷ್ಣ; ಅರಿ: ತಿಳಿ;

ಪದವಿಂಗಡನೆ:
ಮಸೆದುದ್+ಇತ್+ತಂಡಕೆ +ಮತ್ಸರವ್
ಅಸಮ+ಸಂಗರರ್+ಈಗ +ಸಂಧಿಯನ್
ಉಸಿರಿದೊಡೆ+ ಮನಗಾಣನೇ +ಕೌರವ +ಮಹೀಶ್ವರನು
ವಿಷಮನಹ +ಕಟ್ಟಾಳು +ಮಂತ್ರವನ್
ಎಸಗಲಾಗದು +ತನ್ನ +ಬೀರಕೆ
ಮಸುಳಹುದು+ ಮುರವೈರಿ+ ಸಂಧಿಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಮಸೆದು, ಮತ್ಸರ, ಮಹೀಶ್ವರ, ಮಂತ್ರ, ಮಸುಳ, ಮುರವೈರಿ, ಮನಗಾಣು – ಮ ಕಾರದ ಪದಗಳ ಬಳಕೆ

ಪದ್ಯ ೧೨: ಧರ್ಮರಾಯನು ಭೀಷ್ಮರಲ್ಲಿ ಏನು ನಿವೇದಿಸಿದನು?

ಕರೆಸಿ ಭೀಷ್ಮಂಗೆರಗಿ ನುಡಿದನು
ಧರಣಿಪತಿ ಬಾಲಕರು ನಾವ
ಧ್ವರವಿದಗ್ಗದ ರಾಜಸೂಯ ಮಹಾಮಹೀಶ್ವರರು
ನೆರೆದುದಖಿಳದ್ವೀಪ ಜನವಾ
ದರಿಸಲರಿಯೆನು ಹೆಚ್ಚು ಕುಂದಿನ
ಕುರುಡ ನೀಕ್ಷಿಸಲಾಗದೆಂದನು ಮುಗಿದು ಕರಯುಗವ (ಸಭಾ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧರ್ಮರಾಯನು ಭೀಷ್ಮನನ್ನು ಬರೆಮಾಡಿ, ನಮಸ್ಕರಿಸಿ, “ನಾವು ಬಾಲಕರು, ಇದು ಮಹಾ ರಾಜಸೂಯ ಯಾಗ, ಇಲ್ಲಿ ಮಹಾ ಕ್ಷತ್ರಿಯರು ಸೇರಿದ್ದಾರೆ, ಸಪ್ತದ್ವೀಪಗಳ ಜನರೂ ಸೇರಿದ್ದಾರೆ, ಅವರೆಲ್ಲರನ್ನು ಉಪಚರಿಸುವುದು ನನಗೆ ಮೀರಿದ ಕೆಲಸ. ನಾವು ಮಾಡುವುದರಲ್ಲಿ ಹೆಚ್ಚಿನ ಲೋಪ, ಅತಿರಿಕ್ತಗಳನ್ನು ಕಾಣಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿ ಕೈಮುಗಿದನು.

ಅರ್ಥ:
ಕರೆಸು: ಬರೆಮಾಡು; ಎರಗು: ನಮಸ್ಕರಿಸು; ನುಡಿ: ಮಾತಾಡು; ಧರಣಿ: ಭೂಮಿ; ಧರಣಿಪತಿ: ರಾಜ; ಬಾಲಕರು: ಮಕ್ಕಳು; ಅಧ್ವರ: ಯಾಗ; ಅಗ್ಗ: ಶ್ರೇಷ್ಠ; ಮಹಾ: ಶ್ರೇಷ್ಠ; ಮಹೀಶ್ವರ: ರಾಜ; ನೆರೆದು: ಸೇರಿದ; ಅಖಿಳ: ಎಲ್ಲಾ; ದ್ವೀಪ: ಕುರುವ, ದೇಶ; ಆದರಿಸು: ಗೌರವಿಸು, ಉಪಚರಿಸು; ಅರಿ: ತಿಳಿ; ಕುಂದು: ಲೋಪ; ಕುರುಡ: ತಿಳುವಳಿಕೆ ಇಲ್ಲದವ; ಈಕ್ಷಿಸು: ನೋಡು; ಕರ: ಹಸ್ತ;

