ಪದ್ಯ ೩೭: ಶಲ್ಯ ಧರ್ಮಜರ ಬಾಣ ಪ್ರಯೋಗ ಹೇಗಿತ್ತು?

ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ (ಶಲ್ಯ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಬಾಣಗಳನ್ನು ಶಲ್ಯನು ಕತ್ತರಿಸಿ, ಅವನ ಮೇಲೆ ಬಾಣಗಳನ್ನು ಬಿಟ್ಟನು. ಆ ಬಾಣಗಳ ಗಾಳಿಗೆ ಪರ್ವತವೂ ಹಿಂದಕ್ಕೆ ಸರಿಯಬೇಕೆನ್ನುವಷ್ಟು ಶಕ್ತಿಯಿತ್ತು. ಅವರಿಬ್ಬರ ಅಬ್ಬರದ ಬಾಣ ಪ್ರತಿಬಾಣಗಳು ಒಂದನ್ನೊಂದು ಕತ್ತರಿಸಿ ಹಾಕಿದವು. ಹಿಂದೆ ಮತ್ತೆ ಬಾಣಗಳು ಅದಕ್ಕೆದುರಾಗಿ ಬೇರೆಯ ಬಾಣಗಳು ಬಿಡುವುದನ್ನು ಕಂಡ ಎರಡು ಕಡೆಯ ಸೈನಿಕರು ಇಬ್ಬರನ್ನು ಮೆಚ್ಚಿದರು.

ಅರ್ಥ:
ಧರಣಿಪತಿ: ರಾಜ; ಅಂಬು: ಬಾಣ; ಎಡೆ: ಸುಲಿ, ತೆಗೆ; ತರಿ: ಕಡಿ, ಕತ್ತರಿಸು; ತುಳುಕು: ಹೊರಸೂಸುವಿಕೆ; ಉಬ್ಬು: ಹಿಗ್ಗು; ಗರಿ: ಬಾಣದ ಹಿಂಭಾಗ; ಗಾಳಿ: ವಯು; ದಾಳಿ: ಆಕ್ರಮಣ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ್ವತ: ಬೆಟ್ಟ; ಮೊರೆ: ಗುಡುಗು,ಝೇಂಕರಿಸು; ಕಣೆ: ಬಾಣ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಕತ್ತರಿಸು: ಚೂರು ಮಾಡು; ಬಳಿ: ಹತ್ತಿರ; ಪಡಿಸರಳ: ಸಮಾನವಾದುದು ಬಾಣ; ತೂಳು: ಆವೇಶ, ಹಿಂಬಾಲಿಸು; ಎಚ್ಚು: ಬಾಣ ಪ್ರಯೋಗ ಮಾಡು; ಮೆಚ್ಚು: ಪ್ರಶಂಶಿಸು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಧರಣಿಪತಿ+ಅಂಬುಗಳನ್+ಎಡೆಯಲಿ
ತರಿದು +ತುಳುಕಿದನ್+ಅಂಬಿನ್+ಉಬ್ಬಿನ
ಗರಿಯ +ಗಾಳಿಯ +ದಾಳಿ +ಪೈಸರಿಸಿದುದು +ಪರ್ವತವ
ಮೊರೆವ +ಕಣೆ +ಮಾರ್ಗಣೆಗಳನು+ ಕ
ತ್ತರಿಸಿದವು +ಬಳಿ+ಅಂಬುಗಳು+ ಪಡಿ
ಸರಳ +ತೂಳಿದಡ್+ಎಚ್ಚರ್+ಎಚ್ಚರು +ಮೆಚ್ಚಲ್+ಉಭಯಬಲ

ಅಚ್ಚರಿ:
(೧) ಎಚ್ಚರೆಚ್ಚರು ಮೆಚ್ಚಲುಭಯಬಲ – ಚ್ಚ ಕಾರದ ಪದಗಳ ಬಳಕೆ
(೨) ರೂಪಕದ ಪ್ರಯೋಗ – ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ

ಪದ್ಯ ೪೭: ಕರ್ಣನೇಕೆ ದುಃಖಿಸಿದನು?

