ದನುಜಹರ ಮಂತ್ರವನು ಮನದಲಿ
ನೆನೆದು ಕೈ ನೀಡಿದನು ತುದಿಯಂ
ಬಿನಲಿ ತುರುಗಿದ ಕಿಡಿಯ ಬಿರುಕೇಸರಿಯ ಧಾಳಿಗಳ
ತನಿವೊಗರ ಬಲುವೊಗೆಯ ಹೊರಳಿಯ
ಕನಕರಸ ರೇಖಾವಳಿಯ ಮೈ
ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ (ದ್ರೋಣ ಪರ್ವ, ೧೯ ಸಂಧಿ, ೧೪ ಪದ್ಯ)
ತಾತ್ಪರ್ಯ:
ನಾರಾಯಣಾಸ್ತ್ರ ಮಮ್ತ್ರವನ್ನು ಮನಸ್ಸಿನಲ್ಲಿ ಜಪಿಸಿ, ತುದಿಯಿಂದ ಕಿಡಿಯುಗುಳುವ, ಕೆಂಪನೆಯ ಜ್ವಾಲೆಗಳು ಹೊರಹೊಮ್ಮುವ, ದಟ್ಟವಾಗಿ ಹೊಗೆ ಹಬ್ಬುವ, ಕನಕರೇಖೆಗಳಿಂದ ಕೂಡಿದ ನಾರಾಯಣಾಸ್ತ್ರಕ್ಕೆ ಅಶ್ವತ್ಥಾಮನು ಕೈನೀಡಿದನು.
ಅರ್ಥ:
ದನುಜ: ದಾನವ; ಹರ: ನಾಶ; ಮಂತ್ರ: ದೇವತಾ ಸ್ತುತಿ; ಮನ: ಮನಸ್ಸು; ನೆನೆ: ಜ್ಞಾಪಿಸು; ಕೈ: ಹಸ್ತ; ನೀಡು: ಒಡ್ಡು; ತುದಿ: ಅಗ್ರ; ಅಂಬು: ಬಾಣ; ತುರುಗು: ಸಂದಣಿ, ದಟ್ಟಣೆ; ಕಿಡಿ: ಬೆಂಕಿ; ಬಿರು: ಗಟ್ಟಿ; ಕೇಸರಿ: ಕೆಂಪು ಬಣ್ಣ; ಧಾಳಿ: ಲಗ್ಗೆ, ಮುತ್ತಿಗೆ; ತನಿ: ಚೆನ್ನಾಗಿ ಬೆಳೆದುದು; ತನಿವೊಗರು: ಹೆಚ್ಚಾದ ಕಾಂತಿ; ಬಲು: ಬಹಳ; ಹೊಗೆ: ಧೂಮ; ಹೊರಳಿ: ಗುಂಪು; ಕನಕ: ಚಿನ್ನ; ರಸ: ಸಾರ; ರೇಖೆ: ಗೆರೆ, ಗೀಟು; ಆವಳಿ: ಗುಂಪು; ಮೈ: ದೇಹ; ಮಿನುಗು: ಪ್ರಕಾಶ; ಹೊಂಗರಿ: ಚಿನ್ನದ ಗರಿ; ಮಹಾ: ಶ್ರೇಷ್ಠ; ಶರ: ಬಾಣ;
ಪದವಿಂಗಡಣೆ:
ದನುಜಹರ +ಮಂತ್ರವನು +ಮನದಲಿ
ನೆನೆದು +ಕೈ +ನೀಡಿದನು+ ತುದಿ+
ಅಂಬಿನಲಿ +ತುರುಗಿದ +ಕಿಡಿಯ +ಬಿರು+ಕೇಸರಿಯ +ಧಾಳಿಗಳ
ತನಿವೊಗರ+ ಬಲು+ವೊಗೆಯ +ಹೊರಳಿಯ
ಕನಕರಸ +ರೇಖಾವಳಿಯ +ಮೈ
ಮಿನುಗುಗಳ +ಹೊಂಗರಿಯ+ ನಾರಾಯಣ +ಮಹಾಶರಕೆ
ಅಚ್ಚರಿ:
(೧) ನಾರಾಯಣ ಎಂದು ಹೇಳಲು ದನುಜಹರ ಪದದ ಬಳಕೆ
(೨) ವೊಗರ, ವೊಗೆಯ – ಪದಗಳ ಬಳಕೆ