ಪದವಿಂಗಡಣೆ:
ಕರೆಸಿ +ಭೀಷ್ಮಂಗ್+ಎರಗಿ+ ನುಡಿದನು
ಧರಣಿಪತಿ+ ಬಾಲಕರು+ ನಾವ್
ಅಧ್ವರವಿದ್+ಅಗ್ಗದ+ ರಾಜಸೂಯ +ಮಹಾಮಹೀಶ್ವರರು
ನೆರೆದುದ್+ಅಖಿಳದ್ವೀಪ+ ಜನವ್
ಆದರಿಸಲ್+ಅರಿಯೆನು +ಹೆಚ್ಚು+ ಕುಂದಿನ
ಕುರುಡನ್+ಈಕ್ಷಿಸಲ್+ಆಗದ್+ಎಂದನು +ಮುಗಿದು +ಕರಯುಗವ

ಅಚ್ಚರಿ:
(೧) ಮಹೀಶ್ವರ, ಧರಣಿಪತಿ – ಸಮನಾರ್ಥಕ ಪದ
(೨) ಕರೆಸಿ, ಕರಯುಗವ – ಪದ್ಯದ ಮೊದಲನೆ ಮತ್ತು ಕೊನೆ ಪದ “ಕರ” ಅಕ್ಷರಗಳಿಂದ ಪ್ರಾರಂಭ

ಪದ್ಯ ೯೬: ರಾಜಸೂಯ ಯಾಗದ ಮಹತ್ವವೇನು?

ಆ ಮಹಾಕ್ರತುವರವ ನೀ ಮಾ
ಡಾ ಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೯೬ ಪದ್ಯ)

ತಾತ್ಪರ್ಯ:
ನಾರದರು ಯುಧಿಷ್ಠಿರನಿಗೆ ರಾಜಸೂಯ ಯಾಗವನ್ನು ಮಾಡಲು ಪ್ರೇರೇಪಿಸುತ್ತಾರೆ. ರಾಜನೆ, ನೀನು ಶ್ರೇಷ್ಠವಾದ ಈ ರಾಜಸೂಯ ಮಹಾಯಾಗವನ್ನು ಮಾಡಿದರೆ, ನಿನ್ನ ತಂದೆಯು ಇಂದ್ರನ ಆಸ್ಥಾನದಲ್ಲಿ ಮಹಾಸುಕೃತಿಗಳಾದ ರಾಜರ ಪಂಕ್ತಿಯಲ್ಲಿರುತ್ತಾರೆ, ಚಂದ್ರವಂಶದ ರಾಜಕುಮಾರರಲ್ಲಿ ಮಹಾಶಕ್ತರಾದ ನೀವು ಇರಬೇಕಾದರೆ ನಿಮ್ಮ ತಂದೆ ಏನುತಾನೆ ಅಸಾಧ್ಯ” ಎಂದು ನಾರದರು ನುಡಿದರು.

ಅರ್ಥ:
ಕ್ರತು: ಯಜ್ಞ; ವರ: ಶ್ರೇಷ್ಠ; ನಿರಾಮಯ: ಮುಕ್ತನಾದ,ಪರಿಶುದ್ಧವಾದ; ಅಯ್ಯ: ತಂದೆ; ತೇಜ: ಕಾಂತಿ; ಸೋಮ: ಚಂದ್ರ; ವಂಶ:ಕುಲ; ರಾಯ: ರಾಜ; ಉದ್ದಾಮ: ಶ್ರೇಷ್ಠವಾದ; ಸ್ತೋಮ: ಗುಂಪು, ಸಮೂಹ; ಕುಮಾರ: ಮಕ್ಕಳು; ಮುನಿಪ: ಋಷಿ; ಮಹೀಶ್ವರ: ರಾಜ; ಬಲುಗೈ: ಪರಾಕ್ರಮ;

ಪದವಿಂಗಡಣೆ:
ಆ +ಮಹಾ+ಕ್ರತುವರವ +ನೀ +ಮಾಡ್
ಆ +ಮಹೀಶ್ವರ+ ಪಂಕ್ತಿಯಲ್ಲಿ+ ನಿ
ರಾಮಯನು +ನಿಮ್ಮಯ್ಯನ್+ಇಹನು +ಸತೇಜದಲಿ +ಬಳಿಕ
ಸೋಮವಂಶದ+ ರಾಯರೊಳಗ್+
ಉದ್ದಾಮರಹ +ಬಲುಗೈ +ಕುಮಾರ
ಸ್ತೋಮ +ನೀವಿರಲ್+ಅಯ್ಯಗೇನ್+ಅರಿದೆಂದನಾ +ಮುನಿಪ

ಅಚ್ಚರಿ:
(೧) ೧, ೨ ಸಾಲಿನ ಮೊದಲ ಪದ “ಆ” ಕಾರದಿಂದ ಪ್ರಾರಂಭ
(೨) ಮಹೀಶ್ವರ, ರಾಯ – ಸಮನಾರ್ಥಕ ಪದ