ಪದ್ಯ ೬೩: ಕೌರವನು ಯಾರನ್ನು ಸೇನಾಧಿಪತಿಯನ್ನಾಗಿ ಮಾಡಿದನು?

ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ (ಗದಾ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಕೌರವನು ನುಡಿಯುತ್ತಾ, ಅಶ್ವತ್ಥಾಮ, ನೀನು ಸೇನಾಧಿಪತಿ, ಇವರಿಬ್ಬರೂ ನಿನ್ನ ಸೇನೆ. ನೀವಿನ್ನು ಯುದ್ಧ ಮಾಡಿರಿ ಎಂದು ಅಪ್ಪಣೆ ಕೊಟ್ಟನು. ಅವರು ಮೂವರೂ ಕೌರವನನ್ನು ಬೀಳುಕೊಂಡು ಸೂತರು ತೋರಿಸಿದಂತೆ ರಥವನ್ನೇರಿದರು.

ಅರ್ಥ:
ವರ: ಶ್ರೇಷ್ಠ; ಚಮೂಪತಿ: ಸೇನಾಧಿಪತಿ; ಬಳಿಕ: ನಂತರ; ಚಮು: ಸೇನೆ; ವಿಸ್ತಾರ: ಹರಡು; ರಚಿಸು: ನಿರ್ಮಿಸು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತ್ರಯ: ಮೂರು; ನೇಮಿಸು: ಅಪ್ಪಣೆ ಮಾಡು; ಗುರುಜ: ಗುರುವಿನ ಪುತ್ರ (ಅಶ್ವತ್ಥಾಮ); ನರೇಂದ್ರ: ರಾಜ; ಬೀಳುಕೊಂಡು: ತೆರಳು; ಕರೆದು: ಬರೆಮಾದು; ಸೂತ: ಸಾರಥಿ; ಸನ್ನೆ: ಗುರುತು; ಬಂದು: ಆಗಮಿಸು; ಏರು: ಮೇಲೆ ಹತ್ತು; ರಥ: ಬಂಡಿ;

ಪದವಿಂಗಡಣೆ:
ವರ +ಚಮೂಪತಿ+ ನೀನು +ಬಳಿಕ್
ಇಬ್ಬರು+ ಚಮೂ+ವಿಸ್ತಾರವ್+ಎನೆ +ವಿ
ಸ್ತರಿಸಿ+ ರಚಿಸುವುದೆಂದು +ರಥಿಕ+ತ್ರಯಕೆ+ ನೇಮಿಸಿದ
ಗುರುಜ +ಕೃಪ +ಕೃತವರ್ಮರ್+ಈ+ ಮೂ
ವರು +ನರೇಂದ್ರನ+ ಬೀಳುಕೊಂಡರು
ಕರೆದು +ಸೂತರ+ ಸನ್ನೆಯಲಿ +ಬಂದೇರಿದರು +ರಥವ

ಅಚ್ಚರಿ:
(೧) ಚಮೂಪತಿ, ಚಮೂವಿಸ್ತಾರ – ಪದಗಳ ಬಳಕೆ
(೨) ಇಬ್ಬರು, ಮೂವರು – ೨, ೫ ಸಾಲಿನ ಮೊದಲ ಪದ

ಪದ್ಯ ೫೭: ಕೌರವನ ಮುಖವೇಕೆ ಅರಳಿತು?

ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಯಣನ (ಗದಾ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸೇನಾ ಪರಿವಾರದ ದೃಷ್ಟಿಗಳು ಬಲರಾಮನತ್ತ ತಿರುಗಿದವು. ಅವನ ಆಗಮನದಿಂದ ಕೌರವನ ಮುಖವರಳಿತು. ಪಾಂಡವರು ಭಯದಿಂದ ವೀರನಾರಾಯಣನ ಆಶ್ರಯಕ್ಕೆ ಬಂದರು.

