ಪದ್ಯ ೩೪: ಪೂತನಿಯರ ಮರಿಗಳು ಹೇಗೆ ನಲಿದರು?

ತೆಳುದೊಗಲ ನಿಡುಸೋಗೆಯುಡುಗೆಯ
ನೆಳಗರುಳ ಸಿಂಗಾರದುರುಬಿನ
ಕೆಳದಿಯರ ಕೈನೇಣ ಕಿರಿದೊಟ್ಟಿಲಿನ ಬೊಂಬೆಗಳ
ಎಳಮಿದುಳ ಕಜ್ಜಾಯ ಮೂಳೆಯ
ಹಳುಕು ಕಾಳಿಜದಟ್ಟುಗುಳಿಗಳ
ಕೆಳೆಗಳೊಳು ಕೊಡಗೂಸು ಪೂತನಿ ನಿಕರವೊಪ್ಪಿದವು (ಭೀಷ್ಮ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪೂತನಿಗಳ ಮರಿಗಳು ತೆಳುತೊಗಲಿನ ಗರಿಯುಡುಗೆ, ತುರುಬಿನಲ್ಲಿ ಎಳೆ ಕರುಳುಗಳ ಶೃಂಗಾರ, ಕೆಳದಿಯರ ಜೊತೆ ಹಗ್ಗದಲ್ಲಿ ಮೂಳೆಗಳ ಬೊಂಬೆಗಳು, ಎಳೆ ಮಿದುಳ ಕಜ್ಜಾಯ, ಮೂಳೆಗಳ ತುಂಡುಗಳ ಪತ್ತಮಣೆಯಾಟ ಇವುಗಳಿಂದ ಒಪ್ಪಿದವು.

ಅರ್ಥ:
ತೆಳು: ಕೋಮಲ; ದೊಗಲು: ಚರ್ಮ; ನಿಡುಸೋಗೆ: ದೀರ್ಘವಾದ ಗರಿ; ಉಡುಗೆ: ಬಟ್ಟೆ; ಎಳ: ಎಳೆಯದು, ಚಿಕ್ಕದಾದ; ಕರುಳು: ಪಚನಾಂಗ; ಸಿಂಗಾರ: ಚೆಲುವು, ಅಂದ; ಉರುಬು: ಮೇಲೆ ಬೀಳು; ಕೆಳದಿ: ಗೆಳತಿ; ಕೈ: ಹಸ್ತ; ನೇಣು: ಹಗ್ಗ; ಕಿರಿದು: ಚಿಕ್ಕದ್ದು; ಬೊಂಬೆ: ಗೊಂಬೆ; ಮಿದುಳು: ಮಸ್ತಿಷ್ಕ; ಮೂಳೆ: ಎಲುಬು; ಹಳುಕು: ಚೂರು; ಕಾಳಿಜ: ಪಿತ್ತಾಶಯ; ಅಟ್ಟುಗುಳಿ: ಸಾಲಿಗೆ ಏಳು ಗುಳಿಗಳಂತೆ, ಎರಡು ಸಾಲುಗಳಲ್ಲಿ ಒಟ್ಟು ಹದಿನಾಲ್ಕು ಗುಳಿಗಳಿ; ಕೆಳೆ: ಸ್ನೇಹ; ಪೂತನಿ: ರಾಕ್ಷಸಿ; ನಿಕರ: ಗುಂಪು; ಒಪ್ಪು: ಸಮ್ಮತಿ; ಕೊಡಗೂಸು: ಕನ್ಯೆ, ಬಾಲಕಿ;

ಪದವಿಂಗಡಣೆ:
ತೆಳುದೊಗಲ +ನಿಡುಸೋಗೆ+ಉಡುಗೆಯನ್
ಎಳ+ಕರುಳ +ಸಿಂಗಾರದ್+ಉರುಬಿನ
ಕೆಳದಿಯರ +ಕೈನೇಣ+ ಕಿರಿದೊಟ್ಟಿಲಿನ+ ಬೊಂಬೆಗಳ
ಎಳಮಿದುಳ +ಕಜ್ಜಾಯ +ಮೂಳೆಯ
ಹಳುಕು+ ಕಾಳಿಜದ್+ಅಟ್ಟುಗುಳಿಗಳ
ಕೆಳೆಗಳೊಳು +ಕೊಡಗೂಸು+ ಪೂತನಿ+ ನಿಕರ+ಒಪ್ಪಿದವು

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೆಳದಿಯರ ಕೈನೇಣ ಕಿರಿದೊಟ್ಟಿಲಿನ

ಪದ್ಯ ೨೯: ವೀರರು ಯಾರ ಅರಮನೆಯನ್ನು ಸೇರಿದರು?

ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ (ಭೀಷ್ಮ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎದುರಾಳಿಗಳನ್ನು ಮೂದಲಿಸಿ ಕರೆದು, ಗರ್ಜಿಸಿ ಅವರನ್ನು ಹೊಯ್ದರು, ಕತ್ತಿಗಳ ವೀರರು ಯುದ್ಧಮಾಡಿ ಯಮನ ಅರಮನೆಯನ್ನು ಪಡೆದರು. ಅವರ ಕರುಳುಗಳು ಹೊರಬಂದವು, ತಲೆಗಳು ಸಿಡಿದವು, ಎಲುಬುಗಳು ಮುರಿದು ಕೆಳಕ್ಕುದುರಿದವು. ರಕ್ತ ನೆಣಗಳು ಸುರಿದವು, ತುಂಡಾದ ಮಾಂಸ ಬೆಂಡೆದ್ದವು.

ಅರ್ಥ:
ಕರೆ: ಬರೆಮಾಡು; ಮೂದಲಿಸು: ಹಂಗಿಸು; ಕಡುಹು: ಪರಾಕ್ರಮ; ದುರುಳ: ದುಷ್ಟ; ಹೊಕ್ಕು: ಸೇರು; ಉಬ್ಬರಿಸು: ಅತಿಶಯ, ಹೆಚ್ಚಳ; ಹೊಯ್ದು: ಹೊಡೆ; ಕಾದು: ಹೋರಾಡು; ಕಾಲ: ಯಮ; ಅರಮನೆ: ರಾಜರ ಆಲಯ; ಕರುಳು: ಪಚನಾಂಗ; ಉಗಿ: ಹೊರಹಾಕು; ತಲೆ: ಶಿರ; ಸಿಡಿ: ಹೋಳಾಗು; ನಿಟ್ಟೆಲುಬು: ನೇರವಾದ ಮೂಳೆ; ಮೂಳೆ: ಎಲುಬು; ಉದಿರು: ಕೆಳಗೆ ಬೀಳು; ಶೋಣಿತ: ರಕ್ತ; ಸುರಿ: ಹೊರಹೊಮ್ಮು; ಕಾಳಿಜ: ಪಿತ್ತಾಶಯ; ಕೆದರು: ಹರಡು; ತುಂಡಿಸು: ಚೂರುಮಾಡು; ಬೆಂಡು: ತಿರುಳಿಲ್ಲದುದು, ಪೊಳ್ಳು;

ಪದವಿಂಗಡಣೆ:
ಕರೆಕರೆದು +ಮೂದಲಿಸಿ +ಕಡುಹಿನ
ದುರುಳರ್+ಉಬ್ಬಿನ +ಮೇಲೆ +ಹೊಕ್ಕ್
ಅಬ್ಬರಿಸಿ +ಹೊಯಿದರು +ಕಾದಿಕೊಂಡರು+ ಕಾಲನ್+ಅರಮನೆಯ
ಕರುಳ್+ಉಗಿಯೆ+ತಲೆ +ಸಿಡಿಯೆ +ನಿಟ್ಟೆಲು
ಮರಿಯೆ +ಮೂಳೆಗಳ್+ಉದಿರೆ +ಶೋಣಿತ
ಸುರಿಯೆ +ಕಾಳಿಜ +ಕೆದರೆ +ತುಂಡಿಸಿ +ಖಂಡ +ಬೆಂಡೇಳೆ

ಅಚ್ಚರಿ:
(೧) ಸಿಡಿಯೆ, ಮರಿಯೆ, ಉದಿರೆ, ಸುರಿಯೆ, ದೆಕರೆ – ಎ ಕಾರಾಂತ್ಯ ಪ್ರಾಸ ಪದಗಳು
(೨) ಸತ್ತರು ಎಂದು ಹೇಳಲು – ಹೊಯಿದರು ಕಾದಿಕೊಂಡರು ಕಾಲನರಮನೆಯ

ಪದ್ಯ ೩೯: ಸತ್ತ ಸೈನಿಕರ ಸ್ಥಿತಿ ಹೇಗಿತ್ತು?

ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟಿಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರ ಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಕಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ (ವಿರಾಟ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಗುರಾಣಿ ಕತ್ತರಿಸಿ ಬಿದ್ದು, ಕವಚ ಶಿರಸ್ತ್ರಾಣಗಳು ಕಡಿದು, ತೋಳು ಕತ್ತರಿಸಿ, ಕತ್ತು ಅರ್ಧ ಕತ್ತರಿಸಿ, ಎಲುಬುಗಳು ಮುರಿದು, ತೊಡೆಗಳು ಅರೆಕತ್ತರಿಸಿ, ನರಗಳು ಹರಿದು, ಕರುಳು ಪಿತ್ತಕೋಶ ಗುಲ್ಮಗಳು ಹೊರ ಬಂದು, ಚರ್ಮಹರಿದು, ರಕ್ತಸುರಿದು ಕಾಲಾಳುಗಳು ಬಿದ್ದರು.

ಅರ್ಥ:
ಹರಿ: ಕಡಿ, ಕತ್ತರಿಸು; ಖಂಡಿಸು: ಕಡಿ, ಕತ್ತರಿಸು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಜರಿ: ಬೀಳು; ತೋಳು: ಭುಜ; ಗೋಣು: ಕುತ್ತಿಗೆ, ಗಳ; ನಿಟಿಲ: ಭಾಳ, ಹಣೆ; ಮುರಿ: ಸೀಳು; ತೊಡೆ: ಊರು; ಕಡಿ: ಕತ್ತರಿಸು; ತಲೆ: ಶಿರ; ಒಡೆ: ಸೀಳು; ನರ: ಅವಯವಗಳಿಂದ ಸಂವೇದನೆಗಳನ್ನೂ, ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ – ತಂತು, ಶಕ್ತಿ; ಕರುಳು: ಪಚನಾಂಗ; ನೆಣ: ಕೊಬ್ಬು, ಮೇದಸ್ಸು; ಉಬ್ಬರ: ಅತಿಶಯ; ಕಾಳಿಜ: ಪಿತ್ತಾಶಯ; ಕಾಯ್ದು:ಬಿಸಿಯಾದ; ನೆತ್ತರು: ರಕ್ತ; ಸುರಿ: ಹೊರಹೊಮ್ಮು; ಹರಿ: ಪ್ರವಹಿಸು; ತೊಗಲು: ಚರ್ಮ, ತ್ವಕ್ಕು; ಹೊರಳು: ಜಾರು; ಪಾಯದಳ: ಸೈನಿಕ; ಉಡಿ: ಸೊಂಟ;

ಪದವಿಂಗಡಣೆ:
ಹರಿಗೆ +ಖಂಡಿಸಿ +ಜೋಡು +ಸೀಸಕ
ಜರಿದು +ಬಲು+ತೋಳ್+ಉಡಿದು+ ಗೋಣರೆ
ಹರಿದು +ನಿಟ್ಟಿಲು +ಮುರಿದು +ತೊಡೆ+ಅರೆಕಡಿದು+ ತಲೆ+ಒಡೆದು
ನರ +ಹರಿದು +ಕರುಳೊಕ್ಕು +ನೆಣನ್
ಉಬ್ಬರಿಸಿ +ಕಾಳಿಜ +ಕಾಯ್ದು +ನೆತ್ತರು
ಸುರಿದು+ ಹರಿ+ತೊಗಲಿನಲಿ+ ಹೊರಳಿತು +ವೈರಿ +ಪಾಯದಳ

ಅಚ್ಚರಿ:
(೧) ಹರಿ, ಜರಿ, ಸುರಿ, ಮುರಿ – ಪ್ರಾಸ ಪದಗಳು

ಪದ್ಯ ೮: ವ್ಯಾಧರ ಕೇರಿಯು ಹೇಗಿತ್ತು?

