ಪದ್ಯ ೨೨: ಮತ್ಸ್ಯಗಂಧಿಯ ಜನನವು ಹೇಗಾಯಿತು?

ಶಾಪಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿದನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯಜಠರದಲಿ (ಆದಿ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬಳಿಕ ಗಂಗೆಗೆ ಶಾಪವು ವಿಮೋಚನೆಯಾಯಿತು. ಭೀಷ್ಮನು ಶಂತನುವಿಗೆ ಮಗನಾಗಿ ಎಲ್ಲಾ ದಿಕ್ಕುಗಳಲ್ಲೂ ತನ್ನ ಕೀರ್ತಿಯನ್ನು ಹಬ್ಬಿಸಿದನು. ಉಪರಿಚರವಸುವಿನ ವೀರ್ಯವು ಸ್ಖಲಿತವಾಗಿ ಅದನ್ನು ಒಂದು ಮೀನು ನೂಮ್ಗಿತು. ಅದರಿಂದ ವಿರಾಟನೂ ಮತ್ತು ಮತ್ಸ್ಯಗಂಧಿಯೆಂಬುವಳು ಹುಟ್ಟಿದರು.

ಅರ್ಥ:
ಶಾಪ: ನಿಷ್ಠುರದ ನುಡಿ; ಹಿಂಗು: ಕಡಮೆಯಾಗು, ತಗ್ಗು; ಸುರನದಿ: ಗಂಗೆ; ಬಳಿಕ: ನಂತರ; ಪರಾಕ್ರಮಿ: ಶೂರ; ಬೆಳಗು: ಪ್ರಕಾಶಿಸು; ಅಖಿಳ: ಎಲ್ಲಾ; ದಿಕ್ತಟ: ದಿಕ್ಕು; ಭೂಪ: ರಾಜ; ಕೇಳು: ಆಲಿಸು; ವಸು: ದೇವತೆಗಳ ವರ್ಗ; ಗರ್ಭ: ಹೊಟ್ಟೆ; ಮೀನು: ಮತ್ಸ್ಯ; ಬಸುರು: ಹೊಟ್ಟೆ; ವ್ಯಾಪಿಸು: ಹರಡು; ಜನಿಸು: ಹುಟ್ಟು; ಮಿಥುನ:ಅವಳಿ ಜವಳಿ,ಸಂಭೋಗ; ಜಠರ: ಹೊಟ್ಟೆ;

ಪದವಿಂಗಡಣೆ:
ಶಾಪ+ಹಿಂಗಿತು +ಸುರನದಿಗೆ +ಬಳಿಕ
ಆ +ಪರಾಕ್ರಮಿ +ಭೀಷ್ಮ+ ಶಂತನು
ಭೂಪತಿಗೆ +ಮಗನಾಗಿ +ಬೆಳಗಿದನ್+ಅಖಿಳ +ದಿಕ್ತಟವ
ಭೂಪ +ಕೇಳೈ +ಉಪರಿಚರ +ವಸು
ರೂಪ+ಗರ್ಭವು+ ಮೀನ +ಬಸುರಲಿ
ವ್ಯಾಪಿಸಿತು +ಜನಿಸಿದುದು +ಮಿಥುನವು +ಮತ್ಸ್ಯ+ಜಠರದಲಿ

ಅಚ್ಚರಿ:
(೧) ಗರ್ಭ, ಬಸುರು, ಜಠರ – ಸಮಾನಾರ್ಥಕ ಪದ
(೨) ಭೂಪ – ೩, ೪ ಸಾಲಿನ ಮೊದಲ ಪದ

ಪದ್ಯ ೨೬: ಪುರದ ಸ್ತ್ರೀಯರು ಎತ್ತಕಡೆ ನಡೆದರು?

ತಿರುಗಿದರು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತು ಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ (ಗದಾ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಯರು ದ್ವಾರಕಿಯತ್ತಹೋದರು. ಇತ್ತ ಹಸ್ತಿನಾ ಪುರವನ್ನು ಬಿಟ್ಟು ಬಂದ ಸ್ತ್ರೀ ಸಮುದಾಯವು ಕಲ್ಲು ಮುಳ್ಳುಗಳೊತ್ತುತ್ತಿದ್ದ ದೂರದಾರಿಯನ್ನು ಬಿಸಿಲ ಝಳದಲ್ಲಿ ನಡೆಯುತ್ತಾ ಬರುತ್ತಿತ್ತು. ಅವರ ಹೊಟ್ಟೆಗಳಲ್ಲಿ ಉರಿ ಬಿದ್ದಿತ್ತು. ಎರಡು ಕೆನ್ನೆಗಳೂ ಹರಿದುಹೋದಂತೆ ಕಪ್ಪಾಗಿದ್ದವು. ಅವೈರಳ ಅಶ್ರುಧಾರೆಗಳನ್ನು ಸುರಿಸುತ್ತಾ ಅವರು ರಣರಂಗದತ್ತ ನಡೆದರು.

