ಆ ಶ್ರುತಾಯುಧ ಮಡಿದನಲ್ಲಿ ಮ
ಹಾಸುರದ ರಣವಾಯ್ತು ಕಾಂಭೋ
ಜೇಶ ಕೈದುಡುಕಿದನು ಕದನವನಿಂದ್ರಸುತನೊಡನೆ
ಸೂಸಿದನು ಸರಳುಗಳನಾತನ
ಸಾಸವನು ಮನ್ನಿಸುತ ಫಲುಗುಣ
ಬೇಸರದೆ ಕೊಂಡಾಡಿ ಕಾದಿದನೊಂದು ನಿಮಿಷದಲಿ (ದ್ರೋಣ ಪರ್ವ, ೧೦ ಸಂಧಿ, ೧೫ ಪದ್ಯ)
ತಾತ್ಪರ್ಯ:
ಶ್ರುತಾಯುಧನು ಸತ್ತನು. ಮಹಾಭಯಂಕರವಾದ ಕದನವಾಯಿತು. ಕಾಂಭೋಜದ ದೊರೆಯು ಅರ್ಜುನನನ್ನು ತಡೆದು ಬಾಣಗಳ ಮಳೆಗೆರೆದನು. ಅವನ ಸಾಹಸಕ್ಕೆ ಮೆಚ್ಚಿ ಅವನೊಡನೆ ಬೇಸರವಿಲ್ಲದೆ ಅರ್ಜುನನು ಕಾದಿದನು.
ಅರ್ಥ:
ಮಡಿ: ಮರಣ ಹೊಂದು; ರಣ: ಯುದ್ಧಭೂಮಿ; ಈಶ: ಒಡೆಯ; ತುಡುಕು: ಬೇಗನೆ ಹಿಡಿಯುವುದು: ಆತುರದಿಂದ ಕೂಡಿರುವಿಕೆ, ಗಡಿಬಿಡಿ; ಕದನ: ಯುದ್ಧ; ಸುತ: ಮಗ; ಸೂಸು: ಹರಡು; ಸರಳು: ಬಾಣ; ಸಾಸ: ಸಾಹಸ, ಪರಾಕ್ರಮ; ಮನ್ನಿಸು: ಗೌರವಿಸು; ಬೇಸರ: ನೋವು; ಕೊಂಡಾಡು: ಹೊಗಳು; ಕಾದಿ: ಹೋರಾಡು; ನಿಮಿಷ: ಕ್ಷಣ;
ಪದವಿಂಗಡಣೆ:
ಆ+ ಶ್ರುತಾಯುಧ +ಮಡಿದನ್+ಅಲ್ಲಿ +ಮ
ಹಾಸುರದ +ರಣವಾಯ್ತು +ಕಾಂಭೋ
ಜೇಶ +ಕೈ+ತುಡುಕಿದನು+ ಕದನವನ್+ಇಂದ್ರಸುತನೊಡನೆ
ಸೂಸಿದನು +ಸರಳುಗಳನ್+ಆತನ
ಸಾಸವನು +ಮನ್ನಿಸುತ +ಫಲುಗುಣ
ಬೇಸರದೆ +ಕೊಂಡಾಡಿ +ಕಾದಿದನ್+ಒಂದು +ನಿಮಿಷದಲಿ
ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೂಸಿದನು ಸರಳುಗಳನಾತನ ಸಾಸವನು