ಪದ್ಯ ೪೬: ಸೈನ್ಯದವರು ಹೇಗೆ ಮುತ್ತಿಗೆ ಹಾಕಿದರು?

ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರು ತೂಳಿದರು ಪಾಂಚಾಲಪ್ರಬುದ್ಧಕರ
ಹತ್ತುಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ (ಗದಾ ಪರ್ವ, ೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಇತ್ತ ಕೌರವನ ಆಶ್ರಿತರಾದ ಒಂದು ಸಾವಿರ ಆನೆಗಳ ಮೇಲಿದ್ದ ಜೋದರು ಪಾಂಚಾಲರನ್ನು ಪ್ರಬುದ್ಧಕರನ್ನು ಒತ್ತಿದರು. ಹತ್ತು ಸಾವಿರ ಪದಾತಿಗಳು ಹೊಳೆ ಹೊಳೆಯುವ ಅಲಗಿನಹಾಗೆ ರಾಜನ ಎರಡು ಪಕ್ಕದಲ್ಲೂ ಮುತ್ತಿದರು.

ಅರ್ಥ:
ಪಡಿಬಲ: ವೈರಿ ಸೇನೆ; ಸಾವಿರ: ಸಹಸ್ರ; ಮತ್ತ: ಅಮಲು, ಮದ; ಗಜಘಟೆ: ಆನೆಯ ಗುಂಪು; ತೆತ್ತು: ಕುಂದಣಿಸು, ಕೂಡಿಸು; ತೂಳು: ಆಕ್ರಮಣ; ಪಾಯದಳ: ಕಾಲಾಳು, ಸೈನಿಕ; ಹೊಗರು: ಕಾಂತಿ, ಪ್ರಕಾಶ; ಅಲಗು: ಆಯುಧದ ಮೊನೆ, ಕತ್ತಿ; ಹೊಳಹು: ಪ್ರಕಾಶ; ಮುತ್ತು: ಆವರಿಸು; ಅವನೀಪತಿ: ರಾಜ; ಮೋಹರ: ಯುದ್ಧ; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಇತ್ತ+ ಪಡಿಬಲವಾಗಿ +ಸಾವಿರ
ಮತ್ತ+ಗಜ+ಘಟೆ +ಕೌರವೇಂದ್ರನ
ತೆತ್ತಿಗರು +ತೂಳಿದರು+ ಪಾಂಚಾಲ+ಪ್ರಬುದ್ಧಕರ
ಹತ್ತುಸಾವಿರ +ಪಾಯದಳ+ ಹೊಗರ್
ಎತ್ತಿದ್+ಅಲಗಿನ +ಹೊಳಹಿನಂತಿರೆ
ಮುತ್ತಿತ್+ಅವನೀಪತಿಯ +ಮೋಹರದ್+ಎರಡು +ಬಾಹೆಯಲಿ

ಅಚ್ಚರಿ:
(೧) ಇತ್ತ, ಮತ್ತ; ತೆತ್ತಿ, ಎತ್ತಿ, ಮುತ್ತಿ – ಪ್ರಾಸ ಪದಗಳು

ಪದ್ಯ ೮: ಕೌರವರ ಜೊತೆಗೆ ಯಾವ ದೇಶದ ಸೈನಿಕರು ಸೇರಿದರು?

ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು (ಶಲ್ಯ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಬೆಂಬಲಕ್ಕೆ ತ್ರಿಗರ್ತ ದೇಶದ ಸೈನಿಕರ ಬಲವು ನುಗ್ಗಿತು. ಅಶ್ವತ್ಥಾಮನು ಕೃಪ ಕೃತವರ್ಮರ ಸಂಗಡಿಗನಲ್ಲವೇ ಎಂದು ನುಗ್ಗಿ ಪಾಂಡವ ಬಲವನ್ನು ತಡೆದು ಭೀಮನನ್ನು ನಿಲ್ಲಿಸಿದರು. ಭೀಮನ ಪರಾಕ್ರಮಿಗಳು ಕಳವಳಗೊಂಡರು.

