ಪದ್ಯ ೧೫: ದ್ರೌಪದಿಯ ದುಃಖಕ್ಕೆ ಕಾರಣವೇನು?

ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ (ಗದಾ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮಜನು ಇದೇನಾಶ್ಚರ್ಯ ಎಂದು ಚಿಂತಿಸುತ್ತಾ ದುಃಖದಿಂದ ದ್ರೌಪದಿಯ ಕೈಗಳನ್ನು ಹಿಡಿದು ಸೆರಗಿನಿಂದ ಅವಳ ಕಣ್ಣೀರನ್ನೊರಸಿದನು. ಏನಾಯಿತು ಎಂದು ಕೇಳಲು, ದ್ರೌಪದಿಯು ದುಃಖದಿಂದ ನನ್ನ ಮಕ್ಕಳೂ, ಸಹೋದರರೂ ಮಡಿದರು ಎಂದು ನಡೆದ ಸಂಗತಿಯನ್ನು ಹೇಳಲು, ಭೀಮನು ಅಶ್ವತ್ಥಾಮನ ಈ ಹಾವಳಿಯನ್ನು ಕೇಳಿದನು.

ಅರ್ಥ:
ಅದುಭುತ: ಆಶ್ಚರ್ಯ; ದುಮ್ಮಾನ: ದುಃಖ; ಹರಿತಂದು: ವೇಗವಾಗಿ ಚಲಿಸುತ, ಆಗಮಿಸು; ಹಿಡಿ: ಗ್ರಹಿಸು; ಮಾನಿನಿ: ಹೆಣ್ಣು; ಕೈ: ಹಸ್ತ; ಕಂಬನಿ: ಕಣ್ಣೀರು; ಸೆರಗು: ಸೀರೆಯ ಅಂಚು; ಹಾನಿ: ನಾಶ; ಮಡಿ: ಸಾವು; ಸೂನು: ಮಕ್ಕಳು; ಅನುಜ: ತಮ್ಮ; ಪವಮಾನ: ವಾಯು; ಸುತ: ಮಗ; ಕೇಳು: ಆಲಿಸು; ಕೋಳಾಹಲ: ಗದ್ದಲ; ಗುರು: ಆಚಾರ್ಯ; ಗುರುಸುತ: ಅಶ್ವತ್ಥಾಮ;

ಪದವಿಂಗಡಣೆ:
ಏನಿದೇನ್+ಅದುಭುತವ್+ಎನುತ +ದು
ಮ್ಮಾನದಲಿ +ಹರಿತಂದು +ಹಿಡಿದನು
ಮಾನಿನಿಯ +ಕೈಗಳನು +ಕಂಬನಿದೊಡೆದು +ಸೆರಗಿನಲಿ
ಹಾನಿಯೇನ್+ಎನೆ +ಮಡಿದರ್+ಎನ್ನಯ
ಸೂನುಗಳು +ತನ್ನ್+ಅನುಜರ್+ಎನೆ +ಪವ
ಮಾನಸುತ+ ಕೇಳಿದನು+ ಕೋಳಾಹಳವ +ಗುರುಸುತನ

ಅಚ್ಚರಿ:
(೧) ಸುತ ಪದದ ಬಳಕೆ – ಪವಮಾನಸುತ, ಗುರುಸುತ
(೨) ಏನಿದೇನ್, ಎನುತ, ಎನೆ, ಎನ್ನಯ – ಪದಗಳ ಬಳಕೆ

ಪದ್ಯ ೪೨: ಚತುರಂಗ ಬಲವು ಹೇಗೆ ನಾಶವಾಯಿತು?

ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮುಮ್ಮುಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ (ಗದಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸುತ್ತಲೂ ಆಯುಧದ ಕಿಚ್ಚು, ಬಿಟ್ಟೋಡಿದರೆ ಅಶ್ವತ್ಥಾಮನ ಬಾಣಗಳು. ತಪ್ಪಿಸಿಕೊಂಡು ಹೋದರೆ ಬಾಗಿಲುಗಳಲ್ಲಿ ಕೃತವರ್ಮ, ಕೃಪರ ಬಾಣ ಪ್ರಯೋಗ. ಬಾಣಗಳ ಹೊಡೆತಕ್ಕೆ ಚತುರಂಗ ಬಲವು ನಾಶವಾಗಿ ಹೋಯಿತು.

ಅರ್ಥ:
ಕೂಡೆ: ಕೂಡಲೆ; ಕಟ್ಟು: ಬಂಧಿಸು; ಕಿಚ್ಚು: ಬೆಂಕಿ; ತೆರಪು: ಮಯ, ಸಂದರ್ಭ; ಓಡು: ಧಾವಿಸು; ಸುತ: ಮಗ; ಗುರು: ಆಚಾರ್ಯ; ಶರ: ಬಾಣ; ಬಾಗಿಲು: ಕದ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಝಾಡಿ: ಕಾಂತಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ನೃಪ: ರಾಜ; ಪರಿವಾರ: ಬಂಧುಜನ;

ಪದವಿಂಗಡಣೆ:
ಕೂಡೆ +ಕಟ್ಟಿತು +ಕಿಚ್ಚು +ತೆರಪಿನಲ್
ಓಡುವಡೆ +ಗುರುಸುತನ +ಶರ +ಮಿ
ಕ್ಕೋಡುವಡೆ +ಬಾಗಿಲುಗಳಲಿ +ಕೃತವರ್ಮ +ಕೃಪರೆಸುಗೆ
ಕೂಡೆ +ಮುಮ್ಮುಳಿಯೋದುದ್+ಈ+ ಶರ
ಝಾಡಿಯಲಿ+ ಚತುರಂಗ+ಬಲವ
ಕ್ಕಾಡಿತೇನೆಂಬೆನು +ಯುಧಿಷ್ಠಿರ+ನೃಪನ +ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೂಡೆ ಕಟ್ಟಿತು ಕಿಚ್ಚು
(೨) ಓಡು, ಮಿಕ್ಕೋಡು – ಪದಗಳ ಬಳಕೆ

ಪದ್ಯ ೭: ಅಶ್ವತ್ಥಾಮನ ವಾದವು ಹೇಗಿತ್ತು?

ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳನಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಗೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ (ಗದಾ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಎಚ್ಚರಗೊಂಡ ಕೃಪನು, ಏನು ಅಶ್ವತ್ಥಾಮ, ನಿನ್ನ ಕೆಲಸವನ್ನು ಹೇಗೆ ಮಾಡುವೆ ಎಂದು ಕೇಳಲು, ಅಶ್ವತ್ಥಾಮನು ಕಾಗೆಗಳ ಗೂಡುಗಳನ್ನು ಮುರಿದು ಗೂಬೆಯು ಕಾಗೆಗಳನ್ನು ಕೊಲ್ಲುತ್ತಿದೆ, ಈ ನಿದರ್ಶನದಿಂದ ನಾನು ಪಾಂಡವಸೇನೆಯನ್ನು ಕೊಂದರೆ ತಪ್ಪೆನು ಎಂದು ಕೇಳಿದನು.

ಅರ್ಥ:
ಸುತ: ಮಗ; ಕಾರ್ಯ: ಕೆಲಸ; ಅನುಸಂಧಾನ: ಪರಿಶೀಲನೆ, ಏರ್ಪಾಡು; ವಾಯ: ಮೋಸ, ಕಪಟ; ಸಂಗ: ಜೊತೆ; ನಿಶಾಟ: ರಾತ್ರಿಯ ಆಟ; ನಿಶ: ರಾತ್ರಿ; ಇರಿ: ಚುಚ್ಚು; ಗೂಡು: ಮನೆ; ಅಬ್ಬರಿಸು: ಆರ್ಭಟಿಸು; ನಿದರುಶನ: ತೋರು; ಸೇನೆ: ಸೈನ್ಯ; ಕಗ್ಗೊಲೆ: ಸಾಯಿಸು; ಹೊಲ್ಲೆಹ: ದೋಷ;

