ಪದ್ಯ ೪೫: ಸೂರ್ಯೋದಯವನ್ನು ಹೇಗೆ ವರ್ಣಿಸಬಹುದು?

ಭೂರಿ ವಿರಹಾಗ್ನಿಯಲಿ ಲೋಚನ
ವಾರಿಯಾಜ್ಯಾಹುತಿಗಳಲಿ ರಿಪು
ಮಾರಣಾಧ್ವರವೆಸೆದುದಿರುಳು ರಥಾಂಗ ದೀಕ್ಷಿತನ
ತಾರಕೆಯ ಮುರಿವುಗಳು ಕುಣಿವ
ಸಮೀರಣನ ಶಶಿಯೆಡೆಗೆ ರಜನೀ
ನಾರಿ ತೋಳೆಡೆಗೊಟ್ಟಳಂಬುಜ ಬಂಧು ಹೊರವಂಟ (ದ್ರೋಣ ಪರ್ವ, ೧೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ವಿರಹಾಗ್ನಿ, ಕಣ್ಣೀರಿನ ಅಜ್ಯಾಹುತಿಗಳಿಂದ ಚಕ್ರವಾಕದ ಶತ್ರುಗಳ ಮಾರಣಯಜ್ಞ ನಡೆಯಿತು. ನಕ್ಷತ್ರಗಳು ಮುಳುಗಿದವು. ಚಂದ್ರನು ಕಳಾಹೀನನಾದನು. ರಾತ್ರಿರಮಣಿಯು ಕೈಚಾಚಿ ಲಾಘವವನ್ನು ಕೊಡಲು ಸೂರ್ಯನು ಉದಯಿಸಿದನು.

ಅರ್ಥ:
ಭೂರಿ: ಹೆಚ್ಚು, ಅಧಿಕ; ವಿರಹ: ಅಗಲಿಕೆ, ವಿಯೋಗ; ಅಗ್ನಿ: ಬೆಂಕಿ; ಲೋಚನ: ಕಣ್ಣು; ವಾರಿ: ಜಲ; ಆಜ್ಯ: ತುಪ್ಪ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ರಿಪು: ವೈರಿ; ಮಾರಣ: ಸಾವು; ಅಧ್ವರ: ಯಜ್ಞ; ಎಸೆ: ಹೊರತರು; ಇರುಳು: ರಾತ್ರಿ; ರಥಾಂಗ: ಚಕ್ರವಾಕ ಪಕ್ಷಿ, ಜಕ್ಕವಕ್ಕಿ; ದೀಕ್ಷೆ: ವ್ರತ, ನಿಯಮ; ತಾರಕೆ: ನಕ್ಷತ್ರ; ಮುರಿ: ಸೀಳು; ಕುಣಿ: ನರ್ತಿಸು; ಸಮೀರ: ವಾಯು; ಶಶಿ: ಚಂದ್ರ; ರಜನಿ: ರಾತ್ರಿ; ನಾರಿ: ಹೆಣ್ಣು; ತೋಳು: ಭುಜ; ಎಡೆ: ಸಮೀಪ; ಅಂಬುಜ: ತಾವರೆ; ಬಂಧು: ಸಂಬಂಧಿಕ; ಹೊರವಂಟ: ಹೊರಬಂದ;

ಪದವಿಂಗಡಣೆ:
ಭೂರಿ +ವಿರಹಾಗ್ನಿಯಲಿ+ ಲೋಚನ
ವಾರಿ+ಆಜ್ಯಾಹುತಿಗಳಲಿ +ರಿಪು
ಮಾರಣ+ಅಧ್ವರವ್+ಎಸೆದುದ್+ಇರುಳು +ರಥಾಂಗ+ ದೀಕ್ಷಿತನ
ತಾರಕೆಯ +ಮುರಿವುಗಳು +ಕುಣಿವ
ಸಮೀರಣನ +ಶಶಿಯೆಡೆಗೆ +ರಜನೀ
ನಾರಿ +ತೋಳ್+ಎಡೆಗೊಟ್ಟಳ್+ಅಂಬುಜ +ಬಂಧು+ ಹೊರವಂಟ

ಅಚ್ಚರಿ:
(೧) ಸೂರ್ಯನನ್ನು ಅಂಬುಜಬಂಧು ಎಂದು ಕರೆದಿರುವುದು
(೨) ರಾತ್ರಿಯು ಮುಗಿಯಿತು ಎಂದು ಸುಂದರವಾಗಿ ಹೇಳುವ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