ಪದ್ಯ ೩೨: ಘೋಷಯಾತ್ರೆಗೆ ಯಾರು ಹೊರಟರು?

ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ (ಅರಣ್ಯ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ವಂದಿಮಾಗಧರು, ಕವಿಗಳು, ವಿದ್ವಾಂಸರು, ಆನೆ ಕುದುರೆಗಳ ಆಹಾರವನ್ನು ಸಿದ್ಧಪದಿಸುವವರು, ನರ್ತಕರು, ಕಥೆಗಾರರು, ವಿದೂಷಕರು, ಸ್ತುತಿಪಾಥಕರು, ಆಳುಗಳು, ಜಟ್ಟಿಗಳು, ಬೇಟೆಗಾರರು, ಮೊದಲಾದ ಪರಿಜನರೊಡನೆ ದುರ್ಯೋಧನನು ಪಯಣದ ಮೇಲೆ ಪಯಣ ಮಾಡುತ್ತಾ ಬಂದನು.

ಅರ್ಥ:
ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ಅಗಣಿತ: ಅಸಂಖ್ಯಾತ; ವಂದಿ: ಹೊಗಳುಭಟ್ಟ; ಕವಿ: ಕಬ್ಬಿಗ, ಕಾವ್ಯವನ್ನು ರಚಿಸುವವನು; ವಿದ್ವಾಂಸ: ಜ್ಞಾನಿ, ಪಂಡಿತ; ವಿಧಾವಂತ: ಧಾರ್ಮಿಕ ರೀತಿಗಳನ್ನು ಬಲ್ಲವ; ನರ್ತಕ: ನೃತ್ಯಮಾಡುವವ; ಕಥಕ: ಕತೆಗಾರ; ಪರಿಹಾಸ: ವಿನೋದ, ಸರಸ; ಪಾಠಕ: ಸ್ತುತಿ ಪಾಠಕ; ಭಟ್ಟಂಗಿ, ಹೊಗಳುಭಟ್ಟ; ಚರ: ದೂತ; ಮಲ್ಲ: ಕುಸ್ತಿಪಟು, ಜಟ್ಟಿ; ಬೇಂಟೆಗಾರ: ಶಬರ, ಬೇಡ, ಕಿರಾತ; ಪರಿಜನ: ಸುತ್ತಲಿನ ಜನ, ಪರಿವಾರ; ಆವಳಿ: ಗುಂಪು; ಸಹಿತ: ಜೊತೆ; ನಗರ: ಊರು; ಪಯಣ: ಪ್ರಯಾಣ; ಐತಂದ: ಬಂದು ಸೇರು;

ಪದವಿಂಗಡಣೆ:
ನೆರೆದುದ್+ಅಗಣಿತ +ವಂದಿಗಳು +ಕವಿ
ವರರು +ವಿದ್ವಾಂಸರು +ವಿಧಾವಂ
ತರು +ಸುನರ್ತಕ +ಕಥಕ +ಪರಿಹಾಸಕರು +ಪಾಠಕರು
ಚರರು +ಮಲ್ಲರು +ಬೇಂಟೆಗಾರರು
ಪರಿಜನಾವಳಿ +ಸಹಿತ +ನಗರಾಂ
ತರದ +ಪಯಣದ +ಮೇಲೆ +ಪಯಣದಲ್+ಅರಸನ್+ಐತಂದ

ಅಚ್ಚರಿ:
(೧) ವಂದಿ, ವಿದ್ವಾಂಸ, ವಿಧಾವಂತ – ವ ಕಾರದ ಪದಗಳ ಬಳಕೆ