ಪದ್ಯ ೨೫: ಸೂತನು ಮಗುವನ್ನು ಯಾರಿಗೆ ಕೊಟ್ಟನು?

ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ (ಆದಿ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅವನು ಕಣ್ಣಿನಲ್ಲಿ ಆನಂದಾಶ್ರುಗಳನ್ನು ತುಂಬಿಕೊಂದು, ನನಗೂ ಈ ಬಾಲಕನಿಗೂ ಯಾವ ವಿಶೇಷವಾದ ಋಣಾನುಬಂಧವಿದ್ದೀತು. ಈಗ ಮೂರು ಲೋಕಗಳ ರಾಜಪದವಿಯು ದೊರೆತರೂ ಅದನ್ನು ಹುಲ್ಲುಕಡ್ದಿಯೆಮ್ದು ಬಗೆಯುತ್ತೇನೆಂದು ಯೋಚಿಸುತ್ತಾ ಸ್ಪರ್ಶಮಣಿಯಂತಿದ್ದ ಆ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿ ತನ್ನ ಹೆಂಡತಿಗೆ ಕೊಟ್ಟನು.

ಅರ್ಥ:
ತೃಣ: ಹುಲ್ಲು; ತ್ರೈಲೋಕ: ಮೂರು ಲೋಕ; ರಾಜ್ಯ: ರಾಷ್ಟ್ರ; ಋಣ: ಹಂಗು; ವಿಶೇಷ: ಪ್ರತ್ಯೇಕವಾದುದು; ಮೇಣ್; ಅಥವ; ಬಾಲಕ: ಹುಡುಗ; ಕ್ಷಣ: ಸಮಯ; ಒದಗು: ಲಭ್ಯ, ದೊರೆತುದು; ಬಾಷ್ಪ: ಕಣ್ಣೀರು; ಲುಳಿ: ರಭಸ; ಮನೆ: ಆಲಯ; ಪರುಷ: ಸ್ಪರ್ಶಮಣಿ; ರಮಣಿ: ಹೆಂಡತಿ, ಚೆಲುವೆ; ಕೊಳ್ಳು: ತೆಗೆದುಕೋ; ಅರ್ಭಕ: ಶಿಶು, ಸಣ್ಣ ಹುಡುಗ

ಪದವಿಂಗಡಣೆ:
ತೃಣವಲಾ +ತ್ರೈಲೋಕ್ಯ +ರಾಜ್ಯವ
ಗಣಿಸುವೆನೆ +ತಾನಿನ್ನು+ ತನ್ನಲಿ
ಋಣ+ವಿಶೇಷವಿದೇನೊ +ಮೇಣ್ +ಈ +ಬಾಲಕಂಗೆನುತ
ಕ್ಷಣದೊಳ್+ಒದಗುವ +ಬಾಷ್ಪಲುಳಿತೇ
ಕ್ಷಣನು+ ಬಂದನು +ಮನೆಗೆ +ಪರುಷದ
ಕಣಿಯ +ತಂದೆನು +ರಮಣಿ +ಕೊಳ್ಳೆಂದ್+ಇತ್ತನ್+ಅರ್ಭಕನ

ಅಚ್ಚರಿ:
(೧) ಮಗನನ್ನು ಪಡೆದ ಸಂತೋಷವನ್ನು ಹೋಲಿಸುವ ಪರಿ – ತೃಣವಲಾ ತ್ರೈಲೋಕ್ಯ ರಾಜ್ಯವಗಣಿಸುವೆನೆ
(೨) ಕ್ಷಣ ಪದದ ಬಳಕೆ – ಕ್ಷಣದೊಳೊದಗುವ ಬಾಷ್ಪಲುಳಿತೇಕ್ಷಣನು

ಪದ್ಯ ೪: ಸಂಜಯನ ಗುರುವರ್ಯರಾರು?

ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಖ್ಷನ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ (ಗದಾ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಿಕ ಭೀಮನು ತನ್ನ ಗದೆಯಿಂದ ನೂರಾನೆಗಳನ್ನು ಕೊಲ್ಲಲು ಅರಸನು ಹಿಮ್ಮೆಟ್ತಿ ರಣರಂಗದ ಕೋಲಾಹಲದ ನಡುವೆ ಕೆಸರ್ನ್ನು ತುಳಿಯುತ್ತಾ ಹೋದನು. ಅವನು ಕಾಣದಿರಲು ಹುಡುಕುತ್ತಾ ನಾನು ಬಂದೆ. ಆಗ ನನ್ನ ತಲೆಗೆ ಆಪತ್ತು ಬರಲು, ನಮ್ಮ ಆರಾಧ್ಯಗುರುಗಳಾದ ವೇದವ್ಯಾಸರು ಕರುಣೆಯಿಂದ ಅಲ್ಲಿಗೆ ಬಂದರು.

