ಎಲವೊ ಶರಸಂನ್ಯಾಸವನು ಕುರು
ತಿಲಿಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಮ್ಮೀ ಸ್ವಾಮಿಕಾರ್ಯದಲಿ
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ (ಗದಾ ಪರ್ವ, ೧೦ ಸಂಧಿ, ೧೮ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನು ನುಡಿಯುತ್ತಾ, ಎಲೇ ಭೀಮ ಕೌರವನ ಪ್ರಾಣವು ಹೋಗಲು, ನಾನು ಶಸ್ತ್ರ ಸಂನ್ಯಾಸವನ್ನು ಮಾಡಿದ್ದೇನೆ. ಈಗ ಅತ್ತು ಫಲವೇನು. ನಿನ್ನವರ ತಲೆಗಲನ್ನು ಹೊಯ್ದೆ, ನೀವು ಬೆದರಿ ಅಡಗಿಕೊಂಡು ಜೀವವನ್ನುಳಿಸಿಕೊಂದಿರಿ. ಇಲ್ಲದಿದ್ದರೆ ನಿಮ್ಮನ್ನೂ ಕೊಲ್ಲುತ್ತಿದ್ದೆ ಎಂದು ಅಶ್ವತ್ಥಾಮನು ನುಡಿದನು.
ಅರ್ಥ:
ಶರ: ಬಾಣ; ಸಂನ್ಯಾಸ: ವಿರಕ್ತಿ, ವೈರಾಗ್ಯ; ತಿಲಕ: ಶ್ರೇಷ್ಠ; ಅವಸಾನ: ಸಾವು; ಅಳಲು: ದುಃಖಿಸು; ಫಲ: ಪ್ರಯೋಜನ; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ತಲೆ: ಶಿರ; ಹೊಯ್ದೆ: ಹೊಡೆ; ಅಳುಕು: ಹೆದರು; ರಣ: ಯುದ್ಧ; ಅಡಗು: ಬಚ್ಚಿಟ್ಟುಕೋ; ಜೀವನ: ಪ್ರಾಣ; ಉಳುಹಿ: ಕಾಪಾಡು; ಕೊಲು: ಸಾಯಿಸು; ದ್ರೌಣಿ: ಅಶ್ವತ್ಥಾಮ;
ಪದವಿಂಗಡಣೆ:
ಎಲವೊ +ಶರ+ಸಂನ್ಯಾಸವನು+ ಕುರು
ತಿಲಿಕನ್+ಅವಸಾನದಲಿ +ಮಾಡಿದೆನ್
ಅಳಲಿದಡೆ +ಫಲವೇನು+ ನಮ್ಮೀ +ಸ್ವಾಮಿಕಾರ್ಯದಲಿ
ತಲೆಯ +ಹೊಯ್ದೆನು +ನಿನ್ನವರ+ ನೀವ್
ಅಳುಕಿ +ರಣದೊಳಗ್+ಅಡಗಿ +ಜೀವವನ್
ಉಳುಹಿಕೊಂಡಿರಿ +ಕೊಲುವೆನ್+ಅಲ್ಲದೊಡ್+ಎಂದನಾ +ದ್ರೌಣಿ
ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ನೀವಳುಕಿ ರಣದೊಳಗಡಗಿ ಜೀವವನುಳುಹಿಕೊಂಡಿರಿ
(೨) ದುರ್ಯೋಧನನನ್ನು ಕುರುತಿಲಕ ಎಂದು ಕರೆದಿರುವುದು