ಪದ್ಯ ೩೧: ದುರ್ಯೋಧನನು ಸಂಜಯನನ್ನು ಅಳಿಮನವೆಂದು ಏಕೆ ಕರೆದನು?

ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಈ ಹೀನನೈ ನೀನಕಟ ಸಂಜಯ ಎಂದನಾ ಭೂಪ (ಗದಾ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಾಡನ್ನು ಸುಡಲು ಅಗ್ನಿಯು ಗಾಳಿಯ ಸಹಾವನ್ನು ಬಯಸುತ್ತಾನೆ, ನಿಜ ಆದರೆ ಕತ್ತಲನ್ನು ತೊಲಗಿಸಲು ಸೂರ್ಯನು ಯಾರ ಸಹಾಯವನ್ನು ಬಯಸುತ್ತಾನೆ? ಈ ಸಮರ್ಥವಾದ ಗದೆಯಿರಲು, ಕುಂತಿಯ ಮಕ್ಕಳನ್ನು ಲೆಕ್ಕುಸುವೆನೇ? ಸಂಜಯ ನಿನ್ನ ಮನ ಸಣ್ಣದ್ದು ಎಂದು ಹೇಳಿದನು.

ಅರ್ಥ:
ಕಾನನ: ಕಾಡು; ಕೈಯಿಕ್ಕು: ಮುಟ್ಟು; ಪವಮಾನ: ವಾಯು; ಪಾವಕ: ಬೆಂಕಿ; ಬಯಸು: ಆಸೆ ಪಡು, ಇಚ್ಛಿಸು; ಭಾನು: ಸೂರ್ಯ; ಭಾರಿ: ದೊಡ್ಡ; ತಮ: ಅಂಧಕಾರ; ನೆರವು: ಸಹಾಯ; ನಿಭೃತ: ಗುಟ್ಟು, ರಹಸ್ಯ; ಗದೆ: ಮುದ್ಗರ; ಸೂನು: ಮಕ್ಕಳು; ಕೈಕೊಂಬು: ಹಿಡಿ, ಲೆಕ್ಕಿಸು; ಮನ:ಮನಸ್ಸು; ಹೀನ: ಕೆಟ್ಟದು; ಅಕಟ: ಅಯ್ಯೋ; ಭೂಪ: ರಾಜ;

ಪದವಿಂಗಡಣೆ:
ಕಾನನಕೆ +ಕೈಯಿಕ್ಕುವರೆ +ಪವ
ಮಾನನನು +ಪಾವಕನು+ ಬಯಸುವ
ಭಾನು +ಭಾರಿಯ +ತಮವ್+ಅತಿವ್+ಇವನ್+ಅದಾರ+ ನೆರವಿಯಲಿ
ಈ +ನಿಭೃತ +ಗದೆಯಿರಲು +ಕುಂತೀ
ಸೂನುಗಳ +ಕೈಕೊಂಬೆನೇ +ಮನ
ಈ +ಹೀನನೈ +ನೀನಕಟ +ಸಂಜಯ +ಎಂದನಾ +ಭೂಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು ಬಯಸುವ, ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
(೨) ಕೈಯಿಕ್ಕು, ಕೈಕೊಂಬು – ಪದಗಳ ಬಳಕೆ
(೩) ಜೋಡಿ ಪದಗಳು (ಕ, ಪ) – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು

ಪದ್ಯ ೩೦: ದುರ್ಯೋಧನನ ತನ್ನ ಪರಾಕ್ರಮವನ್ನು ಹೇಗೆ ಹೊಗಳಿಕೊಂಡನು?

ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯನನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣಶಕ್ತಿಗೆ ಭಂಗಬಾರದು ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ಎಲೈ ಸಂಜಯ ನೋಡುತ್ತಿರು, ನಾನು ಅರ್ಜುನನ ಹೊಟ್ಟೆಯಿಂದ ಕರ್ಣನನ್ನು, ಧರ್ಮಜನನ್ನು ಸೀಳಿ ಶಲ್ಯನನ್ನು, ನಕುಲ ಸಹದೇವರಿಬ್ಬರಿಂದ ಶಕುನಿ ಉಲೂಕರನ್ನು ತೆಗೆಯುತ್ತೇನೆ. ಕೃಷ್ಣನೇ ಎದುರಾಗಿ ಪಾಂಡವರನ್ನು ರಕ್ಷಿಸಿದರೂ, ನನ್ನ ತೋಳ್ಬಲಕ್ಕೆ ಭಂಗ ಬರುವುದಿಲ್ಲ; ನೋಡು: ವೀಕ್ಷಿಸು;