ಅರ್ಥ:
ನಿಖಿಳ: ಎಲ್ಲಾ; ಪರಿವಾರ: ಬಂಧುಜನ; ಅನುಸಂಧಾನ: ಪರಿಶೀಲನೆ, ಪ್ರಯೋಗ; ದೃಷ್ಟಿ: ನೋಟ; ತಿರುಗು: ಸುತ್ತು; ಮುಸಲ: ಗದೆ; ಧರ: ಧರಿಸು; ಆಗಮನ: ಬಂದು; ಸಂಗತಿ: ಜೊತೆ, ಸಂಗಡ; ನರೇಂದ್ರ: ಇಂದ್ರ; ಮುಖ: ಆನನ; ಸುಮ್ಮಾನ: ಸಂತಸ; ಹೊಳೆ: ಪ್ರಕಾಶ; ಭಯ: ಅಂಜಿಕೆ; ಸೂನು: ಮಗ; ಮರೆ: ಅವಿತುಕೋ;

ಪದವಿಂಗಡಣೆ:
ಆ +ನಿಖಿಳ +ಪರಿವಾರದ್+ಅನುಸಂ
ಧಾನ +ದೃಷ್ಟಿಗಳತ್ತ+ ತಿರುಗಿದವ್
ಏನನೆಂಬೆನು +ಮುಸಲಧರನ್+ಆಗಮನ +ಸಂಗತಿಯ
ಈ +ನರೇಂದ್ರನ+ ಸುಮುಖತೆಯ +ಸು
ಮ್ಮಾನ +ಹೊಳೆದುದು +ಭಯದಿ +ಕುಂತೀ
ಸೂನುಗಳು +ಮರೆಗೊಳುತಲಿರ್ದುದು+ ವೀರನರಯಣನ

ಅಚ್ಚರಿ:
(೧) ಬಲರಾಮನನ್ನು ಮುಸಲಧರ ಎಂದು ಕರೆದಿರುವುದು
(೨) ಸುಮುಖತೆ, ಸುಮ್ಮಾನ, ಸೂನು – ಸು ಕಾರದ ಪದಗಳ ಬಳಕೆ

ಪದ್ಯ ೧೯: ಸೈನಿಕರು ಯಾರ ಆಶ್ರಯಕ್ಕೆ ಬಂದರು?

ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾ ನರೇಂದ್ರನಿಕಾಯ ಹೊಕ್ಕುದು ರವಿಸುತನ ಮರೆಯ (ದ್ರೋಣ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಬ್ಬಬ್ಬಾ, ಹಾಲಾಹಲ ವಿಷದ ಉರಿಯನ್ನು ತಡೆದುಕೊಳ್ಳಲಾಗದೇ, ದೇವತೆಗಳೂ ರಾಕ್ಷಸರೂ ಶಿವನ ಮರೆಹೊಕ್ಕಂತೆ, ಘಟೋತ್ಕಚ ಪರ್ವತದಿಂದ ಕಡೆಯಲ್ಪಟ್ಟ ಸೈನ್ಯ ಸಮುದ್ರದ ಸೋಲಿನ ವಿಷದುರಿಯನ್ನು ತಾಳಲಾರದೆ ರಾಜರು ಕರ್ಣನ ಆಶ್ರಯಕ್ಕೆ ಬಂದರು.

ಅರ್ಥ:
ಹೇಳು: ತಿಳಿಸು; ಬಹಳ: ತುಂಬ; ಅಂಭೋನಿಧಿ: ಸಾಗರ; ವಿಷ: ಗರಳ ಉರಿ: ಬೆಂಕಿ; ಧಾಳಿ: ಆಕ್ರಮಣ; ದಾನವ: ರಾಕ್ಷಸ; ಅಮರ: ದೇವತೆ; ಇಂದುಮೌಳಿ: ಶಂಕರ; ಮರೆ: ಆಶ್ರಯ; ಹೊಗು: ತೆರಳು; ದಾನವ: ರಾಕ್ಷಸ; ಅಚಳ: ಬೆಟ್ಟ; ಮಥಿತ: ಕಡಿಯಲ್ಪಟ್ಟ; ಸೇನ: ಸೈನ್ಯ; ಪರಿಭವ: ಸೋಲು; ನರೇಂದ್ರ: ರಾಜ; ನಿಕಾಯ: ಗುಂಪು; ಹೊಕ್ಕು: ಸೇರು; ರವಿಸುತ: ಸೂರ್ಯನ ಮಗ (ಕರ್ಣ); ಮರೆ: ಶರಣಾಗತಿ;