ಅರ್ಥ:
ಪಡಿಬಲ: ವೈರಿಸೈನ್ಯ; ಹೊಕ್ಕು: ಸೇರು; ತ್ರಿಗರ್ತ: ದೇಶದ ಹೆಸರು; ಗಡಣ: ಗುಂಪು; ಸಂಗಡಿ: ಜೊತೆಗಾರ; ಹೇರಾಳ: ದೊಡ್ಡ, ವಿಶೇಷ; ದಳ: ಸೈನ್ಯ; ಸಹಿತ: ಜೊತೆ; ಕೊಡಹು: ಚೆಲ್ಲು; ಬಲ: ಸೈನ್ಯ; ಅವಗಡಿಸು: ಕಡೆಗಣಿಸು; ಪವಮಾನಜ: ಭೀಮ; ಅಕ್ಕುಡರ್: ಸತ್ವಶಾಲಿ; ಬೆಬ್ಬಳೆ: ಸೋಜಿಗ, ಗಾಬರಿ; ಭಾರಣೆ: ಮಹಿಮೆ, ಗೌರವ; ಭಟ: ಸೈನಿಕ;

ಪದವಿಂಗಡಣೆ:
ಪಡಿಬಲಕೆ +ಹೊಕ್ಕುದು +ತ್ರಿಗರ್ತರ
ಗಡಣ+ ಕೃಪ +ಕೃತವರ್ಮರಿಗೆ+ ಸಂ
ಗಡಿಗನ್+ಅಶ್ವತ್ಥಾಮನ್+ಈ+ ಹೇರಾಳ +ದಳಸಹಿತ
ಕೊಡಹಿದರು +ಪಾಂಡವಬಲವನ್+ಅವ
ಗಡಿಸಿದರು +ಪವಮಾನಜನನ್
ಅಕ್ಕುಡಿಸಿ +ಬೆಬ್ಬಳೆವೋಯ್ತು +ಭೀಮನ +ಭಾರಣೆಯ +ಭಟರು

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೀಮನ ಭಾರಣೆಯ ಭಟರು

ಪದ್ಯ ೫೨: ಅರ್ಜುನನ ಬಾಣವನ್ನು ಎದುರಿಸಲು ಯಾರು ಬಂದರು?

ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯುಕೊಳ್ಳೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಲ್ಯನಿಗೆ ಸಹಾಯಮಾಡಲು ಅಶ್ವತ್ಥಾಮನೇ ಮೊದಲಾದ ವೀರರು ಅರ್ಜುನನ ಬಾಣಗಳ ಸಮುದ್ರವನ್ನು ತಮ್ಮ ಬಾಣಗಳಿಂದ ಇದಿರಿಸಿದರು. ದುರ್ಬಲ ಯೋಧರು ಉಬ್ಬಿದರೆ, ನೊಂದವರು ಉತ್ಸಾಹದಿಂದ ಮುಂದೆ ಬಂದರೆ, ತಪ್ಪೇನು? ಈ ಬಾಣದಿಂದ ನಿನ್ನನ್ನು ರಕ್ಷಿಸಿಕೋ ಎಂದು ಅರ್ಜುನನು ಹೊಡೆದನು.

ಅರ್ಥ:
ನೂಕು: ತಳ್ಳು; ಪಡಿಬಲ: ವೈರಿಸೈನ್ಯ; ಆಕೆವಾಳ: ಪರಾಕ್ರಮಿ; ಸುತ: ಮಗ; ಆದಿ: ಮುಂತಾದ; ತೋಕು: ಎಸೆ, ಪ್ರಯೋಗಿಸು, ಚೆಲ್ಲು; ಶರ: ಬಾಣ; ಜಾಲ: ಗುಂಪು; ಅಂಬು: ಬಾಣ; ಅಂಬುಧಿ: ಸಾಗರ; ಬೀಕಲು: ಕೊನೆ, ಅಂತ್ಯ; ಭಟ: ಸೈನಿಕ; ಉಬ್ಬು: ಅತಿಶಯ, ಉತ್ಸಾಹ; ವ್ಯಾಕುಲ: ದುಃಖ, ವ್ಯಥೆ; ತುಬ್ಬು: ಪತ್ತೆ ಮಾಡು, ಶೋಧಿಸು; ಕಳಂಬ: ಬಾಣ, ಅಂಬು; ಕಾಯ್ದು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನೂಕಿದರು +ಶಲ್ಯಂಗೆ +ಪಡಿಬಲದ್
ಆಕೆವಾಳರು +ಗುರುಸುತಾದ್ಯರು
ತೋಕಿದರು +ಶರಜಾಳವ್+ಅರ್ಜುನನ್+ಅಂಬಿನ್+ಅಂಬುಧಿಯ
ಬೀಕಲಿನ+ ಭಟರ್+ಉಬ್ಬಿದರೆ+ ಸು
ವ್ಯಾಕುಲರು +ತುಬ್ಬಿದರೆ +ತಪ್ಪೇನ್
ಈ+ ಕಳಂಬವ+ ಕಾಯ್ದುಕೊಳ್ಳೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಶರಜಾಳವರ್ಜುನನಂಬಿನಂಬುಧಿಯ – ಅಂಬು ಪದದ ಬಳಕೆ
(೨) ಉಬ್ಬಿದರೆ, ತುಬ್ಬಿದರೆ – ಪ್ರಾಸ ಪದಗಳು
(೩) ಕಳಂಬ, ಅಂಬು, ಶರ – ಸಮಾನಾರ್ಥಕ ಪದ

ಪದ್ಯ ೨೧: ಶಲ್ಯನೆದುರು ಯಾರು ಬಂದು ನಿಂತರು?

ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರಭೂಪತಿಯ (ಶಲ್ಯ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ವೈರಿಸೇನೆಯು ಒಮ್ಮುಖವಾಗಿ ಅತಿವೇಗದಿಂದ ನುಗ್ಗಿತು. ಗರ್ಜಿಸುತ್ತಾ ಚತುರತೆಯಿಂದ ದಾಳಿ ಮಾಡುತ್ತಾ ಆಚೀಚೆಗೆ ಹಾರುತ್ತಾ ಗತ್ತನ್ನು ತೋರಿಸಿತು. ಭೀಮನ ಸೇನೆಯ ಬೆಂಬಲದಿಂದ ಧರ್ಮಜನು ಮುಂದುವರಿದನು. ನಕುಲ ಸಹದೇವರ ಜೋಡಿ ರಥಗಳು ಶಲ್ಯನ ಮುಂದಕ್ಕೆ ಬಂದು ನಿಂತವು.

ಅರ್ಥ:
ಕವಿ: ಆವರಿಸು; ಸೂಠಿ: ವೇಗ; ರಿಪು: ವೈರಿ; ನಿವಹ: ಗುಂಪು; ನಿಬ್ಬರ: ಅತಿಶಯ, ಹೆಚ್ಚಳ; ಅಬ್ಬರ: ಆರ್ಭಟ; ಶರ: ಬಾಣ; ಲವಣಿ: ಕಾಂತಿ; ಲಾವಣಿ: ಗೇಣಿ; ಲಂಬ: ದೊಡ್ಡದಾದ; ಲಂಘನ: ಹಾರುವಿಕೆ, ಜಿಗಿತ; ಪವನಜ: ಭೀಮ; ಪಡಿಬಲ: ವೈರಿಸೈನ್ಯ; ಔಕು: ಒತ್ತು; ಅವನಿಪತಿ: ರಾಜ; ಸವಡಿ: ಜೊತೆ, ಜೋಡಿ; ರಥ: ಬಂಡಿ; ಸಮ್ಮುಖ: ಎದುರು; ಬಿಟ್ಟವು: ಬಿಡು; ಭೂಪತಿ: ರಾಜ;

ಪದವಿಂಗಡಣೆ:
ಕವಿದುದ್+ಒಂದೇ +ಸೂಠಿಯಲಿ +ರಿಪು
ನಿವಹ +ನಿಬ್ಬರದ್+ಅಬ್ಬರದ +ಶರ
ಲವಣಿಗಳ +ಲಾವಣಿಗೆಗಳ +ಲಂಬನದ +ಲಂಘನದ
ಪವನಜನ+ ಪಡಿಬಲದಲ್+ಔಕಿದನ್
ಅವನಿಪತಿ+ ಸಹದೇವ +ನಕುಲರ
ಸವಡಿರಥ +ಸಮ್ಮುಖಕೆ +ಬಿಟ್ಟವು +ಮಾದ್ರ+ಭೂಪತಿಯ

ಅಚ್ಚರಿ:
(೧) ಲ ಕಾರದ ಸಾಲು ಪದಗಳು – ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ
(೨) ಅವನಿಪತಿ, ಭೂಪತಿ – ಸಮಾನಾರ್ಥಕ ಪದಗಳು

ಪದ್ಯ ೬೨: ಅಭಿಮನ್ಯುವಿನ ಸಹಾಯಕ್ಕೆ ಯಾರು ಬಂದರು?