ಅರ್ಥ:
ತಿರುಗು: ಮರಳು; ಬಳಿಕ: ನಂತರ; ಮೋಹರ: ಯುದ್ಧ, ಸೈನ್ಯ; ಕಾಂತ: ಹೆಣ್ಣು; ಕೋಟಿ: ಅಸಂಖ್ಯಾತ; ಬಂದು: ಆಗಮಿಸು; ಹರಳು: ಕಲ್ಲಿನ ಚೂರು, ನೊರಜು; ಮುಳ್ಳು: ಮೊನಚಾದುದು; ಗಾಲಿ: ಚಕ್ರ; ದೂರ: ಅಂತರ; ಪಥ: ದಾರಿ; ಉರಿ: ಬೆಂಕಿ; ಜಠರ: ಹೊಟ್ಟೆ; ಬಿಸಿಲು: ಸೂರ್ಯನ ತಾಪ; ಝಳ: ತಾಪ; ಹುರಿ: ಕಾಯಿಸು; ಕದಪು: ಕೆನ್ನೆ; ಸುರಿ: ಹರಿಸು; ನಯನಾಂಬು: ಕಣ್ಣೀರು; ರಾಜನಿತಂಬಿನಿ: ರಾಣಿ; ನಿತಂಬಿನಿ: ಹೆಣ್ಣು; ನಿಕರ: ಗುಂಪು; ನಿತಂಬ: ಸೊಂಟದ ಕೆಳಗಿನ ಹಿಂಭಾಗ, ಕಟಿ ಪ್ರದೇಶ;

ಪದವಿಂಗಡಣೆ:
ತಿರುಗಿದರು +ಬಳಿಕ್+ಇತ್ತಲೀ+ ಮೋ
ಹರದ +ಕಾಂತಾಕೋಟಿ +ಬಂದುದು
ಹರಳು+ಮುಳ್ಳುಗಳ್+ಒತ್ತು+ ಗಾಲಿನ +ದೂರತರ+ಪಥರ
ಉರಿಯ +ಜಠರದ +ಬಿಸಿಲ +ಝಳದಲಿ
ಹುರಿದ +ಕದಪುಗಳೆರಡು+ ಕಡೆಯಲಿ
ಸುರಿವ +ನಯನಾಂಬುಗಳ +ರಾಜನಿತಂಬೀನೀ+ನಿಕರ

ಅಚ್ಚರಿ:
(೧) ರಾಣಿಯರು ಎಂದು ಹೇಳಲು – ರಾಜನಿತಂಬೀನೀ ಪದ ಬಳಕೆ
(೨) ರಾಣಿಯರ ದುಃಖದ ಸ್ಥಿತಿ – ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ

ಪದ್ಯ ೧೧: ದುರ್ಯೋಧನನನ್ನು ಹೇಗೆ ಹುರಿದುಂಬಿಸಿದರು?

ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟೆಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಮ್ದರು ಜರೆದು ಕುರುಪತಿಯ (ಶಲ್ಯ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಪ ಅಶ್ವತ್ಥಾಮರು, ಅರಸ, ಎಚ್ಚೆತ್ತುಕೋ, ದಾಯಾದಿಗಳಿಗೆ ನೆಲವನ್ನಾಕ್ರಮಿಸಲು ದಾರಿಯಾಯಿತು. ರಾಜ್ಯವು ಅವರಿಗೆ ಸೇರುವುದು ಖಂಡಿತ. ಭೀಮನು ತನ್ನ ಪ್ರತಿಜ್ಞೆಯನ್ನು ಪೂರೈಸಿಕೊಂಡನು. ಏಳು ನಿನ್ನ ತಮ್ಮಂದಿರನ್ನು ಭೀಮನ ಹೊಟ್ಟೆಯಿಂದಲೂ, ಕರ್ಣನನ್ನು ಅರ್ಜುನನ ಬಾಯಿಂದಲೂ ಹೊರಕ್ಕೆ ತೆಗೆ ಎಂದು ಕೌರವನನ್ನು ಹುರಿದುಂಬಿಸಿದರು.

ಅರ್ಥ:
ರಾಯ: ರಾಜ; ಹದುಳಿಸು: ಸಮಾಧಾನ ಗೊಳ್ಳು; ಅಕಟಾ: ಅಯ್ಯೋ; ದಾಯಿಗರಿ: ದಾಯಾದಿ; ಎಡೆ: ಅವಕಾಶ; ನಿರ್ದಾಯದ: ಅಖಂಡ; ನೆಲ: ಭೂಮಿ; ಹೋಯ್ತು: ಕಳಚು; ಭಾಷೆ: ನುಡಿ; ಸಂದು: ಅವಕಾಶ; ವಾಯುಜ: ಭೀಮ; ಜಠರ: ಹೊಟ್ಟೆ; ತೆಗೆ: ಹೊರತರು; ಜೀಯ: ಒಡೆಯ; ಅನುಜ: ತಮ್ಮ; ಜರೆ: ತೆಗಳು; ಉಗಿ: ಹೊರಹಾಕು; ಸೂತ: ಸಾರಥಿ;