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೆಡಗಿದೆವು ದೈವದಲಿ ಕಲಹವನೆಂದನಾ ಕರ್ಣ (ದ್ರೋಣ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಆರ್ಭಟಿಸುವ ಸಮುದ್ರದ ಬೆಟ್ಟದಮ್ತಹ ಅಲೆಗಳೂ, ದ್ರೋಣನು ರಚಿಸಿದ್ದ ವ್ಯೂಹ ಪರ್ವತದ ಮುಮ್ದೆ ಅಲ್ಲ, ದ್ರೋಣನು ರಚಿಸಿದ್ದ ವ್ಯೂಹ ಪರ್ವತವನ್ನು ಸಹಸ್ರಯುಗಗಳಾದರೂ ಒಡೆಯಲಾಗುತ್ತಿತ್ತೇ? ಕಟ್ಟೆ ಒಡೆದು ಹೋಯಿತು, ಸೈಂಧವನ ತಲೆ ದೇಹವನ್ನು ಬಿಟ್ಟು ಹೋಯಿತು ಅಯ್ಯೋ ನಾವು ದೈವದೊಡನೆ ಕಲಹಕ್ಕಿಳಿದೆವು ಎಂದು ಕರ್ಣನು ದುಃಖಿಸಿದನು.

ಅರ್ಥ:
ಕಡಲು: ಸಾಗರ; ಮೊರಹು: ಬಾಗು, ಕೋಪ; ಲಹರಿ: ಅಲೆ; ಲಘು: ಕ್ಷುಲ್ಲಕವಾದುದು; ಪಡೆ: ಸೈನ್ಯ; ಒಡೆ: ಚೂರಾಗು; ಯುಗ: ಕಾಲದ ಪ್ರಮಾಣ; ಸಹಸ್ರ: ಸಾವಿರ; ವ್ಯೂಹ: ಗುಂಪು, ಸೈನ್ಯ; ಪರ್ವತ: ಬೆಟ್ಟ; ಒಡ್ಡು: ಅಡ್ಡ ಗಟ್ಟೆ; ಒಡಲು: ದೇಹ; ನೀಗು: ನಿವಾರಿಸಿಕೊಳ್ಳು; ತಲೆ: ಶಿರ; ಅಕಟ: ಅಯ್ಯೋ; ದೈವ: ಭಗವಂತ; ಕಲಹ: ಯುದ್ಧ;

ಪದವಿಂಗಡಣೆ:
ಕಡಲ +ಮೊರಹಿನ +ಲಹರಿ +ಲಘುವೀ
ಪಡೆಯನ್+ಒಡೆಯಲು +ಯುಗ+ಸಹಸ್ರದೊಳ್
ಒಡೆಯಬಹುದೇ +ದ್ರೋಣ +ರಚಿಸಿದ +ವ್ಯೂಹ +ಪರ್ವತವ
ಒಡೆದು +ಹೋಯಿತ್+ಒಡ್ಡು +ಸೈಂಧವನ್
ಒಡಲು +ನೀಗಿತು +ತಲೆಯನ್+ಅಕಟಾ
ತೆಡಗಿದೆವು +ದೈವದಲಿ +ಕಲಹವನೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಮೊರಹಿನ ಲಹರಿ ಲಘುವೀಪಡೆಯನೊಡೆಯಲು
(೨) ದ್ರೋಣನ ವ್ಯೂಹದ ಶಕ್ತಿ – ಯುಗಸಹಸ್ರದೊಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ

ಪದ್ಯ ೬: ಶಿವನು ಅರ್ಜುನನನ್ನು ಎಲ್ಲಿಗೆ ಕರೆತಂದನು?