ಪದವಿಂಗಡಣೆ:
ಏನು +ಗುರುಸುತ+ ಕಾರ್ಯದ್+ಅನುಸಂ
ಧಾನವೇನ್+ಎನೆ +ವಾಯಸಂಗಳನ್
ಆ+ ನಿಶಾಟನನ್+ಇರಿವುತದೆ +ಗೂಡುಗಳನ್+ಅಬ್ಬರಿಸಿ
ಈ +ನಿದರುಶನದಿಂದ +ಪಾಂಡವ
ಸೇನೆಯನು +ಕಗ್ಗೊಲೆಗೊಳಗೆ ಕೊಲಲ್
ಏನು +ಹೊಲ್ಲೆಹ +ಮಾವ +ಎಂದನು +ಗುರುಸುತನು +ಕೃಪಗೆ

ಅಚ್ಚರಿ:
(೧) ಗೂಬೆ ಎಂದು ಹೇಳಲು ನಿಶಾಟನ ಪದದ ಬಳಕೆ
(೨) ಕೃಪನನ್ನು ಮಾವ ಎಂದು ಅಶ್ವತ್ಥಾಮನು ಸಂಭೋದಿಸಿದುದು

ಪದ್ಯ ೬೦: ದುರ್ಯೋಧನನು ಅಶ್ವತ್ಥಾಮನ ಪ್ರಮಾಣಕ್ಕೆ ಏನೆಂದು ಹೇಳಿದನು?

ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ (ಗದಾ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಪ, ಕೃತವರ್ಮ, ನೀವು ಅಶ್ವತ್ಥಾಮನ ಮರಳುತನದ ಮಾತುಗಳನ್ನು ಕೇಳಿದ್ದೀರೇ? ಪಾಂಡವರ ತಲೆ ಅವನಿಗೆ ಸಿಕ್ಕೀತೇ? ಕೃಷ್ಣನು ಬಕಧ್ಯಾನ ಮಾಡುತ್ತಾ ಅವರನ್ನು ಕಾದುಕೋಂಡಿದ್ದಾನೆ, ಆ ಕಪಟಸಿದ್ಧನ ಮಾಟವನ್ನು ಯಾರು ಮೀರಬಲ್ಲರು ಎಂದು ಹೇಳಿದನು.

ಅರ್ಥ:
ಅಕಟ: ಅಯ್ಯೋ; ಮರುಳ: ಮೂಢ, ದಡ್ಡ; ಸುತ: ಮಗ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಕಂಡು: ನೋಡು; ತಲೆ: ಶಿರ; ಗೋಚರ: ಕಾಣು, ತೋರು; ಬಕ: ಕಪಟಿ, ವಂಚಕ, ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಅವಸ್ಥೆ; ಮಗ: ಸುತ; ಕಾದಿಹ: ರಕ್ಷಿಸು; ಕೌಳಿಕ: ಕಟುಕ, ಮೊಸ; ಸಿದ್ಧ: ಅಲೌಕಿಕ ಸಾಮರ್ಥ್ಯವುಳ್ಳವನು; ಕೃತಿ: ಕಾರ್ಯ; ಮೀರು: ಉಲ್ಲಂಘಿಸು;