ಪದವಿಂಗಡಣೆ:
ರಾಯ +ಹದುಳಿಸು +ಹದುಳಿಸ್+ಅಕಟಾ
ದಾಯಿಗರಿಗ್+ಎಡೆಗೊಟ್ಟೆಲಾ +ನಿ
ರ್ದಾಯದಲಿ +ನೆಲ +ಹೋಯ್ತು +ಭೀಮನ +ಭಾಷೆ +ಸಂದುದಲಾ
ವಾಯುಜನ +ಜಠರದಲಿ+ ತೆಗೆಯಾ
ಜೀಯ +ನಿನ್ನನುಜರನು+ ಪಾರ್ಥನ
ಬಾಯಲ್+ಉಗಿ +ಸೂತಜನನ್+ಎಂದರು+ ಜರೆದು+ ಕುರುಪತಿಯ

ಅಚ್ಚರಿ:
(೧) ಭೀಮ, ವಾಯುಜ – ಭೀಮನನ್ನು ಕರೆದ ಪರಿ
(೨) ರಾಯ, ಕುರುಪತಿ – ಪದ್ಯದ ಮೊದಲ ಮತ್ತು ಕೊನೆ ಪದ, ದುರ್ಯೋಧನನನ್ನು ಕರೆಯುವ ಪರಿ
(೩) ವಾಯುಜ, ನಿನ್ನನುಜ, ಸೂತಜ – ಪದಗಳ ಬಳಕೆ

ಪದ್ಯ ೧೬: ಸುಭದ್ರೆ ಅರ್ಜುನನನ್ನೇಕೆ ಪಾತಕಿ ಎಂದು ಕರೆದಳು?

ಅಕಟ ಮಗನೇ ಬಹಳ ಪಾಪಾ
ತ್ಮಕರ ಬಸುರಲಿ ಬಹುದರಿಂದೀ
ನಕುಳನುದರದಲಾಗಲೀ ಧರ್ಮಜನ ಜಠರದಲಿ
ಸುಕೃತಿ ನೀನುದಯಿಸಲು ಬಹು ಕಂ
ಟಕರು ಬಳಿಕಾರುಂಟು ಕಡು ಪಾ
ತಕಿಯಲಾ ನಿಮ್ಮಯ್ಯನೆಂದಳು ಫಲುಗುಣನ ರಾಣಿ (ದ್ರೋಣ ಪರ್ವ, ೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅಯ್ಯೋ ಮಗನೇ ಮಹಾ ಪಾಪಿಗಳ ಹೊಟ್ಟೆಯಲ್ಲಿ ನೀನು ಜನಿಸಿದೆ. ನಕುಲ ಅಥವ ಧರ್ಮಜನ ಹೊಟ್ಟೆಯಲ್ಲಿ
ಮಗನಾಗಿ ಹುಟ್ಟುವ ಪುಣ್ಯವಂತನಾಗಿದ್ದರೆ ನಿನ್ನ ಜೀವಕ್ಕೆ ಯಾರೂ ಸಂಚಕಾರ ತರುತ್ತಿರಲಿಲ್ಲ. ನಿಮ್ಮಪ್ಪ ಅರ್ಜುನನು ಮಹಾಪಾಪಿ ಎಂದು ತನ್ನ ನೋವನ್ನು ಹೊರಹಾಕಿದಳು.

ಅರ್ಥ:
ಅಕಟ: ಅಯ್ಯೋ; ಮಗ: ಕುಮಾರ; ಬಹಳ: ತುಂಬ; ಪಾಪ: ಪುಣ್ಯವಲ್ಲದ ಕಾರ್ಯ; ಬಸುರು: ಹೊಟ್ಟೆ; ಉದರ: ಹೊಟ್ಟೆ; ಜಠರ: ಹೊಟ್ಟೆ; ಸುಕೃತಿ: ಒಳ್ಳೆಯ ಕೆಲಸ; ಉದಯಿಸು: ಹುಟ್ಟು; ಕಂಟಕ: ವಿಪತ್ತು; ಬಳಿಕ: ನಂತರ; ಕಡು: ಬಹಳ; ಪಾತಕಿ: ಪಾಪಿ; ಅಯ್ಯ: ತಂದೆ; ಫಲುಗುಣ: ಅರ್ಜುನ; ರಾಣಿ: ಅರಸಿ;

ಪದವಿಂಗಡಣೆ:
ಅಕಟ +ಮಗನೇ +ಬಹಳ+ ಪಾಪಾ
ತ್ಮಕರ +ಬಸುರಲಿ +ಬಹುದರ್+ ಇಂದೀ
ನಕುಳನ್+ಉದರದಲಾಗಲೀ +ಧರ್ಮಜನ +ಜಠರದಲಿ
ಸುಕೃತಿ +ನೀನ್+ಉದಯಿಸಲು +ಬಹು +ಕಂ
ಟಕರು +ಬಳಿಕಾರುಂಟು +ಕಡು +ಪಾ
ತಕಿಯಲಾ +ನಿಮ್ಮಯ್ಯನ್+ಎಂದಳು +ಫಲುಗುಣನ +ರಾಣಿ