ಪದವಿಂಗಡಣೆ:
ಏನ +ಹೇಳುವೆನಮಮ+ ಬಹಳ+
ಅಂಭೋನಿಧಿಯ +ವಿಷದುರಿಯ +ಧಾಳಿಗೆ
ದಾನವ+ಅಮರರ್+ಇಂದುಮೌಳಿಯ +ಮರೆಯ +ಹೊಗುವಂತೆ
ದಾನವ+ಅಚಳ +ಮಥಿತ +ಸೇನಾಂ
ಭೋನಿಧಿಯ +ಪರಿಭವದ +ವಿಷದುರಿಗ್
ಆ +ನರೇಂದ್ರ+ನಿಕಾಯ +ಹೊಕ್ಕುದು +ರವಿಸುತನ+ ಮರೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಹಳಾಂಭೋನಿಧಿಯ ವಿಷದುರಿಯ ಧಾಳಿಗೆ ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
(೨) ಅಂಭೋನಿಧಿ, ಸೇನಾಂಭೋನಿಧಿ – ೨, ೫ ಸಾಲಿನ ಮೊದಲ ಪದ
(೩) ದಾನವ – ೩,೪ ಸಾಲಿನ ಮೊದಲ ಪದ

ಪದ್ಯ ೨: ದ್ರೋಣನ ಆಕ್ರಮಣ ಹೇಗಿತ್ತು?

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಜೀಯಾ ಏನು ಹೇಳಲಿ, ಕಾಳ್ಗಿಚ್ಚು ಅಡವಿಯಲ್ಲಿ ಹಬ್ಬಿದಂತೆ ದ್ರೋಣನು ಪ್ರಖ್ಯಾತರಾದ ಭಟರನ್ನು ಸಂಹರಿಸಿದನು. ಅವನು ಹೋದ ದಾರಿಯಲ್ಲಿ ಪಾಂಡವಸೇನೆ ಕಲುಕಿತು. ಕಡಲು ಬತ್ತಿದರೆ ಮೀನುಗಳು ಮರುಗುವಂತೆ ವೀರರು ಮರುಗಿದರು. ದ್ರೋಣನು ಧರ್ಮಪುತ್ರನ ಬೆನ್ನು ಹತ್ತಿ ಹೋದನು

ಅರ್ಥ:
ಹೇಳು: ತಿಳಿಸು; ಜೀಯ: ಒಡೆಯ; ಕೃಶಾನು: ಅಗ್ನಿ, ಬೆಂಕಿ; ಅಡವಿ: ಕಾದು; ನಿರೂಢಿ: ವಿಶೇಷ ರೂಢಿಯಾದ, ಸಾಮಾನ್ಯ; ಭಟ: ಸೈನಿಕ; ಮುರಿ: ಸೀಳು; ಮಾರ್ಗ: ದಾರಿ; ಸೇನೆ: ಸೈನ್ಯ; ಕಲಕು: ಅಲ್ಲಾಡಿಸು; ಬತ್ತು: ಒಣಗು, ಆರು; ಉದಧಿ: ಸಾಗರ; ಮೀನು: ಮತ್ಸ್ಯ; ಮರುಗು: ತಳಮಳ, ಸಂಕಟ; ಭಟರು: ಸೈನಿಕ; ನರೇಂದ್ರ: ರಾಜ; ಅಳವಿ: ಶಕ್ತಿ; ಬೆಂಬತ್ತು: ಹಿಂಬಾಲಿಸು;