ಅರ್ಥ:
ನರ: ಅರ್ಜುನ; ಬಸುರು: ಹೊಟ್ಟೆ; ಭೂವರ: ರಾಜ; ಸೀಳು: ಕತ್ತರಿಸು; ಕಾತರ: ಕಳವಳ; ಯಮಳ: ನಕುಲ ಸಹದೇವ; ಹರಿಬ: ಕೆಲಸ, ಕಾರ್ಯ; ಇದಿರು: ಎದುರು; ಮುರಾಂತಕ: ಕೃಷ್ಣ; ಹರಹು: ವಿಸ್ತಾರ, ವೈಶಾಲ್ಯ;ಮದೀಯ: ನನ್ನ; ಬಾಹು: ಭುಜ, ತೋಳು; ಸ್ಫುರಣ: ಹೊಳೆ, ಕಂಪನ; ಶಕ್ತಿ: ಬಲ; ಭಂಗ: ಮುರಿ, ಚೂರುಮಾಡು; ನೋಡು: ವೀಕ್ಷಿಸು;

ಪದವಿಂಗಡಣೆ:
ನರನ +ಬಸುರಲಿ +ಕರ್ಣನನು +ಭೂ
ವರನ +ಸೀಳಿದು +ಶಲ್ಯನನು +ಕಾ
ತರಿಸದಿರು +ಶಕುನಿಯನ್+ಉಳೂಕನ +ಯಮಳರ್+ಇಬ್ಬರಲಿ
ಹರಿಬಕ್+ಇದಿರಾಗಲಿ +ಮುರಾಂತಕ
ಹರಹಿಕೊಳಲಿ +ಮದೀಯ+ಬಾಹು
ಸ್ಫುರಣಶಕ್ತಿಗೆ+ ಭಂಗಬಾರದು+ ನೋಡು +ನೀನೆಂದ

ಅಚ್ಚರಿ:
(೧) ನರನ, ಭೂವರನ – ಪ್ರಾಸ ಪದ
(೨) ದುರ್ಯೋಧನನ ಶಕ್ತಿಯ ವಿವರ – ಮದೀಯಬಾಹು ಸ್ಫುರಣಶಕ್ತಿಗೆ ಭಂಗಬಾರದು

ಪದ್ಯ ೨೯: ದುರ್ಯೋಧನನು ಭೀಮನ ಹೊಟ್ಟೆಯಿಂದ ಯಾರನ್ನು ತೆಗೆಯುತ್ತೇನೆಂದನು?

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದೆಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ನನ್ನ ಮನಸ್ಸು ಕದಡಿದೆ, ಆದರೆ ಪರಾಕ್ರಮದ ಕಡಲು ಬತ್ತಿಲ್ಲ, ನೆಲೆನಿಂತಿದೆ. ಅರ್ಥವಿಲ್ಲದೆ ಮಾತಾಡಿ ಏನು ಪ್ರಯೋಜನ? ಸಂಜಯ ಹಿಂದಾದುದನ್ನು ಲೆಕ್ಕಿಸಬೇಡ. ಯುದ್ಧದಲ್ಲಿ ಭೀಮನು ದುಶ್ಯಾಸನನನ್ನು ತಿಂದು ತೇಗಿದನಲ್ಲವೇ? ನನ್ನ ತಮ್ಮನನ್ನು ಭೀಮನ ಹೊಟ್ಟೆಯಿಂದ ತೆಗೆಯುತ್ತೇನೆ, ಆ ವಿಚಿತ್ರವನು ನೋಡು ಎಂದು ಹೇಳಿದನು.

ಅರ್ಥ:
ಕದಡು: ಬಗ್ಗಡ, ರಾಡಿ; ಅಂತಃಕರಣ: ಒಳ ಮನಸ್ಸು; ವಿಕ್ರಮ: ಪರಾಕ್ರಮಿ; ಉದಧಿ: ಸಾಗರ; ನೆಲೆ: ಸ್ಥಾನ; ನಿರರ್ಥಕ: ಪ್ರಯೋಜನವಿಲ್ಲದ; ಒದರು: ಹೇಳು, ಹೊರಹಾಕು; ಫಲ: ಪ್ರಯೋಜನ; ಹಿಂದನ: ಪೂರ್ವ, ನಡೆದ; ಎಣಿಸು: ಲೆಕ್ಕಿಸು; ಕದನ: ಯುದ್ಧ; ತೇಗು: ಢರಕೆ, ತಿಂದು ಮುಗಿಸು; ಬಕ: ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ; ಬಕವೈರಿ: ಭೀಮ; ತಮ್ಮ: ಸಹೋಅರ; ಉದರ: ಹೊಟ್ಟೆ; ತೆಗೆ: ಈಚೆಗೆ ತರು, ಹೊರತರು; ವಿಚಿತ್ರ: ಬೆರಗುಗೊಳಿಸುವಂತಹುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಕದಡಿತ್+ಅಂತಃಕರಣ+ ವಿಕ್ರಮದ್
ಉದಧಿ +ನೆಲೆಯಾಯಿತು +ನಿರರ್ಥಕೆ
ಒದರಿದೆಡೆ +ಫಲವೇನು +ಸಂಜಯ +ಹಿಂದನ್+ಎಣಿಸದಿರು
ಕದನದಲಿ +ದುಶ್ಯಾಸನನ +ತೇ
ಗಿದನಲಾ +ಬಕವೈರಿ +ತಮ್ಮನನ್
ಉದರದಲಿ +ತೆಗೆವೆನು +ವಿಚಿತ್ರವ +ನೋಡು +ನೀನೆಂದ