ಅಚ್ಚರಿ:
(೧) ಸುಭದ್ರೆಯ ನೋವನ್ನು ಚಿತ್ರಿಸುವ ಪರಿ – ಬಹಳ ಪಾಪಾತ್ಮಕರ ಬಸುರಲಿ ಬಹುದರಿ; ಕಡು ಪಾತಕಿಯಲಾ ನಿಮ್ಮಯ್ಯನೆಂದಳು
(೨) ಉದರ, ಜಠರ, ಬಸುರು – ಸಮಾನಾರ್ಥಕ ಪದಗಳು

ಪದ್ಯ ೪೭: ಧರ್ಮಜನನ್ನು ರಕ್ಷಿಸಲು ದ್ರೋಣನೆದುರು ಯಾರು ಬಂದರು?

ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ
ನಿಲ್ಲು ನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ (ದ್ರೋಣ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಜೊಳ್ಳುಗಳನ್ನು ಹೊಡೆದೋಡಿಸಿದುದಾಯಿತು. ಧರ್ಮಜ, ಬಿಲ್ಲನ್ನು ಹಿಡಿ ಹಿಡಿ, ಬಾಣಗಳನ್ನು ಬಿಡು, ಇನ್ನೆಲ್ಲಿ ಹೊಕ್ಕು ಉಳಿಯುವೇ? ಕುಂತಿಯ ಜಠರವು ಚಿಕ್ಕದ್ದು. ನಿಲ್ಲು ನಿಲ್ಲು ಎನ್ನುತ್ತಾ ದ್ರೋಣನು ಮುನ್ನುಗ್ಗಲು, ಸೈನ್ಯವು ದುಃಖಿಸಿತು. ಆಗ ದ್ರುಪದನು ಸಾಹಸದಿಂದ ಬಿಲ್ಲನ್ನು ಧ್ವನಿ ಮಾಡುತ್ತಾ ಅಡ್ಡಬಂದನು.

ಅರ್ಥ:
ಹೊಳ್ಳು: ಹುರುಳಿಲ್ಲದುದು; ತೂರು: ಎಸೆ, ಬೀಸು; ಹಿಡಿ: ಗ್ರಹಿಸು, ಬಂಧನ; ಸುರಿ: ಮೇಲಿನಿಂದ ಬೀಳು; ಶರ: ಬಾಣ; ಅಕಟ: ಅಯ್ಯೊ; ಹೊಗು: ಸೇರು, ಪ್ರವೇಶಿಸು; ಕಂದ: ಮಗ; ಜಠರ: ಹೊಟ್ಟೆ; ಅಲ್ಪ: ಚಿಕ್ಕದ್ದು; ನಿಲ್ಲು: ತಡೆ; ಐದು: ಬಂದು ಸೇರು; ಬರಲು: ಆಗಮಿಸು; ಮರುಗು: ತಳಮಳ; ಸೇನೆ: ಸೈನ; ಸಾಹಸ: ಪರಾಕ್ರಮ; ಸಾಹಸಮಲ್ಲ: ಪರಾಕ್ರಮಿ; ಅಡಹಾಯಿ: ಮಧ್ಯಬಂದು; ಧನು: ಬಿಲ್ಲು; ಒದರು: ಕೊಡಹು, ಜಾಡಿಸು;

ಪದವಿಂಗಡಣೆ:
ಹೊಳ್ಳುಗಳ +ತೂರಿದೆವು +ಹಿಡಿ +ಹಿಡಿ
ಬಿಲ್ಲ +ಸುರಿ +ಸುರಿ +ಶರವನ್+ಅಕಟಿ
ನ್ನೆಲ್ಲಿ +ಹೊಗುವೈ +ಕಂದ +ಕುಂತಿಯ +ಜಠರವ್+ಅಲ್ಪವಲೆ
ನಿಲ್ಲು +ನಿಲ್ಲೆನುತ್+ಐದಿ +ಬರಲ್
ಅಲ್ಲಲ್ಲಿ +ಮರುಗಿತು +ಸೇನೆ +ಸಾಹಸ
ಮಲ್ಲನ್+ಅಡಹಾಯಿದನು +ದ್ರುಪದನು +ಧನುವನ್+ಒದರಿಸುತ

ಅಚ್ಚರಿ:
(೧) ಹಿಡಿ ಹಿಡಿ, ಸುರಿ ಸುರಿ, ನಿಲ್ಲು ನಿಲ್ಲು – ಜೋಡಿ ಪದಗಳ ಬಳಕೆ
(೨) ಹಂಗಿಸುವ ಪರಿ – ಅಕಟಿನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ

ಪದ್ಯ ೩: ದ್ರೋಣನು ಎಷ್ಟು ದಿನ ಸೇನಾಧಿಪತಿಯಾಗಿದ್ದ?