ಶಿವನ ಕರುಣಾಲಾಭ ಪುಣ್ಯ
ಪ್ರವರ ಪಾರ್ಥನ ಮುನ್ನಿನಂದದ
ಲವನಿಗಿಳುಹಿದ ನಿಖಿಳದಿವ್ಯಾಯುಧದ ವೇದಿಕೆಗೆ
ಸವೆದುದಿರುಳಿಂದೂಪಲಂಗಳ
ನಿವಹ ಬಲಿದುದು ಚಕ್ರವಾಕದ
ತವಕ ತಗ್ಗಿತು ತರಣಿಯಡರಿದನುದಯಪರ್ವತವ (ದ್ರೋಣ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶಿವನು ಕರುಣೆಯಿಂದ ಅರ್ಜುನನನ್ನು ನೋಡಿ ಅನುಗ್ರಹಿಸಲು ಅವನನ್ನು ಮೊದಲಿನಂತೆ ಭೂಮಿಗೆ ಕರೆತಂದು ಆಯುಧ ಶಾಲೆಯ ವೇದಿಕೆಗಿಳಿಸಿದನು. ಚಂದ್ರಕಾಂತ ಶಿಲೆಗಳು ಗಟ್ಟಿಯಾದವು. ಚಕ್ರವಾಕಗಳ ತವಕ ಕಮ್ಮಿಯಾಯಿತು. ಸೂರ್ಯನು ಉದಯ ಪರ್ವತವನ್ನೇರಿದನು.

ಅರ್ಥ:
ಶಿವ: ಶಂಕರ; ಕರುಣೆ: ದಯೆ; ಪುಣ್ಯ: ಒಳ್ಳೆಯ ಕಾರ್ಯ; ಪ್ರವರ: ಪ್ರಧಾನ ವ್ಯಕ್ತಿ; ಪಾರ್ಥ: ಅರ್ಜುನ; ಮುನ್ನ: ಮೊದಲು; ಅವನಿ: ಭೂಮಿ; ಇಳುಹು: ಕೆಳಕ್ಕೆ ಬಂದು; ನಿಖಿಳ: ಎಲ್ಲಾ; ದಿವ್ಯ: ಶ್ರೇಷ್ಠ; ಆಯುಧ: ಶಸ್ತ್ರ; ವೇದಿಕೆ: ಕಟ್ಟೆ, ಜಗಲಿ; ಸವೆ: ನಿರ್ಮಿಸು, ಸಜ್ಜುಮಾಡು; ಇರುಳು: ರಾತ್ರಿ; ನಿವಹ: ಗುಂಪು; ಬಲಿ: ಗಟ್ಟಿಯಾಗು; ಚಕ್ರವಾಕ: ಕೋಕ ಪಕ್ಷಿ; ತವಕ: ಬಯಕೆ, ಆತುರ; ತಗ್ಗು: ಕಡಿಮೆಯಾಗು; ತರಣಿ: ಸೂರ್ಯ; ಅಡರು: ಮೇಲಕ್ಕೆ ಹತ್ತು; ಉದಯ: ಹುಟ್ಟು; ಪರ್ವತ: ಬೆಟ್ಟ;

ಪದವಿಂಗಡಣೆ:
ಶಿವನ +ಕರುಣಾಲಾಭ +ಪುಣ್ಯ
ಪ್ರವರ +ಪಾರ್ಥನ +ಮುನ್ನಿನಂದದಲ್
ಅವನಿಗ್+ಇಳುಹಿದ +ನಿಖಿಳ+ದಿವ್ಯ+ಆಯುಧದ +ವೇದಿಕೆಗೆ
ಸವೆದುದ್+ಇರುಳ್+ಇಂದೂಪಲಂಗಳ
ನಿವಹ +ಬಲಿದುದು +ಚಕ್ರವಾಕದ
ತವಕ+ ತಗ್ಗಿತು +ತರಣಿ+ಅಡರಿದನ್+ಉದಯ+ಪರ್ವತವ

ಅಚ್ಚರಿ:
(೧) ಸೂರ್ಯನು ಹುಟ್ಟಿದನು ಎಂದು ಹೇಳುವ ಪರಿ – ತರಣಿಯಡರಿದನುದಯಪರ್ವತವ

ಪದ್ಯ ೧೦೫: ದ್ರೌಪದಿಯು ಭೀಮನನ್ನು ಹೇಗೆ ಹೊಗಳಿದಳು?

ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋನಮೋಯೆನುತ
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಲಯಕೆ
ಮುಗುದೆ ಬಂದಳು ಸೂರ್ಯನಡರಿದನುದಯಪರ್ವತವ (ವಿರಾಟ ಪರ್ವ, ೩ ಸಂಧಿ, ೧೦೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಮುಗುಳ್ನಗುತ್ತಾ ಕಡೆಗಣ್ಣಿನ ನೋಟದಿಂದ ಭೀಮನನ್ನು ನೋಡುತ್ತಾ ಗಂಧರ್ವರೊಡೆಯನಿಗೆ ನಾವು ಕೈಮುಗಿದೆವು. ನಮೋ ನಮೋ ಎಂದಳು. ಅವಳ ಹರ್ಷ ಮೇರೆ ಮೀರಿತ್ತು, ರೋಮಾಂಚನಗೊಂಡಿದ್ದಳು, ಅವಳು ತನ್ನ ಮನೆಗೆ ಬಂದಳು, ಸ್ವಲ್ಪ ಹೊತ್ತಿನಲ್ಲೇ ಸೂರ್ಯೋದಯವಾಯಿತು.

ಅರ್ಥ:
ಮುಗುಳುನಗೆ: ಮಂದಸ್ಮಿತೆ; ಕಣ್ಣು: ನಯನ; ಕಡೆ: ತುದಿ; ವಿಗಡ: ಶೌರ್ಯ, ಪರಾಕ್ರಮ; ನೋಡು: ವೀಕ್ಷಿಸು; ಗಂಧರ್ವ: ಖಚರ, ದೇವತೆಗಳ ಒಂದು ವರ್ಗ; ಕೈಮುಗಿ: ನಮಸ್ಕರಿಸು; ಪತಿ: ಒಡೆಯ; ಹೊಗರು: ಕಾಂತಿ, ಪ್ರಕಾಶ; ಹರುಷ: ಸಂತಸ; ರೋಮ: ಕೂದಲು; ಗುಡಿ: ಕುಟೀರ, ಮನೆ; ನಿಳಯ: ಮನೆ; ಮುಗುದೆ: ಕಪಟವರಿಯದವಳು, ಮುಗ್ಧೆ; ಬಂದಳು: ಆಗಮಿಸು; ಸೂರ್ಯ: ರವಿ; ಅಡರು: ಮೇಲಕ್ಕೆ ಹತ್ತು; ಉದಯ: ಹುಟ್ಟು; ಪರ್ವತ: ಬೆಟ್ಟ;

ಪದವಿಂಗಡಣೆ:
ಮುಗುಳುನಗೆಯಲಿ +ಕಣ್ಣ+ ಕಡೆಯಲಿ
ವಿಗಡ+ ಭೀಮನ +ನೋಡಿ +ಕೈಗಳ
ಮುಗಿದೆವಾವ್ +ಗಂಧರ್ವಪತಿಗೆ +ನಮೋ+ನಮೋ+ಎನುತ
ಹೊಗರಿಡುವ+ ಹರುಷದಲಿ+ ರೋಮಾ
ಳಿಗಳ+ ಗುಡಿಯಲಿ +ತನ್ನ +ನಿಲಯಕೆ
ಮುಗುದೆ +ಬಂದಳು +ಸೂರ್ಯನ್+ಅಡರಿದನ್+ಉದಯ+ಪರ್ವತವ

ಅಚ್ಚರಿ:
(೧) ಸೂರ್ಯೋದಯವನ್ನು ಹೇಳುವ ಪರಿ – ಸೂರ್ಯನಡರಿದನುದಯಪರ್ವತವ

ಪದ್ಯ ೯೦: ಭೀಮನು ಕೀಚಕನನ್ನು ಹೇಗೆ ಬಡಿದನು?

