ಪದ್ಯ ೩೦: ದ್ರೋಣನು ತನ್ನ ಪರಿಚಯವನ್ನು ದ್ವಾರಪಾಲಕನಿಗೆ ಹೇಗೆ ಮಾಡಿದನು?

ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿದಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ (ಆದಿ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೋಣನು ದ್ರುಪದರಾಜನ ಅರಮನೆಗೆ ಬಮ್ದು, ಬಾಗಿಲು ಕಾಯುತ್ತಿದ್ದವನಿಗೆ ಎಲವೋ, ನಾವು ನಿಮ್ಮ ರಾಜನಿಗೆ ಪೂರ್ವ ಕಾಲದ ಸ್ನೇಹಿತರು ಅವನ ಆಪ್ತ ಮಿತ್ರರು. ದ್ರೋಣನೆನ್ನುವುದು ನನ್ನ ಹೆಸರು, ನಿಮ್ಮ ರಾಜನಿಗೆ ಹೇಳು ಎನ್ನಲು, ದೂತನು ಬಂದು ದ್ರುಪದನಿಗೆ ದ್ರೋಣನ ಮಾತುಗಳನ್ನು ತಿಳಿಸಿದನು.

ಅರ್ಥ:
ಬಂದು: ಆಗಮಿಸು; ರಾಯ: ರಾಜ; ಮಂದಿರ: ಆಲಯ; ಬಾಗಿಲು: ಕದ; ಅರಸ: ರಾಜ; ಪೂರ್ವ: ಹಿಂದೆ; ಮಿತ್ರ: ಸ್ನೇಹಿತ; ಮುನಿ: ಋಷಿ; ಅಭಿದಾನ: ಹೆಸರು; ಹೇಳು: ತಿಳಿಸು; ಕಳುಹು: ತೆರಳು; ಬಿನ್ನಹ: ಕೋರಿಕೆ; ಹದ: ಸ್ಥಿತಿ;

ಪದವಿಂಗಡಣೆ:
ಬಂದನ್+ಈತನು +ದ್ರುಪದ +ರಾಯನ
ಮಂದಿರಕೆ+ಆ+ ಬಾಗಿಲವನೊಡನ್
ಎಂದನ್+ಎಲವೋ +ನಾವು +ನಿಮ್ಮರಸಂಗೆ +ಪೂರ್ವದಲಿ
ಸಂದ +ಮಿತ್ರರು+ ದ್ರೋಣ+ಮುನಿಪತಿ
ಎಂದು +ನಮ್ಮಭಿದಾನ +ನೀ +ಹೇ
ಳೆಂದು +ಕಳುಹಲು+ ಬಂದು+ ಬಿನ್ನಹ +ಮಾಡಿದನು +ಹದನ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