ಧರೆ ಬಿರಿಯೆ ಬೊಬ್ಬೆಯಲಿ ಬಲದ
ಬ್ಬರಣೆ ದೆಖ್ಖಾದೆಖ್ಖೆಯಾಗಲು
ಧರಣಿಪತಿ ಮರುಗಿದನು ಮಗನೇನಾದನೋ ಎನುತ
ಕರೆದು ಭೀಮನ ನಕುಳನನು ಸಂ
ಗರಕೆ ಧೃಷ್ಟದ್ಯುಮ್ನ ದ್ರುಪದರ
ಪರುಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ (ದ್ರೋಣ ಪರ್ವ, ೫ ಸಂಧಿ, ೬೨ ಪದ್ಯ)

ತಾತ್ಪರ್ಯ:
ಅಬ್ಬರದ ಕೂಗಿಗೆ ಭೂಮಿಯು ಬಿರಿಯಲು, ಸೈನ್ಯಗಳ ಆರ್ಭಟ ಹೆಚಲು ಅಭಿಮನ್ಯುವೇನಾದನೋ ಎಂದು ಧರ್ಮಜನು ದುಃಖಿಸಿದನು. ಭೀಮ, ನಕುಲ, ದೃಷ್ಟದ್ಯುಮ್ಯರನ್ನು ಕರೆಸಿ ಸೈನ್ಯಸಮೇತ ಅಭಿಮನ್ಯುವಿನ ಸಹಾಯಕ್ಕೆ ಕಳಿಸಿದನು.

ಅರ್ಥ:
ಧರೆ: ಭೂಮಿ; ಬಿರಿ: ಬಿರುಕು, ಸೀಳು; ಬೊಬ್ಬೆ: ಜೋರಾದ ಕೂಗು; ಬಲ: ಸೈನ್ಯ; ಅಬ್ಬರಣೆ: ಆರ್ಭಟ; ದೆಖ್ಖಾದೆಖ್ಖಿ: ಮುಖಾಮುಖಿ; ಧರಣಿಪತಿ: ರಾಜ; ಮರುಗು: ತಳಮಳ, ಸಂಕಟ; ಮಗ: ಪುತ್ರ; ಕರೆ: ಬರೆಮಾಡು; ಸಂಗರ: ಯುದ್ಧ; ಪರುಠವ: ಭದ್ರತೆ, ಹೆಚ್ಚಳ, ಆಧಿಕ್ಯ; ಕಳುಹು: ತೆರಳು; ಸೌಭದ್ರ: ಅಭಿಮನ್ಯು; ಪಡಿ: ಸಮಾನವಾದುದು, ಎಣೆ, ಪ್ರತಿ; ಬಲ: ಸೈನ್ಯ;

ಪದವಿಂಗಡಣೆ:
ಧರೆ +ಬಿರಿಯೆ +ಬೊಬ್ಬೆಯಲಿ +ಬಲದ್
ಅಬ್ಬರಣೆ +ದೆಖ್ಖಾದೆಖ್ಖೆಯಾಗಲು
ಧರಣಿಪತಿ +ಮರುಗಿದನು +ಮಗನೇನಾದನೋ+ ಎನುತ
ಕರೆದು+ ಭೀಮನ +ನಕುಳನನು+ ಸಂ
ಗರಕೆ +ಧೃಷ್ಟದ್ಯುಮ್ನ +ದ್ರುಪದರ
ಪರುಠವಿಸಿ +ಕಳುಹಿದನು +ಸೌಭದ್ರಂಗೆ +ಪಡಿ+ಬಲವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿರಿಯೆ ಬೊಬ್ಬೆಯಲಿ ಬಲದಬ್ಬರಣೆ
(೨) ಧರೆ, ಧರಣಿಪತಿ – ಪದಗಳ ಬಳಕೆ

ಪದ್ಯ ೭: ದೂತರು ರಾಜನಿಗೆ ಏನೆಂದು ಬಿನ್ನೈಸಿದರು?

ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲು ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ (ವಿರಾಟ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ಉತ್ತರನ ಸಹಾಯಕ್ಕಾಗಿ ಮಂತ್ರಿಗಳು, ಸೈನ್ಯವನ್ನು ವಿರಾಟನು ಕಳಿಸಿಕೊಟ್ಟು ದುಃಖಾಕ್ರಾಂತನಾಗಿರಲು, ಊರಿನಲ್ಲಿ ಕೋಲಾಹಲದ ಸದ್ದು ಕೇಳಿತು. ಪಟ್ಟಣದಲ್ಲಿ ಕೆಲವರು ಸೂರೆ ಮಾಡಲಾರಂಭಿಸಿದ್ದರು. ಬಹು ಬೇಗ ವಿರಾಟನ ಸಮ್ಮುಖಕ್ಕೆ ದೂತರು ಬಂದು, ಪ್ರಭೂ ಊರಿನಲ್ಲಿ ವಿಜಯ ಧ್ವಜವನ್ನು ಹಾರಿಸಿ, ಜಯಶಾಲಿಯಾಗಿ ಬರುತ್ತಿರುವ ರಾಜಪುತ್ರನನ್ನು ಎದಿರುಗೊಳ್ಳಲು ಕಳುಹಿಸಿ ಎಂದು ಬಿನ್ನೈಸಿಕೊಂಡರು.

