ಪದ್ಯ ೧೩: ಕೃಷ್ಣನು ಎಲ್ಲಿಗೆ ಹೊರಟನು?

ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿ ಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ (ಗದಾ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮಹಾಭಾರತ ಯುದ್ಧದಲ್ಲಿ ರಾಕ್ಷಸರನ್ನು ಸಂಹರಿಸಿ, ಆಡಳಿತವನ್ನು ಮತ್ತೊಬ್ಬರಿಗೆ ವಹಿಸಿ, ಮಮಪ್ರಾಣಾಹಿ ಪಾಂಡವಾ ಎಂಬ ಪ್ರತಿಜ್ಞೆಯನ್ನು ನೆರವೇರಿಸಿ, ಭೀಷ್ಮನಿಗೆ ಪರಾನಂದ ಪದವಿಯನ್ನು ನೀಡಿ, ಅಪರಿಮಿತ ಪರಮ ಸಂತೋಷದಿಂದ ಶ್ರೀಕೃಷ್ಣನು ತನ್ನ ಊರಿಗೆ ಪ್ರಯಾಣ ಮಾಡಿದನು.

ಅರ್ಥ:
ಕದನ: ಯುದ್ಧ; ಕೈ: ಹಸ್ತ; ದೈತ್ಯ: ರಾಕ್ಷಸ; ಸದೆ: ಕುಟ್ಟು, ಪುಡಿಮಾಡು; ಭೂ: ಭೂಮಿ; ಭಾರ: ಹೊರೆ; ಪರ: ಬೇರೆ; ಹಸ್ತ: ಕೈ; ಕಟ್ಟು: ನಿರ್ಮಿಸು; ಕೊಟ್ಟ: ನೀಡಿದ; ಭಾಷೆ: ನುಡಿ; ನದಿ: ಸರೋವರ; ನಂದನ: ಮಗ; ಆನಂದ: ಸಂತಸ; ಸೇರು: ಜೊತೆಗೂಡು; ಪರಮ: ಶ್ರೇಷ್ಠ; ಪರಿತೋಷ: ಸಂತಸ; ಪಯಣ: ಪ್ರಯಾಣ; ಮುರವೈರಿ: ಕೃಷ್ಣ; ಪುರಿ: ಊರು;

ಪದವಿಂಗಡಣೆ:
ಕದನದಲಿ +ಕಯ್ಯಾರೆ ದೈತ್ಯರ
ಸದೆದು+ ಭೂಭಾರವನು +ಪರ+ಹ
ಸ್ತದಲಿ +ಕಟ್ಟಿಸಿ +ಕೊಟ್ಟ+ಭಾಷೆಯನ್+ಉತ್ತರಾಯೆನಿಸಿ
ನದಿಯ +ನಂದನನನು +ಪರಾನಂ
ದದಲಿ+ ಸೇರಿಸಿ+ ಪರಮ +ಪರಿತೋ
ಷದಲಿ +ಪಯಣವ +ಮಾಡಿದನು +ಮುರವೈರಿ +ನಿಜಪುರಿಗೆ

ಅಚ್ಚರಿ:
(೧) ಪ್ರಾಣ ಬಿಟ್ಟರು ಎಂದು ಹೇಳುವ ಪರಿ – ನದಿಯ ನಂದನನನು ಪರಾನಂದದಲಿ ಸೇರಿಸಿ
(೨) ಪ ಕಾರದ ತ್ರಿವಳಿ ಪದ – ಪರಮ ಪರಿತೋಷದಲಿ ಪಯಣವ