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರ ರನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ (ದ್ರೋಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣನು ಐದು ದಿವಸಗಳ ಕಾಲ ಯುದ್ಧಮಾಡಿ, ಶತ್ರು ಸೈನ್ಯವನ್ನು ಹೊಡೆದು ಕುಟ್ಟಿ, ವೈರಿರಾಜರನ್ನು ಸಂಹರಿಸಿ ತನ್ನ ಭುಜಬಲವನ್ನು ಮೆರೆದನು. ಆಯುಧದಾರಿಗಳ ಗುರುವಾದ ದ್ರೋಣನು ಆ ಬಳಿಕ ಅಮರಾವತಿಗೆ ಪ್ರಯಾಣ ಮಾಡಿದನು ಎಂದು ಸಂಜಯನು ಹೇಳಲು ಧೃತರಾಷ್ಟ್ರನ ಹೊಟ್ಟೆಯಲ್ಲಿ ಉರಿಬಿದ್ದಿತು.

ಅರ್ಥ:
ದಿವಸ: ದಿನ; ಅಹಿತ: ವೈರಿ; ಬಲ: ಸೈನ್ಯ; ಹೊಯ್ದು: ಹೋರಾಡು; ಹೊಡೆ: ಏಟು; ಕುಟ್ಟು: ಅಪ್ಪಳಿಸು; ರಿಪು: ವೈರಿ; ಐದು: ಬಂದುಸೇರು; ದೊರೆ: ರಾಜ; ಇರಿ: ಚುಚ್ಚು; ಮೆರೆ: ಹೊಳೆ; ಭುಜ: ಬಾಹು; ಮಹೋನ್ನತಿ: ಅತಿಶಯ, ಹೆಚ್ಚುಗಾರಿಗೆ; ಕೈದು: ಆಯುಧ; ಗುರು: ಆಚಾರ್ಯ; ಛಡಾಳಿಸು: ಪ್ರಜ್ವಲಿಸು, ಥಳಥಳಿಸು; ಮೈ: ತನು; ತೆಗೆ: ಹೊರತಉ; ನಿರ್ಜರ: ದೇವತೆ; ನಗರ: ಊರು; ಹಾಯ್ದು: ಹಾರು, ಉರಿ: ಬೆಂಕಿ; ಜಠರ: ಹೊಟ್ಟೆ; ಮೋಹರ: ಸೈನ್ಯ, ಯುದ್ಧ; ಅವನಿಪ: ರಾಜ;

ಪದವಿಂಗಡಣೆ:
ಐದು +ದಿವಸದೊಳ್+ಅಹಿತ +ಬಲವನು
ಹೊಯ್ದು +ಹೊಡೆ+ಕುಟ್ಟಾಡಿ +ರಿಪುಗಳೊಳ್
ಐದೆ+ ದೊರೆಗಳನ್+ಇರಿದು +ಮೆರೆದನು +ಭುಜ+ಮಹೋನ್ನತಿಯ
ಕೈದುಕಾರರ+ ಗುರು +ಛಡಾಳಿಸಿ
ಮೈದೆಗೆದು +ನಿರ್ಜರರ+ನಗರಿಗೆ
ಹಾಯ್ದನ್+ಎನಲ್+ಉರಿ+ ಜಠರದಲಿ+ ಮೋಹರಿಸಿತ್+ಅವನಿಪನ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕೈದುಕಾರರ ಗುರು ಛಡಾಳಿಸಿಮೈದೆಗೆದು ನಿರ್ಜರರ ನಗರಿಗೆಹಾಯ್ದನ್
(೨) ಐದು, ಹೊಯ್ದು, ಕೈದು – ಪ್ರಾಸ ಪದಗಳು

ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ (ಭೀಷ್ಮ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರಲ್ಲಿ ಬಂದು, ಜೀಯಾ ಎಲ್ಲಾ ಸೇನಾನಾಯಕರು ಮೋರೆಗಳಿಗೆ ಮುಸುಕು ಹಾಕಿಕೊಂಡುದನ್ನು ನೋಡಿದಿರಾ? ಯುದ್ಧಕ್ಕೆ ಹೊರಡುವ ಮೊದಲು ಅವರು ಹೊಗಳಿಸಿಕೊಂಡ ಬಿರುದುಗಳ ಆರ್ಭಟವನ್ನು ಕೇಳಿದ್ದಿರಲ್ಲವೇ? ಜಠರ ಪರಾಯಣ ಪರಿಣತರಾದ ಇವರ ಪಲಾಯನದ ಹೆಬ್ಬೆಳಸನ್ನು ನೋಡಿರಿ ಇಂಥವರನ್ನು ಕಳಿಸಿ ನೀವು ಕ್ಷತ್ರಿಯ ಧರ್ಮವನ್ನು ಕಾಪಾಡಿದಿರಲ್ಲವೇ ಎಂದು ಭೀಷ್ಮನಿಗೆ ಹೇಳಲು, ಭೀಷ್ಮನು ಹೀಗೆ ಉತ್ತರಿಸಿದನು.