ಅರ್ಥ:
ಮಗ: ಸುತ; ಪಡಿಬಲ: ಎದುರುಪಡೆ, ಶತ್ರುಸೈನ್ಯ; ಬಲು: ತುಂಬ; ಮಂತ್ರಿ: ಸಚಿವ; ಅವನಿಪ: ರಾಜ; ಬೀಳೂಗೊಡು: ಕಳುಹಿಸು; ದುಗುಡ: ದುಃಖ; ಹೊಳಲು: ಪಟ್ಟಣ, ನಗರ, ಪ್ರಕಾಶ; ಕೈಸೂರೆ: ಲೂಟಿ; ಕಳಕಳ: ಗೊಂದಲ, ಹೊಳೆವುದನ್ನು ವಿವರಿಸುವ ಪದ; ಮೊಗ: ಮುಖ; ಹರುಷ: ಸಂತಸ; ಅಖಿಳ: ಎಲ್ಲಾ; ದೂತಾಳಿ: ದೂತರ ಗುಂಪು; ಬಂದು: ಆಗಮಿಸು; ಗುಡಿ: ಮನೆ; ಕಟ್ಟು: ನಿರ್ಮಿಸು; ನಗರಿ: ಊರು; ಕಳುಹು: ತೆರಳು; ಇದಿರುಗೊಳಿಸು: ಎದುರುಗೊಳ್ಳು; ಕುಮಾರ: ಪುತ್ರ;

ಪದವಿಂಗಡಣೆ:
ಮಗಗೆ +ಪಡಿಬಲವಾಗಿ +ಬಲು +ಮಂ
ತ್ರಿಗಳನ್+ಅವನಿಪ+ ಬೀಳುಗೊಟ್ಟನು
ದುಗುಡದಿಂದಿರೆ +ಹೊಳಲು +ಕೈಸೂರೆಗಳ+ ಕಳಕಳದ
ಮೊಗದ+ ಹರುಷದಲ್+ಅಖಿಳ +ದೂತಾ
ಳಿಗಳು +ಬಂದುದು +ಗುಡಿಯ +ಕಟ್ಟಿಸು
ನಗರಿಯಲಿ +ಕಳುಹ್+ಇದಿರುಗೊಳಿಸು+ ಕುಮಾರಕನನೆನುತ

ಅಚ್ಚರಿ:
(೧) ಉತ್ತರನ ಪ್ರಶಂಸೆ ಮಾಡುವ ಪರಿ – ಗುಡಿಯ ಕಟ್ಟಿಸು ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ

ಪದ್ಯ ೩೩: ಗಂಧರ್ವರು ಕಾಡಿನ ಒಳಕ್ಕೆ ಏಕೆ ಹೋದರು?

ನೃಪಸುತರ ಪಡಿಬಲಕೆ ಬಂದುದು
ವಿಪುಲಬಲ ಹಲ್ಲಣಿಸಿ ಹೊಯ್ ಹೊ
ಯ್ಯಪಸದರ ಗಂಧರ್ವಸುಭಟರನೆನುತ ಸೂಟಿಯಲಿ
ಕುಪಿತರರೆಯಟ್ಟಿದರು ತೋಪಿನ
ಕಪಿಗಳಾವೆಡೆ ಕಾಣಬಹುದೆನು
ತುಪಚರಿತರೊಳಸರಿಯೆ ಹೊಗಿಸಿದರವರನಾ ವನವ (ಅರಣ್ಯ ಪರ್ವ, ೧೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ರಾಜಪುತ್ರರ ಸಹಾಯಕ್ಕೆ ಬಹಳ ಸಂಖ್ಯೆಯ ಸೈನ್ಯವು ಸಜ್ಜಾಗಿ ಬಂದು ಕ್ಷುಲ್ಲಕರಾದ ಗಂಧರ್ವ ಭಟರನ್ನು ಹೊಡೆಯಿರಿ, ಎನ್ನುತ್ತಾ ಕೋಪದಿಂದ ಗಂಧರ್ವರನ್ನು ಅಟ್ಟಿಸಿಕೊಂಡು ಹೋಗಿ, ಈ ತೋಪಿನ ಕಪಿಗಳಲ್ಲಿ ಅವರು ಬಂದು ನೋಡಲಿ, ಎಂದು ಗರ್ಜಿಸಲು, ಒದೆತಿಂದ ಗಂಧರ್ವರು ತೋಪಿನೊಳು ಹಿಂದಕ್ಕೆ ಸರಿದು, ಕೌರವ ಸೈನ್ಯಗಳನ್ನು ಒಳಕ್ಕೆ ಬಿಟ್ಟಿಕೊಂಡರು.

