ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ (ಅರಣ್ಯ ಪರ್ವ, ೧೮ ಸಂಧಿ, ೩೨ ಪದ್ಯ)
ತಾತ್ಪರ್ಯ:
ಲೆಕ್ಕವಿಲ್ಲದಷ್ಟು ವಂದಿಮಾಗಧರು, ಕವಿಗಳು, ವಿದ್ವಾಂಸರು, ಆನೆ ಕುದುರೆಗಳ ಆಹಾರವನ್ನು ಸಿದ್ಧಪದಿಸುವವರು, ನರ್ತಕರು, ಕಥೆಗಾರರು, ವಿದೂಷಕರು, ಸ್ತುತಿಪಾಥಕರು, ಆಳುಗಳು, ಜಟ್ಟಿಗಳು, ಬೇಟೆಗಾರರು, ಮೊದಲಾದ ಪರಿಜನರೊಡನೆ ದುರ್ಯೋಧನನು ಪಯಣದ ಮೇಲೆ ಪಯಣ ಮಾಡುತ್ತಾ ಬಂದನು.
ಅರ್ಥ:
ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ಅಗಣಿತ: ಅಸಂಖ್ಯಾತ; ವಂದಿ: ಹೊಗಳುಭಟ್ಟ; ಕವಿ: ಕಬ್ಬಿಗ, ಕಾವ್ಯವನ್ನು ರಚಿಸುವವನು; ವಿದ್ವಾಂಸ: ಜ್ಞಾನಿ, ಪಂಡಿತ; ವಿಧಾವಂತ: ಧಾರ್ಮಿಕ ರೀತಿಗಳನ್ನು ಬಲ್ಲವ; ನರ್ತಕ: ನೃತ್ಯಮಾಡುವವ; ಕಥಕ: ಕತೆಗಾರ; ಪರಿಹಾಸ: ವಿನೋದ, ಸರಸ; ಪಾಠಕ: ಸ್ತುತಿ ಪಾಠಕ; ಭಟ್ಟಂಗಿ, ಹೊಗಳುಭಟ್ಟ; ಚರ: ದೂತ; ಮಲ್ಲ: ಕುಸ್ತಿಪಟು, ಜಟ್ಟಿ; ಬೇಂಟೆಗಾರ: ಶಬರ, ಬೇಡ, ಕಿರಾತ; ಪರಿಜನ: ಸುತ್ತಲಿನ ಜನ, ಪರಿವಾರ; ಆವಳಿ: ಗುಂಪು; ಸಹಿತ: ಜೊತೆ; ನಗರ: ಊರು; ಪಯಣ: ಪ್ರಯಾಣ; ಐತಂದ: ಬಂದು ಸೇರು;
ಪದವಿಂಗಡಣೆ:
ನೆರೆದುದ್+ಅಗಣಿತ +ವಂದಿಗಳು +ಕವಿ
ವರರು +ವಿದ್ವಾಂಸರು +ವಿಧಾವಂ
ತರು +ಸುನರ್ತಕ +ಕಥಕ +ಪರಿಹಾಸಕರು +ಪಾಠಕರು
ಚರರು +ಮಲ್ಲರು +ಬೇಂಟೆಗಾರರು
ಪರಿಜನಾವಳಿ +ಸಹಿತ +ನಗರಾಂ
ತರದ +ಪಯಣದ +ಮೇಲೆ +ಪಯಣದಲ್+ಅರಸನ್+ಐತಂದ
ಅಚ್ಚರಿ:
(೧) ವಂದಿ, ವಿದ್ವಾಂಸ, ವಿಧಾವಂತ – ವ ಕಾರದ ಪದಗಳ ಬಳಕೆ