ಅರ್ಥ:
ಬಳಿಕ: ನಂತರ; ಗದೆ: ಮುದ್ಗರ; ಇಭ: ಆನೆ; ಶತ: ನೂರು; ಅಳಿ: ಸಾವು; ತಿರುಗು: ಓಡಾಡು; ಹಾಯ್ದು: ಹೊಡೆ; ಕೊಳುಗುಳ: ಯುದ್ಧ; ಕೋಳ್ಗುದಿ: ತಕ ತಕ ಕುದಿ, ಅತಿ ಸಂತಾಪ; ಕೋಲಾಹಲ: ಗೊಂದಲ; ಕೆಸರು: ರಾಡಿ; ತಲೆ: ಶಿರ; ಕ್ಷಣ: ಸಮಯ; ಸುಳಿ: ಕಾಣಿಸಿಕೊಳ್ಳು; ಆರಾಧ್ಯ: ಪೂಜನೀಯ; ವರ: ಶ್ರೇಷ್ಠ; ಮುನಿ: ಋಷಿ; ತಿಲಕ: ಶ್ರೇಷ್ಠ; ಕೃಪೆ: ದಯೆ; ಭಾರ: ಹೊರೆ;

ಪದವಿಂಗಡಣೆ:
ಬಳಿಕ +ಭೀಮನ +ಗದೆಯಲ್+ಇಭ +ಶತವ್
ಅಳಿದರ್+ಒಬ್ಬನೆ +ತಿರುಗಿ +ಹಾಯ್ದನು
ಕೊಳುಗುಳದ +ಕೋಳ್ಗುದಿಯ +ಕೋಲಾಹಲದ +ಕೆಸರಿನಲಿ
ತಲೆಗೆ +ಬಂದುದು +ತನಗೆ+ಆ+ಕ್ಷಣ
ಸುಳಿದರ್+ಎಮ್ಮಾರಾಧ್ಯ +ವರ+ ಮುನಿ
ತಿಲಕ +ವೇದವ್ಯಾಸ+ದೇವರು +ಕೃಪೆಯ +ಭಾರದಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ

ಪದ್ಯ ೩೪: ದ್ರೋಣನ ಮೇಲೆ ಯಾರು ಆಕ್ರಮಣ ಮಾಡಿದರು?

ಕೆಣಕಿದರು ಪಾಂಚಾಲ ನಾಯಕ
ರಣಕಿಗನ ಕೈಕೋಳ್ಳದುರೆ ಸಂ
ದಣಿಸಿದರು ಸಮರಥರು ಕವಿದರು ರಾಯ ರಾವುತರು
ಕಣೆಗೆದರಿ ಹೊದ್ದಿದರು ಜೋದರು
ಕುಣಿದು ಕಾಲಾಳೌಕಿತೊಂದೇ
ಕ್ಷಣದೊಳನಿಬರನೊರಸಿದನು ಬೆರಸಿದನು ದೊರೆಗಳಲಿ (ದ್ರೋಣ ಪರ್ವ, ೧೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಚಾಲ ಸೇನೆಯವರು ದ್ರೋಣನನ್ನು ಲೆಕ್ಕಿಸದೇ ಸಮರಥರು, ರಾವುತರು, ಜೋಧರು, ಕಾಲಾಳುಗಳು ಅವನ ಮೇಲೆ ಬಿದ್ದರು. ದ್ರೋಣನು ಸೈನ್ಯವನ್ನೂ ದೊರೆಗಳನ್ನೂ ಕ್ಷಣಮಾತ್ರದಲ್ಲಿ ಸಂಹರಿಸಿದನು.

ಅರ್ಥ:
ಕೆಣಕು: ರೇಗಿಸು; ನಾಯಕ: ಒಡೆಯ; ರಣ:ಯುದ್ಧ; ಕೈಕೊಳ್ಳು: ಧರಿಸು, ಪಡೆ; ಉರೆ: ಹೆಚ್ಚು; ಸಂದಣಿ: ಗುಂಪು; ಸಮರಥ: ಪರಾಕ್ರಮಿ; ಕವಿ: ಆವರಿಸು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕಣೆ: ಬಾಣ; ಕೆದರು: ಹರಡು; ಹೊದ್ದು: ಹೊಂದು, ಸೇರು; ಜೋದ: ಯೋಧ, ಆನೆ ಮೇಲೆ ಕುಳಿತು ಯುದ್ಧ ಮಾಡುವ ಯೋಧ; ಕುಣಿ: ನರ್ತಿಸು; ಕಾಲಾಳು: ಸೈನಿಕ; ಔಕು: ನೂಕು; ಕ್ಷಣ: ಸಮಯದ ಪ್ರಮಾಣ; ಅನಿಬರ: ಅಷ್ಟುಜನ; ಒರಸು: ನಾಶಮಾಡು; ಬೆರಸು: ಕೂಡಿಸು; ದೊರೆ: ರಾಜ; ಅಣಕು: ತುರುಕು, ಗಿಡಿ;

ಪದವಿಂಗಡಣೆ:
ಕೆಣಕಿದರು +ಪಾಂಚಾಲ +ನಾಯಕರ್
ಅಣಕಿಗನ +ಕೈಕೋಳ್ಳದ್+ಉರೆ+ ಸಂ
ದಣಿಸಿದರು +ಸಮರಥರು +ಕವಿದರು +ರಾಯ +ರಾವುತರು
ಕಣೆ+ಕೆದರಿ +ಹೊದ್ದಿದರು +ಜೋದರು
ಕುಣಿದು +ಕಾಲಾಳ್+ಔಕಿತ್+ಒಂದೇ
ಕ್ಷಣದೊಳ್+ಅನಿಬರನ್+ಒರಸಿದನು +ಬೆರಸಿದನು +ದೊರೆಗಳಲಿ

ಅಚ್ಚರಿ:
(೧) ರಾವುತರು, ಜೋದರು, ಕಾಳಾಳು, ಸಮರಥರು – ಯೋಧರನ್ನು ಕರೆದ ಪರಿ
(೨) ಕವಿ, ಸಂದಣಿಸು – ಸಮಾನಾರ್ಥಕ ಪದ