ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವು ನಿನ್ನಿಚ್ಛೆ ಹೋಗೆಂದ (ಆದಿ ಪರ್ವ, ೨ ಸಂಧಿ, ೨೯ ಪದ್ಯ)
ತಾತ್ಪರ್ಯ:
ಭೀಷ್ಮನು ಪಲ್ಲಕ್ಕಿಯನ್ನು ತರಿಸಿ, ಕೋಲನ್ನು ಹಿಡಿದ ವಂದಿಮಾಗಧರು ಹೊಗಳುತಿರಲು, ಯೋಜನಗಂಧಿಯನ್ನು ಕರೆದುಕೊಂಡು ಬಂದು ಶಂತನುವಿನೊಡನೆ ಮದುವೆ ಮಾಡಿಸಿದನು. ಭೀಷ್ಮನು ಮಾಡಿದ ಪ್ರತಿಜ್ಞೆಯನ್ನು ಕೇಳಿದ ಶಂತನು ಅವನಿಗೆ ನಿನ್ನಿಚ್ಛೆ ಬಂದಾಗ ಮರಣ ಬರಲಿ ಎಂಬ ವರವನ್ನು ಕೊಟ್ಟನು.
ಅರ್ಥ:
ತರಿಸು: ಬರೆಮಾಡು; ದಂಡಿ: ಕೋಲು; ದಂಡಿಗೆ: ಪಲ್ಲಕ್ಕಿ; ಚರ: ಸೇವಕ; ಉಗ್ಗಡಣೆ: ಕೂಗು; ಸರಸಿರುಹಮುಖಿ: ಕಮಲದಂತ ಮುಖವುಳ್ಳವಳು, ಸುಂದರಿ, ಹೆಣ್ಣು; ಮದುವೆ: ವಿವಾಹ; ಪಿತ: ತಮ್ದೆ; ಉರವಣಿಸು: ಉತ್ಸಾಹ, ಆತುರಿಸು; ಮಗ: ಪುತ್ರ; ನುಡಿ: ಮಾತಾಡು; ಭಾಷೆ: ನುಡಿ; ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ವರ: ಅನುಗ್ರಹ, ಕೊಡುಗೆ; ಮರಣ: ಸಾವು; ಇಚ್ಛೆ: ಆಸೆ; ಹೋಗು: ತೆರಳು;
ಪದವಿಂಗಡಣೆ:
ತರಿಸಿದನು+ ದಂಡಿಗೆಯ +ದಂಡಿಯ
ಚರರ +ನೆಲನ್+ಉಗ್ಗಡಣೆಯಲಿ +ಸರ
ಸಿರುಹಮುಖಿಯನು +ತಂದು+ ಮದುವೆಯ +ಮಾಡಿದನು +ಪಿತಗೆ
ಉರವಣಿಸಿ +ಮಗ +ನುಡಿದ +ಭಾಷೆಯನ್
ಅರಸ +ಕೇಳಿದು +ಬಳಿಕ +ಭೀಷ್ಮಗೆ
ವರವನಿತ್ತನು+ ಮರಣವು +ನಿನ್ನಿಚ್ಛೆ+ ಹೋಗೆಂದ
ಅಚ್ಚರಿ:
(೧) ದಂಡಿ ಪದದ ಬಳಕೆ – ದಂಡಿಗೆಯ ದಂಡಿಯ ಚರರ
(೨) ಯೋಜನಗಂಧಿಯನ್ನು ಕರೆದ ಪರಿ – ಸರಸಿರುಹಮುಖಿ