ಪದವಿಂಗಡಣೆ:
ಏನ+ ಹೇಳಲುಬಹುದು +ಜೀಯ +ಕೃ
ಶಾನುವ್+ಅಡವಿಯಲಾಡಿದಂದದಿನ್
ಆ +ನಿರೂಢಿಯ+ ಭಟರ+ ಮುರಿದನು +ಮುರಿದ+ ಮಾರ್ಗದಲಿ
ಸೇನೆ +ಕಲಕಿತು +ಬತ್ತಿದ್+ಉದಧಿಯ
ಮೀನಿನಂತಿರೆ +ಮರುಗಿದರು +ಭಟರ್
ಆ+ ನರೇಂದ್ರನನ್+ಅಳವಿಯಲಿ +ಬೆಂಬತ್ತಿದನು +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೃಶಾನುವಡವಿಯಲಾಡಿದಂದದಿ; ಬತ್ತಿದುದಧಿಯ ಮೀನಿನಂತಿರೆ ಮರುಗಿದರು ಭಟರ್

ಪದ್ಯ ೯೦: ಅರ್ಜುನನು ಭೀಮನನ್ನು ಏನು ಹೇಳಿ ತಡೆದನು?

ಏನಿದೇನೈ ಭೀಮ ನಿಲು ಯಮ
ಸೂನು ಶಿವ ಶಿವ ಗುರುವಲಾ ನಮ
ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು
ಈ ನರೇಂದ್ರಗೆ ಸರಿಯೆ ಕುಂತೀ
ಸೂನುವೇ ಪ್ರಾಣಾರ್ಥದಿಂದ ಸ
ಘಾನನೈ ನಮಗೀತನೇ ಗತಿ ಯೆಂದನಾ ಪಾರ್ಥ (ಸಭಾ ಪರ್ವ, ೧೫ ಸಂಧಿ, ೯೦ ಪದ್ಯ)

ತಾತ್ಪರ್ಯ:
ಭೀಮ ಏನಿದು, ಶಿವ ಶಿವಾ, ಏನು ಮಾಡುತ್ತಿರುವೆ, ನಿಲ್ಲು, ಯುಧಿಷ್ಠಿರನು ನಮಗೆ ಗುರು. ದ್ರೌಪದಿಯು ಸೇರಿ ಸಮಸ್ತ ವಸ್ತುಗಳೂ ಇವನಿಗೆ ಸರಿಸಮಾನವಾಗಲಾರವು. ಹೇಚ್ಚೇನು, ಪ್ರಾಣದ ಐಶ್ವರ್ಯಕ್ಕಿಂತಲೂ ಇವನೇ ನಮಗೆ ಶ್ರೇಷ್ಠ ಎಂದು ಹೇಳಿ ಭೀಮನನ್ನು ತಡೆದನು.

ಅರ್ಥ:
ನಿಲು: ನಿಲ್ಲು, ತಡೆ; ಸೂನು: ಮಗ; ಗುರು: ಆಚಾರ್ಯ; ನಿತಂಬಿನಿ: ಹೆಣ್ಣು; ಆದಿ: ಮೊದಲಾದ; ಸಮಸ್ತ: ಎಲ್ಲಾ; ವಸ್ತು: ಸಾಮಗ್ರಿ; ನರೇಂದ್ರ: ರಾಜ; ಸರಿ: ಸಮ; ಪ್ರಾಣ: ಜೀವ; ಘನ: ಶ್ರೇಷ್ಠ; ಗತಿ: ಅವಸ್ಥೆ;

ಪದವಿಂಗಡಣೆ:
ಏನಿದ್+ಏನೈ +ಭೀಮ +ನಿಲು+ ಯಮ
ಸೂನು +ಶಿವ+ ಶಿವ+ ಗುರುವಲಾ +ನಮಗ್
ಈ+ ನಿತಂಬಿನಿ+ಆದಿಯಾದ+ ಸಮಸ್ತ+ ವಸ್ತುಗಳು
ಈ +ನರೇಂದ್ರಗೆ+ ಸರಿಯೆ+ ಕುಂತೀ
ಸೂನುವೇ+ ಪ್ರಾಣಾರ್ಥದಿಂದ +ಸ
ಘಾನನೈ+ ನಮಗ್+ಈತನೇ+ ಗತಿ+ ಯೆಂದನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಆಶ್ಛರ್ಯವನ್ನು ವಿವರಿಸುವ ಪರಿ – ಏನಿದೇನೈ ಭೀಮ, ಶಿವ ಶಿವ
(೨) ಧರ್ಮರಾಯನನ್ನು ಇತರ ತಮ್ಮಂದಿರು ನೋಡುವ ಪರಿ – ಗುರುವಲಾ ನಮಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು ಈ ನರೇಂದ್ರಗೆ ಸರಿಯೆ

ಪದ್ಯ ೨೧: ದುರ್ಯೋಧನ ಶಕುನಿ ಏನು ಉಪಾಯವನ್ನು ಮಾಡಿದರು?