ಎರಗಿದೊಡೆ ಕೀಚಕನ ಗಾಯಕೆ
ತರಹರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದೊಳೌಡನೊಡೆಯುಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ (ವಿರಾಟ ಪರ್ವ, ೩ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕೀಚಕನ ಒಂದಾನೊಂದು ಪೆಟ್ಟನ್ನು ಭೀಮನು ಸಹಿಸಿಕೊಂಡು ಮಂಡಿ ಹಾಕಿ ಕುಳಿತು, ಅವನ ಪೆಟ್ಟುಗಳನ್ನು ತಪ್ಪಿಸಿಕೊಂಡು, ಮೇಲೆದ್ದು ರೋಷದಿಂದ ತುಟಿಯನ್ನು ಕಚ್ಚಿ ಬರಸಿಡಿಲು ಪರ್ವತದ ಶಿಖರವನ್ನು ಅಪ್ಪಳಿಸುವಂತೆ, ಮುಷ್ಟಿಕಟ್ಟಿ ಬಾಹು ಸತ್ವದಿಂದ ಕಿಚಕನ ನೆತ್ತಿಯನ್ನು ಬಡಿದನು.

ಅರ್ಥ:
ಎರಗು: ಬಾಗು; ಗಾಯ: ಪೆಟ್ಟು; ತರಹರಿಸು: ತಡಮಾಡು; ಕಲಿ: ಶೂರ; ಮಂಡಿಸು: ಬಾಗಿಸು; ಮರೆ: ತಪ್ಪಿಸು; ಮುರಿ: ಸೀಳು; ಎದ್ದು: ಮೇಲೇಳು; ರೋಷ: ಕೋಪಲ್ ಔಡು: ಕೆಳತುಟಿ, ಹಲ್ಲಿನಿಂದ ಕಚ್ಚು; ಉಗಿ: ಇರಿತ, ತಿವಿತ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಪರ್ವತ: ಬೆಟ್ಟ; ಶಿಖರ: ತುದಿ; ಖಳ: ದುಷ್ಟ; ನೆತ್ತಿ: ತಲೆ; ರಣಧೀರ: ಪರಾಕ್ರಮಿ; ಉನ್ನತ: ಹಿರಿಯ, ಉತ್ತಮ; ಬಾಹು: ತೋಳು, ಭುಜ; ಸತ್ವ: ಶಕ್ತಿ, ಬಲ;

ಪದವಿಂಗಡಣೆ:
ಎರಗಿದೊಡೆ +ಕೀಚಕನ +ಗಾಯಕೆ
ತರಹರಿಸಿ+ ಕಲಿಭೀಮ +ಮಂಡಿಸಿ
ಮರೆವಡೆದು +ಮುರಿದೆದ್ದು +ರೋಷದೊಳ್+ಔಡನ್+ಒಡೆ+ಉಗಿದು
ಬರಸಿಡಿಲು +ಪರ್ವತದ +ಶಿಖರವನ್
ಎರಗುವಂತಿರೆ +ಖಳನ +ನೆತ್ತಿಯನ್
ಎರಗಿದನು+ ರಣಧೀರನ್+ಉನ್ನತ +ಬಾಹು+ಸತ್ವದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬರಸಿಡಿಲು ಪರ್ವತದ ಶಿಖರವನೆರಗುವಂತಿರೆ
(೨) ಕಲಿ, ರಣಧೀರ – ಸಮನಾರ್ಥಕ ಪದ

ಪದ್ಯ ೧೨೮: ಸಜ್ಜನರ ಮಾತಿನ ಮಹಿಮೆ ಎಂತಹದು?