ಅಚ್ಚರಿ:
(೧) ದುರ್ಯೋಧನನ ಶಕ್ತಿಯನ್ನು ವಿವರಿಸುವ ಪರಿ – ವಿಕ್ರಮದುದಧಿ ನೆಲೆಯಾಯಿತು
(೨) ಭೀಮನನ್ನು ಬಕವೈರಿ ಎಂದು ಕರೆದಿರುವುದು

ಪದ್ಯ ೨೮: ದುರ್ಯೋಧನನು ತನ್ನ ಸ್ಥಿತಿಯ ಬಗ್ಗೆ ಏನು ಹೇಳಿದ?

ಕೇಳು ಸಂಜಯ ಪೂರ್ವ ಸುಕೃತದ
ಸಾಳಿವನವೊಣಗಿದೊಡೆ ಭಾರಿಯ
ತೋಳುಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ (ಗದಾ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆಗ ದುರ್ಯೋಧನನು ಕಂಬನಿಗಳಿಂದ ತುಂಬಿದವನಾಗಿ, ಸಂಜಯ ಕೇಳು, ಪೂರ್ವ ಪುಣ್ಯದ ಭತ್ತದ ಗದ್ದೆ ಒಣಗಿ ಹೋದರೆ, ಭಾರಿಯ ತೋಳ ಬಂದಿಯನ್ನು ಹಾಕಿಕೊಂಡಿದ್ದ ಜಯಲಕ್ಷ್ಮಿಯ ತೋಳು ಸಡಲವಾಗಿಸಿ ಜಾರಿಬಿದ್ದರೆ, ಹಣೆಯಮೇಲೆ ಬರೆದಿದ್ದ ಲಿಪಿಗಳ ಲೆಕ್ಕಾಚಾರವನ್ನು ವಿಧಿಯ ವಿರೋಧದಿಂದ ತಿರುವು ಮುರುವಾಗಿ ಬರೆದರೆ, ಏನು ಹೇಳಿ ಏನು ಪ್ರಯೋಜನ ಎಂದು ತನ್ನ ಸ್ಥಿತಿಯ ಬಗ್ಗೆ ಸಂಜಯನಿಗೆ ಹೇಳಿದನು.

ಅರ್ಥ:
ಕೇಳು: ಆಲಿಸು; ಪೂರ್ವ: ಹಿಂದೆ; ಸುಕೃತ: ಒಳ್ಳೆಯ ಕೆಲಸ; ಶಾಳಿವನ: ಬತ್ತದ ಗದ್ದೆ; ಒಣಗು: ಜೀವವಿಲ್ಲದ; ಭಾರಿ: ದೊಡ್ಡ; ತೋಳು: ಬಾಹು; ಜಯ: ಗೆಲುವು; ಜಂಗಳ: ಸಡಿಲವಾಗಿ; ಜಾರು: ಕೆಳಗೆ ಬೀಳು; ಭಾಳ: ಹಣೆ; ಲಿಪಿ: ಬರಹ; ಲೆಕ್ಕ: ಎಣಿಕೆ; ಪ್ರತಿಕೂಲ: ಅನುಕೂಲವಲ್ಲದುದು, ವ್ಯತಿರಿಕ್ತವಾದುದು; ವಿಧಿ: ನಿಯಮ; ಪಲ್ಲಟ: ಬದಲಾವಣೆ; ಬರೆ: ಲಿಖಿಸು; ಹೇಳು: ತಿಳಿಸು; ಫಲ: ಪ್ರಯೋಜನ; ತುಂಬು: ಭರ್ತಿ ಮಾಡು; ಅರಸ: ರಾಜ; ಕಂಬನಿ: ಕಣ್ಣೀರು;

ಪದವಿಂಗಡಣೆ:
ಕೇಳು +ಸಂಜಯ +ಪೂರ್ವ +ಸುಕೃತದ
ಸಾಳಿವನ+ಒಣಗಿದೊಡೆ +ಭಾರಿಯ
ತೋಳುಗುತ್ತಿನ+ ಜಯಲಕುಮಿ +ಜಂಗಳವ +ಜಾರಿದಡೆ
ಭಾಳ+ಲಿಪಿಗಳ+ ಲೆಕ್ಕವನು +ಪ್ರತಿ
ಕೂಲವಿಧಿ +ಪಲ್ಲಟಿಸಿ +ಬರೆದಡೆ
ಹೇಳಿ +ಫಲವೇನ್+ಎನುತ +ತುಂಬಿದನ್+ಅರಸ +ಕಂಬನಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪೂರ್ವ ಸುಕೃತದಸಾಳಿವನವೊಣಗಿದೊಡೆ