ಪದವಿಂಗಡಣೆ:
ಅಕಟ+ ಮರುಳೇ +ಗುರುಸುತನ +ಮತಿ
ವಿಕಳತನವನು +ಕೃಪನು +ಕೃತವ
ರ್ಮಕರು +ಕಂಡಿರೆ +ಪಾಂಡವರ +ತಲೆ +ತನಗೆ+ ಗೋಚರವೆ
ಬಕನ +ಧರ್ಮಸ್ಥಿತಿಯವೊಲು +ದೇ
ವಕಿಯ +ಮಗ +ಕಾದಿಹನಲೇ +ಕೌ
ಳಿಕದ +ಸಿದ್ಧನ+ ಕೃತಿಯನ್+ ಆರಿಗೆ +ಮೀರಬಹುದೆಂದ

ಅಚ್ಚರಿ:
(೧) ಕೃಷ್ಣನ ಸಾಮರ್ಥ್ಯವನ್ನು ಹೇಳುವ ಪರಿ – ಬಕನ ಧರ್ಮಸ್ಥಿತಿಯವೊಲು ದೇವಕಿಯ ಮಗ ಕಾದಿಹನಲೇ

ಪದ್ಯ ೪೩: ಕೌರವನ ಸಂಭಾಷಣೆಯನ್ನು ಯಾರು ಆಲಿಸಿದರು?

ಚರಣ ವದನವ ತೊಳೆದು ನಿರ್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು (ಗದಾ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೈಕಾಲುಗಳನ್ನು ತೊಳೆದು ಒಳ್ಳೆಯ ನಿರ್ಮಲ ಜಲವನ್ನು ಕುಡಿದರು. ಕೃಪ ಅಶ್ವತ್ಥಾಮರ ಮಾತುಗಳನ್ನೂ, ನೀರಿನ ನದುವೆ ಇದ್ದ ದುರ್ಯೋಧನನ ಮಾತುಗಳನ್ನು ಕೇಳಿದರು. ಇದೇನು ಕೌರವನ ಮತ್ತು ಅವನ ಸುಭಟರು ವಾದ ಮಾಡುತ್ತಿದ್ದ ಹಾಗಿದೆಯೆಲ್ಲಾ ಎಂದು ಮರೆಯಲ್ಲಿ ನಿಂತು ಸಂಭಾಷಣೆಯನ್ನ್ ಕೇಳಿದರು.

ಅರ್ಥ:
ಚರಣ: ಪಾದ; ವದನ: ಮುಖ; ತೊಳೆ: ಸ್ವಚ್ಛಮಾಡು; ನಿರ್ಮಳ: ಶುದ್ಧ; ಅಂಬು: ನೀರು; ಈಂಟು: ಕುಡಿ; ಸುತ: ಮಗ; ಗುರು: ಆಚಾರ್ಯ; ನುಡಿ: ಮಾತು; ನಡು: ಮಧ್ಯ; ನೀರು: ಜಲ; ಧ್ವನಿ: ಶಬ್ದ; ನೃಪ: ರಾಜ; ಅರಿ: ತಿಳಿ; ಆಲಿಸು: ಕೇಳು; ಸುಭಟ: ಪರಾಕ್ರಮಿ; ಉತ್ತರ: ಪರಿಹಾರ; ಲೇಸು: ಒಳಿತು; ಕೇಳು: ಆಲಿಸು; ಮರೆ: ಗುಟ್ಟು, ರಹಸ್ಯ;

ಪದವಿಂಗಡಣೆ:
ಚರಣ+ ವದನವ +ತೊಳೆದು +ನಿರ್ಮಳ
ತರವರ್+ಅಂಬುವನ್+ಈಂಟಿದರು +ಕೃಪ
ಗುರುಸುತರ +ನುಡಿಗಳನು +ನಡುನೀರಲಿ+ ನೃಪಧ್ವನಿಯ
ಅರಿದರ್+ಇವರ್+ಆಲಿಸಿದರ್+ಏನಿದು
ಕುರುಪತಿಯ +ತತ್ಸುಭಟ+ವಾದ
ಉತ್ತರವಲಾ +ಲೇಸಾಯ್ತೆನುತ +ಕೇಳಿದರು +ಮರೆವಿಡಿದು

ಅಚ್ಚರಿ:
(೧) ನ ಕಾರದ ತ್ರಿವಳಿ ಪದಗಳು – ನುಡಿಗಳನು ನಡುನೀರಲಿ ನೃಪಧ್ವನಿಯ

ಪದ್ಯ ೪೫: ಪಾಂಡವರು ಜಯವಾಗಲು ಕಾರಣವೇನು?

ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಜಯನು ದೂರದಲ್ಲಿ ಕೃಪ, ಅಶ್ವತ್ಥಾಮ, ಕೃತವರ್ಮರನ್ನು ನೋಡಿ, ಇವರು ಶತ್ರುರಥಿಕರಾಗಿರಲಾರರು ಎಂದುಕೊಂಡನು. ಭರತಕುಲ ಒಂದಾಗಿದ್ದುದು ಬಳಿಕ ಎರಡಾಯ್ತು. ಒಂದು ಪಕ್ಷಕ್ಕೆ ಶ್ರೀಕೃಷ್ಣನ ದಯೆಯಿಂದ ಜಯವುಂಟಾಯಿತು ಎಂದು ಚಿಂತಿಸಿದನು.

ಅರ್ಥ:
ಬರುತ: ಆಗಮಿಸು; ದೂರ: ಅಂತರ; ಗುರು: ಆಚಾರ್ಯ; ಸುತ: ಮಗ; ಕಂಡು: ನೋಡಿ; ಅರಿ: ವೈರಿ; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು, ಪರಾಕ್ರಮ; ಕುಲ: ವಂಶ; ಬಳಿಕ: ನಂತರ; ಕವಲು: ವಂಶ ಯಾ ಕುಲದ ಶಾಖೆ; ಜಯ: ಗೆಲುವು; ವಿಸ್ತರಣ: ಹಬ್ಬುಗೆ, ವಿಸ್ತಾರ; ಕರುಣ: ದಯೆ;

ಪದವಿಂಗಡಣೆ:
ಬರುತ +ಸಂಜಯ +ದೂರದಲಿ +ಕೃಪ
ಗುರುಸುತರ +ಕೃತವರ್ಮಕನ +ಕಂಡ್
ಅರಿ+ರಥಿಗಳ್+ಇವರಲ್ಲಲೇ +ಶಿವಶಿವ +ಮಹಾದೇವ
ಭರತಕುಲ+ ಮೊದಲೊಂದು +ಬಳಿಕಾಯ್ತ್
ಎರಡು+ಕವಲ್+ಒಬ್ಬರಿಗೆ +ಜಯ+ವಿ
ಸ್ತರಣ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪರಿ – ಶಿವಶಿವ ಮಹಾದೇವ

ಪದ್ಯ ೯: ಅಶ್ವತ್ಥಾಮ ಮತ್ತು ಇತರರು ಯಾವ ನಿರ್ಧಾರಕ್ಕೆ ಬಂದರು?

ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲಿ ಶರರಚನೆ
ಅರಿವೆನೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು (ಗದಾ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ಆಗ ಕೃಪಚಾರ್ಯರು, ಕೃಪವರ್ಮ, ಅಶ್ವತ್ಥಾಮರು, ಈ ಯುದ್ಧವನ್ನು ಬೇಗ ಗೆಲ್ಲುವುದು ಆಗದ ಮಾತು. ಇಲ್ಲಿ ಬಾಣ ಪ್ರಯೋಗವು ನಿಷ್ಫಲ. ನಾವೀಗ ಮೊದಲು ಕೌರವನನ್ನು ಹುಡುಕಬೇಕು. ಆಮೇಲೆ ಈ ಸಾತ್ಯಕಿಯ ಬಾಣಗಲ ಬಲುಹವನ್ನು ಗೊತ್ತುಹಚ್ಚೋಣ ಎಂದುಕೊಂಡು ಮುಂದಕ್ಕೆ ಹೋದರು.