ಬಸೆನೆಣನ ಸುಂಟಗೆಯ ಹರಹಿದ
ಹಸಿಯತೊಗಲಿನ ತಳಿತ ಖಂಡದ
ಹಸರದುರುಗಲ ಕಾಳಿಜದ ಜಂಗಡೆಯ ಗಳಿಗೆಗಳ
ಬಸೆಯ ಹರವಿಯ ಸಾಲತೊರಳೆಗೆ
ಬೆಸಳಿಗೆಯ ಕುರಿದಲೆಯ ಹಂತಿಯ
ಕುಸುರಿದೆಲುವಿನ ಕೋದ ಮೀನಂಗಡಿಯಲೈತಂದ (ಅರಣ್ಯ ಪರ್ವ, ೧೬ ಸಂಧಿ, ೮ ಪದ್ಯ)

ತಾತ್ಪರ್ಯ:
ನೀರು ಬಸಿಯುತ್ತಿರುವ ಕೊಬ್ಬು, ಪ್ರಾಣಿಯ ಹೃದಯ, ಹರಡಿದ ಚರ್ಮಗಳು, ಮಾಂಸಖಂಡಗಳು, ಕೊಬ್ಬಿನ ಬುಟ್ಟಿಗಳು, ಬಸಿಯುವ ಪುಟ್ಟಿಗಳು, ಗಲ್ಮಾದಿಗಳನ್ನು ಹುರಿಯುವ ಅಗ್ಗಿಷ್ಟಿಕೆ, ಕುರಿದಲೆಗಳು, ಮೀನಿನ ಅಂಗಡಿಗಳನ್ನು ನೋಡುತ್ತಾ ಬ್ರಹ್ಮಚಾರಿಯು ವ್ಯಾಧರ ಕೇರಿಯಲ್ಲಿ ಬಂದನು.

ಅರ್ಥ:
ಬಸೆ: ಕೊಬ್ಬು; ಸುಂಟಗೆ: ಹೃದಯದ ಮಾಂಸ; ಹರಹು: ಹಬ್ಬುವಿಕೆ, ಪ್ರಸರ; ಹಸಿ: ಬಯಸು; ತೊಗಲು: ಚರ್ಮ, ತ್ವಕ್ಕು; ತಳಿತ:ಚಿಗುರಿದ; ಖಂಡ: ತುಂಡು, ಚೂರು; ಹಸರ: ಹರಡುವಿಕೆ; ಉರುಗ: ; ಕಾಳಿಜ: ಪಿತ್ತಾಶಯ; ಜಂಗಡೆ: ಮೀನಖಂಡ, ಮಾಂಸದ ರಾಶಿ; ಗಳಿಗೆ: ಮಡಿಕೆ; ಹರವಿ: ಗಡಿಗೆ; ಸಾಲ: ಸುತ್ತುಗೋಡೆ, ಪ್ರಾಕಾರ; ತೊರಳೆ: ಗುಲ್ಮ, ಪ್ಲೀಹ; ಬೆಸಳಿಗೆ: ಬಾಣಲಿಗೆ, ತವೆ; ಕುರಿ: ಆಡು; ತಲೆ: ಶಿರ; ಹಂತಿ: ಸಾಲು; ಪಂಕ್ತಿ; ಕುಸುರಿ: ತುಂಡು; ಎಲುಬು: ಮೂಳೆ; ಕೋದು: ಸೇರಿಸು; ಮೀನು:ಮತ್ಸ್ಯ; ಅಂಗಡಿ: ವಸ್ತುಗಲನ್ನು ಮಾರುವ ಸ್ಥಳ; ಐತರು: ಬಂದು ಸೇರು;

ಪದವಿಂಗಡಣೆ:
ಬಸೆ+ನೆಣನ +ಸುಂಟಗೆಯ +ಹರಹಿದ
ಹಸಿಯ+ತೊಗಲಿನ +ತಳಿತ +ಖಂಡದ
ಹಸರದ್+ಉರುಗಲ +ಕಾಳಿಜದ +ಜಂಗಡೆಯ +ಗಳಿಗೆಗಳ
ಬಸೆಯ +ಹರವಿಯ +ಸಾಲ+ತೊರಳೆಗೆ
ಬೆಸಳಿಗೆಯ +ಕುರಿ+ತಲೆಯ+ ಹಂತಿಯ
ಕುಸುರಿದ್+ಎಲುವಿನ +ಕೋದ +ಮೀನಂಗಡಿಯಲ್+ಐತಂದ

ಅಚ್ಚರಿ:
(೧) ಬೇಡರ ಬೀದಿಯನ್ನು ವಿವರಿಸುವ ಪದ್ಯ – ತೊಗಲು, ಖಂಡ, ಕಾಳಿಜ, ಜಂಗಡೆ, ಕುರಿತಲೆ, ಹಂತಿ, ಮೀನು – ಪದಗಳ ಬಳಕೆ

ಪದ್ಯ ೩೪: ದುಷ್ಟರನ್ನು ಏನು ಮಾಡುವೆನೆಂದು ಭೀಮನು ಹೇಳಿದನು?

