ಪದ್ಯ ೧೧: ಸುಭದ್ರಾದೇವಿಯು ಯಾವ ವಾರ್ತೆಯನ್ನು ಕೇಳಿದಳು?

ಅರಮನೆಯ ಗಜಬಜವ ಕೇಳಿದು
ದೊರೆಯೊಳಾವವನಳಿದನಕಟೆಂ
ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ
ಉರಿಯ ಡಾವರವೆಳೆಯ ಬಾಳೆಯ
ಬೆರಸುವಂತಿರೆ ರಾಯ ಕುವರನ
ಮರಣವಾರ್ತೆಯನಾ ಸುಭದ್ರಾದೇವಿ ಕೇಳಿದಳು (ದ್ರೋಣ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರಮನೆಯಲ್ಲೇನು ಗದ್ದಲ, ಅರಸರಲ್ಲಿ ಯಾರಾದರೂ ಅಳಿದರೇ ಅಯ್ಯೋ ಎಂದು ರಾಣಿವಾಸದಾರು ಕೇಳಲು, ದ್ರೌಪದಿಗೆ ಸುದ್ದಿಯನ್ನು ತಿಳಿಸಿದರು. ಉರಿಯ ಜ್ವಾಲೆಯು ಎಳೆ ಬಾಳೆಯನ್ನು ಆವರಿಸಿದಂತೆ, ಮಗನ ಮರಣ ವಾರ್ತೆಯನ್ನು ಸುಭದ್ರಾ ದೇವಿಯು ಕೇಳಿದಳು.

ಅರ್ಥ:
ಅರಮನೆ: ರಾಜರ ಆಲಯ; ಗಜಬಜ: ಗೊಂದಲ; ಕೇಳು: ಆಲಿಸು; ದೊರೆ: ಅರಸ; ಅಳಿ: ನಾಶ; ಅಕಟ: ಅಯ್ಯೋ; ಅರಸಿ: ರಾಣಿ; ಬೆಸ: ವಿಚಾರಿಸುವುದು; ಅರುಹು: ಹೇಳು; ಹದ: ಸ್ಥಿತಿ; ಉರಿ: ಬೆಂಕಿ; ಡಾವರ: ದಗೆ; ಬಾಳೆ: ಕದಳಿಫಲ; ಎಳೆ: ಚಿಕ್ಕ; ಬೆಅರ್ಸು: ಆವರಿಸು; ರಾಯ: ರಾಜ; ಕುವರ: ಮಗು; ಮರಣ: ಸಾವು; ವಾರ್ತೆ: ವಿಷಯ; ಕೇಳು: ಆಲಿಸು;

ಪದವಿಂಗಡಣೆ:
ಅರಮನೆಯ +ಗಜಬಜವ +ಕೇಳಿದು
ದೊರೆಯೊಳ್+ಆವವನ್+ಅಳಿದನ್+ಅಕಟೆಂದ್
ಅರಸಿಯರು +ಬೆಸಗೊಳಲು +ದ್ರೌಪದಿಗ್+ಅರುಹಿದರು +ಹದನ
ಉರಿಯ +ಡಾವರವ್+ಎಳೆಯ +ಬಾಳೆಯ
ಬೆರಸುವಂತಿರೆ +ರಾಯ +ಕುವರನ
ಮರಣ+ವಾರ್ತೆಯನಾ+ ಸುಭದ್ರಾದೇವಿ +ಕೇಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಡಾವರವೆಳೆಯ ಬಾಳೆಯ ಬೆರಸುವಂತಿರೆ

ನಿಮ್ಮ ಟಿಪ್ಪಣಿ ಬರೆಯಿರಿ