ಪದ್ಯ ೪೮: ಅರ್ಜುನನು ಹೇಗೆ ಭೀಷ್ಮನ ವೇಗವನ್ನು ಮೀರಿಸಿದನು?

ಆವ ಚಾಪವ ತುಡುಕಿ ಕೆನ್ನೆಗೆ
ತೀವಿ ತೆಗೆಯದ ಮುನ್ನ ಫಲುಗುಣ
ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ
ಆವ ದಿವ್ಯಾಸ್ತ್ರವನು ಕುಂತಿಯ
ಮಾವ ತೊಡುವನು ತೊಡದ ಮುನ್ನ ಶ
ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ (ಭೀಷ್ಮ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕುಂತಿಯ ಮಾವನಾದ ಭೀಷ್ಮನು ಯಾವ ಬಿಲ್ಲನ್ನು ಹಿಡಿದು ಹೆದೆಯನ್ನು ಕೆನ್ನೆಗೆ ಸೆಳೆದು ಬಾಣವನ್ನು ಬಿಡುವ ಮೊದಲೇ ಅರ್ಜುನನು ಅದನ್ನು ಮುರಿಯುವನು. ಯಾವ ದಿವ್ಯಾಸ್ತ್ರಗಳನ್ನು ಭೀಷ್ಮನು ಪ್ರಯೋಗಿಸುವ ಮೊದಲೇ ಅರ್ಜುನನು ಅದನ್ನು ತುಂಡು ಮಾಡುತ್ತಿದ್ದನು.

ಅರ್ಥ:
ಚಾಪ: ಬಿಲ್ಲು; ತುಡುಕು: ಹೋರಾಡು, ಸೆಣಸು; ಕೆನ್ನೆ: ಗಲ್ಲ; ತೀವು: ಚೆಲ್ಲು, ಹರಡು; ತೆಗೆ: ಹೊರತರು; ಮುನ್ನ: ಮೊದಲು; ಎಸು: ಬಾಣ ಪ್ರಯೋಗ ಮಾದು; ಕಡಿ: ಸೀಳು; ಬಿಸುಡು: ಹೊರಹಾಕು; ಬಿಲ್ಲು: ಚಾಪ; ದಿವ್ಯಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಮಾವ: ಗಂಡನ ತಂದೆ; ತೊಡು: ಧರಿಸು; ಶರಾವಳಿ: ಬಾಣಗಳ ಗುಂಪು; ಮುಂಕೊಂಡು: ಮೊದಲೇ; ಖಂಡಿಸು: ಚೂರು ಮಾಡು;

ಪದವಿಂಗಡಣೆ:
ಆವ +ಚಾಪವ +ತುಡುಕಿ +ಕೆನ್ನೆಗೆ
ತೀವಿ +ತೆಗೆಯದ +ಮುನ್ನ +ಫಲುಗುಣನ್
ಓವದ್+ಎಸುವನು +ಕಡಿದು +ಬಿಸುಡುವನ್+ಇವರ +ಬಿಲ್ಲುಗಳ
ಆವ +ದಿವ್ಯಾಸ್ತ್ರವನು +ಕುಂತಿಯ
ಮಾವ +ತೊಡುವನು +ತೊಡದ +ಮುನ್ನ +ಶ
ರಾವಳಿಯ +ಮುಂಕೊಂಡು +ಖಂಡಿಸಿ+ ಪಾರ್ಥನ್+ಎಸುತಿರ್ದ

ಅಚ್ಚರಿ:
(೧) ಭೀಷ್ಮನನ್ನು ಕುಂತಿಯ ಮಾವ ಎಂದು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