ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ (ಆದಿ ಪರ್ವ, ೩ ಸಂಧಿ, ೨೫ ಪದ್ಯ)
ತಾತ್ಪರ್ಯ:
ಅವನು ಕಣ್ಣಿನಲ್ಲಿ ಆನಂದಾಶ್ರುಗಳನ್ನು ತುಂಬಿಕೊಂದು, ನನಗೂ ಈ ಬಾಲಕನಿಗೂ ಯಾವ ವಿಶೇಷವಾದ ಋಣಾನುಬಂಧವಿದ್ದೀತು. ಈಗ ಮೂರು ಲೋಕಗಳ ರಾಜಪದವಿಯು ದೊರೆತರೂ ಅದನ್ನು ಹುಲ್ಲುಕಡ್ದಿಯೆಮ್ದು ಬಗೆಯುತ್ತೇನೆಂದು ಯೋಚಿಸುತ್ತಾ ಸ್ಪರ್ಶಮಣಿಯಂತಿದ್ದ ಆ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿ ತನ್ನ ಹೆಂಡತಿಗೆ ಕೊಟ್ಟನು.
ಅರ್ಥ:
ತೃಣ: ಹುಲ್ಲು; ತ್ರೈಲೋಕ: ಮೂರು ಲೋಕ; ರಾಜ್ಯ: ರಾಷ್ಟ್ರ; ಋಣ: ಹಂಗು; ವಿಶೇಷ: ಪ್ರತ್ಯೇಕವಾದುದು; ಮೇಣ್; ಅಥವ; ಬಾಲಕ: ಹುಡುಗ; ಕ್ಷಣ: ಸಮಯ; ಒದಗು: ಲಭ್ಯ, ದೊರೆತುದು; ಬಾಷ್ಪ: ಕಣ್ಣೀರು; ಲುಳಿ: ರಭಸ; ಮನೆ: ಆಲಯ; ಪರುಷ: ಸ್ಪರ್ಶಮಣಿ; ರಮಣಿ: ಹೆಂಡತಿ, ಚೆಲುವೆ; ಕೊಳ್ಳು: ತೆಗೆದುಕೋ; ಅರ್ಭಕ: ಶಿಶು, ಸಣ್ಣ ಹುಡುಗ
ಪದವಿಂಗಡಣೆ:
ತೃಣವಲಾ +ತ್ರೈಲೋಕ್ಯ +ರಾಜ್ಯವ
ಗಣಿಸುವೆನೆ +ತಾನಿನ್ನು+ ತನ್ನಲಿ
ಋಣ+ವಿಶೇಷವಿದೇನೊ +ಮೇಣ್ +ಈ +ಬಾಲಕಂಗೆನುತ
ಕ್ಷಣದೊಳ್+ಒದಗುವ +ಬಾಷ್ಪಲುಳಿತೇ
ಕ್ಷಣನು+ ಬಂದನು +ಮನೆಗೆ +ಪರುಷದ
ಕಣಿಯ +ತಂದೆನು +ರಮಣಿ +ಕೊಳ್ಳೆಂದ್+ಇತ್ತನ್+ಅರ್ಭಕನ
ಅಚ್ಚರಿ:
(೧) ಮಗನನ್ನು ಪಡೆದ ಸಂತೋಷವನ್ನು ಹೋಲಿಸುವ ಪರಿ – ತೃಣವಲಾ ತ್ರೈಲೋಕ್ಯ ರಾಜ್ಯವಗಣಿಸುವೆನೆ
(೨) ಕ್ಷಣ ಪದದ ಬಳಕೆ – ಕ್ಷಣದೊಳೊದಗುವ ಬಾಷ್ಪಲುಳಿತೇಕ್ಷಣನು