ಅರ್ಥ:
ನೃಪ: ರಾಜ; ಸುತ: ಮಕ್ಕಳು; ಪಡಿ: ಸಮಾನವಾದುದು; ಬಲ: ಪ್ರಾಬಲ್ಯ, ಶಕ್ತಿ; ಬಂದು: ಆಗಮಿಸು; ವಿಪುಲ: ಬಹಳ; ಹಲ್ಲಣಿಸು: ಧರಿಸು, ತೊಡು; ಅಪಸದ: ನೀಚ, ಕೀಳವಾದ; ಗಂಧರ್ವ: ದೇವತೆಗಳ ಒಂದು ವರ್ಗ; ಸುಭಟ: ಒಳ್ಳೆಯ ಸೈನಿಕ; ಸೂಟಿ: ವೇಗ, ರಭಸ; ಕುಪಿತ: ಕೋಪ; ಅಟ್ಟು: ಬೆನ್ನುಹತ್ತಿ ಹೋಗು; ತೋಪು: ಗುಂಪು; ಕಪಿ: ಮಮ್ಗ; ಕಾಣು: ತೋರು; ಉಪಚರಿತ: ಉಪಚಾರ ಮಾಡಲ್ಪಟ್ಟ; ಒಳ: ಒಳಕ್ಕೆ ಸರಿ: ತೆರಳು; ಹೊಗು: ಒಳಸೇರು, ಪ್ರವೇಶಿಸು; ವನ: ಕಾಡು;

ಪದವಿಂಗಡಣೆ:
ನೃಪ+ಸುತರ +ಪಡಿಬಲಕೆ+ ಬಂದುದು
ವಿಪುಲ+ಬಲ +ಹಲ್ಲಣಿಸಿ +ಹೊಯ್ +ಹೊಯ್
ಅಪಸದರ +ಗಂಧರ್ವ+ಸುಭಟರನ್+ಎನುತ +ಸೂಟಿಯಲಿ
ಕುಪಿತರರೆ+ಅಟ್ಟಿದರು +ತೋಪಿನ
ಕಪಿಗಳ್+ಆವೆಡೆ +ಕಾಣಬಹುದ್+ಎನುತ್
ಉಪಚರಿತರ್+ಒಳಸರಿಯೆ +ಹೊಗಿಸಿದರ್+ಅವರನ್+ಆ+ ವನವ

ಅಚ್ಚರಿ:
(೧) ಪಡಿಬಲ, ವಿಪುಲಬಲ – ಪದಗಳ ಬಳಕೆ

ಪದ್ಯ ೩೧: ದೇವತೆಗಳೇಕೆ ಆಶ್ಚರ್ಯಚಕಿತರಾದರು?