ನೀನರುಹು ನಿನ್ನಯ್ಯ ಮನಗೊ
ಟ್ಟಾ ನರೇಂದ್ರರ ಕರೆಸಿ ಕೊಟ್ಟರೆ
ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
ನೀನು ಹೋಗಿಯೆ ಎನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ (ಸಭಾ ಪರ್ವ, ೧೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಅಳಿಯನಿಗೆ ತನ್ನ ಕುತಂತ್ರದ ಬುದ್ಧಿಯನ್ನು ಹೇಳುತ್ತಾ, ದುರ್ಯೋಧನ ನಿನ್ನ ತಂದೆಗೆ ನೀನೇ ಹೇಳು, ಆತನು ಅದಕ್ಕೊಪ್ಪಿ ಪಾಂಡವರನ್ನು ಕರೆಸಿಕೊಟ್ಟರೆ, ಸಮಸ್ತ ಭೂಮಿಯನ್ನೂ ನಿನಗೇ ಸಿಕ್ಕುವಂತೆ ಮಾಡುತ್ತೇನೆ ಎನ್ನಲು ಕೌರವನು ಮಾವ ನೀವೇ ಹೋಗಿ ನನ್ನ ದುಃಖವನ್ನು ನನ್ನ ತಂದೆಗೆ ತಿಳಿಸಿ, ಆಗ ಅವರೇ ನನ್ನನ್ನು ಕರೆಸುತ್ತಾರೆ ಆಗ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಅರುಹು: ತಿಳಿಸು, ಹೇಳು; ಅಯ್ಯ: ತಂದೆ; ಮನ: ಮನಸ್ಸು; ನರೇಂದ್ರ: ರಾಜ; ಕರೆಸು: ಬರೆಮಾಡು; ಮಾನನಿಧಿ: ಗೌರವಯುತನಾದ; ಸಕಲ: ಎಲ್ಲಾ; ಧರೆ: ಭೂಮಿ; ಸೇರಿಸು: ಜೋಡಿಸು; ಕಡು: ತುಂಬ; ದುಮ್ಮಾನ: ದುಃಖ; ಬೊಪ್ಪ: ತಂದೆ; ನುಡಿ: ಮಾತಾಡು, ತಿಳಿಸು; ಕರೆಸು: ಬರೆಮಾದು; ಜನಕ: ತಂದೆ; ನಿಜ: ನೈಜ, ವಸ್ತುಸ್ಥಿತಿ; ಮತ: ವಿಚಾರ;

ಪದವಿಂಗಡಣೆ:
ನೀನ್+ಅರುಹು +ನಿನ್+ಅಯ್ಯ +ಮನಗೊ
ಟ್ಟ್ + ಆ+ ನರೇಂದ್ರರ +ಕರೆಸಿ+ ಕೊಟ್ಟರೆ
ಮಾನನಿಧಿಯೇ +ಸಕಲ+ ಧರೆಯನು+ ಸೇರಿಸುವೆ +ನಿನಗೆ
ನೀನು +ಹೋಗಿಯೆ +ಎನ್ನ +ಕಡು+ ದು
ಮ್ಮಾನವನು+ ಬೊಪ್ಪಂಗೆ +ನುಡಿದರೆ
ತಾನೆ +ಕರೆಸುವನ್+ಅರುಹುವೆನು +ಜನಕಂಗೆ +ನಿಜಮತವ

ಅಚ್ಚರಿ:
(೧) ಅಯ್ಯ, ಬೊಪ್ಪ, ಜನಕ – ಸಮನಾರ್ಥಕ ಪದಗಳು
(೨) ಶಕುನಿಯ ಭರವಸೆ – ನರೇಂದ್ರರ ಕರೆಸಿ ಕೊಟ್ಟರೆ ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
(೩) ದುರ್ಯೋಧನನನ್ನು ಮಾನನಿಧಿ ಎಂದು ಶಕುನಿ ಕರೆದು ಹುರಿದುಂಬಿಸುತ್ತಿರುವುದು

ಪದ್ಯ ೩೫: ಅರ್ಜುನನು ಕೃಷ್ಣನಿಗೆ ಏನು ಹೇಳಿದ?