ಅರ್ಥ:
ಜೀಯ: ಒಡೆಯ; ಚಿತ್ತೈಸು: ಆಲಿಸು; ನಾಯಕ: ಒಡೆಯ; ಮೋರೆ: ಮುಖ, ಆನನ; ಮುಸುಕು: ಹೊದಿಕೆ; ಆಯತ: ವಿಶಾಲವಾದ; ಹೊತ್ತು: ಸಮಯ; ಮುನ್ನ: ಮೊದಲು; ಬಿರು: ಬಿರುಸು, ಕಠೋರ; ಉಬ್ಬಟೆ: ಅತಿಶಯ, ಹಿರಿಮೆ; ಕಾಯಿ: ರಕ್ಷಿಸು; ಜಠರ: ಹೊಟ್ಟೆ; ಪರಾಯಣ: ಪೂರ್ಣವಾದುದು, ತಲ್ಲೀನವಾದ; ಪರಿಣತೆ: ಚಾತುರ್ಯ; ಪಲಾಯನ: ಓಡುವಿಕೆ, ಪರಾರಿ; ಹೆಬ್ಬೆಳಸು: ಸಮೃದ್ಧ ಫಸಲು; ನೋಡು: ವೀಕ್ಷಿಸು;

ಪದವಿಂಗಡಣೆ:
ಜೀಯ +ಚಿತ್ತೈಸಿದರೆ+ ಸೇನಾ
ನಾಯಕರ +ಮೋರೆಗಳ +ಮುಸುಕುಗಳ್
ಆಯತವನ್+ಈ+ ಹೊತ್ತು +ಮುನ್ನಿನ +ಬಿರುದಿನ್+ಉಬ್ಬಟೆಯ
ಕಾಯಿದಿರೆ +ಧರ್ಮವನು +ಜಠರ+ ಪ
ರಾಯಣರ+ ಪರಿಣತೆಯಲಾದ +ಪ
ಲಾಯನದ +ಹೆಬ್ಬೆಳಸ+ ನೋಡ್+ಎನೆ+ ಭೀಷ್ಮನ್+ಇಂತೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪರಾಯಣರ ಪರಿಣತೆಯಲಾದ ಪಲಾಯನದ

ಪದ್ಯ ೧೨: ಸೇನೆಯು ಯುದ್ಧರಂಗಕ್ಕೆ ಹೇಗೆ ಬಂದು ನಿಂತಿತು?

ಭುವನಗರ್ಭಿತವಾದುದಾ ಮಾ
ಧವನ ಜಠರದವೋಲು ವರ ಭಾ
ಗವತನಂತಿರೆ ವಿಷ್ಣುಪದ ಸಂಸಕ್ತ ತನುವಾಯ್ತು
ರವಿಯವೊಲು ಶತಪತ್ರ ಸಂಘಾ
ತವನು ಪಾದದಲಣೆದು ಕೆಂಧೂ
ಳವಗಡಿಸೆ ಕುರುಸೇನೆ ಕೈಕೊಂಡುದು ರಣಾಂಗಣವ (ಭೀಷ್ಮ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ವಿಷ್ಣುವು ಭೂಮಿಯನ್ನು ತನ್ನ ಜಠರದಲ್ಲಿ ತಾಳುವಂತೆ ಸೈನ್ಯವು ರಣರಂಗದ ಸುತ್ತ ನಿಂತು ಆ ಭೂಮಿಯನ್ನು ತನ್ನೊಳಗೆ ತಾಳಿತು. ಭಾಗವತನು ವಿಷ್ಣುವಿನ ಪಾದಗಳಿಗೆ ತನ್ನ ಶರೀರವನ್ನು ಸೇರಿಸಿದಂತೆ, ಸೈನ್ಯದ ಧ್ವಜಾದಿಗಳು ವಿಷ್ಣು ಪದಕ್ಕೆ ಅಂಟಿಕೊಂಡವು. ಸೂರ್ಯನಂತೆ ಕಮಲ ಪುಷ್ಪಗಳನ್ನು ತಟ್ಟಿ ಕೆಂಧೂಳೆಬ್ಬಿಸುತ್ತಾ ಕೌರವ ಸೈನ್ಯವು ಯುದ್ಧರಂಗಕ್ಕೆ ಬಂದು ನಿಂತಿತು.