ರಾಯ ಕೇಳಭಿಮಂತ್ರಿಸಿದನಾ
ಗ್ನೇಯವನು ಹೂಡಿದನು ಸುರಕುಲ
ಬಾಯಬಿಡಲಂಬುಗಿದು ಹಾಯ್ದುದು ಬಿಲುದಿರುವ ನೊದೆದು
ವಾಯು ಪಡಿಬಲವಾಗೆ ಕಿಡಿಗಳ
ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ (ಕರ್ಣ ಪರ್ವ, ೨೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನು ಆಗ್ನೇಯಾಸ್ತ್ರವನ್ನು ಹೂಡಿ ಬಿಡಲು ಅದು ಹೆದೆಯನ್ನೊದೆದು ಮುಂದೆ ಹೋಯಿತು. ಅದಕ್ಕೆ ವಾಯುವಿನ ಬೆಂಬಲವೂ ಒದಗಿತು. ಅದರ ಮುಖದಿಂದ ದಟ್ಟವಾದ ಕಪ್ಪುಹೊಗೆ ಕಿಡಿಗಳು, ದಳ್ಳುರಿಗಳು ಹಬ್ಬುತ್ತಿದ್ದವು. ಅದನ್ನು ನೋಡಿ ದೇವತೆಗಳು ಬಾಯಿಬಿಟ್ಟರು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಅಭಿಮಂತ್ರಿಸಿದ: ಮಂತ್ರದಿಂದ ಆಶೀರ್ವದಿಸಿದ; ಆಗ್ನೇಯ: ಅಗ್ನಿ;ಹೂಡು: ತೊಡು; ಸುರಕುಲ: ದೇವತೆಗಳ ವಂಶ; ಬಾಯಬಿಡು: ಆಶ್ಚರ್ಯ;ಅಂಬು: ಬಾಣ; ಹಾಯ್ದು: ಹಾರು; ಬಿಲುದಿರುವ: ಬಿಲ್ಲಿನ ಹಗ್ಗ; ಒದೆ: ತಳ್ಳು; ವಾಯು: ಗಾಳಿ; ಪಡಿಬಲ: ವೈರಿಸೈನ್ಯ, ಬೆಂಬಲ, ಸಹಾಯ; ಕಿಡಿ: ಬೆಂಕಿ; ಬಾಯಿಧಾರೆ: ಮೊನೆಯಾದ ಅಲಗು; ಹೊದರು:ತೊಡಕು, ತೊಂದರೆ, ಗುಂಪು; ಕರ್ಬೊಗೆ: ಕಪ್ಪು ಹೊಗೆ; ಲವಣಿ: ಕಾಂತಿ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಇರುಳು: ರಾತ್ರಿ; ಚೂಣಿ: ಮೊದಲು;

ಪದವಿಂಗಡಣೆ:
ರಾಯ +ಕೇಳ್+ಅಭಿಮಂತ್ರಿಸಿದನ್
ಆಗ್ನೇಯವನು +ಹೂಡಿದನು +ಸುರಕುಲ
ಬಾಯಬಿಡಲ್+ಅಂಬುಗ್+ಇದು+ ಹಾಯ್ದುದು +ಬಿಲುದಿರುವನ್ +ಒದೆದು
ವಾಯು +ಪಡಿಬಲವಾಗೆ +ಕಿಡಿಗಳ
ಬಾಯಿಧಾರೆಯ +ಹೊದರ +ಕರ್ಬೊಗೆ
ಲಾಯದಲಿ +ಲವಣಿಸುವ+ ದಳ್ಳುರಿದಿರುಳ+ ಚೂಣಿಯಲಿ

ಅಚ್ಚರಿ:
(೧) ಆಗ್ನೇಯಾಸ್ತ್ರದ ಪ್ರಭಾವ – ಕಿಡಿಗಳ ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ

ಪದ್ಯ ೨೮: ಕರ್ಣನು ಭೀಮನನ್ನು ಬಿಟ್ಟು ಯಾರ ಮುಂದೆ ಯುದ್ಧಕ್ಕೆ ನಿಂತನು?

ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ವೈರಿ ಸೈನ್ಯವು ನಾಶವಾಗುತ್ತಿರಲು, ಕೌರವರ ಸೈನ್ಯದ ಮೇಲೆ ಭೀಮನ ರೌದ್ರನರ್ತನವನ್ನು ಗಮನಿಸದೆ, ಕರ್ಣನು ಧರ್ಮಜನ ಕಡೆಗೆ ತನ್ನ ರಥವನ್ನು ತಿರುಗಿಸಿ ಧರ್ಮಜನೆದುರು ಬಂದು, ಯುದ್ಧಕ್ಕೆ ಅಂಜಬೇಡ, ನಿನ್ನ ಕೈಚಳಕವನ್ನು ತೋರಿಸು, ಶೂರನಾಗು ಎಂದು ಗರ್ಜಿಸುತ್ತಾ ರಣರಂಗದಲ್ಲಿ ವಿಪ್ಲವವನ್ನೆಬ್ಬಿಸಿದನು.

ಅರ್ಥ:
ಮುರಿ: ಸೀಳು; ಪಡಿಬಲ: ವೈರಿಸೈನ್ಯ; ಜರುಹು: ಜರುಗಿಸು; ಬಿರು: ಬಿರುಸಾದುದು; ಬಿರುಬು: ಆವೇಶ; ರಥ: ಬಂಡಿ; ನೂಕು: ತಳ್ಳು; ಸಮ್ಮುಖ: ಎದುರು; ಇರಿ: ಚುಚ್ಚು; ಅಂಜು: ಹೆದರು; ಕೈ: ಹಸ್ತ; ಮರೆ: ಜ್ಞಾಪಕದಿಂದ ದೂರವುಳಿ; ಕಲಿ: ಶೂರ; ಬೊಬ್ಬೆ: ಗರ್ಜಿಸು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿಯಾಗು; ತಾಗು: ಮುಟ್ಟು; ಕಲಿ: ಶೂರ;

