ಸಿಡಿವ ತಲೆಗಳ ಬಳಿವಿಡಿದು ಧಾ
ರಿಡುವ ರಕುತದಲೆರಡು ಬಲದಲಿ
ಹಿಡಿದ ದೀವಿಗೆ ನಂದಿದವು ಕುಂದಿದುದು ಚತುರಂಗ
ಮಡಮುರಿಯ ಮಯವಾಯ್ತು ಸುಭಟರ
ನಿಡು ಮುಸುಕು ಮೋಹಿಸಿತು ಮುರುಹಿನ
ಕಡುಹುಕಾರರು ಕೇಣಿಗೊಂಡರು ಬಹಳ ದುಷ್ಕೃತವ (ದ್ರೋಣ ಪರ್ವ, ೧೬ ಸಂಧಿ, ೧೭ ಪದ್ಯ)
ತಾತ್ಪರ್ಯ:
ಉರುಳಿದ ತಲೆಗಳಿಂದ, ಧಾರೆಯಾಗಿ ಚಿಮ್ಮಿಸುರಿದ ರಕ್ತದಿಂದ ಎರಡೂಕಡೆಯ ಸೈನ್ಯಗಳ ದೀಪಗಳು ಆರಿಹೋದವು. ಚತುರಂಗ ಬಲ ಕುಗ್ಗಿತು. ತೋಳುಗಳು ಎಲ್ಲೆಲ್ಲೂ ಮುರಿದವು. ವೀರರು ಮುಖಕ್ಕೆ ಮುಸುಕು ಹಾಕಿಕೊಂಡು ಜಾರಿದರು. ವೀರರನ್ನಿಸಿಕೊಂಡವರು ಬಹಳ ದುಷ್ಕೃತಕ್ಕೊಳಗಾದರು. ಪಾಪದ ಕೇಣಿಯನ್ನು ತೆಗೆದುಕೊಂಡರು.
ಅರ್ಥ:
ಸಿಡಿ: ಸೀಳು; ತಲೆ: ಶಿರ; ಬಳಿ: ಹತ್ತಿರ; ಧಾರೆ: ಮಳೆ; ರಕುತ: ನೆತ್ತರು; ಬಲ: ಸೈನ್ಯ; ಹಿಡಿ: ಗ್ರಹಿಸು; ದೀವಿಗೆ: ದೀಪ; ನಂದು: ಆರಿಹೋಗು, ಮಂಕಾಗು; ಕುಂದು: ಕೊರತೆ, ನೂನ್ಯತೆ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮುರಿ: ಸೀಳು; ಮಯ: ತುಂಬಿದ; ಸುಭಟ: ಸೈನಿಕ; ಮುಸುಕು: ಹೊದಿಕೆ; ಮೋಹಿಸು: ಇಚ್ಛಿಸು; ಮುರುಹು: ತಿರುಗಿಸು; ಕಡುಹು: ಸಾಹಸ; ಕೇಣಿ: ಗುತ್ತಿಗೆ, ಗೇಣಿ; ಬಹಳ: ತುಂಬ; ದುಷ್ಕೃತ: ಕೆಟ್ಟ ಕೆಲಸ;
ಪದವಿಂಗಡಣೆ:
ಸಿಡಿವ +ತಲೆಗಳ +ಬಳಿವಿಡಿದು +ಧಾ
ರಿಡುವ +ರಕುತದಲ್+ಎರಡು +ಬಲದಲಿ
ಹಿಡಿದ +ದೀವಿಗೆ +ನಂದಿದವು +ಕುಂದಿದುದು +ಚತುರಂಗ
ಮಡಮುರಿಯ +ಮಯವಾಯ್ತು +ಸುಭಟರನ್
ಇಡು +ಮುಸುಕು +ಮೋಹಿಸಿತು +ಮುರುಹಿನ
ಕಡುಹುಕಾರರು +ಕೇಣಿಗೊಂಡರು+ ಬಹಳ +ದುಷ್ಕೃತವ
ಅಚ್ಚರಿ:
(೧) ರೂಪಕದ ಪ್ರಯೋಗ – ಧಾರಿಡುವ ರಕುತದಲೆರಡು ಬಲದಲಿ ಹಿಡಿದ ದೀವಿಗೆ ನಂದಿದವು