ಪದ್ಯ ೭೧: ಪಾಂಡವರು ಯಾರನ್ನು ಒಲಿಸಿದರು?

ಹಲಬರಸುರರು ಮಡಿದರಿವನ
ಗ್ಗಳೆಯನಿರುಳಿನ ಬವರದಾಯತ
ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು
ಅಳುಕಿದರು ಬಳಿಕೇನು ಭಕುತಿಯ
ಲೊಲಿಸಿದರಲೈ ಪಾಂಡವರು ಯದು
ಕುಲಲಲಾಮನನಮಳ ಗದುಗಿನ ವೀರನರಯಣನ (ದ್ರೋಣ ಪರ್ವ, ೧೫ ಸಂಧಿ, ೭೧ ಪದ್ಯ)

ತಾತ್ಪರ್ಯ:
ಇವನಿಂದ ಅನೇಕ ದೈತ್ಯರು ಮಡಿದರು, ರಾತ್ರಿಯುದ್ಧದ ಗುಟ್ಟು ಇವನಿಗೆ ಗೊತ್ತಿದೆ ಎಂದು ದ್ರೋಣನೇ ಮೊದಲಾದ ನಾಯಕರು ಹೆದರಿದರು. ಧೃತರಾಷ್ಟ್ರ ಹೇಳಲು ಇನ್ನೇನು ಉಳಿದಿದೆ, ಯದುಕುಲ ಭೂಷಣನೂ, ನಿರ್ಮಲನೂ ಆದ ಗದುಗಿನ ವೀರ ನಾಯಾರಣನನ್ನು ಪಾಂಡವರು ಭಕ್ತಿಯಿಂದ ಒಲಿಸಿದರು.

ಅರ್ಥ:
ಹಲಬರು: ಅನೇಕ; ಅಸುರ: ರಾಕ್ಷಸ; ಮಡಿ: ಸಾವನ್ನು ಹೊಂದು; ಅಗ್ಗಳೆ: ಶ್ರೇಷ್ಠ; ಇರುಳು: ರಾತ್ರಿ; ಬವರ: ಯುದ್ಧ; ಆಯತ: ವಿಶಾಲವಾದ; ನಾಯಕ: ಒಡೆಯ; ಅಳುಕು: ಹೆದರು; ಬಳಿಕ: ನಂತರ; ಭಕುತಿ: ಗುರು ದೈವಗಳಲ್ಲಿ ಶ್ರದ್ಧೆ; ಒಲಿಸು: ಪ್ರೀತಿ; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ಅಮಳ: ನಿರ್ಮಲ;

ಪದವಿಂಗಡಣೆ:
ಹಲಬರ್+ಅಸುರರು +ಮಡಿದರ್+ಇವನ್
ಅಗ್ಗಳೆಯನ್+ಇರುಳಿನ +ಬವರದ್+ಆಯತ
ತಿಳಿವುದ್+ಈತಂಗೆನುತಲ್+ಆ+ ದ್ರೋಣಾದಿ +ನಾಯಕರು
ಅಳುಕಿದರು +ಬಳಿಕೇನು +ಭಕುತಿಯಲ್
ಒಲಿಸಿದರಲೈ +ಪಾಂಡವರು +ಯದು
ಕುಲ+ಲಲಾಮನನ್+ಅಮಳ +ಗದುಗಿನ+ ವೀರನರಯಣನ

ಅಚ್ಚರಿ:
(೧) ಕೃಷ್ಣನನ್ನು ಹೊಗಳಿದ ಪರಿ – ಯದುಕುಲಲಲಾಮನನಮಳ