ಅರ್ಥ:
ಭುವನ: ಜಗತ್ತು; ಗರ್ಭ:ಹೊಟ್ಟೆ; ಮಾಧವ: ವಿಷ್ಣು; ಜಠರ: ಹೊಟ್ಟೆ; ವರ: ಶ್ರೇಷ್ಠ; ಭಾಗವತ: ಹರಿಭಕ್ತ; ಪದ: ಚರಣ; ಸಂಸಕ್ತ: ಮಗ್ನವಾದ; ತನು: ದೇಹ; ರವಿ: ಸೂರ್ಯ; ಶತಪತ್ರ: ತಾವರೆ; ಸಂಘಾತ: ಗುಂಪು; ಪಾದ: ಚರಣ; ಅಣೆ:ಹೊಡೆ, ಆವರಿಸು; ಕೆಂಧೂಳ: ಕೆಂಪಾದ ಧೂಳು; ಅವಗಡಿಸು: ಕಡೆಗಣಿಸು, ಸೋಲಿಸು; ರಣಾಂಗಣ: ಯುದ್ಧಭೂಮಿ;

ಪದವಿಂಗಡಣೆ:
ಭುವನಗರ್ಭಿತವಾದುದ್+ಆ+ ಮಾ
ಧವನ+ ಜಠರದವೋಲು +ವರ+ ಭಾ
ಗವತನಂತಿರೆ+ ವಿಷ್ಣುಪದ +ಸಂಸಕ್ತ +ತನುವಾಯ್ತು
ರವಿಯವೊಲು +ಶತಪತ್ರ+ ಸಂಘಾ
ತವನು +ಪಾದದಲ್+ಅಣೆದು +ಕೆಂಧೂಳ್
ಅವಗಡಿಸೆ +ಕುರುಸೇನೆ+ ಕೈಕೊಂಡುದು +ರಣಾಂಗಣವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭುವನಗರ್ಭಿತವಾದುದಾ ಮಾಧವನ ಜಠರದವೋಲು; ರವಿಯವೊಲು ಶತಪತ್ರ ಸಂಘಾತವನು ಪಾದದಲಣೆದು ಕೆಂಧೂಳವಗಡಿಸೆ

ಪದ್ಯ ೮೭: ಕೃಷ್ಣನ ವಿಶ್ವರೂಪದಲ್ಲಿದ್ದ ಜಗಗಳೆಷ್ಟು?

ಅಣಲೋಳಷ್ಪಾದಶ ಮಹಾಕ್ಷೋ
ಹಿಣಿಗಳಡಗಿದವೆಂಬುದಿದು ಭೂ
ಷಣವೆ ಜೀಯ ಮುರಾರಿ ನಿನ್ನಯ ರೋಮಕೂಪದಲಿ
ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳ
ನೆಣಿಸಬಲ್ಲವರಾರು ಸಾಕಿನ್ನೆನ್ನ ಸಲಹೆಂದ (ಭೀಷ್ಮ ಪರ್ವ, ೩ ಸಂಧಿ, ೮೭ ಪದ್ಯ)

ತಾತ್ಪರ್ಯ:
ಹದಿನೆಂಟು ಅಕ್ಷೋಹಿಣೀ ಸೈನ್ಯವು ನಿನ್ನ ಬಾಯಲ್ಲಿ ಅಡಗಿದವು. ಇದೇನೂ ನಿನ್ನ ಹಿರಿಮೆಯಲ್ಲ, ನಿನ್ನ ರೋಮಕೂಪಗಳಲ್ಲಿ ಲೆಕ್ಕವಿಲ್ಲದಷ್ಟು ಬ್ರಹ್ಮ ರುದ್ರರ ಗುಂಪುಗಳಿವೆ. ನಿನ್ನ ಜಠರದಲ್ಲಿರುವ ವಿಶ್ವಗಳೇಷ್ಟು ಎನ್ನುವುದೆನ್ನೆಣಿಸಲು ಯಾರಿಗೆ ಸಾಧ್ಯ? ಇನ್ನು ಈ ವಿಶ್ವರೂಪವನ್ನು ಬಿಟ್ಟು ನನ್ನನ್ನು ಕಾಪಾಡು ಎಂದು ಬೇಡಿದನು.

ಅರ್ಥ:
ಅಣಲು: ಬಾಯಿಯ ಒಳಭಾಗ; ಅಷ್ಟಾದಶ: ಹದಿನೆಂಟು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಅಡಗು: ಅವಿತುಕೊಳ್ಳು; ಭೂಷಣ: ಅಲಂಕರಿಸುವುದು; ಜೀಯ: ಒಡೆಯ; ಮುರಾರಿ: ಕೃಷ್ಣ; ರೋಮ: ಕೂದಲು; ಕೂಪ: ಬಾವಿ; ಗಣನೆ: ಎಣಿಕೆ; ರುದ್ರ: ಶಿವನ ಗಣ; ಸುರ: ದೇವತೆ; ಸಂದಣಿ: ಗುಂಪು; ಜಠರ: ಹೊಟ್ಟೆ; ಜಗ: ಜಗತ್ತು; ಎಣಿಸು: ಲೆಕ್ಕಮಾಡು; ಬಲ್ಲವ: ತಿಳಿದವ; ಸಾಕು: ನಿಲ್ಲಿಸು; ಸಲಹು: ಕಾಪಾಡು;

