ರಾಯ ಕೇಳೈ ನಿಮ್ಮ ಪಾಂಡವ
ರಾಯ ಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ
ರಾಯನತಿ ಭಕ್ತಿಯಲಿ ವೈಶಂ
ಪಾಯನಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ (ಆದಿ ಪರ್ವ, ೨ ಸಂಧಿ, ೮ ಪದ್ಯ)
ತಾತ್ಪರ್ಯ:
ರಾಜ, ನಿಮ್ಮ ಪೂರ್ವಜರಾದ ಪಾಂಡವರ ಚರಿತ್ರೆಯನ್ನು ವೈಶಂಪಾಯನನಿಮ್ದ ಕೇಳು, ಎಂದು ಹೇಳಿ ಅವನಿಗೆ ಮಹಾಭಾರತ ಗ್ರಮ್ಥವನ್ನು ಕೊಟ್ಟನು. ಆಗ ಜನಮೇಜಯನು ಅತಿ ಭಕ್ತಿಯಿಂದ ವೈಶಂಪಾಯನನಿಗೆ ನಮಸ್ಕರಿಸಿ ಅವನಿಂದ ತನ್ನ ಅಭಿಪ್ರಾಯವನ್ನು ಕೇಳಿದನು. ಈ ಕಥೆಯನ್ನೇ ಋಷಿಶ್ರೇಷ್ಠರಾದ ನೀವೂ ಕೇಳಿರಿ ಎಂದು ಹೇಳಿದನು.
ಅರ್ಥ:
ರಾಯ: ರಾಜ; ಕೇಳು: ಆಲಿಸು; ಚರಿತ: ಕಥೆ, ಹಿಂದೆ ನಡೆದುದು; ಬೆಸಸು: ಹೇಳು, ಆಜ್ಞಾಪಿಸು; ಬಳಿಕ: ನಂತರ; ಪುಸ್ತಕ: ಗ್ರಂಥ, ಹೊತ್ತಿಗೆ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ವಂದಿಸು: ನಮಸ್ಕರಿಸು; ಅಭಿಪ್ರಾಯ: ವಿಚಾರ; ಕೇಳು: ಆಲಿಸು; ಚಿತ್ತೈಸು: ಗಮನವಿಟ್ಟು ಕೇಲು; ಮುನಿ: ಋಷಿ; ನಿಕರ: ಗುಂಪು;
ಪದವಿಂಗಡಣೆ:
ರಾಯ +ಕೇಳೈ +ನಿಮ್ಮ +ಪಾಂಡವ
ರಾಯ +ಚರಿತವನೆಂದು+ ವೈಶಂ
ಪಾಯನಿಗೆ +ಬೆಸಸಿದನು +ಕೊಟ್ಟನು +ಬಳಿಕ +ಪುಸ್ತಕವ
ರಾಯನತಿ +ಭಕ್ತಿಯಲಿ +ವೈಶಂ
ಪಾಯನಗೆ +ವಂದಿಸಿ +ನಿಜಾಭಿ
ಪ್ರಾಯವನು +ಕೇಳಿದನು +ಚಿತ್ತೈಸುವುದು +ಮುನಿನಿಕರ
ಅಚ್ಚರಿ:
(೧) ರಾಯ, ಪ್ರಾಯ – ಪದಗಳ ಬಳಕೆ
(೨) ವೈಶಂಪಾಯ – ೨, ೪ ಸಾಲಿನ ಕೊನೆಯ ಪದ