ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ (ಶಲ್ಯ ಪರ್ವ, ೩ ಸಂಧಿ, ೧೭ ಪದ್ಯ)
ತಾತ್ಪರ್ಯ:
ಇನ್ನೂರು ಆನೆಗಳು, ಸಾವಿರ ರಥಗಳು, ಸಾವಿರದ ಮುನ್ನೂರು ಕುದುರೆಗಳು, ಅರವತ್ತು ಸಾವಿರ ಕಾಲಾಳುಗಳು ಅಶ್ವತ್ಥಾಮನ ಬಾಣಗಳಿಗೆ ತುತ್ತಾದರು.
ಅರ್ಥ:
ಕಡಿ: ಸೀಳು; ಗಜ: ಆನೆ; ಧರೆ: ಭೂಮಿ; ಕುಡಿ: ತುದಿ, ಕೊನೆ; ಬಿದ್ದು: ಬೀಳು; ತೇರು: ಬಂಡಿ; ಸಾವಿರ: ಸಹಸ್ರ; ಅಶ್ವಚಯ: ಕುದುರೆಯ ಗುಂಪು; ಕಡುಗಲಿ: ಪರಾಕ್ರಮ; ಒಡಲು: ದೇಹ; ಪಾಯದಳ: ಸೈನಿಕ; ಉಗ್ಗಡ: ಉತ್ಕಟತೆ, ಅತಿಶಯ; ಡಾವರ: ಹಿಂಸೆ, ಕೋಟಲೆ; ಡಿಳ್ಳ: ಸಡಿಲು; ವೈರಿ: ಶತ್ರು; ಭಟ: ಸೈನಿಕ;
ಪದವಿಂಗಡಣೆ:
ಕಡಿವಡೆದುದ್+ಇನ್ನೂರು +ಗಜ +ಧರೆ
ಕುಡಿದು +ಬಿದ್ದುದು +ತೇರು +ಸಾವಿರ
ವಡಗುದರಿಯಾಯ್ತ್+ಅಶ್ವಚಯ+ ಸಾವಿರದ +ಮೂನೂರು
ಕಡುಗಲಿಗಳ್+ಅರುವತ್ತು +ಸಾವಿರ
ಒಡಲನಿಕ್ಕಿತು +ಪಾಯದಳವ್
ಉಗ್ಗಡದ+ ಡಾವರ +ಡಿಳ್ಳವಾದುದು +ವೈರಿ+ಸುಭಟರಿಗೆ
ಅಚ್ಚರಿ:
(೧) ಸಾವಿರ – ೨, ೪ ಸಾಲಿನ ಕೊನೆ ಪದ