ಅರ್ಥ:
ಹರಿ: ಕಡಿ, ಕತ್ತರಿಸು; ಬವರ: ಕಾಳಗ, ಯುದ್ಧ; ಅರಸು: ಹುಡುಕು; ಇರಿ: ಚುಚ್ಚು; ಮೆರೆ: ಹೊಳೆ, ಪ್ರಕಾಶಿಸು; ಕೀರ್ತಿ: ಯಶಸ್ಸು; ನಿಷ್ಫಲ: ಪ್ರಯೋಜನ; ಶರ: ಬಾಣ; ರಚನೆ: ನಿರ್ಮಾಣ; ಅರಿ: ತಿಳಿ; ಸಮರ: ಯುದ್ಧ; ಮುರುಕ: ಬಿಂಕ, ಬಿನ್ನಾಣ; ಬಳಿಕ: ನಂತರ; ಅರಿಕೆ: ವಿಜ್ಞಾಪನೆ; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಸುತ: ಮಗ;

ಪದವಿಂಗಡಣೆ:
ಹರಿಯದ್+ಇಲ್ಲಿಯ +ಬವರ+ ರಾಯನನ್
ಅರಸಬೇಹುದು +ಕುರುಪತಿಯ+ ಮುಂದ್
ಇರಿದು+ ಮೆರೆವುದು+ ಕೀರ್ತಿ +ನಿಷ್ಫಲವಿಲ್ಲಿ+ ಶರರಚನೆ
ಅರಿವೆನ್+ಈ+ ಸಾತ್ಯಕಿಯ +ಸಮರದ
ಮುರುಕವನು+ ಬಳಿಕೆನುತ +ಕೌರವನ್
ಅರಿಕೆಯಲಿ +ತಿರುಗಿದರು +ಕೃಪ+ ಕೃತವರ್ಮ +ಗುರುಸುತರು

ಅಚ್ಚರಿ:
(೧) ಹರಿ, ಅರಿ, ಇರಿ – ಪ್ರಾಸ ಪದಗಳು

ಪದ್ಯ ೨೦: ಶಲ್ಯನೇ ಯುದ್ಧದ ಮುಂಚೂಣಿಗೇಕೆ ಬಂದನು?

ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ (ಶಲ್ಯ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕುರುಸೇನೆಯು ಅಶ್ವತ್ಥಾಮನನ್ನು ಹಿಂದಿಟ್ಟು ಪಾಂಡವ ಬಲವನ್ನು ಇದಿರಿಸಲು, ಶಲ್ಯನು ಆ ಸೇನೆಯನ್ನು ನೋಡಿ, ಯುದ್ಧ ಮಾಡಲು ನಾನಿರಲಾಗಿ, ಕಾರಣವಿಲ್ಲದೆ ಸೇನೆಯನ್ನು ಕೊಲ್ಲಿಸಿದರೆ ಭೀಷ್ಮ ದ್ರೋಣಾದಿಗಳು ನನ್ನನ್ನು ಕಂಡು ನಗದಿರುವರೇ ಎಂದುಕೊಂಡು ತಾನೇ ಯುದ್ಧಕ್ಕೆ ಬಂದನು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ಸುತ: ಮಕ್ಕಳು; ಹಿಂದಿರಿಸು: ಹಿಂದಕ್ಕೆ ತಳ್ಳು; ಪರಬಲ: ವೈರಿ ಸೈನ್ಯ; ಅಭಿಮುಖ: ಎದುರು; ಮೋಹರ: ಯುದ್ಧ; ನಿಂದು: ನಿಲ್ಲು; ಕಂಡು: ನೋಡು; ಬಲ: ಶಕ್ತಿ, ಸೈನ್ಯ; ಧುರ: ಯುದ್ಧ, ಕಾಳಗ; ಸಂಹರ: ನಾಶ; ನಗೆ: ನಗು, ಸಂತಸ; ತೆಗೆ: ಹೊರತರು; ನಡೆ: ಚಲಿಸು;