ಉರಿವ ಕೋಪಾಗ್ನಿಯಲಿ ಕರ್ಣನ
ಶಿರದ ಭಾಂಡದಲಿವನ ನೊರೆ ನೆ
ತ್ತರಿನಲಿವನಗ್ರಜನಕೊಬ್ಬಿದ ನೆಣನ ಕೊಯ್ಕೊಯ್ದು
ದುರುಳ ಶಕುನಿಯ ಕಾಳಿಜದೊಳೊಡೆ
ವೆರಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳೆಂದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ನನ್ನಲ್ಲಿ ಹೊಮ್ಮುತ್ತಿರುವ ಕೋಪಾಗ್ನಿಯಲ್ಲಿ ಕರ್ಣನ ತಲೆಯ ಪಾತ್ರೆಯನ್ನಿಟ್ಟು, ದುಶ್ಯಾಸನ ರಕ್ತದಲ್ಲಿ ಕೊಬ್ಬಿದ ದುರ್ಯೋಧನನ ಮಾಂಸವನ್ನು ಕಡಿದು ಕಡಿದು ಹಾಕಿ, ಶಕುನಿಯ ಪಿತ್ತಕೋಶವನ್ನು ಸೇರಿಸಿ ಹದವಾಗಿ ಕುಇಸಿ ಮಹೋಗ್ರವಾದ ಭೂತಗಳ ಹಿಂಡಿಗೆ ಊಟಕ್ಕೆ ಹಾಕುತ್ತೇನೆ ಕೇಳು ಎಂದು ಭೀಮನು ದ್ರೌಪದಿಗೆ ಹೇಳಿದನು.

ಅರ್ಥ:
ಉರಿ: ಜ್ವಾಲೆ; ಕೋಪ: ರೋಷ; ಅಗ್ನಿ: ಬೆಂಕಿ; ಶಿರ: ತಲೆ; ಭಾಂಡ: ಬಾಣಲಿ, ಮಡಿಕೆ; ನೊರೆ: ಬುರುಗು, ಫೇನ; ನೆತ್ತರು: ರಕ್ತ; ಅಗ್ರಜ: ಅಣ್ಣ; ಕೊಬ್ಬು: ಸೊಕ್ಕು; ನೆಣ: ಕೊಬ್ಬು; ಕೊಯ್ದು: ಸೀಳು; ದುರುಳ: ದುಷ್ಟ; ಕಾಳಿಜ: ಪಿತ್ತಾಶಯ; ವೆರಸಿ: ಸೇರಿಸು; ಕುದಿ: ಬೇಯಿಸು; ಮಹ: ದೊಡ್ಡ; ಉಗ್ರ: ಭಯಂಕರ; ಭೂತ: ದೆವ್ವ, ಪಿಶಾಚ; ನೆರವು: ಸಹಾಯ; ಉಣಲು: ತಿನ್ನಲು; ಸತಿ: ಹೆಂಡತಿ; ಕೇಳು: ಆಲಿಸು;

ಪದವಿಂಗಡಣೆ:
ಉರಿವ+ ಕೋಪಾಗ್ನಿಯಲಿ +ಕರ್ಣನ
ಶಿರದ +ಭಾಂಡದಲ್+ಇವನ +ನೊರೆ +ನೆ
ತ್ತರಿನಲ್+ಇವನ್+ಅಗ್ರಜನ+ಕೊಬ್ಬಿದ +ನೆಣನ +ಕೊಯ್ಕೊಯ್ದು
ದುರುಳ+ ಶಕುನಿಯ+ ಕಾಳಿಜದೊಳ್+ಒಡೆ
ವೆರಸಿ+ ಕುದಿಸಿ+ ಮಹೋಗ್ರ+ಭೂತದ
ನೆರವಿಗ್+ಉಣಲಿಕ್ಕುವೆನು +ಸತಿ+ ಕೇಳೆಂದನಾ+ ಭೀಮ

ಅಚ್ಚರಿ:
(೧) ಭೀಮನ ಕೋಪವನ್ನು ಪಾಕಶಾಲ ಪ್ರವೀಣತೆಯಲ್ಲಿ ತೋರುವ ಪದ್ಯ