ಇಳಿದು ಗಜಹಯರಥವ ಸುಭಟಾ
ವಳಿ ಕೃತಾಂಜಲಿ ನೊಸಲೊಳಿರೆ ಕೆಲ
ಬಲಕೆ ಸಾರ್ದರು ನೋಡಿದನು ಪಾಂಡವ ಪತಾಕಿನಿಯ
ಉಳಿದುದೀಚೆಯಲೀಸು ಬಲವಿವ
ನುಳಿದನೊಬ್ಬನೆ ದೈವಗತಿಗಾ
ರಳಲಿ ಮಾಡುವುದೇನೆನುತ ನುಡಿಸಿದನು ಕುರುಪತಿಯ (ಗದಾ ಪರ್ವ, ೬ ಸಂಧಿ, ೨ ಪದ್ಯ)
ತಾತ್ಪರ್ಯ:
ಪಾಂಡವ ಸೇನೆಯ ಯೋಧರು ತಮ್ಮ ಕುದುರೆ ಆನೆ ರಥಗಳನ್ನಿಳಿದು ಅಂಜಲಿಯನ್ನು ಹಣೆಯಲ್ಲಿಟ್ಟು ಅಕ್ಕಪಕ್ಕದಲ್ಲಿ ನಿಂತಿರಲು, ಬಲರಾಮನು ಆ ಸೈನ್ಯವನ್ನು ನೋಡಿ, ಅವರ ಕಡೆ ಇಷ್ಟು ಸೈನ್ಯವುಳಿದಿದೆ, ಇತ್ತ ಇವನೊಬ್ಬನೇ ಉಳಿದಿದ್ದಾನೆ, ದೈವಗತಿ ಹೀಗಿರಲು ಯಾರು ದುಃಖಿಸಿ ಮಾಡುವುದೇನು ಎಂದು ಚಿಂತಿಸಿ ಕೌರವನನ್ನು ಮಾತನಾಡಿಸಿದನು.
ಅರ್ಥ:
ಇಳಿ: ಕೆಳಕ್ಕೆ ಬಂದು; ಗಜ: ಆನೆ; ಹಯ: ಕುದುರೆ; ಭಟಾವಳಿ: ಸೈನಿಕರ ಗುಂಪು; ಕೃತಾಂಜಲಿ: ಮುಗಿದ ಕೈ; ನೊಸಲು: ಹಣೆ; ಕೆಲಬಲ: ಅಕ್ಕಪಕ್ಕ; ಸಾರ್ದು: ಹರಡು; ನೋಡಿ: ವೀಕ್ಷಿಸಿ; ಪತಾಕಿನಿ: ಸೈನ್ಯ; ಉಳಿದ: ಮಿಕ್ಕ; ಈಚೆ: ಹೊರಗೆ; ಈಸು: ಇಷ್ಟು; ಬಲ: ಶಕ್ತಿ; ಉಳಿದ: ಮಿಕ್ಕ; ದೈವ: ಭಗವಂತ; ನುಡಿಸು: ಮಾತನಾಡಿಸು;
ಪದವಿಂಗಡಣೆ:
ಇಳಿದು+ ಗಜಹಯ+ರಥವ +ಸುಭಟಾ
ವಳಿ+ ಕೃತಾಂಜಲಿ +ನೊಸಲೊಳ್+ಇರೆ +ಕೆಲ
ಬಲಕೆ+ ಸಾರ್ದರು+ ನೋಡಿದನು +ಪಾಂಡವ +ಪತಾಕಿನಿಯ
ಉಳಿದುದ್+ಈಚೆಯಲ್+ಈಸು +ಬಲವಿವನ್
ಉಳಿದನ್+ಒಬ್ಬನೆ+ ದೈವಗತಿಗ್+ಆರ್
ಅಳಲಿ+ ಮಾಡುವುದೇನ್+ಎನುತ +ನುಡಿಸಿದನು +ಕುರುಪತಿಯ
ಅಚ್ಚರಿ:
(೧) ಇಳಿ, ಉಳಿ, ಭಟಾವಳಿ – ಪ್ರಾಸ ಪದಗಳು