ಓಡಲೀಯದೆ ಸದರಗೊಡುತ ವಿ
ಭಾಡಿಸುತ ಮೇಲಿಕ್ಕಿದರೆ ಕೈ
ಮಾಡಿದರೆ ಶರಹತಿಗೆ ದೇಹವ ಕೊಟ್ಟು ಸೈರಿಸುತ
ಖೇಡತನವನು ಬಿಡಿಸಿ ಸಲೆ ಕೊಂ
ಡಾಡಿ ಕಾದಿದನಸುರಜಾತಿಗ
ಳೋಡೆ ಪರಿಭವ ತನ್ನದೆಮ್ಬ ಪದಸ್ತತನದಿಂದ (ದ್ರೋಣ ಪರ್ವ, ೧೫ ಸಂಧಿ, ೬೨ ಪದ್ಯ)
ತಾತ್ಪರ್ಯ:
ವಿರೋಧಿ ದೈತ್ಯರಿಗೆ ಸದರಗೊಟ್ಟು ಅವರನ್ನು ಬಡಿದುಹಾಕಿ, ಅವರು ಬಾಣಗಳನ್ನು ಬಿಟ್ಟರೆ ಅವನ್ನು ಸಹಿಸಿಕೊಂಡು, ಅವರ ಹೇಡಿತನವನ್ನು ಬಿಡಿಸಿ ಹತ್ತಿರಕ್ಕೆ ಬಂದಾಗ ಸಂಹರಿಸಿ ಘಟೋತ್ಕಚನು ಕಾಡಿದನು. ಅಸುರಜಾತಿಯವರು ಓಡಿಹೋದರೆ ಅದು ತನ್ನ ಸೋಲು ಎಂಬ ಪ್ರತಿಜ್ಞೆಯನ್ನು ಕಾಪಾಡಿಕೊಂಡನು.
ಅರ್ಥ:
ಓಡು: ಧಾವಿಸು; ಸದರ: ಸುಲಭ, ಸರಾಗ; ವಿಭಾಡಿಸು: ನಾಶಮಾಡು; ಶರ: ಬಾಣ; ಹತಿ: ಸಂಹಾರ; ದೇಹ: ಒಡಲು; ಸೈರಿಸು: ತಾಳು, ಸಹಿಸು; ಖೇಡ: ಹೆದರಿದವನು; ಬಿಡಿಸು: ತ್ಯಜಿಸು; ಸಲೆ: ಸರಿಯಾಗಿ; ಕೊಂಡಾಡು: ಹೊಗಳು; ಕಾದು: ಹೋರಾಡು; ಅಸುರ: ರಾಕ್ಷಸ; ಜಾತಿ: ವಂಶ; ಪರಿಭವ: ಸೋಲು, ಪರಾಜಯ; ಪದಸ್ತತನ: ಸ್ಥಾನ, ಗೌರವ;
ಪದವಿಂಗಡಣೆ:
ಓಡಲೀಯದೆ +ಸದರಗೊಡುತ +ವಿ
ಭಾಡಿಸುತ +ಮೇಲಿಕ್ಕಿದರೆ +ಕೈ
ಮಾಡಿದರೆ +ಶರಹತಿಗೆ +ದೇಹವ +ಕೊಟ್ಟು +ಸೈರಿಸುತ
ಖೇಡತನವನು +ಬಿಡಿಸಿ +ಸಲೆ +ಕೊಂ
ಡಾಡಿ +ಕಾದಿದನ್+ಅಸುರಜಾತಿಗಳ್
ಓಡೆ +ಪರಿಭವ +ತನ್ನದೆಂಬ+ ಪದಸ್ತತನದಿಂದ
ಅಚ್ಚರಿ:
(೧) ಘಟೋತ್ಕಚನ ಪ್ರತಿಜ್ಞೆ – ಕಾದಿದನಸುರಜಾತಿಗಳೋಡೆ ಪರಿಭವ ತನ್ನದೆಮ್ಬ ಪದಸ್ತತನದಿಂದ