ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿ ಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ (ಗದಾ ಪರ್ವ, ೧೩ ಸಂಧಿ, ೧೩ ಪದ್ಯ)
ತಾತ್ಪರ್ಯ:
ಮಹಾಭಾರತ ಯುದ್ಧದಲ್ಲಿ ರಾಕ್ಷಸರನ್ನು ಸಂಹರಿಸಿ, ಆಡಳಿತವನ್ನು ಮತ್ತೊಬ್ಬರಿಗೆ ವಹಿಸಿ, ಮಮಪ್ರಾಣಾಹಿ ಪಾಂಡವಾ ಎಂಬ ಪ್ರತಿಜ್ಞೆಯನ್ನು ನೆರವೇರಿಸಿ, ಭೀಷ್ಮನಿಗೆ ಪರಾನಂದ ಪದವಿಯನ್ನು ನೀಡಿ, ಅಪರಿಮಿತ ಪರಮ ಸಂತೋಷದಿಂದ ಶ್ರೀಕೃಷ್ಣನು ತನ್ನ ಊರಿಗೆ ಪ್ರಯಾಣ ಮಾಡಿದನು.
ಅರ್ಥ:
ಕದನ: ಯುದ್ಧ; ಕೈ: ಹಸ್ತ; ದೈತ್ಯ: ರಾಕ್ಷಸ; ಸದೆ: ಕುಟ್ಟು, ಪುಡಿಮಾಡು; ಭೂ: ಭೂಮಿ; ಭಾರ: ಹೊರೆ; ಪರ: ಬೇರೆ; ಹಸ್ತ: ಕೈ; ಕಟ್ಟು: ನಿರ್ಮಿಸು; ಕೊಟ್ಟ: ನೀಡಿದ; ಭಾಷೆ: ನುಡಿ; ನದಿ: ಸರೋವರ; ನಂದನ: ಮಗ; ಆನಂದ: ಸಂತಸ; ಸೇರು: ಜೊತೆಗೂಡು; ಪರಮ: ಶ್ರೇಷ್ಠ; ಪರಿತೋಷ: ಸಂತಸ; ಪಯಣ: ಪ್ರಯಾಣ; ಮುರವೈರಿ: ಕೃಷ್ಣ; ಪುರಿ: ಊರು;
ಪದವಿಂಗಡಣೆ:
ಕದನದಲಿ +ಕಯ್ಯಾರೆ ದೈತ್ಯರ
ಸದೆದು+ ಭೂಭಾರವನು +ಪರ+ಹ
ಸ್ತದಲಿ +ಕಟ್ಟಿಸಿ +ಕೊಟ್ಟ+ಭಾಷೆಯನ್+ಉತ್ತರಾಯೆನಿಸಿ
ನದಿಯ +ನಂದನನನು +ಪರಾನಂ
ದದಲಿ+ ಸೇರಿಸಿ+ ಪರಮ +ಪರಿತೋ
ಷದಲಿ +ಪಯಣವ +ಮಾಡಿದನು +ಮುರವೈರಿ +ನಿಜಪುರಿಗೆ
ಅಚ್ಚರಿ:
(೧) ಪ್ರಾಣ ಬಿಟ್ಟರು ಎಂದು ಹೇಳುವ ಪರಿ – ನದಿಯ ನಂದನನನು ಪರಾನಂದದಲಿ ಸೇರಿಸಿ
(೨) ಪ ಕಾರದ ತ್ರಿವಳಿ ಪದ – ಪರಮ ಪರಿತೋಷದಲಿ ಪಯಣವ