ಏನ ಹೇಳುವೆನಡ್ಡ ಹಾಯಿದು
ನೀನೆ ಕೆಡಿಸಿದೆಯೆಮ್ಮನಲ್ಲದ
ಡೇನ ಮಾಡೆನು ಸತ್ಯಶೌರ್ಯದ ಹಾನಿ ಹರಿಬದಲಿ
ಈ ನರೇಂದ್ರನ ಕೊಂದ ನನಗಿ
ನ್ನೇನು ದೇಹಕೆ ತಲೆಯೊಡನೆ ಸಂ
ಧಾನವೇ ಸಾಕೆನ್ನ ಕೈದುವನೆನಗೆ ನೀಡೆಂದ (ಕರ್ಣ ಪರ್ವ, ೧೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅರ್ಜುನನು, ಏನೆಂದು ಹೇಳಲಿ ಕೃಷ್ಣ, ಅಡ್ಡಬಂದು ಕೆಲಸವನ್ನು ಕೆಡಿಸಿ ಬಿಟ್ಟೆ, ನನ್ನ ಸತ್ಯದ ಹಾನಿಯನ್ನು ತಪ್ಪಿಸಲು ಮಾತಿನ ಬಾಣಗಲೀಮ್ದ ಅರಸನನ್ನು ಕೊಂದ ನನಗೆ, ದೇಹದ ಮೇಲೆ ತಲೆ ಇರಬಹುದೇ? ಸಾಕು ನನ್ನ ಆಯುಧವನ್ನು ನನಗೆ ಕೊಡು ಎಂದು ಅರ್ಜುನನು ಕೃಷ್ಣನಿಗೆ ತಿಳಿಸಿದನು.

ಅರ್ಥ:
ಹೇಳು: ತಿಳಿಸು; ಅಡ್ಡ: ಮಧ್ಯ; ಹಾಯಿ: ಮೇಲೆಬೀಳು; ಕೆಡಿಸು: ಹಾಳುಮಾಡು; ಸತ್ಯ: ದಿಟ, ನಿಜ; ಶೌರ್ಯ: ಬಲ; ಹಾನಿ: ಹಾಳು; ಹರಿಬ: ಕೆಲಸ, ಕಾರ್ಯ; ನರೇಂದ್ರ: ರಾಜ; ಕೊಂದು: ಸಾಯಿಸು; ದೇಹ: ಶರೀರ; ತಲೆ: ಶಿರ; ಸಂಧಾನ: ಹೊಂದಿಸುವುದು; ಸಾಕು: ನಿಲ್ಲಿಸು; ಕೈದು: ಕತ್ತಿ; ನೀಡು: ಕೊಡು;

ಪದವಿಂಗಡಣೆ:
ಏನ+ ಹೇಳುವೆನ್+ಅಡ್ಡ +ಹಾಯಿದು
ನೀನೆ +ಕೆಡಿಸಿದೆ+ಎಮ್ಮನ್+ಅಲ್ಲದಡ್
ಏನ+ ಮಾಡೆನು +ಸತ್ಯ+ಶೌರ್ಯದ +ಹಾನಿ +ಹರಿಬದಲಿ
ಈ +ನರೇಂದ್ರನ +ಕೊಂದ +ನನಗಿ
ನ್ನೇನು +ದೇಹಕೆ +ತಲೆಯೊಡನೆ +ಸಂ
ಧಾನವೇ +ಸಾಕೆನ್ನ +ಕೈದುವನ್+ಎನಗೆ +ನೀಡೆಂದ

ಪದ್ಯ ೧೧: ಅರ್ಜುನನಿಗೇಕೆ ಅಳ್ಳೆದೆಯಾಯಿತು?

ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ (ಕರ್ಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ದುಃಖವನ್ನು ತಡೆಯಲಾರದೆ, ನಮ್ಮ ಸೇನೆ ಸೋತು ಹಿಂದಿರುಗಲಿ, ಕೌರವನ ದುಮ್ಮಾನವಳಿದು ಸಂತೋಷ ಉಕ್ಕಲಿ, ನನ್ನ ಮನಸ್ಸಿನಲ್ಲಿ ಯಾವ ಅಸಂತೋಷವಿಲ್ಲ, ಹಸ್ತಿನಾವತಿಯಲ್ಲಿ ವಿಜಯಧ್ವಜವನ್ನು ಕೌರವನೇ ಕಟ್ಟಲಿ ನನಗೆ ಚಿಂತೆಯಿಲ್ಲ. ನಮ್ಮ ಅಣ್ಣನ ಸಿರಿಮುಖದಲ್ಲಿ ದುಃಖ ಮೂಡಿತೋ ಸ್ವರ್ಗದ ಸಂಧಾನವೋ ನಾನು ತಿಳಿಯೆನು, ಅಳ್ಳೆದೆಯಿಂದ ತೋಳಲುತ್ತಿದ್ದೇನೆ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಸೇನೆ: ಸೈನ್ಯ; ಮುರಿ: ಸೀಳು; ದುಮ್ಮಾನ: ಚಿತ್ತಕ್ಷೋಭೆ, ದುಃಖ; ಹರಿ: ಕೊನೆಗೊಳ್ಳು; ಚಿತ್ತ: ಮನಸ್ಸು; ಗ್ಲಾನಿ: ಅಸಂತೋಷ, ಅವನತಿ; ಕಟ್ಟು: ನಿರ್ಮಿಸು; ಗುಡಿ: ಮನೆ, ಆಲಯ; ಗಜನಗರ: ಹಸ್ತಿನಾಪುರ; ನರೇಂದ್ರ: ರಾಜ; ಮೊಗ: ಮುಖ; ಸಿರಿ: ಐಶ್ವರ್ಯ; ಸಿರಿಮೊಗ: ಚಿನ್ನದಂತ ಮುಖ; ಮೇಣ್: ಮತ್ತು; ಸುರಪುರ: ಸ್ವರ್ಗ; ಸಂಧಾನ: ಹೊಂದಿಸುವುದು, ಸಂಯೋಗ; ಅಳ್ಳೆದೆ: ಹೆದರಿಕೆ, ನಡುಗುವ ಎದೆ; ಅರಿ: ತಿಳಿ;

ಪದವಿಂಗಡಣೆ:
ಸೇನೆ+ ಮುರಿಯಲಿ +ಕೌರವನ +ದು
ಮ್ಮಾನ +ಹರಿಯಲಿ +ನನಗೆ +ಚಿತ್ತ
ಗ್ಲಾನಿಯೆಳ್+ಅನಿತಿಲ್ಲ+ ಕಟ್ಟಲಿ +ಗುಡಿಯ +ಗಜನಗರ
ಆ +ನರೇಂದ್ರನ +ಸಿರಿಮೊಗಕೆ +ದು
ಮ್ಮಾನವೋ +ಮೇಣ್ +ಸುರಪುರಕೆ+ ಸಂ
ಧಾನವೋ +ನಾನರಿಯೆನ್+ಅಳ್ಳೆದೆಯಾದುದ್+ಎನಗೆಂದ

ಅಚ್ಚರಿ:
(೧) ದುಮ್ಮಾನವೋ, ಸಂಧಾನವೋ; ಮುರಿಯಲಿ, ಹರಿಯಲಿ – ಪ್ರಾಸ ಪದಗಳು
(೨) ಪರಾಕ್ರಮಿಯಾದ ಅರ್ಜುನನಿಗೂ ಅಳ್ಳೆದೆಯಾದುದು ಎಂದು ತಿಳಿಸುವ ಪದ್ಯ