ಪದವಿಂಗಡಣೆ:
ಮುರಿಯೆ +ಪಡಿಬಲವಾಕೆಯಲಿ +ಬಿಡೆ
ಜರೆದು +ಬಿಟ್ಟನು +ರಥವ +ಭೀಮನ
ಬಿರುಬ+ ಕೊಳ್ಳದೆ+ ನೂಕಿದನು +ಧರ್ಮಜನ +ಸಮ್ಮುಖಕೆ
ಇರಿತಕ್+ಅಂಜದಿರ್+ಅಂಜದಿರು +ಕೈ
ಮರೆಯದಿರು +ಕಲಿಯಾಗ್+ಎನುತ +ಬೊ
ಬ್ಬಿರಿದು +ಧಾಳಾಧೂಳಿಯಲಿ +ತಾಗಿದನು +ಕಲಿಕರ್ಣ

ಅಚ್ಚರಿ:
(೧) ಅಂಜದಿರು; ಧಾಳಾಧೂಳಿ – ಪದದ ಬಳಕೆ

ಪದ್ಯ ೧೬: ಕರ್ಣನ ಸೈನಿಕರು ಭೀಮನ ಮೇಲೆ ಹೇಗೆ ಎರಗಿದರು?

ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು (ಕರ್ಣ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕರ್ಣನು ಅಕ್ಕರೆಯಿಂದ ಪೋಷಿಸಿದ ಸೈನಿಕರು ಹೆಣಗಳ ಬೆಟ್ಟವನ್ನು ಹತ್ತಿ ತುಳಿದು ಮುಂದಕ್ಕೆ ನುಗ್ಗಿ ಭೀಮನ ರಥದ ಕುದುರೆಗಳನ್ನು ಹಿಡಿದು ಹೊಡೆದರು. ಅವನ ಸಾರಥಿಯನ್ನು ಈಟಿಯಿಂದ ತಿವಿದರು. ಭೀಮನ ಮೇಲೂ ಕೈಮಾಡಿದರು.

ಅರ್ಥ:
ಮತ್ತೆ: ಪುನಃ; ಕವಿ: ಮುಚ್ಚು; ಪಡಿಬಲ: ಶತ್ರುಸೈನ್ಯ; ಒತ್ತು: ನೂಕು; ಹೊಕ್ಕು: ಸೇರು; ಹೆಣ: ಶವ; ಬೆಟ್ಟ: ಗುಡ್ಡ; ಹತ್ತು: ಏರು; ಹುಡಿ: ತುಳಿ; ಹಿಡಿ: ಬಂಧಿಸು; ರಥ: ಬಂಡಿ; ಕುದುರೆ: ಅಶ್ವ; ಕುತ್ತು: ಚುಚ್ಚು, ತಿವಿ; ಸಾರಥಿ:ಸೂತ; ತೆತ್ತಿಸು: ಜೋಡಿಸು; ಈಟಿ: ಭರ್ಜಿ; ಮುತ್ತು: ಆವರಿಸು; ಕೈಮಾಡು: ಹೊಡೆದಾಡು ರವಿಸುತ: ಕರ್ಣ; ಸಾಕಿದ: ಪೋಷಿಸಿದ; ಬಳರು: ಸೈನಿಕರು;

ಪದವಿಂಗಡಣೆ:
ಮತ್ತೆ +ಕವಿದುದು+ ಮೇಲೆ +ಪಡಿಬಲವ್
ಒತ್ತಿ +ಹೊಕ್ಕುದು +ಹೆಣದ +ಬೆಟ್ಟವ
ಹತ್ತಿ +ಹುಡಿಹುಡಿ+ ಮಾಡಿ +ಹಿಡಿದರು+ ರಥದ+ ಕುದುರೆಗಳ
ಕುತ್ತಿದರು+ ಸಾರಥಿಯನ್+ಆತನ
ತೆತ್ತಿಸಿದರ್+ಇಟ್ಟಿಯಲಿ +ಭೀಮನ
ಮುತ್ತಿ +ಕೈಮಾಡಿದರು +ರವಿಸುತ+ ಸಾಕಿದ್+ಅತಿಬಳರು

ಅಚ್ಚರಿ:
(೧) ಒತ್ತಿ, ಹತ್ತಿ, ಕುತ್ತಿ, ತೆತ್ತಿ, ಮುತ್ತಿ – ಪ್ರಾಸ ಪದಗಳು