ಎದ್ದು ವಾಘೆಯೊಳೆತ್ತಿ ಭೀಮನ
ಗುದ್ದಿದನು ಲೇಸಾಗಿ ಮಲ್ಲನ
ನದ್ದಿದನು ನೆಲಕಿಕ್ಕಿ ಭೀಮನು ಬಾಹುಸತ್ವದಲಿ
ತಿದ್ದಿತಾತನ ದೆಸೆಯೆನಲು ಸಿಡಿ
ದೆದ್ದು ಮಲ್ಲನು ಭೀಮನನು ನೆಲ
ಕುದ್ದಿ ಮಂಡಿಯಕೊಂಡು ಹೋರಿದನಳುಕೆ ಭೂಪಾಲ (ವಿರಾಟ ಪರ್ವ, ೪ ಸಂಧಿ, ೫೩ ಪದ್ಯ)
ತಾತ್ಪರ್ಯ:
ಕೆಳಗೆ ಬಿದ್ದ ಭೀಮನ ಮುಖವನ್ನು ಹಿಡಿದು ಜೀಮೂತನು ಬೆನ್ನಿನ ಮೇಲೆ ಗುದ್ದಿದನು. ಭೀಮನು ತೋಳ ಸತ್ವದಿಂದ ಜೀಮೂತನನ್ನು ನೆಲಕ್ಕೆ ಕೆಡವಿ ಒತ್ತಿದನು. ಇನ್ನೇನು ಜೀಮೂತನು ಹೋದನೆಂದು ತಿಳಿಯಲು, ಅವನು ಸಿಡಿದೆದ್ದು ಭೀಮನನ್ನು ನೆಲಕ್ಕೆ ಕೆಡವಿ ಮಂಡಿಯೂರಿ ಹೋರಾಡಿದನು. ಇದನ್ನು ಕಂಡು ಧರ್ಮಜನು ಅಳುಕಿದನು.
ಅರ್ಥ:
ಎದ್ದು: ಮೇಲೇಳು; ವಾಘೆ: ಲಗಾಮು; ಗುದ್ದು: ಅಪ್ಪಳಿಸು; ಲೇಸು: ಒಳಿತು; ಮಲ್ಲ: ಜಟ್ಟಿ; ಅದ್ದು: ಮುಳುಗಿಸು; ನೆಲ: ಭೂಮಿ; ಇಕ್ಕು: ಇರಿಸು, ಇಡು; ಬಾಹು: ಭುಜ; ಸತ್ವ: ಸಾರ; ತಿದ್ದು: ಸರಿಪಡಿಸು; ದೆಸೆ: ದಿಕ್ಕು; ಸಿಡಿದೆದ್ದು: ಜೋರಾಗಿ ಮೇಲೇಳು; ಉದ್ದು:ಒರಸು, ಅಳಿಸು; ಮಂಡಿ: ಮೊಳಕಾಲು, ಜಾನು; ಹೋರು: ಸೆಣಸು, ಕಾದಾಡು; ಅಳುಕು: ಹೆದರು; ಭೂಪಾಲ: ರಾಜ;
ಪದವಿಂಗಡಣೆ:
ಎದ್ದು +ವಾಘೆಯೊಳ್+ಎತ್ತಿ +ಭೀಮನ
ಗುದ್ದಿದನು +ಲೇಸಾಗಿ +ಮಲ್ಲನನ್
ಅದ್ದಿದನು +ನೆಲಕ್+ಇಕ್ಕಿ+ ಭೀಮನು +ಬಾಹು+ಸತ್ವದಲಿ
ತಿದ್ದಿತ್+ಆತನ+ ದೆಸೆ+ಎನಲು +ಸಿಡಿದ್
ಎದ್ದು +ಮಲ್ಲನು +ಭೀಮನನು +ನೆಲಕ್
ಉದ್ದಿ +ಮಂಡಿಯಕೊಂಡು +ಹೋರಿದನ್+ಅಳುಕೆ+ ಭೂಪಾಲ
ಅಚ್ಚರಿ:
(೧) ಎದ್ದು, ಗುದ್ದು, ಅದ್ದು,ಉದ್ದು, ತಿದ್ದು, ಇಕ್ಕು – ಯುದ್ಧವನ್ನು ವಿವರಿಸಲು ಬಳಸಿದ ಪದಗಳು