ಇನನುದಯಿಸಲಿ ಪಶ್ಚಿಮಾದ್ರಿಯೊ
ಳನಲನೊಮ್ಮೆ ಹಿಮಾಂಶುವಾಗಲಿ
ಕನಕಗಿರಿಗಲ್ಲಾಟವಾಗಲಿ ಪರ್ವತಾಗ್ರದಲಿ
ವನಜ ವಿಕಸಿತವಾದೊಡೆಯು ಸ
ಜ್ಜನರುಗಳು ನುಡೆದೆರಡನಾಡರು
ಮನವಚನಕಾಯದಲಿ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೨೮ ಪದ್ಯ)

ತಾತ್ಪರ್ಯ:
ಸೂರ್ಯನು ಪಶ್ಚಿಮ ಪರ್ವತದ ಕಡೆಯಿಂದ ಹುಟ್ಟಿದರೂ ಹುಟ್ಟಬಹುದು, ಬೆಂಕಿಯು ತಣ್ಣಗಾದರೂ ಆಗಬಹುದು, ಮೇರು ಅಲುಗಾಡಿದರೂ ಆಡಬಹುದು, ಬೆಟ್ಟದ ತುದಿಯಲ್ಲಿ ಕಮಲವು ಅರಳಿದರೂ ಅರಳಬಹುದು, ಆದರೆ ಸಜ್ಜನರು ತ್ರಿಕರಣಪೂರ್ವಕವಾಗಿ ಆಡಿದ ಮಾತಿಗೆ ತಪ್ಪುವುದಿಲ್ಲ.

ಅರ್ಥ:
ಇನ: ಸೂರ್ಯ; ಉದಯಿಸು: ಹುಟ್ಟು; ಪಶ್ಚಿಮ: ಪಡುವಣ; ಅದ್ರಿ: ಬೆಟ್ಟ; ಅನಲ: ಬೆಂಕಿ; ಹಿಮಾಂಶು: ಮಂಜಿನಗಡ್ಡೆ; ಕನಕ: ಚಿನ್ನ; ಗಿರಿ: ಬೆಟ್ಟ; ಅಲ್ಲಾಟ: ಅಲುಗು; ಪರ್ವತ: ಬೆಟ್ಟ; ಅಗ್ರ: ತುದಿ; ವನಜ: ಕಮಲ; ವಿಕಸಿತ: ಹುಟ್ಟು; ಸಜ್ಜನ: ಒಳ್ಳೆಯ ಜನ; ನುಡಿ: ಮಾತು; ಎರಡನಾಡು: ಎರಡು ಮಾತು, ತಪ್ಪುಮಾತು; ಮನ: ಮನಸ್ಸು; ವಚನ: ಮಾತು; ಕಾಯ: ಶರೀರ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಇನನ್+ಉದಯಿಸಲಿ +ಪಶ್ಚಿಮ+ಅದ್ರಿಯೊಳ್
ಅನಲನ್+ಒಮ್ಮೆ +ಹಿಮಾಂಶುವಾಗಲಿ
ಕನಕ+ಗಿರಿಗ್+ಅಲ್ಲಾಟವಾಗಲಿ+ ಪರ್ವತಾಗ್ರದಲಿ
ವನಜ +ವಿಕಸಿತವಾದೊಡೆಯು +ಸ
ಜ್ಜನರುಗಳು +ನುಡೆದ್+ಎರಡನ್+ಆಡರು
ಮನ+ವಚನ+ಕಾಯದಲಿ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಇನನುದಯಿಸಲಿ ಪಶ್ಚಿಮಾದ್ರಿಯೊಳ್, ಅನಲನೊಮ್ಮೆ ಹಿಮಾಂಶುವಾಗಲಿ, ಕನಕಗಿರಿಗಲ್ಲಾಟವಾಗಲಿ, ಪರ್ವತಾಗ್ರದಲಿ ವನಜ ವಿಕಸಿತವಾದೊಡೆಯು
(೨) ವನಜ, ಸಜ್ಜನ – ಪ್ರಾಸ ಪದಗಳು
(೩) ಗಿರಿ, ಅದ್ರಿ, ಪರ್ವತ – ಸಮಾನಾರ್ಥಕ ಪದಗಳು

ಪದ್ಯ ೩೫: ಹೇಮಕೂಟದ ಪರ್ವತದಲ್ಲಿ ಅರ್ಜುನನು ಯಾರನ್ನು ಸೋಲಿಸಿದನು?