ಪದವಿಂಗಡಣೆ:
ಉರವಣಿಸಿತಿದು+ ಗುರುಸುತನ +ಹಿಂ
ದಿರಿಸಿ +ಪರಬಲದ್+ಅಭಿಮುಖಕೆ +ಮೋ
ಹರಿಸಿ +ನಿಂದುದು +ಕಂಡನಿತ್ತಲು +ಶಲ್ಯನಾ +ಬಲವ
ಧುರಕೆ +ನಾವಿರೆ +ಸೇನೆ+ಉಪಸಂ
ಹರಿಸಬಹುದೇ +ದ್ರೋಣ +ಭೀಷ್ಮಾ
ದ್ಯರಿಗೆ +ನಗೆಗೆಡೆ+ ನಾವಹೆವೆ+ ತೆಗೆ+ಎನುತ +ನಡೆತಂದ

ಅಚ್ಚರಿ:
(೧) ಹಿಂದಿರಿಸಿ, ಮೋಹರಿಸಿ, ಉರವಣಿಸಿ – ಪ್ರಾಸ ಪದಗಳು

ಪದ್ಯ ೬: ಅಶ್ವತ್ಥಾಮನ ಬೆಂಬಲಕ್ಕೆ ಯಾರು ಬಂದರು?

ಅರಸ ಕೇಳಡಹಾಯ್ದು ಪಾರ್ಥನ
ವರ ರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ (ಶಲ್ಯ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಭೀಮನು ಅರ್ಜುನನ ರಥವನ್ನು ಹಿಂದಿಟ್ಟು, ಅಡ್ಡಹಾದು ಅಶ್ವತ್ಥಾಮನನ್ನಿದಿರಿಸಿದನು. ನಕುಲ ಸಾತ್ಯಕಿಗಳೂ ಬಂದು ಅವನ ಮೇಲೆ ಬಾಣಗಲನ್ನು ಬಿಡಲು ಅವರ ಬಾಣಗಳಿಂದ ಗುರುಸುತನು ನೆನೆದುಹೋದನು. ಉಗ್ರವಾದ ಈ ಯುದ್ಧವನ್ನು ಕಂಡು ಕೌರವನು ಅತಿವೇಗದಿಂದ ಅಶ್ವತ್ಥಾಮನಿಗೆ ಬೆಂಬಲವಾಗಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಅಡಹಾಯ್ದು: ಮಧ್ಯಪ್ರವೇಶಿಸು; ವರ: ಶ್ರೇಷ್ಠ; ರಥ: ಬಂಡಿ; ಹಿಂದೆ: ಹಿಂಭಾಗ; ಪವನಜ: ಭೀಮ; ಉರವಣೆ: ಅವಸರ; ಸಹಿತ: ಜೊತೆ; ಸುತ: ಮಗ; ಸರಳ: ಬಾಣ; ಸರಿವಳೆ: ಜೋರಾದ ಮಳೆ; ಸಘಾಡ: ರಭಸ, ವೇಗ; ಅರಿ: ವೈರಿ; ಭಟ: ಸೈನಿಕ; ನನೆ: ತೋಯು, ಒದ್ದೆಯಾಗು; ಮಹೋಗ್ರ: ತುಂಬಾ ತೀಕ್ಷ್ಣವಾದ; ಧುರ: ಯುದ್ಧ, ಕಾಳಗ; ಕಂಡು: ನೋಡು; ನೃಪತಿ: ರಾಜ; ಬಂದನು: ಆಗಮಿಸು; ಸೂಠಿ: ವೇಗ;

