ಬಾಲತನವೇನೂಣಯವೆ ಕ
ಟ್ಟಾಳುತನವಾಭರಣವವನೀ
ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ
ಆಳಿನಂಗವನೆತ್ತ ಬಲ್ಲೆ ಶ
ರಾಳಿಯಲಿ ನಿನ್ನಂಘವಣೆಯ ಛ
ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು (ದ್ರೋಣ ಪರ್ವ, ೫ ಸಂಧಿ, ೩೧ ಪದ್ಯ)
ತಾತ್ಪರ್ಯ:
ಅಭಿಮನ್ಯುವು ಶಲ್ಯನಿಗೆ ಉತ್ತರಿಸುತ್ತಾ, ಬಾಲಕತನವೇನು ದೋಷವೇ? ಪರಾಕ್ರಮವು ರಾಜಪುತ್ರರಿಗೆ ಅಲಂಕಾರ, ವಿದ್ಯೆಯು ಬ್ರಾಹ್ಮಣರಿಗೆ ಅಲಂಕಾರ, ಪೌರುಷದ ಪರಿ ನಿನಗೇನು ಗೊತ್ತು, ನನ್ನ ಬಾಣಗಳಿಂದ ನಿನ್ನ ಸಾಹಸದ ದೊಡ್ಡಸ್ತಿಕೆಯನ್ನು ಕಟ್ಟಿ ಮುದ್ರಿಸುತ್ತೇನೆ ಎಂದು ಹೇಳಿ ಅಭಿಮನ್ಯುವು ಬಾಣಗಳನ್ನು ಬಿಟ್ಟನು.
ಅರ್ಥ:
ಬಾಲತನ: ಮಕ್ಕಳಾಟ; ಊಣ: ದೋಷ; ಕಟ್ಟಾಳು: ಶೂರ, ಸೇವಕ; ಆಭರಣ: ಒಡವೆ; ಅವನೀಪಾಲ: ರಾಜ; ಸುತ: ಮಕ್ಕಳು; ವಿದ್ಯ: ಜ್ಞಾನ; ವಿಪ್ರ: ಬ್ರಾಹ್ಮಣ; ಅಲಂಕಾರ: ಭೂಷಣಪ್ರಾಯ; ಆಳಿನಂಗವ: ಪೌರುಷತನ; ಅಂಗ: ರೀತಿ, ದೇಹದ ಭಾಗ; ಬಲ್ಲೆ: ತಿಳಿ; ಶರಾಳಿ: ಬಾಣದ ಗುಂಪು; ಅಂಗವಣೆ: ರೀತಿ, ಉದ್ದೇಶ; ಛಡಾಳ: ಹೆಚ್ಚಳ; ಮುದ್ರಿಸು: ಕೆತ್ತು, ಗುರುತುಮಾಡು; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ಬಾಲತನವೇನ್+ಊಣಯವೆ+ ಕ
ಟ್ಟಾಳುತನವ್+ಆಭರಣವ್+ಅವನೀ
ಪಾಲ +ಸುತರಿಗೆ +ವಿದ್ಯವೇ +ವಿಪ್ರರಿಗ್+ಅಲಂಕಾರ
ಆಳಿನಂಗವನ್+ಎತ್ತ +ಬಲ್ಲೆ +ಶ
ರಾಳಿಯಲಿ +ನಿನ್ನಂಘವಣೆಯ +ಛ
ಡಾಳತನವನು +ಮುದ್ರಿಸುವೆನ್+ಎನುತ್+ಎಚ್ಚನ್+ಅಭಿಮನ್ಯು
ಅಚ್ಚರಿ:
(೧) ಯಾವುದು ಯಾರಿಗೆ ಅಲಂಕಾರ – ಕಟ್ಟಾಳುತನವಾಭರಣವವನೀಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