ಹೇಮಕೂಟದ ಗಿರಿಯ ಗಂಧ
ರ್ವಾಮರರ ಝೋಂಪಿಸಿದನವರು
ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ
ಆ ಮಹಾ ಹರಿ ವರುಷದಲ್ಲಿಯ
ಸೀಮೆ ಯೋಜನ ನವಸಹಸ್ರ ವಿ
ರಾಮಚದರೊಳಗಿಲ್ಲ ವಿವರಿಸಲರಿಯೆನಾನೆಂದ (ಸಭಾ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹೇಮಕೂಟ ಪರ್ವತದಲ್ಲಿದ್ದ ದೇವತೆಗಳನ್ನೂ ಗಂಧರ್ವರನ್ನೂ ಜಯಿಸಿ ಅವರಿಂದ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಕೆಳಕ್ಕಿಳಿಸಿದನು. ಹರಿವರ್ಷದ ಒಂಬತ್ತು ಸಾವಿರ ಯೋಜನದ ಸೀಮೆಯಲ್ಲೂ ದಾಳಿಮಾಡಿದನು. ಅದನ್ನು ವಿವರಿಸಲಾಗದು.

ಅರ್ಥ:
ಗಿರಿ: ಬೆಟ್ಟ; ಅಮರ: ದೇವತೆ; ಝೋಂಪಿಸು: ಅಲುಗಾಡಿಸು, ನಡುಗಿಸು; ಉದ್ದಾಮ: ಶ್ರೇಷ್ಠವಾದ; ವಸ್ತು: ಸಾಮಗ್ರಿ; ಕೊಂಡು: ತೆಗೆದುಕೊ; ಇಳಿ: ಕೆಳಕ್ಕೆ ಬಾ; ಬಳಿಕ: ನಂತರ; ಪರ್ವತ: ಬೆಟ್ಟ; ಸೀಮೆ: ಎಲ್ಲೆ, ಗಡಿ; ಯೋಜನ: ಅಳತೆಯ ಪ್ರಮಾಣ; ನವ: ಒಂಬತ್ತು; ಸಹಸ್ರ: ಸಾವಿರ; ವಿರಾಮ: ಅಂತ್ಯ, ಕೊನೆ; ವಿವರಿಸು: ವಿಸ್ತಾರವಾಗಿ ಹೇಳು;

ಪದವಿಂಗಡಣೆ:
ಹೇಮಕೂಟದ +ಗಿರಿಯ +ಗಂಧ
ರ್ವ+ಅಮರರ+ ಝೋಂಪಿಸಿದನ್+ಅವರ್
ಉದ್ದಾಮ +ವಸ್ತುವ +ಕೊಂಡನ್+ಇಳಿದನು+ ಬಳಿಕ+ ಪರ್ವತವ
ಆ +ಮಹಾ +ಹರಿ +ವರುಷದಲ್ಲಿಯ
ಸೀಮೆ+ ಯೋಜನ +ನವ+ಸಹಸ್ರ +ವಿ
ರಾಮ+ಚದರೊಳಗಿಲ್ಲ +ವಿವರಿಸಲ್+ಅರಿಯೆ+ನಾನೆಂದ

ಅಚ್ಚರಿ:
(೧) ಗಿರಿ, ಪರ್ವತ – ಸಮನಾರ್ಥಕ ಪದಗಳು
(೨) ೪,೫,೬ ಸಾಲಿನ ಕೊನೆಯ ಪದ “ವ” ಕಾರವಾಗಿರುವುದು – ವರುಷ, ವಿರಾಮ, ವಿವರಿಸ..