ಪದ್ಯ ೪೯: ಭೀಷ್ಮನ ನೆರವಿಗೆ ಯಾರು ಧಾವಿಸಿದರು?

ಮೇಲೆ ಹೇಳಿಕೆಯಾಯ್ತು ಕೌರವ
ರಾಳಿನಲಿ ದುಶ್ಯಾಸನಂಗೆ ಕ
ರಾಳ ಭೂರಿಶ್ರವ ಜಯದ್ರಥ ಗುರು ಕೃಪಾದ್ಯರಿಗೆ
ಕೋಲ ಹೊದೆಗಳ ಬಂಡಿಯಲಿ ನಿ
ಸ್ಸಾಳ ಸೂಳಿನ ಲಗ್ಗೆಯಲಿ ಹೇ
ರಾಳದೊಡ್ಡವಣೆಯಲಿ ಪಡಿಬಲ ಕವಿದುದುರವಣಿಸಿ (ಭೀಷ್ಮ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಹೀಗೆ ಯುದ್ಧವು ಭಯಂಕರವಾಗಿ ನಡೆಯುತ್ತಿರಲು, ಕೌರವ ಸೈನ್ಯದಲ್ಲಿ ದ್ರೋಣ, ದುಶ್ಯಾಸನ, ಭೂರಿಶ್ರವ, ಜಯದ್ರಥರಿಗೆ ಭೀಷ್ಮನ ಬೆಂಬಲಕ್ಕೆ ಹೋಗಲು ಸೂಚಿಸಲಾಯಿತು. ಬಾಣಗಳ ಬಂಡಿಗಳೊಡನೆ ಭೇರಿ ತಮ್ಮಟೆಗಳ ಸದ್ದಿನೊಂದಿಗೆ ಕೌರವರ ಪಡೆಯು ಹೇರಾಳ ಸನ್ನಾಹದಿಂದ ಪಾಂಡವರಿಗೆ ಎದುರಾಗಿ ಬಂದಿತು.

ಅರ್ಥ:
ಹೇಳು: ತಿಳಿಸು; ಆಳಿ: ಸಾಲು, ಗುಂಪು; ಕರಾಳ: ಭಯಂಕರ; ಕೋಲ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಬಂಡಿ: ರಥ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳು: ಕದನ, ಯುದ್ಧ; ಲಗ್ಗೆ: ಮುತ್ತಿಗೆ, ಆಕ್ರಮಣ; ಹೇರಾಳ: ದೊಡ್ಡ, ವಿಶೇಷ; ಒಡ್ಡವಣೆ: ಗುಂಪು; ಪಡಿಬಲ: ವೈರ ಸೈನ್ಯ; ಕವಿದು: ಆವರಿಸು; ಉರವಣೆ: ಆತುರ, ಅವಸರ;

ಪದವಿಂಗಡಣೆ:
ಮೇಲೆ +ಹೇಳಿಕೆಯಾಯ್ತು +ಕೌರವರ್
ಆಳಿನಲಿ +ದುಶ್ಯಾಸನಂಗೆ+ ಕ
ರಾಳ +ಭೂರಿಶ್ರವ+ ಜಯದ್ರಥ +ಗುರು +ಕೃಪಾದ್ಯರಿಗೆ
ಕೋಲ +ಹೊದೆಗಳ +ಬಂಡಿಯಲಿ +ನಿ
ಸ್ಸಾಳ +ಸೂಳಿನ+ ಲಗ್ಗೆಯಲಿ +ಹೇ
ರಾಳದ್+ಒಡ್ಡವಣೆಯಲಿ+ ಪಡಿಬಲ +ಕವಿದುದ್+ಉರವಣಿಸಿ

ಅಚ್ಚರಿ:
(೧) ಕೌರವ ಪಡೆ ಬಂದ ಪರಿ – ಕೋಲ ಹೊದೆಗಳ ಬಂಡಿಯಲಿ ನಿಸ್ಸಾಳ ಸೂಳಿನ ಲಗ್ಗೆಯಲಿ ಹೇರಾಳದೊಡ್ಡವಣೆಯಲಿ
(೨) ಕರಾಳ, ನಿಸ್ಸಾಳ, ಹೇರಾಳ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