ಪದವಿಂಗಡಣೆ:
ಅರಸ +ಕೇಳ್+ಅಡಹಾಯ್ದು +ಪಾರ್ಥನ
ವರ +ರಥವ +ಹಿಂದಿಕ್ಕಿ +ಪವನಜನ್
ಉರವಣಿಸಿದನು +ನಕುಲ +ಸಾತ್ಯಕಿ +ಸಹಿತ +ಗುರುಸುತನ
ಸರಳ +ಸರಿವಳೆಗಳ +ಸಘಾಡದಲ್
ಅರಿಭಟನು +ನನೆದನು +ಮಹೋಗ್ರದ
ಧುರವ +ಕಂಡನು +ನೃಪತಿ +ಬಂದನು +ಬಿಟ್ಟ +ಸೂಠಿಯಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸರಳ ಸರಿವಳೆಗಳ ಸಘಾಡದ

ಪದ್ಯ ೪: ಅರ್ಜುನ ಅಶ್ವತ್ಥಾಮರ ಯುದ್ಧವು ಹೇಗಿತ್ತು?

ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಅಶ್ವತ್ಥಾಮನನ್ನು ಅಡ್ಡಗಟ್ಟಿ ಬಾಣಗಳಿಂದ ತಿವಿದನು. ಅರ್ಜುನನ ಬಾಣಗಳ ಮಹಾರಣ್ಯವನ್ನು ಅಶ್ವತ್ಥಾಮನು ಕಡಿದನು. ಅರ್ಜುನನು ನೀವು ರಾಜಗುರುಗಳು, ಯುದ್ಧ ವಿಶಾರದರು, ಯುದ್ಧ ಮಾಡುವಿರಾದರೆ ಈ ಹೊಡೆತವನ್ನು ಸೈರಿಸಿರಿ ಎಂದು ಬಾಣ ಪ್ರಯೋಗ ಮಾಡಿದನು.

ಅರ್ಥ:
ಕೆಣಕು: ರೇಗಿಸು; ಸುತ: ಮಗ; ಗುರು: ಆಚಾರ್ಯ; ಅಡಹಾಯ್ದು: ಅಡ್ಡ ಬಂದು, ಮಧ್ಯ ಪ್ರವೇಶಿಸು; ಅಂಬು: ಬಾಣ; ಮಾರ್ಗನ: ಬಾಣ; ಅರಣ್ಯ: ಕಾಡು; ನಡೆ: ಚಲಿಸು; ಕಡಿ: ಸೀಳು; ರಣ: ಯುದ್ಧ; ವಿಶಾರದ: ಪ್ರವೀಣ; ಅಣಕ: ಸೋಗು; ರಾಜ: ನೃಪ; ಸೆಣಸು: ಹೋರಾಡು; ಸೈರಿಸು: ತಾಳು; ಎಚ್ಚು: ಬಾಣ ಪ್ರಯೋಗ ಮಾಡು; ಅಣೆ: ತಿವಿ, ಹೊಡೆ;

ಪದವಿಂಗಡಣೆ:
ಕೆಣಕಿದಡೆ +ಗುರುಸುತನನ್+ಅಡಹಾಯ್ದ್
ಅಣೆದನ್+ಅಂಬಿನಲ್+ಅರ್ಜುನನ +ಮಾ
ರ್ಗಣ+ಮಹಾರಣ್ಯದಲಿ+ ನಡೆದುದು +ಕಡಿತ +ಗುರುಸುತನ
ರಣವಿಶಾರದರ್+ಅಹಿರಲೇ +ನೀವ್
ಅಣಕವೇತಕೆ +ರಾಜಗುರುಗಳು
ಸೆಣಸುವರೆ +ಸೈರಿಸಿರೆ +ನೀವೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಅಂಬು, ಮಾರ್ಗಣ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಅರ್ಜುನನ ಮಾರ್ಗಣಮಹಾರಣ್ಯದಲಿ ನಡೆದುದು
(೩) ಅಶ್ವತ್ಥಾಮನನ್ನು ಹೊಗಳುವ ಪರಿ – ರಣವಿಶಾರದ