ತ್ರಾಣವಿಮ್ಮಡಿಸಿತ್ತು ಕೋಪದ
ಕೇಣವೆಚ್ಚರಿಸಿದಡೆ ನೃಪ ಸ
ತ್ರಾಣದಲಿ ತನಿಬಿಗಿಯೆ ನುಗ್ಗಾಯ್ತಾಯಸ ಪ್ರತಿಮೆ
ಮಾಣು ಭಯವನು ಭೀಮ ಭೂಪನ
ಕಾಣು ಹೋಗೆನೆ ನಡುಗಿ ಭುವನ
ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ (ಗದಾ ಪರ್ವ, ೧೧ ಸಂಧಿ, ೪೧ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನ ಶಕ್ತಿಯು ಇಮ್ಮಡಿಯಾಯಿತು. ಕೋಪ ಮತ್ಸರಗಳಿಂದ ಅವನು ಜೋರಾಗಿ ಬಿಗಿದಪ್ಪಿಕೊಳ್ಳಲು ಉಕ್ಕಿನ ಪ್ರತಿಮೆ ಪುಡಿಪುಡಿಯಾಯಿತು. ಆಗ ಕೃಷ್ಣನು, ಭೀಮ ಭಯವನ್ನು ಬಿಡು, ಧೃತರಾಷ್ಟ್ರನನ್ನು ನೋಡುಹೋಗು, ಎನ್ನಲು ಭೀಮನು ನಡುಗಿ ಧೃತರಾಷ್ಟ್ರನ ಪಾದಗಳ ಮೇಲೆ ಬಿದ್ದನು.
ಅರ್ಥ:
ತ್ರಾಣ: ಕಾಪು, ರಕ್ಷಣೆ, ಶಕ್ತಿ; ಇಮ್ಮಡಿಸು: ಹೆಚ್ಚಾಗು; ಕೋಪ: ರೋಷ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಎಚ್ಚರಿಸು: ಏಳು; ನೃಪ: ರಾಜ; ತನಿ: ಹೆಚ್ಚಾಗು, ಅತಿಶಯವಾಗು; ಬಿಗಿ: ಗಟ್ಟಿ; ನುಗ್ಗು: ನೂಕಾಟ, ನೂಕುನುಗ್ಗಲು; ಆಯಸ: ಕಬ್ಬಿಣದ ಆಯುಧ; ಪ್ರತಿಮೆ: ವಿಗ್ರಹ, ಬೊಂಬೆ; ಮಾಣು: ನಿಲ್ಲಿಸು; ಭಯ: ಅಂಜಿಕೆ; ಭೂಪ: ರಾಜ; ಕಾಣು: ತೋರು; ನಡುಗು: ಕಂಪನ, ಹೆದರು; ಭುವನ: ಜಗತ್ತು, ಪ್ರಪಂಚ; ಪ್ರಾಣ: ಜೀವ; ಆತ್ಮಜ: ಮಗ; ಬಿದ್ದು: ಎರಗು; ಅಂಘ್ರಿ: ಪಾದ;
ಪದವಿಂಗಡಣೆ:
ತ್ರಾಣವ್+ಇಮ್ಮಡಿಸಿತ್ತು +ಕೋಪದ
ಕೇಣವ್+ಎಚ್ಚರಿಸಿದಡೆ +ನೃಪ +ಸ
ತ್ರಾಣದಲಿ +ತನಿಬಿಗಿಯೆ +ನುಗ್ಗಾಯ್ತ +ಆಯಸ +ಪ್ರತಿಮೆ
ಮಾಣು +ಭಯವನು +ಭೀಮ +ಭೂಪನ
ಕಾಣು +ಹೋಗ್+ ಎನೆ +ನಡುಗಿ +ಭುವನ
ಪ್ರಾಣನ್+ಆತ್ಮಜ+ ಬಿದ್ದನಾ +ಧೃತರಾಷ್ಟ್ರನ್+ಅಂಘ್ರಿಯಲಿ
ಅಚ್ಚರಿ:
(೧) ಭೀಮನನ್ನು ಭುವನಪ್ರಾಣನಾತ್ಮಜ ಎಂದು ಕರೆದಿರುವುದು
(೨) ತ್ರಾಣ, ಕೇಣ, ಸತ್ರಾಣ, ಪ್ರಾಣ – ಪ್ರಾಸ ಪದಗಳು