ಪದವಿಂಗಡಣೆ:
ಅಣಲೊಳ್+ಅಷ್ಪಾದಶ+ ಮಹ+ಅಕ್ಷೋ
ಹಿಣಿಗಳ್+ಅಡಗಿದವ್+ಎಂಬುದ್+ಇದು+ ಭೂ
ಷಣವೆ +ಜೀಯ +ಮುರಾರಿ+ ನಿನ್ನಯ +ರೋಮ+ಕೂಪದಲಿ
ಗಣನೆಗೆಟ್ಟಜ+ ರುದ್ರ+ಸುರ+ಸಂ
ದಣಿಗಳಿವೆ +ಜಠರದ +ಜಗಂಗಳನ್
ಎಣಿಸಬಲ್ಲವರಾರು +ಸಾಕಿನ್+ಎನ್ನ +ಸಲಹೆಂದ

ಅಚ್ಚರಿ:
(೧) ವಿಶ್ವರೂಪದ ವಿವರಣೆ – ನಿನ್ನಯ ರೋಮಕೂಪದಲಿ ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳನೆಣಿಸಬಲ್ಲವರಾರು

ಪದ್ಯ ೧೯: ಧರ್ಮಜನು ವಿರಾಟ ರಾಜನಿಗೆ ಏನು ಹೇಳಿದ?

ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ
ಬಿಟ್ಟರೆಮ್ಮನು ಜಠರ ಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿದಾನ ತನಗೆಂದ (ವಿರಾಟ
ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಹಾ ವೈಭವಯುತವಾದ ಇಂದ್ರಪ್ರಸ್ಥನಗರವು ಕೆಟ್ಟು ಹೋಯಿತು. ಲೋಕೈಕ ವೀರರಾದ ಪಾಂಡಾರು ನಾರುಮಡಿಯುಟ್ಟು ಊರುಬಿಟ್ಟರು. ಚಂದ್ರವಂಶದ ರಾಜರಿಗೆ ದಟ್ಟವಾದ ಅಡವಿಯು ಮನೆಯಾಯಿತು. ಊರು ಬಿಡುವ ಮೊದಲು ನಮ್ಮನ್ನು ಕರೆಸಿ ಎಲ್ಲಿಯಾದರೂ ಹೋಗಿ ಹೊಟ್ಟೆ ಹೊರೆದುಕೊಳ್ಳಿರಿ ಎಂದು ಹೇಳಬೇಕಾಯಿತು. ಆಶ್ರಯವೇ ಇಲ್ಲದವನಾಗಿ ವ್ಯೆಥೆಪಟ್ಟು ಇಲ್ಲಿಗೆ ಬಂದಿದ್ದೇನೆ. ನನ್ನ ಹೆಸರು ಕಂಕ ಎಂದು ಧರ್ಜಜನು ವಿರಾಟ ರಾಜನಿಗೆ ಹೇಳಿದನು.

ಅರ್ಥ:
ಕೆಟ್ಟು: ಹಾಳಾಗು; ಉಟ್ಟು: ತೊಡು; ನಾರು: ತೊಗಟೆ; ಸೀರೆ: ವಸ್ತ್ರ; ಅಡವಿ: ಕಾದು; ಮನೆ: ಆಲಯ; ಹಿಮಕರ: ಚಂದ್ರ; ಕುಲ: ವಂಶ; ರಾಯ: ರಾಜ; ಬಿಟ್ಟು: ತೊರೆ; ಜಠರ: ಹೊಟ್ಟೆ; ಭರಣ: ಕಾಪಾಡು, ಪೋಷಿಸು; ಆಶ್ರಯ: ಆಸರೆ; ಕಂಗೆಟ್ಟು: ವ್ಯಥೆಗೊಳ್ಳು; ಬಂದು: ಆಗಮಿಸು; ಅಭಿಧಾನ: ಹೆಸರು;

ಪದವಿಂಗಡಣೆ:
ಕೆಟ್ಟುದ್+ಇಂದ್ರಪ್ರಸ್ಥ +ಪಾಂಡವರ್
ಉಟ್ಟು+ಹೋದರು +ನಾರ +ಸೀರೆಯನ್
ಅಟ್ಟಡವಿ+ ಮನೆಯಾಯ್ತು +ಹಿಮಕರ+ಕುಲದ +ರಾಯರಿಗೆ
ಬಿಟ್ಟರ್+ಎಮ್ಮನು +ಜಠರ+ ಭರಣಕೆ
ನೆಟ್ಟನ್+ಆಶ್ರಯವಿಲ್ಲದಿರೆ+ ಕಂ
ಗೆಟ್ಟು +ಬಂದೆವು +ಕಂಕನೆಂಬ್+ಅಭಿದಾನ+ ತನಗೆಂದ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವಿವರಿಸುವ ಪರಿ – ಪಾಂಡವರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